ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ: ಸೆ.10ರ ಎಡಪಕ್ಷಗಳ ಹರತಾಳ ಬೆಂಬಲಿಸಿ

ಕೇಂದ್ರದ ಬಿಜೆಪಿ ನೇತೃತ್ವದ ಮೋದಿ ಸರ್ಕಾರದ ಅಡಿಯಲ್ಲಿ ಪೆಟ್ರೋಲ್, ಡೀಸೆಲ್‍ನ ಬೆಲೆಗಳು ಚಾರಿತ್ರಾರ್ಹ ದಾಖಲೆಯನ್ನು ತಲುಪಿವೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 83 ರೂ. ದಾಟಿದೆ ಮತ್ತು ಡೀಸೆಲ್ 75 ರೂಗಳಾಗಿದೆ (2017 ರ ಸೆಪ್ಟೆಂಬರ್ 10 ರಂದು ಇದರ ಬೆಲೆಗಳು ಕ್ರಮವಾಗಿ 71.26 ರೂ. ಮತ್ತು 58.46 ರೂ. ಇತ್ತು). ಈ ಪ್ರಕಾರ ಒಂದೇ ವರ್ಷದಲ್ಲಿ ಪೆಟ್ರೋಲ್ ಲೀ.ಗೆ ರೂ. 12 ಮತ್ತು ಡೀಸೆಲ್ ಲೀ.ಗೆ ರೂ. 16.50 ಹೆಚ್ಚಳವಾಗಿದೆ. ಹದಿನಾಲ್ಕು ತಿಂಗಳ ಹಿಂದೆ ಪ್ರತಿ ದಿನ ಬೆಲೆ ಪರಿಷ್ಕರಣೆ ಆರಂಭಿಸಿದ ಮೇಲೆ ತೈಲ ಬೆಲೆಗಳು ನಾಗಾಲೋಟ ಕಂಡಿವೆ.

ಭಾರತದ ನಿಜವಾದ ದೇಶಪ್ರೇಮಿ ಕಾರ್ಮಿಕರು, ರೈತರು, ಬಡವರು, ಮಧ್ಯಮ ವರ್ಗಗಳು, ಸಾರಿಗೆ ರಂಗ ಇದರಿಂದ ತತ್ತರಿಸುವಂತಾಗಿದೆ. ಮೋದಿ ಸರ್ಕಾರ ಇಂತಹ ಏರಿಕೆಯನ್ನು ಅಂತರರಾಷ್ಟ್ರೀಯ ಕಚ್ಛಾ ತೈಲ ಬೆಲ ಹೆಚ್ಚಳದ ನೆಪದಲ್ಲಿ ಸಮರ್ಥಿಸಿಕೊಳ್ಳುತ್ತಿದೆ. ಮತ್ತಷ್ಟು ಹೆಚ್ಚಿಸಬೇಕೆಂಬ ಮಾತುಗಳೂ ಬರುತ್ತಿವೆ. ಬಿಜೆಪಿಯ ಭಕ್ತರು ಹೇಳುವ ಹಾಗೆ ಬೆಲೆ ಏರಿಕೆಯನ್ನು “ದೇಶಪ್ರೇಮಿ” ಎಂದು ಒಪ್ಪಿಕೊಂಡು ಅನುಭವಿಸಬೇಕಾ? ಅಥವಾ ಜನವಿರೋಧಿ ಮತ್ತು ಕಾರ್ಪೊರೇಟ್‍ಗಳ ಪರವಾದ ಮೋಸದ ಜಾಲವನ್ನು ಬಯಲು ಮಾಡಿ ಸೆಪ್ಟೆಂಬರ್ 10 ರ ರಾಷ್ಟ್ರವ್ಯಾಪಿ ಹರತಾಳದಲ್ಲಿ ಭಾಗವಹಿಸಬೇಕಾ? ಈ ಹಿನ್ನೆಲೆಯಲ್ಲಿ ಕೆಲವು ವಿಚಾರಗಳನ್ನು ಗಮನಿಸಿ.

ಜಾಗತಿಕ ಕಚ್ಛಾ ತೈಲದ ಬೆಲೆ ಏರಿಕೆ

ಭಾರತ ತನಗೆ ಬೇಕಾದ ಒಟ್ಟು ಕಚ್ಛಾ ತೈಲದ ಪ್ರಮಾಣದಲ್ಲಿ ಸುಮಾರು ಶೇ.75 ರಷ್ಟು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಇದರ ಈಗಿನ ಅಂತರರಾಷ್ಟ್ರೀಯ ಬೆಲೆಗಳು ಬ್ಯಾರೆಲ್‍ಗೆ 67.86 ಡಾಲರ್‍ಗಳು. ಉಳಿದ ಸುಮಾರು ಶೇ.30 ರಷ್ಟು ಕಚ್ಛಾ ತೈಲವನ್ನು ದೇಶದ ಒಳಗೇ ಸರ್ಕಾರಿ ಸ್ವಾಮ್ಯದ ಓ ಎನ್ ಜಿ ಸಿ ಮತ್ತು ಓ ಐ ಎಲ್ ಕಂಪನಿಗಳು ಇದರ ಅರ್ಧದಷ್ಟು ಕಡಿಮೆ ವೆಚ್ಚದಲ್ಲಿ ಉತ್ಪಾದಿಸುತ್ತವೆ. ಆದರೂ ಇದನ್ನು ಅಂತರರಾಷ್ಟ್ರೀಯ ಬೆಲೆಗಳಿಗೆ ಸಮನಾಗಿ (International Price Parity) ಪರಿಗಣಿಸುವ ಪದ್ಧತಿ ಜಾರಿಗೊಳಿಸಲಾಗಿದೆ. ಲೆಕ್ಕದ ಸಲುವಾಗಿ ನಾವೂ ಹಾಗೇ ಪರಿಗಣಿಸೋಣ. ಒಂದು ಬ್ಯಾರೆಲ್ ಎಂದರೆ 158.98 ಲೀಟರ್‍ಗಳು. ಪ್ರಸಕ್ತ ಕುಸಿಯುತ್ತಿರುವ ರೂಪಾಯಿ ಮೌಲ್ಯ ರೂ. 72.10 ರ ಪ್ರಕಾರವೇ ಲೆಕ್ಕ ಹಾಕಿದರೂ ಒಂದು ಲೀಟರ್ ಕಚ್ಛಾ ತೈಲಕ್ಕೆ ರೂ. 30.78 ಆಗುತ್ತದೆ.

ಒಂದು ಅಂದಾಜಿನ ಪ್ರಕಾರ ಒಂದು ಲೀಟರ್ ಸಿದ್ಧಗೊಂಡ ಪೆಟ್ರೋಲಿಯಂ ಉತ್ಪನ್ನದಲ್ಲಿ ಶೇ. 93-94 ರಷ್ಟು ಕಚ್ಛಾ ತೈಲದ ಬೆಲೆಯಿರುತ್ತದೆ. ಅಂದರೆ ಉಳಿದ ಶೇ. 6-7 ರಷ್ಟು ಮಾತ್ರವೇ ಇತರೆ – ಹಡಗು ಸಾಗಣೆ, ವಿಮೆ, ಸಂಸ್ಕರಣೆ ಹಾಗೂ ಒಳ ಸಾಗಾಣಿಕೆ – ವೆಚ್ಚವಾಗುತ್ತದೆ. ಅಂದರೆ ಒಂದು ಲೀ. ಕಚ್ಛಾ ತೈಲದ ಬೆಲೆಗೆ ಇತರೆ ವೆಚ್ಚ 3 ರೂಗಳನ್ನು ಸೇರಿಸಿದರೆ 1 ಲೀ. ಪೆಟ್ರೋಲ್ 34 ರೂಗಳಾಗುತ್ತದೆ. ಈ ರೀತಿ ಅಂತರರಾಷ್ಟ್ರೀಯ ಬೆಲೆಗಳ ಏರುಪೇರಿನ ಆಧಾರದಲ್ಲಿ ಲೆಕ್ಕ ಮಾಡಬಹುದು. ಹಾಗಾದರೆ ಪ್ರತಿಯೊಬ್ಬ ದೇಶಪ್ರೇಮಿ ಭಾರತೀಯರಿಂದ ಪ್ರತಿ ಲೀ. ಪೆಟ್ರೋಲ್‍ಗೆ 83 ರೂಗಳನ್ನು ಹಾಗೂ ಡೀಸೆಲ್‍ಗೆ 75 ರೂಗಳನ್ನು ವಸೂಲಿ ಮಾಡುತ್ತಿರುವುದು ಏಕೆ?

ಪ್ರಸ್ತುತ ದರಗಳ ಪ್ರಕಾರ ಪೆಟ್ರೋಲ್ ಮೇಲೆ ಪ್ರತಿ ಲೀ.ಗೆ 49 ರೂ. ಮತ್ತು ಡೀಸೆಲ್ ಮೇಲೆ ಪ್ರತಿ ಲೀ.ಗೆ 41 ರೂಗಳನ್ನು ಕೇಂದ್ರ ಸರ್ಕಾರ ದುಬಾರಿ ತೆರಿಗೆಗಳ ಮೂಲಕ “ದೇಶಪ್ರೇಮ”ದ ಹೆಸರಲ್ಲಿ ಲೂಟಿ ಮಾಡುತ್ತಿದೆ. ಇದರಲ್ಲಿ ಸ್ವಲ್ಪ ಮಟ್ಟಿಗೆ ರಾಜ್ಯ ಸರ್ಕಾರಗಳ ಪಾಲೂ ಇದೆ. ಜಗತ್ತಿನಲ್ಲಿಯೇ ಅತಿ ಹೆಚ್ಚು ತೈಲ ತೆರಿಗೆಗಳನ್ನು ಭಾರತದಲ್ಲಿ ವಸೂಲಿ ಮಾಡಲಾಗುತ್ತಿದೆ. ನವೆಂಬರ್ 2014 ರಿಂದ ಜನವರಿ 2016 ರವರೆಗೆ ಅಂತರರಾಷ್ಟ್ರೀಯ ಬೆಲೆಗಳು ಕಡಿಮೆ ಇದ್ದಾಗ ಮೋದಿ ಸರ್ಕಾರ 9 ಬಾರಿ ಅಬಕಾರಿ ಸುಂಕಗಳನ್ನು ಹೆಚ್ಚಿಸಿದೆ. ಈ ಅವಧಿಯಲ್ಲಿ ಪ್ರತಿ ಲೀ. ಪೆಟ್ರೋಲಿಗೆ ರೂ. 11.77 ಮತ್ತು ಡೀಸೆಲಿಗೆ ರೂ. 13.47 ಹೆಚ್ಚುವರಿ ಅಬಕಾರಿ ಸುಂಕವನ್ನು ಹಾಕಲಾಗಿದೆ. ಅಂ.ರಾಷ್ಟ್ರೀಯ ಬೆಲೆಗಳು ಹೆಚ್ಚಾದಾಗ ಅಕ್ಟೋಬರ್ 2017 ರಲ್ಲಿ 1 ಬಾರಿ ಮಾತ್ರ ರೂ. 2 ನ್ನು ಕಡಿಮೆ ಮಾಡಲಾಗಿದೆ.

ಇದರಿಂದಾಗಿ ಕೇಂದ್ರ ಸರ್ಕಾರದ ಅಬಕಾರಿ ಆದಾಯ 2014-15 ರಲ್ಲಿ ರೂ. 99,184 ಕೋಟಿ ಇದ್ದದ್ದು 2017-18 ರಲ್ಲಿ ರೂ. 2,29,019 ಕೋಟಿಯಾಗಿದೆ. ಶೇ.231 ರಷ್ಟು ಹೆಚ್ಚಳ! ಮೋದಿ ಸರ್ಕಾರದ ಜಾಗತಿಕ ದಾಖಲೆಗಳಲ್ಲಿ ಇದೂ ಒಂದು. ಗಾಬರಿಯಾಗಬೇಡಿ – ಈ ವರ್ಷ ಪೆಟ್ರೋ ಉತ್ಪನ್ನಗಳಿಂದ ಅಬಕಾರಿ ಆದಾಯ ರೂ. 2.58 ಲಕ್ಷ ಕೋಟಿಗಳನ್ನು ಸಂಗ್ರಹಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ! ಇದರ ಸುರುಳಿ ಪರಿಣಾಮ ಬೇರೆ ಎಲ್ಲಾ ಜೀವನಾವಶ್ಯಕ ವಸ್ತುಗಳ ಬೆಲೆಗಳನ್ನು ದುಬಾರಿಗೊಳಿಸಲಿದೆ. ದುಡಿವ ಜನರ ಸಂಕಷ್ಟಗಳು ಹೆಚ್ಚಾಗಲಿವೆ. ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳುವುದು ಎಂದರೆ ಇದೇ ಅಲ್ಲವೇ.

ಪರಿಸ್ಥಿತಿ ಹೀಗಿರುವಾಗ, ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಉತ್ಪನ್ನಗಳನ್ನು ವಿದೇಶಕ್ಕೆ ಕಡಿಮೆ ಬೆಲೆಗೆ ರಫ್ತು ಮಾಡಲು ಅವಕಾಶ ಕೊಟ್ಟಿದೆ. ನ್ಯೂಸ್‍ಕ್ಲಿಕ್‍ನಲ್ಲಿ ಸುಮೇಧ ಪಾಲ್‍ರವರು (ಸೆ. 8, 2018) ಹೇಳಿರುವ ಪ್ರಕಾರ, ಮಂಗಳೂರಿನಲ್ಲಿರುವ ಎಂಆರ್‍ಪಿಎಲ್ ನೀಡಿರುವ ಮಾಹಿತಿಯಂತೆ, ಭಾರತವು 15 ದೇಶಗಳಿಗೆ ಸಂಸ್ಕರಿಸಿದ ಪೆಟ್ರೋಲ್‍ನ್ನು ಪ್ರತಿ ಲೀ.ಗೆ ರೂ. 34 ರಂತೆ ಮತ್ತು 29 ದೇಶಗಳಿಗೆ ಡೀಸೆಲ್‍ನ್ನು ಪ್ರತಿ ಲೀ.ಗೆ ರೂ. 37 ರಂತೆ ರಫ್ತು ಮಾಡುತ್ತಿದೆ. ವಿದೇಶೀಯರಿಗೆ ಕಡಿಮೆ ಬೆಲೆಗೆ ಮಾರಾಟ, ಭಾರತೀಯರಿಗೆ ದುಬಾರಿ ತೆರಿಗೆಗಳ ಮಾರಾಟ. ಮೋದಿ ಸರ್ಕಾರ ಅಚ್ಛೇ ದಿನಗಳ ಸ್ಯಾಂಪಲ್?

Under Recovery ಎಂಬ ಕಲ್ಪಿತ ನಷ್ಟ

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಗೆ ನೀಡಲಾಗುತ್ತಿರುವ ಮತ್ತೊಂದು ಪ್ರಮುಖ ಕಾರಣವೆಂದರೆ, ತೈಲ ಮಾರಾಟದ ಕಂಪನಿಗಳು (OMCs-IOC, HP, BP) ನಷ್ಟ ಅನುಭವಿಸುತ್ತಿವೆ ಎಂಬುದು. ಸರ್ಕಾರ ಇದನ್ನು “Under Recoveries” ಎನ್ನುತ್ತಿದೆ. ಈ ನಷ್ಟವನ್ನು ಸರಿಯಾಗಿ ಭರಿಸಿಕೊಳ್ಳಲು ಪ್ರತಿನಿತ್ಯ ಬೆಲೆ ಪರಿಷ್ಕರಣದ ದಾರಿಯನ್ನು ಆರಂಭಿಸಲಾಗಿದೆ. ಜಾಗತೀಕರಣದ ಲೂಟಿಕೋರರು ಕಂಡುಹಿಡಿದಿರುವ ಹೊಸ ಪದಗುಚ್ಚಗಳು ಜನರಿಗೆ ಅರ್ಥವಾಗುವುದೇ ಕಷ್ಟ. ಇದು ಬಂಡವಾಳಿಗರ ಭಾಷೆ. “Under Recoveries” ಎಂಬುದು “ನಷ್ಟ”ವಲ್ಲ. ಭಾರತದ ಪ್ರಮುಖ ಓಎಂಸಿಗಳ ಬ್ಯಾಲೆನ್ಸ್ ಷೀಟ್‍ಗಳಲ್ಲಿ ಎಲ್ಲಿಯೂ ಕೂಡಾ Under Recoveries ಎಂಬ ಶಬ್ದವೇ ಇಲ್ಲ.  ಈಗಾಗಲೇ ಹೇಳಿದೆ ಹಾಗೆ ನಮ್ಮ ದೇಶ ಕಚ್ಚಾ ತೈಲವನ್ನು ಅಮದು ಮಾಡಿಕೊಂಡು ಡೀಸೆಲ್, ಪೆಟ್ರೋಲ್‍ನಂತಹ ಪೆಟ್ರೋಲಿಯಂ ಉತ್ಪನ್ನಗಳನ್ನು ದೇಶೀಯವಾಗಿ ಉತ್ಪಾದಿಸುತ್ತದೆ.

ಆದರೆ ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆಂದು ಕಲ್ಪಿಸಿಕೊಂಡು, ಜಾಗತಿಕವಾಗಿ ಅದಕ್ಕೇನು ಬೆಲೆಯಿದೆಯೋ ಅದೇ ಬೆಲೆಯನ್ನು ದೇಶದೊಳಗೆ ನಿಗದಿಪಡಿಸಬೇಕೆನ್ನುವ ವಿಚಿತ್ರವಾದ ವಾದದಿಂದ ಬಂದಿರುವುದೇ ಈ Under Recoveries.

ಉದಾಹರಣೆಗೆ:- ಇಂಗ್ಲೆಂಡ್‍ನಲ್ಲಿ ಒಂದು ಲೀ. ಪೆಟ್ರೋಲ್‍ಗೆ ಸುಮಾರು ರೂ. 120 ಆಗುತ್ತದೆ ಎಂದುಕೊಳ್ಳೋಣ. ಭಾರತದ ಕಂಪನಿಯೊಂದು ಇಂಗ್ಲೆಂಡ್‍ನಿಂದ ಕಚ್ಛಾ ತೈಲವನ್ನು ಆಮದು ಮಾಡಿಕೊಂಡು ಪೆಟ್ರೋಲ್ ತಯಾರಿಸುತ್ತದೆ ಎಂದುಕೊಳ್ಳಿ. ಇಲ್ಲಿ ಒಂದು ಲೀ. ಪೆಟ್ರೋಲ್‍ಗೆ ರೂ. 34 ಆಗಬಹುದು. ಅಂತರರಾಷ್ಟ್ರೀಯ ಬೆಲೆ (IPP) 120 ರೂಪಾಯಿ ಇದೆಯಾದ್ದರಿಂದ ಇಲ್ಲಿನ ಗ್ರಾಹಕರೂ ಕೂಡಾ ಅದೇ ಬೆಲೆಯನ್ನು ನೀಡಬೇಕೆಂದು, ಅಷ್ಟು ಕೊಡದಿದ್ದರೆ 87 ರೂ.ಗಳ Under Recoveryಯನ್ನು ಕಂಪನಿ ಅನುಭವಿಸುತ್ತದೆ ಎಂಬುದು ಇದರರ್ಥ. ಅಂದರೆ ಇಲ್ಲಿನ ಬೆಲೆಯನ್ನು ನಿಗದಿಪಡಿಸಲು ದೇಶೀಯ ಉತ್ಪಾದನಾ ವೆಚ್ಚದ ಬದಲಿಗೆ ಇಂಗ್ಲೆಂಡಿನ ಉತ್ಪಾದನಾ ವೆಚ್ಛವನ್ನು ಆಧಾರವಾಗಿಟ್ಟುಕೊಳ್ಳಬೇಕೆಂಬುದು ಈ ವಾದ. ಇದನ್ನು ಸುಲಿಗೆಕೋರರ ಭಾಷೆ ಮತ್ತು ಹಿತಾಸಕ್ತಿ ಎನ್ನದೆ ಬೇರೇನೆನ್ನಬೇಕು?

ಒಂದು ಕಡೆ ಜನತೆಯ ತೀವ್ರ ವಿರೋಧವನ್ನು ಕಡೆಗಣಿಸಿ ತೆರಿಗೆಗಳನ್ನು ಕಡಿತಗೊಳಿಸಲು ನಿರಾಕರಿಸುತ್ತಾ, ಮತ್ತೊಂದು ಕಡೆ ಕಲ್ಪಿತ ನಷ್ಟವನ್ನೇ ನಿಜವಾದ ನಷ್ಟವೆಂದು ಬಿಂಬಿಸುತ್ತಾ, ಮತ್ತೆ ಮತ್ತೆ ಬೆಲೆಗಳನ್ನು ಏರಿಸಲು ಸರ್ಕಾರ ಹಾತೊರೆಯುತ್ತಿದೆ. ತೆರಿಗೆ ಕಡಿತಗೊಳಿಸಿದರೆ ಸರ್ಕಾರಕ್ಕೆ ಆದಾಯ ಕಡಿಮೆಯಾಗುತ್ತದೆ ಮತ್ತು ಸಬ್ಸಿಡಿ ಹೊರೆ ಹೆಚ್ಚಾಗುತ್ತದೆ ಎಂದು ಸರ್ಕಾರ ವಾದಿಸುತ್ತಿದೆ. ಆದರೆ ವಾಸ್ತವವೇನು? ಒಂದು ಉದಾಹರಣೆಯನ್ನೇ ಗಮನಿಸಿ: 2015 ರಲ್ಲಿ ಅಂತರರಾಷ್ಟ್ರೀಯ ಕಚ್ಛಾ ತೈಲ ಒಂದು ಬ್ಯಾರೆಲ್‍ಗೆ 52.32 ಡಾಲರ್ ಇತ್ತು. 2018 ರಲ್ಲಿ ಈಗ 72 ಡಾಲರ್ ಇದೆ.

ಭಾರತ ಸರ್ಕಾರದ ಆಮದು ಸುಂಕ ಶೇ.10 ರಷ್ಟಿದೆ ಎಂದುಕೊಳ್ಳೋಣ. ಇದರ ಆಧಾರದಲ್ಲಿ ಒಂದು ಬ್ಯಾರೆಲ್ ಕಚ್ಛಾ ತೈಲದ ಮೇಲೆ ಭಾರತ ಸರ್ಕಾರಕ್ಕೆ 2015 ರಲ್ಲಿ 5.23 ಡಾಲರ್ ಆದಾಯ ಬಂದಿದ್ದರೆ, 2018 ರಲ್ಲಿ 7.2 ಡಾಲರ್ ಆದಾಯ ಬರುತ್ತಿದೆ ಎಂದರ್ಥ. ಅಂದರೆ, ಆಮದು ಸುಂಕದ ಪ್ರಮಾಣದಲ್ಲಿ ಹೆಚ್ಚಳವಿಲ್ಲದೆಯೇ ಕೇಂದ್ರ ಸರ್ಕಾರಕ್ಕೆ 2 ಡಾಲರ್ ಹೆಚ್ಚು ಆದಾಯ ಬರುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಮೂರನೇ ಒಂದು ಭಾಗದಷ್ಟು ಸುಂಕ ಕಡಿತಗೊಳಿಸಿದರೂ ಆದಾಯ ಮೊದಲಿನಷ್ಟೇ ಇರುತ್ತದೆ ಅಥವಾ ಸ್ವಲ್ಪ ಹೆಚ್ಚಿಗೂ ಸಿಗುತ್ತಿರುತ್ತದೆ. ಆದ್ದರಿಂದ ಸರ್ಕಾರಕ್ಕೆ ನಷ್ಟವಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅಂತರರಾಷ್ಟ್ರೀಯ ಬೆಲೆಗಳು ಏರಿದಂತೆಲ್ಲಾ ಸರ್ಕಾರಕ್ಕೆ ಆಮದು ಸುಂಕದಲ್ಲಿ ತಂತಾನೇ ಹೆಚ್ಚುವರಿ ಆದಾಯ ಬರುತ್ತಿರುತ್ತದೆ. ಹೀಗಾಗಿ ಹೆಚ್ಚೆಚ್ಚು ತೆರಿಗೆಗಳನ್ನು ಸರ್ಕಾರ ವಿಧಿಸಿ ಆದಾಯ ಸಂಗ್ರಹ ಮಾಡುತ್ತದೆ ಮತ್ತು ಬೆಲೆ ಏರಿಕೆಗೆ ಇದೇ ಮೂಲ ಕಾರಣವಾಗಿದೆ. ಈ ಕಾರಣದಿಂದಲೇ ಎಡಪಕ್ಷಗಳು ತೈಲ ತೆರಿಗೆಗಳನ್ನು ಇಳಿಸಿ ಎಂದು ಒತ್ತಾಯಿಸುವುದು.

ಅಡಿಗೆ ಅನಿಲ ರಿಲಯನ್ಸ್ ತೆಕ್ಕೆಗೆ

ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ಕುಟುಂಬ ಅಡುಗೆ ಅನಿಲದ ಬೆಲೆ ರೂ. 380 ಅಥವಾ 400 ರ ಒಳಗಿತ್ತು. ಬಿಜೆಪಿ ಆಡಳಿತದ 4 ವರ್ಷಗಳಲ್ಲಿ ಒಂದು ಸಿಲಿಂಡರ್ ಬೆಲೆ ರೂ. 800 ರ ಸಮೀಪಕ್ಕೆ ಬಂದಿದೆ. ಎರಡು ಪಟ್ಟು ಹೆಚ್ಚಳವಾಗಿದೆ. ಅಡಿಗೆ ಅನಿಲ ಸಬ್ಸಿಡಿ ನೆಪವೊಡ್ಡಿ ಅನಿಲ ಉತ್ಪಾದನೆಯನ್ನು ರಿಲಯನ್ಸ್ ಕಂಪನಿಗೆ ವರ್ಗಾಯಿಸಲಾಗಿದೆ. ಆಂಧ್ರದ ಕೃಷ್ಣ ಗೋಧಾವರಿ ಕಣಿವೆಯಲ್ಲಿ (KG Basin) ಡಿ-6 ಬ್ಲಾಕ್‍ನ್ನು ರಿಲಯನ್ಸ್ ಕಂಪನಿಗೆ ನೀಡಿರುವುದರಲ್ಲಿ ಲಕ್ಷಾಂತರ ಕೋಟಿ ದೇಶಕ್ಕೆ ನಷ್ಟವಾಗಲಿದೆ ಎಂದು ಸಿಪಿಐ(ಎಂ) ಸಂಸದರಾದ ಬಸುದೇವ ಆಚಾರ್ಯ ಮತ್ತು ತಪನ್‍ಸೇನ್‍ರವರು 2007 ರಲ್ಲೇ ಎಚ್ಚರಿಸಿದ್ದರು.

ಕಡಿಮೆ ದರದಲ್ಲಿ ಅಡುಗೆ ಅನಿಲವನ್ನು ಪೂರೈಸಲು ಸಾಧ್ಯವಿರುವ ಸರ್ಕಾರಿ ಸ್ವಾಮ್ಯದ ONGC ಬದಲಿಗೆ ರಿಲಯನ್ಸ್ ಕಂಪನಿಯೊಂದಿಗೆ ಹೆಚ್ಚುವರಿ ದರಗಳ ಒಪ್ಪಂದವನ್ನು ಮಾಡಿಕೊಂಡ ಪರಿಣಾಮವಾಗಿ ಅಡಿಗೆ ಅನಿಲದ ಬೆಲೆಗಳು ಒಂದೇ ಸಮನೆ ಏರುತ್ತಿವೆ. ಖಾಸಗಿ ಬಂಡವಾಳಿಗರಿಗೆ ಸಬ್ಸಿಡಿ ನೀಡಲು ಸಾಮಾನ್ಯ ಜನರಿಗೆ ಬರೆ ಎಳೆಯುವ ಕೆಲಸ ನಡೆಯುತ್ತಿದೆ. ಹಿಂದಿನ ಮನಮೋಹನ್‍ಸಿಂಗ್ ಸರ್ಕಾರ ಇಂತಹ ಜನವಿರೋಧಿ ಕ್ರಮಕ್ಕೆ ಕಾರಣವಾದರೆ, ಪ್ರಸಕ್ತ ಮೋದಿ ಸರ್ಕಾರ ಅದೇ ನೀತಿಯನ್ನು ಮತ್ತಷ್ಟು ವೇಗವಾಗಿ ಜಾರಿಗೊಳಿಸುತ್ತಿದೆ.

ಬೆಲೆ ಏರಿಕೆ ಧೋರಣೆಯ ಪ್ರೇರಣೆ ಯಾವುದು?

ಸ್ವಾತಂತ್ರ್ಯಾ ನಂತರದಲ್ಲಿ ತೈಲ ಕ್ಷೇತ್ರದಲ್ಲಿ ಭಾರತವನ್ನು ಲೂಟಿ ಮಾಡುತ್ತಿದ್ದ ಬರ್ಮಾ ಶೆಲ್, ಕಾಲ್ಟೆಕ್ಸ್, ಎಸ್ಸೊ ಎಂಬ ಬೃಹತ್ ವಿದೇಶೀ ಕಂಪನಿಗಳನ್ನು ಅಂದಿನ ಶ್ರೀಮತಿ ಇಂದಿರಾ ಗಾಂಧಿ ಸರ್ಕಾರ 1976 ರಲ್ಲಿ ರಾಷ್ಟ್ರೀಕರಣ ಮಾಡಿತು. ಅಲ್ಲಿಯವರೆಗೆ ಈ ಕಂಪನಿಗಳು ಪೆಟ್ರೋಲಿಯಂ ಉತ್ಪನ್ನಗಳಿಗೆ ಅಂತರರಾಷ್ಟ್ರೀಯ ದರಗಳನ್ನು ಗ್ರಾಹಕರಿಂದ ವಸೂಲಿ ಮಾಡಿ ಅಪಾರ ಲಾಭಗಳಿಸುತ್ತಿದ್ದವು. ಇದನ್ನು ‘ಆಮದು ಸಮಮೌಲ್ಯ ಬೆಲೆ ವ್ಯವಸ್ಥೆ’ (Import Price Parity System) ಎನ್ನಲಾಗುತ್ತಿತ್ತು.

ಬೃಹತ್ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಉದ್ಯಮಿಗಳ ಕೂಟಗಳು ಸೇರಿ ಜಗತ್ತಿನ ತೈಲ ಮಾರುಕಟ್ಟೆಗಳ ಹಿಡಿತ ಸಾಧಿಸುವುದು ಮತ್ತು ತಮ್ಮ ಲಾಭದ ಹೆಚ್ಚಳಕ್ಕಾಗಿ ದರಗಳಲ್ಲಿ ಕೈಚಳಕ (Manipulate) ಮಾಡುವುದು ಎಲ್ಲರಿಗೂ ತಿಳಿದ ವಿಚಾರ. 1976 ರಲ್ಲಿ ‘ಆಮದು ಸಮಮೌಲ್ಯ ಬೆಲೆ ಪದ್ಧತಿ’ಯನ್ನು ರದ್ದು ಮಾಡಿದ ನಂತರ ಆಗಿನ ಸರ್ಕಾರ “ಆಡಳಿತಾತ್ಮಕ ಬೆಲೆ ನಿಯಂತ್ರಣ” (APM – Administered Price Mechanism) ಪದ್ಧತಿಯನ್ನು ಜಾರಿಗೆ ತಂದಿತು. ಇದನ್ನು ‘ತೈಲ ನಿಧಿ ಖಾತೆ’ (Oil Pool Account) ಎಂದೂ ಸಹ ಕರೆಯಲಾಗಿತ್ತು.

ದೇಶೀಯ ಸಂಸ್ಕರಣಾ ಸಾಮಥ್ರ್ಯ ಹೆಚ್ಚಿಸುವುದು ಮತ್ತು ವಿದೇಶೀ ಕಂಪನಿಗಳ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅವಲಂಬನೆಯನ್ನು ಕೊನೆಗೊಳಿಸುವ ಪ್ರಯತ್ನ ಇದಾಗಿತ್ತು. ಎಪಿಎಂ ಮೂಲಕ ಕಚ್ಛಾ ತೈಲದ ಬೆಲೆ, ಸಂಸ್ಕರಣಾ ವೆಚ್ಚ, ಸೂಕ್ತವಾದ ಲಾಭ ಎಲ್ಲವನ್ನೂ ಒಳಗೊಂಡು ಉತ್ಪನ್ನಗಳ ಬೆಲೆ ನಿಗದಿಯಾಗುತ್ತಿತ್ತು. ಅಂತರರಾಷ್ಟ್ರೀಯ ತೈಲ ಬೆಲೆಗಳು ಏರುಪೇರಾದರೂ ಸಹ ದೇಶದೊಳಗೆ ಬೆಲೆಗಳ ಸಮತೋಲನ ಕಾಯ್ದುಕೊಳ್ಳಲು ಇದರಿಂದ ಸಹಾಯವಾಗುತ್ತಿತ್ತು. ಈ ತೈಲ ನಿಧಿ ಖಾತೆಯಲ್ಲಿ ಲಕ್ಷಾಂತರ ಕೋಟಿ ರೂಗಳು ಸಂಗ್ರಹವಾಗಿತ್ತು.

1991 ರಲ್ಲಿ ಮನಮೋಹನಸಿಂಗ್ ನೇತೃತ್ವದಲ್ಲಿ ನವ-ಉದಾರವಾದಿ ನೀತಿಗಳು ಶುರುವಾದ ಮೇಲೆ ವಿದೇಶೀ ಮತ್ತು ಸ್ವದೇಶೀ ಖಾಸಗಿ ಹೂಡಿಕೆದಾರರ ಹೆಚ್ಚಳವಾಯ್ತು. ಎಪಿಎಂ ವ್ಯವಸ್ಥೆಯನ್ನು ಕಿತ್ತುಹಾಕಿ 1976 ಕ್ಕೂ ಹಿಂದೆ ಇದ್ದ ರೀತಿಯಲ್ಲೇ ಲೂಟಿ ಹೊಡೆಯಲು ಇವರು ಸರ್ಕಾರದ ಮೇಲೆ ವಿಪರೀತ ಒತ್ತಡ ಹಾಕಿದರು. ಆ ಖಾತೆಯಲ್ಲಿದ್ದ ಹಣವನ್ನು ಸರ್ಕಾರಗಳು ಹಣಕಾಸು ಕೊರತೆಯನ್ನು ತುಂಬಿಕೊಳ್ಳಲು ಬಳಸಲಾರಂಭಿಸಿದವು. 2002 ರಲ್ಲಿ ವಾಜಪೇಯಿ ಸರ್ಕಾರ ಎಪಿಎಂ ಅಥವಾ ತೈಲ ನಿಧಿ ಖಾತೆಯನ್ನು ಪೂರ್ಣವಾಗಿ ರದ್ದುಪಡಿಸಿತು. ಮತ್ತೆ ವಾಪಸ್ ‘ಆಮದು ಸಮಮೌಲ್ಯ ಬೆಲೆ ಪದ್ಧತಿ’ಗೆ ಬರಲಾಯ್ತು.

ನಿಜವಾದ ಉತ್ಪಾದನೆ ಮತ್ತು ಸಂಸ್ಕರಣೆ ವೆಚ್ಚ ಎಷ್ಟೇ ಕಡಿಮೆಯಿದ್ದರೂ ನಾವು ಜಾಗತಿಕ ಬೆಲೆಗಳಿಗೆ ಸಮಾನವಾಗಿ ಪಾವತಿಸಬೇಕು. 2002 ರ ನಂತರ ರಿಲಯನ್ಸ್ ಮತ್ತು ಎಸ್ಸಾರ್‍ನಂತಹ ಖಾಸಗಿ ಕಂಪನಿಗಳು ಮತ್ತಷ್ಟು ನಿಯಂತ್ರಣ ಕಳಚಬೇಕೆಂದು ಬಯಸಿದವು. ಬಿಜೆಪಿ ಸರ್ಕಾರದ ಪ್ರಯತ್ನಗಳು ಅವರಿಗೆ ಸಾಕೆನಿಸಲಿಲ್ಲ. ಕಿರಿಟ್ ಪಾರಿಖ್ ಸಮಿತಿಯನ್ನು ಖಾಸಗಿಯವರ ಈ ಬೇಡಿಕೆಗಳನ್ನು ಪರಿಹರಿಸುವ ಉದ್ದೇಶದಿಂದಲೇ ನೇಮಿಸಲಾಯಿತು.

ಈ ಸಮಿತಿಯು ಪೆಟ್ರೋಲಿಯಂ ವಸ್ತುಗಳನ್ನು ಸಂಪೂರ್ಣವಾಗಿ ಸರ್ಕಾರ ನಿಯಂತ್ರಣದಿಂದ ಕಳಚಿ ಹಾಕಬೇಕೆಂದು ವರದಿ ನೀಡಿತು. ಮನಮೋಹನಸಿಂಗ್ ಸರ್ಕಾರ ಈ ವರದಿಯ ಶಿಫಾರಸ್ಸುಗಳನ್ನು ಒಪ್ಪಿಕೊಂಡು, ಮೊದಲಿಗೆ ಪೆಟ್ರೋಲನ್ನು ನಿಯಂತ್ರಣ ಮುಕ್ತಗೊಳಿಸಿ ಅದೇ ದಾರಿಯ ಮೂಲಕ ಆಮದು ಸಮಮೌಲ್ಯ ಬೆಲೆ ಪದ್ಧತಿಯನ್ನು (IPP) ಪುನರ್‍ಜಾರಿಗೊಳಿಸಿತು. ಹೀಗಾಗಿ ಭಾರತದ ಜನರನ್ನು ಖಾಸಗಿ ಕಂಪನಿಗಳ ನೇತೃತ್ವದ ಮಾರುಕಟ್ಟೆ ಹಿಡಿತಕ್ಕೆ ಒಪ್ಪಿಸಲಾಗಿದೆ ಎಂದು ಸಿಪಿಐ(ಎಂ) ಪಕ್ಷವು ವಿಶ್ಲೇಷಿಸುತ್ತದೆ.

ಖಾಸಗಿಯವರ ಸೂಪರ್ ಲಾಭವನ್ನು ಖಾತ್ರಿಗೊಳಿಸುವ ಸಲುವಾಗಿ ನಿಯಂತ್ರಣಮುಕ್ತ ಮಾಡಿರುವ ಕಾರಣದಿಂದಾಗಿಯೇ ಪೆಟ್ರೋಲಿಯಂ ದರಗಳು ರಾತ್ರೋರಾತ್ರಿ ಪದೇ ಪದೇ ಏರುತ್ತಿವೆ. ದರಗಳನ್ನು ಜಾಗತಿಕ ಮಾರುಕಟ್ಟೆಗೆ ಹೋಲಿಸಿ ಜನರಿಂದ ವಸೂಲಿ ಮಾಡಬೇಕೆನ್ನುವ ಸರ್ಕಾರ ಮತ್ತು ತೈಲ ಕಂಪನಿಗಳು ಅದೇ ರೀತಿ ಅದನ್ನು ಉತ್ಪಾದಿಸುವ ಕಾರ್ಮಿಕರಿಗೆ ಮತ್ತು ಉಪಯೋಗಿಸುವ ಗ್ರಾಹಕರಿಗೆ ಜಾಗತಿಕವಾಗಿ ನೀಡುವ ರೀತಿಯಲ್ಲಿ ಸಂಬಳಗಳನ್ನು ನೀಡುವ ಬಗ್ಗೆ ಮಾತನಾಡುವುದಿಲ್ಲ. ರಾಜ್ಯ ಸರ್ಕಾರಗಳೂ ಕೂಡಾ ಪೆಟ್ರೋಲಿಯಂ ವಸ್ತುಗಳನ್ನು ಹಿಂಡುವ ಕೆಚ್ಚಲನ್ನಾಗಿಯೇ ನೋಡುತ್ತಿವೆ. ರಾಷ್ಟ್ರಮಟ್ಟದಲ್ಲಿ ಬೆಲೆ ಏರಿದಂತೆಲ್ಲಾ ತಾವೂ ಲಾಭ ಮಾಡಿಕೊಳ್ಳುತ್ತಿವೆ.

ಪರಿಹಾರವೇನು?

ಈ ಹಿನ್ನೆಲೆಯಲ್ಲಿ ಜಾಗತಿಕವಾಗಿ ಏರುಪೇರಾಗುವ ತೈಲ ಬೆಲೆಗಳ ಸಮಸ್ಯೆಯನ್ನು ಎದುರಿಸಲು ಹಿಂದೆ ಇದ್ದ ರೀತಿಯಲ್ಲಿ ‘ಆಡಳಿತಾತ್ಮಕ ಬೆಲೆ ನಿಯಂತ್ರಣ ವ್ಯವಸ್ಥೆ’ಯನ್ನು ಜಾರಿಗೆ ತರುವುದು ಅಗತ್ಯವಾಗಿದೆ. ಜೊತೆಗೆ ಜಗತ್ತಿನಲ್ಲೇ ಅತಿ ಹೆಚ್ಚು ಇರುವ ತೆರಿಗೆಗಳನ್ನು ಪುನರ್ರಚಿಸಬೇಕಾದ ಅಗತ್ಯವಿದೆ. ದೇಶೀಯವಾಗಿ ಸ್ವಾವಲಂಬೀ ತೈಲ ಉತ್ಪಾದನೆಗೆ ವಿಶೇಷವಾದ ಯೋಜನೆಗಳನ್ನು ಸರ್ಕಾರ ರೂಪಿಸಬೇಕು. ತೈಲ ರಾಷ್ಟ್ರದ ಅತ್ಯಮೂಲ್ಯ ಸಂಪನ್ಮೂಲ. ಇದನ್ನು ಸಾರ್ವಜನಿಕ ಸಂಪತ್ತಾಗಿ ಉಳಿಸಿಕೊಳ್ಳಬೇಕಾಗಿದೆ. ನಿಜವಾದ ದೇಶಪ್ರೇಮಿಗಳು ಪ್ರಾಕೃತಿಕ ಸಂಪತ್ತನ್ನು ಸಾರ್ವಜನಿಕ ಒಡೆತನದಲ್ಲಿಯೇ ಇರಿಸುತ್ತಾರೆ. ಆದರೆ ಪ್ರಸಕ್ತ ಮೋದಿ ಸರ್ಕಾರ ದೇಶದ ಸಂಪತ್ತನ್ನೆಲ್ಲಾ ಖಾಸಗಿ ಮಾಡಲು ತುದಿಗಾಲಲ್ಲಿ ಕೆಲಸ ಮಾಡುತ್ತಿದೆ.

ಮೋದಿ ಸರ್ಕಾರ ಆಕಾಶದಷ್ಟು ಆಸೆಗಳನ್ನು ಸೃಷ್ಟಿಸಿ ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷಗಳಾದರೂ ಸಾಸಿವೆ ಕಾಳಿನಷ್ಟೂ ಕೆಲಸ ಮಾಡಲಿಲ್ಲ ಎಂದು ಭಾರತದ ದೇಶಪ್ರೇಮಿ ಜನತೆ ಅತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ. ಈ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಜನರ ನಡುವೆ ಜಾತಿ ಹೆಸರಿನ, ಧರ್ಮದ ಹೆಸರಿನ ಗಲಭೆಗಳನ್ನು ಹುಟ್ಟಿಸಲಾಗುತ್ತಿದೆ. ಸರ್ಕಾರ ನೀತಿಗಳನ್ನು ವಿರೋಧಿಸುವವರನ್ನು ‘ದೇಶದ್ರೋಹಿ’ಗಳೆಂದು ಜರಿಯಲಾಗುತ್ತಿದೆ. ಅಘೋಷಿತ ಸರ್ವಾಧಿಕಾರವನ್ನು ಜಾರಿಗೊಳಿಸಲಾಗಿದೆ. ಆದರೆ ಭಾರತದ ಜನತೆ ತಮ್ಮ ನ್ಯಾಯಬದ್ಧ ಹಕ್ಕುಗಳನ್ನು ಕಳೆದುಕೊಳ್ಳಲು ಒಪ್ಪುವುದಿಲ್ಲ.

ಆದ್ದರಿಂದ ಭಾರತದ ದುಡಿಯುವ ಜನತೆ ತಮ್ಮ ಬದುಕಿನ ರಕ್ಷಣೆಗಾಗಿ ಮತ್ತು ದೇಶದ ಸಂಪನ್ಮೂಲಗಳ ಉಳಿವಿಗಾಗಿ ಸೆಪ್ಟೆಂಬರ್ 10 ರಂದು ರಾಷ್ಟ್ರೀಯ ಹರತಾಳವನ್ನಾಗಿ ಆಚರಿಸಲು ಸಿಪಿಐ(ಎಂ) ಸೇರಿದಂತೆ ಎಡಪಕ್ಷಗಳು ಕರೆ ನೀಡಿವೆ.

ಇದರಲ್ಲಿ ಸಕ್ರಿಯವಾಗಿ ಭಾಗವಹಿಸಿ, ಯಶಸ್ವಿಗೊಳಿಸಿ.

Leave a Reply

Your email address will not be published. Required fields are marked *