ಭಾರತದ ಚುನಾವಣಾ ಆಯೋಗಕ್ಕೆ ಸಿಪಿಐ(ಎಂ) ನ ಟಿಪ್ಪಣಿ
ಭಾರತದ ಚುನಾವಣಾ ಆಯೋಗ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳನ್ನು ಚರ್ಚೆಗೆ ಆಹ್ವಾನಿಸಿದ್ದ ಪ್ರಕಾರ ಸಿಪಿಐ(ಎಂ) ನಿಯೋಗ ಚುನಾವಣಾ ಆಯುಕ್ತರುಗಳನ್ನು ಭೇಟಿಮಾಡಲು ಹೋಗಿತ್ತು. ಆಯೋಗದ ಉಪಕ್ರಮವು ಸ್ವಾಗತಾರ್ಹ ಎಂದಿರುವ ನಿಯೋಗ, ರಾಜಕೀಯ ಪಕ್ಷಗಳೊಂದಿಗೆ ಹೀಗೆ ತೊಡಗಿಸಿಕೊಳ್ಳುವುದು ಮತ್ತು ಸಮಾಲೋಚನೆಗಳನ್ನು ನಡೆಸುವುದನ್ನು ನಿಯಮಿತವಾದ ಅಭ್ಯಾಸವಾಗಿಸಿಕೊಳ್ಳುತ್ತದೆ ಎಂದು ಆಶಿಸಿತು.
ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಬಹಳ ಸಮಯದಿಂದಲೂ ಚುನಾವಣೆಗಳನ್ನು ನಡೆಸುವ ಬಗ್ಗೆ ಮತ್ತು ಪ್ರಜಾಪ್ರಭುತ್ವದ ಸಂರಕ್ಷಣೆ ಮತ್ತು ಅದನ್ನು ಆಳಗೊಳಿಸುವುದಕ್ಕೆ ಸಂಬಂಧಿಸಿದಂತೆ ಅನೇಕ ವಿಷಯಗಳನ್ನು ಎತ್ತುತ್ತ ಬಂದಿದೆ. ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತ ಬಂದಿದೆ. ಈ ಟಿಪ್ಪಣಿಯಲ್ಲಿ ಸುಮಾರಾಗಿ ಅವೇ ಪ್ರಶ್ನೆಗಳ, ವಿಶೇಷವಾಗಿ, ಕಳೆದ ಕೆಲವು ವರ್ಷಗಳಲ್ಲಿ ಎತ್ತಿರುವ ಪ್ರಶ್ನೆಗಳನ್ನು ಪುನರುಚ್ಚರಿಸುತ್ತಿದ್ದೇವೆ ಎಂದು ಸಿಪಿಐ(ಎಂ) ನ ಈ ಟಿಪ್ಪಣಿ ಹೇಳಿದೆ.
ಚುನಾವಣಾ ಆಯೋಗದ ಅಧಿಕಾರ ವ್ಯಾಪ್ತಿಯ ಇತಿ-ಮಿತಿಗಳನ್ನು ನಾವು ಅರ್ಥಮಾಡಿಕೊಂಡಿದ್ದರೂ, ಅದು ತನ್ನ ಅಧಿಕಾರವನ್ನು ಮತ್ತು ಪಾರುಪತ್ಯವನ್ನು ಬಳಸಿಕೊಂಡು ಸಾಧ್ಯವಾದಷ್ಟು ನೀತಿಗಳನ್ನು ಸಕಾರಾತ್ಮಕವಾಗಿ ಬದಲಾಯಿಸುತ್ತದೆ ಎಂಬ ನಿರೀಕ್ಷೆಯೊಂದಿಗೆ, ಚರ್ಚೆಗಾಗಿ ಇನ್ನೂ ಹೆಚ್ಚು ವ್ಯಾಪಕವಾದ ಪ್ರಶ್ನೆಗಳನ್ನು ಮುನ್ನೆಲೆಗೆ ತರುವ ಸ್ವಾತಂತ್ರ್ಯವನ್ನು ನಾವು ತೆಗೆದುಕೊಳ್ಳುತ್ತಿದ್ದೇವೆ ಎನ್ನುತ್ತ, ಚುನಾವಣಾ ಸುಧಾರಣೆಗಳು ಸಮಗ್ರವಾಗಿರಬೇಕು ಮತ್ತು ಎಲೆಕ್ಟ್ರಾನಿಕ್ ಮತದಾನ ಯಂತ್ರ(ಇವಿಎಂ)ಗಳು, ಚುನಾವಣಾ ಹಣಕಾಸು, ಭ್ರಷ್ಟಾಚಾರ, ಕಾರ್ಪೊರೇಟ್ ನಿಯಂತ್ರಣ, ಭಾಗಶಃ ಆನುಪಾತಿಕ ಪ್ರಾತಿನಿಧ್ಯ, ಚುನಾವಣಾ ಸಂಸ್ಥೆಗಳ ನಿಷ್ಪಕ್ಷಪಾತತೆ ಮತ್ತು ಸ್ವಾತಂತ್ರ್ಯ, ಮಾಧ್ಯಮಗಳ ಪಾತ್ರ ಇತ್ಯಾದಿಗಳ ಬಗ್ಗೆ ಇರುವ ಕಳವಳಗಳನ್ನು ನಿವಾರಿಸಬೇಕು ಎಂದು ತಾವು ಬಯಸುವುದಾಗಿ ಸಿಪಿಐ(ಎಂ) ಟಿಪ್ಪಣಿ ಹೇಳಿದೆ. ಈ ಟಿಪ್ಪಣಿಯಲ್ಲಿ ಎತ್ತಿರುವ ವಿಷಯಗಳು ಈ ಮುಂದೆ ವಿವರಿಸಿದಂತೆ ಇವೆ.
ಭಾಗಶಃ ಆನುಪಾತಿಕ ಪ್ರಾತಿನಿಧ್ಯ
ಪ್ರಸ್ತುತ ಇರುವ ಸರಳ ಬಹುಮತ ವ್ಯವಸ್ಥೆ (‘ಫಸ್ಟ್-ಪಾಸ್ಟ್-ದಿ-ಪೋಸ್ಟ್’ ಅಂದರೆ ಮೊದಲು ಗೆರೆ ದಾಟಿದವರಿಗೆ ಗೆಲುವು ಎಂಬ ವ್ಯವಸ್ಥೆ) ಕೆಲಸಕ್ಕೆ ಬಾರದವು ಎಂದು ಹೆಚ್ಚೆಚ್ಚು ಸಾಬೀತಾಗುತ್ತಿವೆ, ಏಕೆಂದರೆ ರಾಜಕೀಯ ಪಕ್ಷಗಳು ಸಂಸತ್ತು/ಶಾಸಕಾಂಗಗಳಲ್ಲಿ ಪಡೆಯುವ ಸ್ಥಾನಗಳ ಸಂಖ್ಯೆಯು ಅವು ಪಡೆಯುವ ಮತಗಳ ಸಂಖ್ಯೆಗೂ ಸಂಬಂಧವಿಲ್ಲದಂತೆ ಆಗಿರುವುದರಿಂದಾಗಿ ಅವು ಜನಾದೇಶವನ್ನು ಬಿಂಬಿಸುತ್ತಿಲ್ಲ ಎಂದೆನಿಸುವಂತಾಗಿದೆ.
ಇತ್ತೀಚಿನ ಚುನಾವಣೆಗಳಲ್ಲಿ, ಮತಹಂಚಿಕೆ ಮತ್ತು ಸ್ಥಾನ ಹಂಚಿಕೆಯ ಅನುಪಾತದ ನಡುವೆ ಭಾರಿ ವ್ಯತ್ಯಾಸವಿದೆ ಎಂದು ಅನುಭವವು ತೋರಿಸಿದೆ. ಗಣನೀಯ ಮತಹಂಚಿಕೆ ಹೊಂದಿರುವ ಪಕ್ಷಗಳು ಅದೇ ಪ್ರಮಾಣದಲ್ಲಿ ಸ್ಥಾನಗಳನ್ನು ಗೆಲ್ಲುವಲ್ಲಿ ವಿಫಲವಾದ ಮತ್ತು ಕಡಿಮೆ ಮತಹಂಚಿಕೆ ಹೊಂದಿರುವ ಪಕ್ಷಗಳು ಹೆಚ್ಚಿನ ಸ್ಥಾನಗಳನ್ನು ಗೆದ್ದಿರುವ ಹಲವಾರು ನಿದರ್ಶನಗಳಿವೆ.
2014ರಲ್ಲಿ ಮೊದಲ ಬಾರಿಗೆ, ಕೇವಲ 31 ಪ್ರತಿಶತ ಮತಪಾಲು ಪಡೆದಿದ್ದ ಬಿಜೆಪಿ, ಲೋಕಸಭಾ ಚುನಾವಣೆಯಲ್ಲಿ ಅರ್ಧಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿತು. ಇದಕ್ಕೆ ವ್ಯತಿರಿಕ್ತವಾಗಿ, ಶೇ. 19.3 ರಷ್ಟು ಮತಪಾಲು ಪಡೆದ ಕಾಂಗ್ರೆಸ್ ಕೇವಲ 44 ಸ್ಥಾನಗಳನ್ನು ಗೆದ್ದಿತು. 2024ರ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿ ಶೇ. 36.56 ಮತಗಳೊಂದಿಗೆ 240 ಸ್ಥಾನಗಳನ್ನು ಗೆದ್ದಿತು, ಆದರೆ ಕಾಂಗ್ರೆಸ್ ತನ್ನ ಮತಪಾಲನ್ನು ಕೇವಲ ಶೇ. 1.89 ರಷ್ಟು ಹೆಚ್ಚಿಸಿಕೊಂಡಿತು ಮತ್ತು 2014ಕ್ಕೆ ಹೋಲಿಸಿದರೆ 55 ಹೆಚ್ಚಿನ ಸ್ಥಾನಗಳನ್ನು ಗೆದ್ದಿತು.
ಕೆಲವು ರಾಜ್ಯಗಳನ್ನು ನೋಡುವುದಾದರೆ,
ಉತ್ತರ ಪ್ರದೇಶದಲ್ಲಿ, 2024ರ ಲೋಕಸಭಾ ಚುನಾವಣೆಯಲ್ಲಿ, ಬಹುಜನ ಸಮಾಜ ಪಕ್ಷವು ಶೇ. 9.39 ಮತಗಳನ್ನು ಪಡೆಯಿತು, ಆದರೆ ಅದು ಒಂದೇ ಒಂದು ಸ್ಥಾನವನ್ನು ಗೆಲ್ಲಲಿಲ್ಲ. ಆದರೆ, ಶೇ. 9.46 ರಷ್ಟು ಮತಗಳನ್ನು ಪಡೆದ ಕಾಂಗ್ರೆಸ್ 6 ಸ್ಥಾನಗಳನ್ನು ಗೆದ್ದಿತು.
ಒಡಿಶಾದಲ್ಲಿ, ಬಿಜೆಪಿ ಶೇ. 45.34 ರಷ್ಟು ಮತಗಳೊಂದಿಗೆ 20 ಸ್ಥಾನಗಳನ್ನು ಗೆದ್ದರೆ, ಶೇ. 37.53 ರಷ್ಟು ಮತಗಳನ್ನು ಪಡೆದ ಬಿಜು ಜನತಾದಳ ಒಂದೇ ಒಂದು ಸ್ಥಾನವನ್ನು ಗೆಲ್ಲಲಿಲ್ಲ. ಶೇ. 12.52 ರಷ್ಟು ಮತಗಳನ್ನು ಪಡೆದ ಕಾಂಗ್ರೆಸ್ ಕೇವಲ 1 ಸ್ಥಾನವನ್ನು ಗೆದ್ದಿದೆ.
ಆಂಧ್ರ ಪ್ರದೇಶದಲ್ಲಿ, ವೈಎಸ್ಆರ್ ಕಾಂಗ್ರೆಸ್ ಪಕ್ಷವು ಶೇಕಡಾ 39.61 ರಷ್ಟು ಮತಗಳನ್ನು ಗಳಿಸಿ ಕೇವಲ 4 ಸ್ಥಾನಗಳನ್ನು ಪಡೆದರೆ, ತೆಲುಗುದೇಶಂ ಪಕ್ಷವು ಶೇ. 37.79 ರಷ್ಟು ಮತಗಳನ್ನು ಪಡೆದು ಅದರ ನಾಲ್ಕು ಪಟ್ಟು (16) ಹೆಚ್ಚು ಸ್ಥಾನಗಳನ್ನು ಗಳಿಸಿದೆ.
ದೆಹಲಿಯಲ್ಲಿ ಬಿಜೆಪಿ ಶೇ.54.35 ರಷ್ಟು ಮತಗಳನ್ನು ಪಡೆದು 7 ಸ್ಥಾನಗಳನ್ನು ಗೆದ್ದಿದ್ದರೆ, ಶೇ.24.17 ರಷ್ಟು ಮತಗಳನ್ನು ಪಡೆದ ಆಮ್ ಆದ್ಮಿ ಪಕ್ಷವಾಗಲಿ, ಶೇ.18.91 ರಷ್ಟು ಮತಗಳನ್ನು ಪಡೆದ ಕಾಂಗ್ರೆಸ್ ಆಗಲಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.
2024 ರ ವಿಧಾನಸಭಾ ಚುನಾವಣೆಯಲ್ಲಿ, ಆಂಧ್ರ ಪ್ರದೇಶದಲ್ಲಿ ಶೇ. 39.37 ರಷ್ಟು ಮತಗಳನ್ನು ಗಳಿಸಿದ್ದ ವೈಎಸ್ಆರ್ ಕಾಂಗ್ರೆಸ್ ಪಕ್ಷವು ಕೇವಲ 11 ಸ್ಥಾನಗಳನ್ನು ಗೆದ್ದಿತ್ತು. ಆದರೆ ಅದೇ ಸಮಯದಲ್ಲಿ, ಶೇ. 6 ರಷ್ಟು ಹೆಚ್ಚಿನ ಮತಗಳನ್ನು ಪಡೆದ ತೆಲುಗುದೇಶಂ ಪಕ್ಷವು 135 ಸ್ಥಾನಗಳನ್ನು ಗೆದ್ದಿತು. ಕೇವಲ ಶೇ. 2.83 ರಷ್ಟು ಮತಗಳನ್ನು ಪಡೆದ ಬಿಜೆಪಿ 8 ಸ್ಥಾನಗಳನ್ನು ಗಳಿಸಿತು.
ಒಡಿಶಾದಲ್ಲಿ, ಬಿಜು ಜನತಾದಳವು ಬಿಜೆಪಿಗಿಂತ ಸ್ವಲ್ಪ ಹೆಚ್ಚು ಮತಗಳನ್ನು ಪಡೆದರೂ, ಸ್ಥಾನ ಹಂಚಿಕೆಯಲ್ಲಿ ಇದಕ್ಕೆ ತದ್ವಿರುದ್ಧವಾದ ಚಿತ್ರಣವಿದೆ. ಬಿಜು ಜನತಾದಳ ಕೇವಲ 51 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾದರೆ, ಕಡಿಮೆ ಮತ ಪಾಲನ್ನು ಪಡೆದ ಬಿಜೆಪಿ 78 ಸ್ಥಾನಗಳನ್ನು ಗೆದ್ದಿತು.
ಈ ಅಂಶವನ್ನು ಎತ್ತಿ ತೋರಲು ಈ ಉದಾಹರಣೆಗಳು ಸಾಕು ಎಂದು ನಾವು ಭಾವಿಸುತ್ತೇವೆ. ವಿವಿಧ ಕ್ಷೇತ್ರಗಳಲ್ಲಿ ವಿಶಾಲ ನೆಲೆಯನ್ನು ಹೊಂದಿರುವ ಸಣ್ಣ ಪಕ್ಷಗಳು, ಅವುಗಳ ಗಮನಾರ್ಹ ಮತಪಾಲಿನ ಹೊರತಾಗಿಯೂ, ಒಂದೇ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗದಿರಬಹುದು ಎಂಬುದು ಸ್ಪಷ್ಟವಾಗಿದೆ. ಮತ ಹಂಚಿಕೆಯಲ್ಲಿ ಸಣ್ಣ ಬದಲಾವಣೆಯಾದರೂ, ಸ್ಥಾನಗಳ ಸಂಖ್ಯೆಯಲ್ಲಿ ನಾಟಕೀಯ ಬದಲಾವಣೆಯ ಸಾಧ್ಯತೆಯೂ ಇದೆ. ಇಂತಹ ಅಸಂಗತತೆಗಳು ಮತ್ತು ಜನಾದೇಶದ ವಿರೂಪಗಳನ್ನು ಸರಿಪಡಿಸುವ ಉದ್ದೇಶದಿಂದ ನಾವು ‘ಭಾಗಶಃ ಟ್ಟಿವ್ಯವಸ್ಥೆಯೊಂದಿಗೆ ಆನುಪಾತಿಕ ಪ್ರಾತಿನಿಧ್ಯ’ (proportional representation with a partial list system)ವನ್ನು ಪ್ರತಿಪಾದಿಸುತ್ತ ಬಂದಿದ್ದೇವೆ.
ಈ ಸಂದರ್ಭದಲ್ಲಿ, ಕಾನೂನು ಆಯೋಗವು ಈ ಹಿಂದೆ ಮಾಡಿದ ಶಿಫಾರಸುಗಳಲ್ಲಿ ಒಂದನ್ನು ಉಲ್ಲೇಖಿಸಬಹುದು. ಲೋಕಸಭೆಯಲ್ಲಿ ಪ್ರಸ್ತುತ 543 ಸ್ಥಾನಗಳನ್ನು ನೇರ ಚುನಾವಣೆಗಳ ಮೂಲಕ ಭರ್ತಿ ಮಾಡಲಾಗುತ್ತದೆ, ಭಾಗಶಃ ಆನುಪಾತಿಕ ಪ್ರಾತಿನಿಧ್ಯದ ಆಧಾರದ ಮೇಲೆ ಲೋಕಸಭೆಯಲ್ಲಿನ ಸ್ಥಾನಗಳ ಸಂಖ್ಯೆಯಲ್ಲಿ ಶೇ 25 ರಷ್ಟು ಹೆಚ್ಚಳ ಮಾಡಬೇಕು ಎಂದು ಅದು ಶಿಫಾರಸು ಮಾಡಿತ್ತು. ರಾಜ್ಯ ಶಾಸಕಾಂಗಗಳಲ್ಲೂ ಇದೇ ರೀತಿಯ ವಿಸ್ತರಣೆ ಆಗಬೇಕು. ಇದನ್ನು ಮೊದಲ ಹಂತದಲ್ಲಿ ಪ್ರಯತ್ನಿಸಬಹುದು; ನಂತರ ಆನುಪಾತಿಕ ಪ್ರಾತಿನಿಧ್ಯ ವ್ಯವಸ್ಥೆಯಲ್ಲಿ ಸ್ಥಾನಗಳ ಪಾಲನ್ನು ವಿಸ್ತರಿಸಬಹುದು.
ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆಯನ್ನು ಹೇಗೆ ಕಾರ್ಯಗತಗೊಳಿಸಲಾಗುತ್ತಿದೆ ಎಂಬುದರ ಕುರಿತು ಹಲವು ಸಮಸ್ಯೆಗಳು ಮತ್ತು ಆತಂಕಗಳಿವೆ. ನಾವು ಅವುಗಳನ್ನು ಇಲ್ಲಿ ಅನ್ವೇಷಿಸಲು ಹೋಗುವುದಿಲ್ಲ.
ಏಕಕಾಲದಲ್ಲಿ ಚುನಾವಣೆಗೆ ವಿರೋಧ
“ಒಂದು ದೇಶ, ಒಂದು ಚುನಾವಣೆ”(ಒಎನ್ಒಇ) ಎಂಬ ಕಲ್ಪನೆಯನ್ನು ನಾವು ವಿರೋಧಿಸುತ್ತೇವೆ. ಇದು ಕೇಂದ್ರೀಕೃತ ಏಕಘಟಕ ಪ್ರಭುತ್ವವನ್ನು ರಚಿಸುವ ಗುರಿಯನ್ನು ಹೊಂದಿದೆ ಎಂಬುದು ನಾವು ಬಲವಾದ ನಂಬಿಕೆ.
ಒಎನ್ಒಇ ಪ್ರಸ್ತಾವವು ಕೆಲವು ಶಾಸಕಾಂಗ ಸಭೆಗಳಿಗೆ ಚುನಾವಣೆಗಳನ್ನು ಲೋಕಸಭಾ ಚುನಾವಣೆಗಳೊಂದಿಗೆ ಜೋಡಿಸುವುದಕ್ಕಾಗಿ ಅವುಗಳ ಜೀವಿತಾವಧಿಯನ್ನು ಕಡಿತಗೊಳಿಸುವ ಗುರಿಯನ್ನು ಹೊಂದಿದೆ. ಇದಲ್ಲದೆ, ಒಂದು ರಾಜ್ಯ ಸರ್ಕಾರ ಉರುಳಿ ವಿಧಾನಸಭೆ ವಿಸರ್ಜಿಸಲ್ಪಟ್ಟರೆ, ನಡೆಯುವ ಉಪಚುನಾವಣೆಗಳು ವಿಧಾನಸಭೆಯ ಉಳಿದ ಅವಧಿಗೆ ಮಾತ್ರ ಇರುತ್ತದೆ.
“ಒಂದು ದೇಶ, ಒಂದು ಚುನಾವಣೆ” ಎಂಬುದು ಸಂವಿಧಾನದ ಎರಡು ಮೂಲಭೂತ ಅಂಶಗಳನ್ನು-ಪ್ರಜಾಪ್ರಭುತ್ವ ಮತ್ತು ಒಕ್ಕೂಟತತ್ವ- ದುರ್ಬಲಗೊಳಿಸುತ್ತದೆ. ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸುವ ಅಧಿಕಾರ ಸಂಸತ್ತಿಗೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಚುನಾವಣಾ ಭರವಸೆಗಳ ಬಗ್ಗೆ
ಶಶಾಂಕ ಜೆ.ಶ್ರೀಧರ ವರ್ಸಸ್ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್, ರಾಜಕೀಯ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳು ಸಾರ್ವಜನಿಕರಿಗೆ ನೇರ ಅಥವಾ ಪರೋಕ್ಷ ಆರ್ಥಿಕ ನೆರವು ನೀಡುತ್ತವೆ ಎಂಬುದರಿಂದಾಗಿ ಅವನ್ನು ಭ್ರಷ್ಟ ಆಚರಣೆ ಎಂದು ಪರಿಗಣಿಸಬೇಕು ಎಂಬ ವಾದವನ್ನು ತಿರಸ್ಕರಿಸಿದರೂ, ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಭರವಸೆಗಳ ಮೇಲಿನ ಬಜೆಟ್ ವೆಚ್ಚವನ್ನು ಯಾವ ಮೂಲಗಳಿಂದ ಪೂರೈಸುತ್ತವೆ ಎಂಬುದನ್ನು ಸೂಚಿಸಬೇಕು ಎಂದು ತೀರ್ಪು ನೀಡಿತು.
ಮೇಲ್ನೋಟಕ್ಕೆ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಮಹತ್ವವನ್ನು ಇದು ಒತ್ತಿಹೇಳುತ್ತದೆ ಎಂದು ತೋರುತ್ತದೆಯಾದರೂ, ವಾಸ್ತವದಲ್ಲಿ ಇದು ರಾಜಕೀಯ ಪಕ್ಷಗಳು ತಮ್ಮ ನೀತಿಗಳು, ಕಾರ್ಯಕ್ರಮಗಳು ಮತ್ತು ಭರವಸೆಗಳನ್ನು ಜನರಿಗೆ ಮುಕ್ತವಾಗಿ ವ್ಯಕ್ತಪಡಿಸುವ ಹಕ್ಕಿನ ವಿರುದ್ಧವಾಗಿದೆ. ಯಾವುದೇ ಪ್ರಾಧಿಕಾರ, ಸಂಘಟನೆ ಅಥವಾ ಸಂಸ್ಥೆಯ ಹಸ್ತಕ್ಷೇಪದ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆಯು ರಾಜಕೀಯ ಪಕ್ಷ ವ್ಯವಸ್ಥೆ ಮತ್ತು ಮುಕ್ತ ಹಾಗೂ ನ್ಯಾಯಯುತ ಚುನಾವಣೆಗಳ ಅಡಿಪಾಯವನ್ನೇ ಹಾಳುಮಾಡುತ್ತದೆ.
ಈ ಉದ್ದೇಶಕ್ಕಾಗಿ ಯಾವುದೇ ಕಾನೂನು ಜಾರಿಗೆ ತರುವುದಕ್ಕೆ ನಾವು ಈ ಮೊದಲೂ ನಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದೇವೆ. ಇವುಗಳಿಗೆ ಅವಕಾಶವನ್ನು ಈಗಾಗಲೇ ‘ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಮಾರ್ಗದರ್ಶನಕ್ಕಾಗಿ ಮಾದರಿ ನೀತಿಸಂಹಿತೆ’ಯ ‘ಸಾಮಾನ್ಯ ನಡವಳಿಕೆ’ ವಿಭಾಗದಲ್ಲಿ ಒದಗಿಸಲಾಗಿದೆ.
ಹಣ ಬಲದ ಪಾತ್ರ
ಚುನಾವಣಾ ಫಲಿತಾಂಶಗಳನ್ನು ನಿರ್ಧರಿಸುವಲ್ಲಿ ಹಣದ ಪ್ರಭಾವ ಹೆಚ್ಚುತ್ತಿರುವುದು ಕೂಡ ಬಹಳ ಮುಖ್ಯವಾದ ವಿಷಯವಾಗಿದೆ. ಹೆಚ್ಚಿನ ಹಣವನ್ನು ಹೊಂದಿರುವ ಜನರು ನೀತಿಗಳು ಮತ್ತು ಜನರ ಭವಿಷ್ಯವನ್ನು ನಿರ್ಧರಿಸುವ ಚುನಾಯಿತ ಸಂಸ್ಥೆಗಳಲ್ಲಿ ತಮ್ಮ ಸ್ಥಾನಗಳನ್ನು ಪಡೆದುಕೊಳ್ಳುವುದು ಹೆಚ್ಚುತ್ತಿರುವುದು ಗಂಭೀರ ಕಳವಳಕಾರಿ ವಿಷಯವಾಗಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವರದಿಯ ಪ್ರಕಾರ, 2024 ರ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಲ್ಲಿ ಶೇ. 93 ರಷ್ಟು ಜನರು “ಕೋಟ್ಯಧಿಪತಿಗಳು”!
ಹಣಬಲವು ಸಮಾನ ಅವಕಾಶಗಳ ಸನ್ನಿವೇಶವನ್ನು ಕದಡುತ್ತಿದೆ ಮತ್ತು ಪ್ರಜಾಪ್ರಭುತ್ವ ರಾಜಕೀಯ ವ್ಯವಸ್ಥೆಯ ಅತ್ಯಗತ್ಯ ಲಕ್ಷಣವಾಗಿರುವ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳ ಸಂಪೂರ್ಣ ಪ್ರಕ್ರಿಯೆಯನ್ನು ಹಾಳುಗೆಡವುತ್ತಿದೆ. ಹಣಕಾಸಿನ ಮೇಲ್ಮೆ ಹೆಚ್ಚುವರಿ ಚುನಾವಣಾ ಪ್ರಯೋಜನವಾಗಿ ಪರಿಣಮಿಸುತ್ತದೆ ಎಂಬುದು ಸ್ಪಷ್ಟವಾಗಿದೆ, ಆದ್ದರಿಂದ ಹೆಚ್ಚಿನ ಹಣಕಾಸು ಸಂಪನ್ಮೂಲಗಳನ್ನು ಹೊಂದಿರುವ ಪಕ್ಷಗಳು ಮತ್ತು ಅಭ್ಯರ್ಥಿಗಳು ಚುನಾವಣೆಗಳನ್ನು ಗೆಲ್ಲುವ ಹೆಚ್ಚಿನ ಅವಕಾಶವನ್ನು ಹೊಂದಿರುತ್ತಾರೆ. ಕಪ್ಪು ಹಣ, ಲಂಚ ಮತ್ತು ಹಣಕ್ಕೆ ಪ್ರತಿಯಾಗಿ ಪ್ರಯೋಜನಗಳನ್ನು ಗಿಟ್ಟಿಸುವ ಪ್ರವೃತ್ತಿ ವ್ಯಾಪಕವಾಗಿ ಹರಡಿದೆ, ಇದು ಅಂತಹ ಅಭ್ಯರ್ಥಿಗಳು ತಮ್ಮ ಪ್ರಚಾರಗಳಿಗೆ ಹಣಕಾಸು ಒದಗಿಸಲು ಸಹಾಯಮಾಡುತ್ತದೆ.
ಚುನಾವಣಾ ಸುಧಾರಣೆಗಳ ಕುರಿತಾದ ಭಾರತೀಯ ಕಾನೂನು ಆಯೋಗದ ವರದಿಯು ಈ ಬಗ್ಗೆ ಕಟುವಾಗಿ ಟಿಪ್ಪಣಿ ಮಾಡಿದೆ: “ಅನಿಯಂತ್ರಿತ ಅಥವಾ ಸಾಕಷ್ಟು ನಿಯಂತ್ರಣಗಳಿಲ್ಲದ ಚುನಾವಣಾ ಹಣಕಾಸು ನೀಡಿಕೆ ಎರಡು ರೀತಿಯಲ್ಲಿ ಸೆರೆ ಹಿಡಿಯಲು ದಾರಿ ಮಾಡಿಕೊಡುತ್ತದೆ: ಮೊದಲನೆಯದಾಗಿ, ಕಟ್ಟುನಿಟ್ಟಾದ ಪರಿಶೀಲನೆಯನ್ನು ತಪ್ಪಿಸುವ ಉದ್ದೇಶದಿಂದ ಉದ್ದಿಮೆ/ಖಾಸಗಿ ಕಂಪನಿಗಳ ಹೆಸರಿನಲ್ಲಿ ಹಣವನ್ನು ಬಳಸುವುದು; ಅವರು ಈ ಹಣವನ್ನು ಚುನಾವಣೆಗಳಿಗೆ ಹಣಕಾಸು ಒದಗಿಸಲು ಬಳಸುತ್ತಾರೆ; ಮತ್ತು ಅದರ ಮೂಲಕ ಅಷ್ಟೇನೂ ಕಟ್ಟುನಿಟ್ಟಾಗಿರದ ನಿಯಮಗಳನ್ನು ಪಡೆಯುತ್ತಾರೆ; ಮತ್ತು ಚುನಾವಣೆಗಳಿಗೆ ಒದಗಿಸುವ ಹಣಕಾಸು ಅವರಿಗೆ ಪ್ರಯೋಜನಕಾರಿಯಾದ ನೀತಿಗಳಿಗೆ ದಾರಿ ಮಾಡಿಕೊಡುತ್ತದೆ; ಎರಡನೆಯದಾಗಿ, ‘ಆಳವಾದ ಸೆರೆ’-ಇದರಲ್ಲಿ ಕಾರ್ಪೊರೇಟ್ಗಳು ತಮ್ಮ ಅಳತೆ ಮೀರಿದ ಮತ್ತು ಸ್ವಹಿತಕಾರೀ ಪ್ರಭಾವವನ್ನು ನಿಯಂತ್ರಕರನ್ನಷ್ಟೇ ಅಲ್ಲ, ‘ಸಾರ್ವಜನಿಕ ಹಿತಾಸಕ್ತಿ’ಯ ಹೆಸರಿನಲ್ಲಿ ಅಭಿಪ್ರಾಯಗಳನ್ನು ಬದಲಾಯಿಸುವ ಮೂಲಕ ಸಾಮಾನ್ಯ ನಾಗರಿಕರನ್ನು ಸಹ ಸೆರೆಹಿಡಿಯಲು ಬಳಸುತ್ತಾರೆ” ಎಂದು ಅದು ಹೇಳಿತ್ತು.
ಫೆಬ್ರವರಿ 2024 ರಲ್ಲಿ ಸುಪ್ರೀಂ ಕೋರ್ಟ್, ಚುನಾವಣಾ ಬಾಂಡ್ ಯೋಜನೆಯನ್ನು ಅಸಂವಿಧಾನಿಕ ಎಂದು ಪರಿಗಣಿಸುತ್ತಾ, ಈ ಯೋಜನೆಯು “ಸ್ಪಷ್ಟವಾಗಿಯೂ ಲಂಗು ಲಗಾಮಿಲ್ಲದ್ದು” ಎಂದು ಹೇಳಿದೆ. ಏಕೆಂದರೆ ಮಿತಿಯಿಲ್ಲದ ನಿಧಿ ನೀಡಿಕೆ” ಚುನಾವಣಾ ಪ್ರಕ್ರಿಯೆಯ ಮೇಲೆ ಕಂಪನಿಗಳ ಕಡಿವಾಣವಿಲ್ಲದ ಪ್ರಭಾವ”ಕ್ಕೆ ಕಾರಣವಾಗಬಹುದು ಮತ್ತು ಅದು ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳ ತತ್ವವನ್ನು ಉಲ್ಲಂಘಿಸುತ್ತದೆ. ಈ ಯೋಜನೆಯು ದುರುಪಯೋಗಕ್ಕೆ ಅವಕಾಶವೇ ಇಲ್ಲದಂತೆ (fool-proof) ಕಟ್ಟುನಿಟ್ಟಾಗಿಲ್ಲ ಮತ್ತು ಪ್ರತಿಫಲಾಪೇಕ್ಷೆ (quid pro quo) ವ್ಯವಸ್ಥೆಯನ್ನು ನಿರ್ಮಿಸುತ್ತದೆ, ಇದರಲ್ಲಿ ದೇಣಿಗೆದಾರರಿಗೆ “ಶಾಸಕರ ಲಭ್ಯತೆ’ ಹೆಚ್ಚಿನ ರೀತಿಯಲ್ಲಿ ಇರುತ್ತದೆ, ಇದು “ನೀತಿ ರಚನೆಯ ಮೇಲೆ ಪ್ರಭಾವವಾಗಿ ಪರಿಣಮಿಸಬಹುದು” ಎಂದೂ ಸುಪ್ರಿಂಕೋರ್ಟ್ ತೀರ್ಪುಹೇಳಿದೆ.
ರಾಜಕೀಯ ಪಕ್ಷಗಳಿಗೆ ಸರ್ಕಾರದ ನಿಧಿ
ಅನೇಕ ದೇಶಗಳಲ್ಲಿ, ಚುನಾವಣೆಗಳಲ್ಲಿ ದೊಡ್ಡ ಹಣದ ಪಾತ್ರವನ್ನು ಮತ್ತು ಅದಕ್ಕೆ ಸಂಬಂಧಿಸಿದ ಲಂಚ, ಸುಲಿಗೆ, ಲಾಬಿ ಮತ್ತು ಸಾಂಸ್ಥಿಕ ಭ್ರಷ್ಟಾಚಾರದ ಪಾತ್ರವನ್ನು ಸಾರ್ವಜನಿಕ ನಿಧಿ ನೀಡಿಕೆ ಅಥವಾ ಚುನಾವಣೆಗಳಿಗೆ ಪ್ರಭುತ್ವದಿಂದ ಹಣ ನೀಡಿಕೆಯ ಮೂಲಕ ತಗ್ಗಿಸುವ ಪ್ರಯತ್ನಗಳು ನಡೆದಿವೆ. ಉದಾಹರಣೆಗೆ, ಜರ್ಮನಿಯಲ್ಲಿ, ಹಿಂದಿನ ಚುನಾವಣೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಪಕ್ಷಗಳ ಸ್ಥಾನಗಳು ಮತ್ತು ಮತ ಹಂಚಿಕೆಯ ಆಧಾರದ ಮೇಲೆ ಮೂಲಧನ (corpus)ದಿಂದ ಪಕ್ಷಗಳಿಗೆ ಪ್ರಭುತ್ವದಿಂದ ಹಣವನ್ನು ಒದಗಿಸಲಾಗುತ್ತದೆ. ಇದಲ್ಲದೆ, ಎಲ್ಲ ರಾಜಕೀಯ ಪಕ್ಷಗಳಿಗೆ ಟಿವಿ ಸುದ್ದಿಗಳಲ್ಲಿ ಪ್ರಮಾಣಾನುಗುಣ ಮತ್ತು ನ್ಯಾಯಯುತ ಸಮಯದ ಹಂಚಿಕೆಯನ್ನು ಖಚಿತಪಡಿಸುವಂತಹ ಪರೋಕ್ಷ ಸಬ್ಸಿಡಿಗಳನ್ನು ಸಹ ಒದಗಿಸಲಾಗುತ್ತದೆ. ದಿನೇಶ್ ಗೋಸ್ವಾಮಿ ಮತ್ತು ಇಂದ್ರಜಿತ್ ಗುಪ್ತಾ ಸಮಿತಿಗಳು ಶಿಫಾರಸು ಮಾಡಿದಂತೆ, ಚುನಾವಣೆಗಳಿಗೆ ಭಾಗಶಃ ಸರ್ಕಾರಿ ನಿಧಿ ನೀಡಿಕೆ ಇರಬೇಕು. ಭಾಗಶಃ ಸರ್ಕಾರಿ ನಿಧಿ ನೀಡಿಕೆ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಒಂದು ಕನಿಷ್ಟ “ಹಣಕಾಸು ಆಧಾರ”ವನ್ನು ಒದಗಿಸುತ್ತದೆ.
ರಾಜಕೀಯ ಪಕ್ಷಗಳ ವೆಚ್ಚಮಿತಿಯ ಪರಿಷ್ಕರಣೆ
ಇದಕ್ಕೆ ಲಗತ್ತಿಸಿಕೊಂಡಂತೆ ಪಕ್ಷವೊಂದು ಮಾಡುವ ಖರ್ಚುಗಳಿಗೆ ಯಾವುದೇ ಮಿತಿ ಇಲ್ಲದಿರುವ ಪ್ರಶ್ನೆಯೂ ಇದೆ. ಜನತಾ ಪ್ರಾತಿನಿಧ್ಯ ಕಾಯ್ದೆಯ ‘ಸೆಕ್ಷನ್ 77’ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ಮಿತಿ ವಿಧಿಸುತ್ತದೆ, ಆದರೆ ಒಂದು ರಾಜಕೀಯ ಪಕ್ಷವು ಯಾವುದೇ ನಿರ್ದಿಷ್ಟ ಅಭ್ಯರ್ಥಿಗಲ್ಲದೆ, ಪಕ್ಷದ ಪ್ರಚಾರಗಳಿಗೆ ಮಾಡಬಹುದಾದ ಖರ್ಚಿನ ಮೇಲೆ ಅಂತಹ ಮಿತಿಯಿಲ್ಲ. ಚುನಾವಣೆಯ ಸಮಯದಲ್ಲಿ ಪಕ್ಷದ ಖರ್ಚಿನ ಮೇಲೆ ಮಿತಿ ಇಲ್ಲದಿದ್ದರೆ, ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಮಿತಿ ಅರ್ಥಹೀನವಾಗುತ್ತದೆ. ಇಂಗ್ಲೆಂಡ್ ಮತ್ತು ಇತರ ಕೆಲವು ದೇಶಗಳಲ್ಲಿ ಇರುವಂತೆ ರಾಜಕೀಯ ಪಕ್ಷಗಳು ಮಾಡುವ ಖರ್ಚಿನ ಮೇಲೆ ಮಿತಿಗಳನ್ನು ನಿಗದಿಪಡಿಸಲು ಜನತಾ ಪ್ರಾತಿನಿಧ್ಯ ಕಾಯ್ದೆಗೆ ಸೂಕ್ತ ತಿದ್ದುಪಡಿಗಳನ್ನು ಮಾಡಬೇಕು.
ಇದಲ್ಲದೆ, ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 77 ರ ಮತ್ತೊಂದು ನ್ಯೂನತೆಯೆಂದರೆ, ಅದು ನಾಮಪತ್ರ ಸಲ್ಲಿಸಿದ ದಿನಾಂಕದಿಂದ ಫಲಿತಾಂಶ ಘೋಷಣೆಯ ದಿನಾಂಕದವರೆಗೆ ಮಾತ್ರ ಅಭ್ಯರ್ಥಿಯ ಚುನಾವಣಾ ವೆಚ್ಚದ ಮೇಲೆ ಮಿತಿಯನ್ನು ವಿಧಿಸುತ್ತದೆ. ಆದರೆ, ಖರ್ಚುಮಾಡುವ ವಾಸ್ತವಿಕ ಕಾಲಮಿತಿಯು ಹೆಚ್ಚು ದೀರ್ಘವಾಗಿದೆ. ಈ ಅಸಂಗತತೆಯನ್ನು ಸರಿಪಡಿಸಲು ಸೂಕ್ತ ತಿದ್ದುಪಡಿಗಳನ್ನು ಮಾಡಬೇಕು.
ಬೆದರಿಕೆಯ ಭಾವನೆ ಮತ್ತು ಭದ್ರತೆಯ ನೆಪದಲ್ಲಿ, ಕೆಲವು ಉನ್ನತ ಹುದ್ದೆಯಲ್ಲಿರುವ ‘ಬಹು ಪ್ರಮುಖ ವ್ಯಕ್ತಿ(ವಿಐಪಿ)ಗಳು ಸರ್ಕಾರಿ ಸ್ವಾಮ್ಯದ ವಿಮಾನಗಳು ಮತ್ತು ಇತರ ಸಾರಿಗೆ ಸಾಧನಗಳನ್ನು ಉಚಿತವಾಗಿ ಬಳಸಲು ಅನುಮತಿಸಲಾಗಿದೆ. ಇದು ಅವರಿಗೆ ಅವರ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚಿನ ಅನಗತ್ಯ ಪ್ರಯೋಜನವನ್ನು ನೀಡುತ್ತದೆ.
ಮಾಧ್ಯಮಗಳ ಪಾತ್ರ
ಮಾಧ್ಯಮವನ್ನು ನಿಯಂತ್ರಿಸುವ ದೊಡ್ಡ ಕೂಟಗಳು ಮತ್ತು ಅಧಿಪತಿಗಳು ಆಳುವ ಪಕ್ಷಗಳಿಗೆ ಸಹಾಯ ಮಾಡುತ್ತಿರುವುದು ಸ್ಪಷ್ಟ. ನಿರ್ದಿಷ್ಟವಾಗಿ, 2014 ರ ನಂತರದ ಪರಿಸ್ಥಿತಿಯಲ್ಲಿ ಭಾರತದಲ್ಲಿ ಇದು ವಿಸ್ಪಷ್ಟವಾಗಿ ಕಂಡುಬಂದಿದೆ. ಇದು ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಮೇಲೆ ದೂಷಣೆಗಳ ಮೂಲಕ ಬೆನ್ನಟ್ಟುವ ಮತ್ತು ಚಾರಿತ್ರ್ಯವಧೆ ಮಾಡುವ ಉದಾಹರಣೆಗಳೂ ಇವೆ. ಇತ್ತೀಚಿನ ದಿನಗಳಲ್ಲಿ ಬಹಳ ಪ್ರಭಾವಶಾಲಿ ಪಾತ್ರವನ್ನು ವಹಿಸುವ ಸಾಮಾಜಿಕ ಮಾಧ್ಯಮ ಸೇರಿದಂತೆ ಈ ವಲಯದಲ್ಲಿ ಸೂಕ್ತ ನಿಯಂತ್ರಕ ಕಾರ್ಯವ್ಯವಸ್ಥೆಗಳು ಅತ್ಯಗತ್ಯ.
ಖಾಸಗಿ ವಲಯಕ್ಕೆ ರೇಡಿಯೋ ತರಂಗಗಳನ್ನು ತೆರೆದನಂತರ, ಸುದ್ದಿ ವಲಯದ ಮೇಲೆ ಖಾಸಗಿ ಮಾಧ್ಯಮಗಳ ಪ್ರಭಾವ ಹೆಚ್ಚಿದೆ. ಆದ್ದರಿಂದ, ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ತಮ್ಮ ಅಭಿಪ್ರಾಯಗಳನ್ನು ತಾರತಮ್ಯವಿಲ್ಲದೆ ಪ್ರಸಾರಮಾಡಲು ಖಾಸಗಿ ಮಾಧ್ಯಮ ಚಾನೆಲ್ಗಳಲ್ಲಿ ಸಮಯ ನಿಗದಿಪಡಿಸುವುದು ಸೂಕ್ತವಾಗಿರುತ್ತದೆ.
ಎಲೆಕ್ಟ್ರಾನಿಕ್ ಮತಯಂತ್ರಗಳು ಮತ್ತು ವಿವಿಪ್ಯಾಟ್
ಈ ಹಿಂದೆ, ಸಿಪಿಐ(ಎಂ) ಎಲೆಕ್ಟ್ರಾನಿಕ್ ಮತದಾನ ಯಂತ್ರಗಳನ್ನು ಬೆಂಬಲಿಸಿತ್ತು. ಎಲೆಕ್ಟ್ರಾನಿಕ್ ಮತದಾನ ಯಂತ್ರಗಳ ದುರುಪಯೋಗಕ್ಕೆ ಪಕ್ಕಾಗುವ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚುತ್ತಿರುವ ಸಂದೇಹದ ನಡುವೆಯೂ, ಅದು ವಿವಿಪ್ಯಾಟ್(VVPAT)ಗಳ ಪರಿಚಯವನ್ನು ಸಹ ಬೆಂಬಲಿಸಿತು. ಸಾರ್ವಜನಿಕರ ಕೆಲವು ವಿಭಾಗಗಳಲ್ಲಿ ಇನ್ನೂ ಅನುಮಾನಗಳು ಉಳಿದಿವೆ.
ಯಂತ್ರಗಳನ್ನು ಇರಿಸುವ ಪ್ರಸ್ತುತ ಕ್ರಮ ಹೀಗಿದೆ: ಮೊದಲು ಬ್ಯಾಲೆಟ್ ಯೂನಿಟ್, ನಂತರ VVPAT ಮತ್ತು ಸಾಲಿನಲ್ಲಿ ಕೊನೆಯದು ನಿಯಂತ್ರಣ ಘಟಕ. ಮತದಾರರು ತಮ್ಮ ಹಕ್ಕು ಚಲಾಯಿಸಿದ ನಂತರ, ಅವರ ಆಯ್ಕೆಯನ್ನು ವಿವಿಪ್ಯಾಟ್ ನಲ್ಲಿ ಪ್ರದರ್ಶಿಸಲಾಗುತ್ತದೆ. ಆದರೆ, ನಿಯಂತ್ರಣ ಘಟಕ (control unit)ದಲ್ಲಿ ನಿಜವಾಗಿ ದಾಖಲಾಗಿರುವುದು ನಿಜವಾಗಿಯೂ ಅವರ ಆಯ್ಕೆಯೇ ಎಂಬುದರಲ್ಲಿ ಸಂದೇಹವಿದೆ. VVPAT ಅನ್ನು ನಿಯಂತ್ರಣ ಘಟಕದ ನಂತರ ಕೊನೆಯಲ್ಲಿ ಇರಿಸಬೇಕೆಂದು ನಾವು ಮತ್ತು ಅನೇಕರು ಶಿಫಾರಸು ಮಾಡುತ್ತಿದ್ದೇವೆ. ಇದು ಈ ಪ್ರಕ್ರಿಯೆಯ ಸಮಗ್ರತೆಯ ಬಗ್ಗೆ ಈಗ ಇರುವ ಅನುಮಾನಗಳನ್ನು ನಿವಾರಿಸುತ್ತದೆ.
ವಿವಿಪ್ಯಾಟ್ ಪರಿಚಯವು ಈ ವ್ಯವಸ್ಥೆಯ ದುರುಪಯೋಗದ ವಿಷಯದಲ್ಲಿ ಒಂದು ನಿರ್ಣಾಯಕ ಮತ್ತು ವಿಶಿಷ್ಟ ಅಂಶವನ್ನು ಸೇರಿಸಿರುವುದರಿಂದ ಇದು ಮುಖ್ಯವಾಗಿದೆ. ‘VVPAT’ ಗೂ ಮುಂಚಿನ ದಿನಗಳಲ್ಲಿ, ಎಲೆಕ್ಟ್ರಾನಿಕ್ ಮತದಾನ ಯಂತ್ರದ ಪಾವಿತ್ರ್ಯಕ್ಕೆ ದೊಡ್ಡ ರಕ್ಷಣೆಯೆಂದರೆ, ವಿದ್ಯುನ್ಮಾನ ಮತ ಯಂತ್ರದಲ್ಲಿ ‘ಚಿಪ್’ ಇದ್ದು, ಪರಿಶೀಲನೆಗೆ ಇಡುವ ಮೊದಲು ಅಭ್ಯರ್ಥಿಗಳ ಹೆಸರುಗಳು ಮತ್ತು ಚಿಹ್ನೆಗಳ ಬಗ್ಗೆ ಯಂತ್ರಕ್ಕೇ ಏನೂ ಗೊತ್ತಿರುವುದಿಲ್ಲ. VVPAT ಇದನ್ನೆಲ್ಲಾ ಬದಲಾಯಿಸಿದೆ. ಅದು ಅಭ್ಯರ್ಥಿಗಳ ಹೆಸರುಗಳು, ಅವರ ಚಿಹ್ನೆಗಳು ಮತ್ತು ಮತಯಂತ್ರದಲ್ಲಿ ಹೆಸರುಗಳು ಕಾಣಿಸಿಕೊಳ್ಳುವ ಕ್ರಮದ ಬಗ್ಗೆ ಪೂರ್ವ-ಜ್ಞಾನದ ಅಂಶಗಳನ್ನು ಪರಿಚಯಿಸುತ್ತದೆ. ವಾಸ್ತವವಾಗಿ ನಡೆಯುವ ಕ್ರಿಯೆ ಮತ್ತು ಇತರ ವಾಸ್ತವಿಕ ಪುರಾವೆಗಳು, ಮತಯಂತ್ರದಲ್ಲಿ ಹೆಸರುಗಳು, ಚಿಹ್ನೆಗಳು ಮತ್ತು ಅನುಕ್ರಮಗಳನ್ನು ಸೇರಿಸಿರುವುದು ಮತ್ತು ವಿವಿಪ್ಯಾಟ್ ನಿರ್ವಹಣೆಯಲ್ಲಿ ಖಾಸಗಿ ಕಂಪನಿಗಳನ್ನು ಒಳಗೊಂಡಿರುವುದು ಪರಸ್ಪರ ತಳುಕು ಹಾಕಿಕೊಂಡಿವೆ ಎಂದು ತೋರಿಸುತ್ತವೆ. ಆದ್ದರಿಂದ ಮೊದಲು ವಿವಿಪ್ಯಾಟ್ ನಲ್ಲಿ ಕೈಚಳಕ ನಡೆಸಿ ನಂತರ ಕಂಟ್ರೋಲ್ ಯೂನಿಟ್ ಗೆ ಜೋಡಿಸಿದರೆ, ಅದು ಮತವನ್ನು ದಾಖಲಿಸುವುಲ್ಲಿ ಅದು ಬಿಂಬಿತವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ, ನಾವು ಈ ಕೆಳಗಿನವುಗಳನ್ನು ಶಿಫಾರಸು ಮಾಡುತ್ತೇವೆ:
1) ಮೂರು ಘಟಕಗಳ ಅನುಕ್ರಮವನ್ನು ಮರು ಹೊಂದಿಸುವುದು, ಮತಪತ್ರ ಘಟಕದಲ್ಲಿ ಚಲಾಯಿಸಿದ ಮತದಾರರ ಆಯ್ಕೆಯು ಎಲೆಕ್ಟ್ರಾನಿಕ್ ಮತದಾನ ಯಂತ್ರ(ಇವಿಎಂ)ದ ನಿಯಂತ್ರಣ ಘಟಕಕ್ಕೆ ಹೋಗಿ, ಅಲ್ಲಿ ದಾಖಲಾಗುವಂತೆ ಮತ್ತು ಅದು ವಿವಿಪ್ಯಾಟ್ಗೆ ಹೋಗುವಂತೆ ಖಚಿತಗೊಳಿಸುವುದು.
2) ಪ್ರತಿ ಮತಗಟ್ಟೆಯಲ್ಲಿನ ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ದಾಖಲಾದ ದತ್ತಾಂಶವು ವಿವಿಪ್ಯಾಟ್ನಲ್ಲಿ ಇರುವುದರೊಂದಿಗೆ ನೂರು ಪ್ರತಿಶತ ಹೊಂದಿಸುವುದು.
3)ಸಾಕಷ್ಟು ಸುತಕ್ಷತೆಗಳನ್ನು ಖಚಿತಪಡಿಸಲು ಮಾರ್ಗಸೂಚಿಗಳನ್ನು ಪುನರ್ರೂಪಿಸಬೇಕು ಹಾಗೂ ಇವಿಎಂ ಮತ್ತು ವಿವಿಪ್ಯಾಟ್ ಗಳಿಗೆ ಸಂಬಂಧಿಸಿದ ಯಾವುದೇ ವಿನ್ಯಾಸ, ತಯಾರಿಕೆ, ನಿರ್ವಹಣೆ ಮತ್ತು ದುರಸ್ತಿ ಚಟುವಟಿಕೆಗಳಿಂದ ಖಾಸಗಿ ಮಾರಾಟಗಾರರು ಇರದಂತೆ ಮಾಡಬೇಕು, ಹೊರಗಿಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕು. ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಪುನರ್ವಿನ್ಯಾಸಗೊಳಿಸಬೇಕಾಗಿದೆ.
ಮತದಾನದ ದತ್ತಾಂಶದಲ್ಲಿನ ಅಸಂಗತತೆ
ಮತದಾನದ ದತ್ತಾಂಶದಲ್ಲಿ ಅಸಂಗತತೆಗಳಿವೆ ಎಂಬ ಆರೋಪಗಳಿವೆ. ಚುನಾವಣಾ ಆಯೋಗವು ತನ್ನ ವೆಬ್ಸೈಟ್ ನಲ್ಲಿ ಅಂಕಿಅಂಶಗಳನ್ನು ಸಕಾಲಿಕಗೊಳಿಸುವಲ್ಲಿ ತೋರಿಸಿರುವ ವಿಳಂಬದ ಪಾತ್ರದಲ್ಲಿ ಕಡಿಮೆಯೇನಲ್ಲ. 2024 ರ ಲೋಕಸ ಭಾಚುನಾವಣೆಯ ಮೊದಲ ಹಂತದ ನಂತರ, ಚುನಾವಣಾ ಆಯೋಗವು ತನ್ನ ವೆಬ್ಸೈಟ್ ನಲ್ಲಿ ದತ್ತಾಂಶವನ್ನು ಹಾಕಲು 11 ದಿನಗಳನ್ನು ತೆಗೆದುಕೊಂಡಿತು ಮತ್ತು ಎರಡನೇ ಹಂತದಲ್ಲಿ ನಾಲ್ಕು ದಿನಗಳನ್ನು ತೆಗೆದುಕೊಂಡಿತು. ಮತದಾನದ ಕೊನೆಯಲ್ಲಿ ಬಿಡುಗಡೆಯಾದ ಆರಂಭಿಕ ದತ್ತಾಂಶ ಮತ್ತು ಹಲವಾರು ದಿನಗಳ ವಿಳಂಬದ ನಂತರ ಬಿಡುಗಡೆಯಾದ ಅಂತಿಮ ದತ್ತಾಂಶದ ನಡುವೆ ವ್ಯತ್ಯಾಸವಿದ್ದಾಗ ಅನುಮಾನಗಳು ಬಲಗೊಳ್ಳುತ್ತವೆ.
ಏಪ್ರಿಲ್ 19 ಮತ್ತು ಏಪ್ರಿಲ್ 26 ರಂದು ಮತದಾನ ಮುಗಿದ ನಂತರ, ಸಂಜೆ 7:00 ಗಂಟೆಯ ಹೊತ್ತಿಗೆ, ಚುನಾವಣಾ ಆಯೋಗವು ಮೊದಲ ಮತ್ತು ಎರಡನೇ ಹಂತದ ಚುನಾವಣೆಗಳಲ್ಲಿ ಸುಮಾರು 60 ಪ್ರತಿಶತ ಮತದಾರರು ತಮ್ಮ ಮತದಾನವನ್ನು ಚಲಾಯಿಸಿದ್ದಾರೆ ಎಂದು ತಾತ್ಕಾಲಿಕವಾಗಿ ಅಂದಾಜಿಸಿತು. ಏಪ್ರಿಲ್ 30 ರಂದು ಅಪ್ಲೋಡ್ ಮಾಡಲಾದ ಅಂತಿಮ ದತ್ತಾಂಶದಲ್ಲಿ, ಈ ಅಂಕಿಅಂಶಗಳು ಕ್ರಮವಾಗಿ 66.14 ಮತ್ತು 66.71 ಪ್ರತಿಶತವನ್ನು ಮುಟ್ಟಿವೆ.
ಸ್ವಲ್ಪ ವ್ಯತ್ಯಾಸಗಳು ಸಾಧ್ಯವಿಲ್ಲ ಎಂದು ಯಾರೂ ವಾದಿಸುತ್ತಿಲ್ಲವಾದರೂ, ಒಂದು ಕ್ಷೇತ್ರದಲ್ಲಿ ಮತದಾನ ಮುಗಿದ ತಕ್ಷಣ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಫಾರ್ಮ್ 17C ಯ ಭಾಗ 1 ಅನ್ನು ಅಪ್ಲೋಡ್ ಮಾಡಲು ಅನುಕೂಲವಾಗುವಂತೆ ನಿಯಮಗಳನ್ನು ತಿದ್ದುಪಡಿ ಮಾಡುವುದು ಸೂಕ್ತವಾಗಿರುತ್ತದೆ. ಅಲ್ಲದೆ, ಫಲಿತಾಂಶಗಳು ಪ್ರಕಟವಾದ ನಂತರ ಭಾಗ 2 ಅನ್ನು ಸಹ ಅಪ್ಲೋಡ್ ಮಾಡಬಹುದು. ಶೇಕಡಾವಾರು ಬದಲಿಗೆ ನಿಖರವಾದ ಅಂಕಿಅಂಶಗಳನ್ನು ಒದಗಿಸುವುದರಿಂದ ಈ ವಿಷಯದಲ್ಲಿನ ಅನುಮಾನಗಳನ್ನು ಕೊನೆಗೊಳಿಸಲು ಸಹಾಯವಾಗುತ್ತದೆ.
ಈ ನಿಟ್ಟಿನಲ್ಲಿ, ಆರು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ ಮತದಾರರ ಸಂಖ್ಯೆಯಲ್ಲಿ ಪ್ರಮಾಣ ಮೀರಿದ ಹೆಚ್ಚಳದ ಬಗ್ಗೆಯೂ ಸಂದೇಹಗಳು ವ್ಯಕ್ತವಾದವು. ನವೆಂಬರ್ 2024 ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗಳು ನಡೆದಾಗ ನೋಂದಾಯಿತ ಮತದಾರರ ಸಂಖ್ಯೆ 9,77,93,350 ಆಗಿತ್ತು. ಆದರೆ ಅದಕ್ಕೆ ಮೊದಲು ಸಾರ್ವತ್ರಿಕ ಚುನಾವಣೆಗಳಲ್ಲಿ ಅದು 9,28,90,445 ಆಗಿತ್ತು.
ಮಾದರಿ ನೀತಿ ಸಂಹಿತೆ
ಮಾದರಿ ನೀತಿ ಸಂಹಿತೆ ಮತ್ತು ಚುನಾವಣಾ ಆಯೋಗವು ಕಾಲ ಕಾಲಕ್ಕೆ ಹೊರಡಿಸುವ ಸಲಹಾ ಆದೇಶಗಳ ಅನುಷ್ಠಾನದ ಕೊರತೆಯು ಒಂದು ಕಳವಳಕಾರಿ ವಿಷಯವಾಗಿದೆ. 2024 ರ ಲೋಕಸಭಾ ಚುನಾವಣೆಯ ಸಮಯದಲ್ಲಿ, ಚುನಾವಣಾ ಆಯೋಗವು ತನ್ನ ಸಿವಿಜಿಲ್ ಆಪ್ ಮೂಲಕ ಸಾವಿರಾರು ದೂರುಗಳನ್ನು ಸ್ವೀಕರಿಸಿದೆ ಎಂದು ವರದಿಯಾಗಿದೆ.
ಅಕ್ರಮ ಜಾಹೀರಾತು ಫಲಕಗಳು, ಬ್ಯಾನರ್ಗಳು, ಮದ್ಯ ವಿತರಣೆ, ಉಡುಗೊರೆ ವಸ್ತುಗಳು ಇತ್ಯಾದಿಗಳಿಗೆ ಸಂಬಂಧಿಸಿದ ದೂರುಗಳನ್ನು ಹೆಚ್ಚುಕಡಿಮೆ ಪರಿಹರಿಸಲಾಯಿತು. ಚುನಾವಣಾ ಆಯೋಗವು ಎಡವುತ್ತಿರುವುದು ಕಂಡು ಬಂದಿರುವುದು ಧರ್ಮ ಮತ್ತು ಜಾತಿಯ ಆಧಾರದ ಮೇಲೆ ಪ್ರಚಾರಮಾಡುವ ರಾಜಕೀಯ ಪಕ್ಷಗಳು ಮತ್ತು ನಾಯಕರ ಮೇಲೆ ಕಡಿವಾಣ ಹಾಕುವಲ್ಲಿ ಅಸಮರ್ಥವಾದ ಪ್ರಶ್ನೆಯಲ್ಲಿ ಮತ್ತು ಅಭಿಯಾನ ಮತ್ತು ಪ್ರಚಾರಕ್ಕಾಗಿ ಪೂಜಾಸ್ಥಳಗಳನ್ನು ದುರುಪಯೋಗ ಪಡಿಸಿಕೊಳ್ಳುವುದರ ವಿಷಯದಲ್ಲಿ ಕೂಡ.
ಸಾರ್ವಜನಿಕ ಪ್ರವಚನದ ಮಟ್ಟಗಳು ಪಾತಾಳಕ್ಕೆ ಇಳಿಯುತ್ತಿವೆ, ತಾನೇ ಸಲಹಾ ಆದೇಶಗಳನ್ನು ಹೊರಡಿಸಿದ್ದರೂ, ಪ್ರಧಾನ ಮಂತ್ರಿ ಮೋದಿಯವರ ವಿರುದ್ಧ ಅವರ ಬಹಿರಂಗ ಕೋಮುವಾದಿ ಪ್ರಚಾರಕ್ಕಾಗಿ ಸಲ್ಲಿಸಲಾದ ಹಲವಾರು ದೂರುಗಳನ್ನು ಪರಿಗಣಿಸಲು ಆಯೋಗವು ಆರಂಭದಲ್ಲಿ ನಿರಾಕರಿಸಿದ್ದು ಸ್ಪಷ್ಟವಾಗಿ ಎದ್ದು ಕಾಣುತ್ತಿತ್ತು.
ಚುನಾವಣೆಗಳ ಸಮಯದಲ್ಲಿ ಪ್ರಧಾನ ಮಂತ್ರಿಗಳು, ಗೃಹ ಮಂತ್ರಿಗಳು ಮತ್ತು ಇತರರು ಅಧಿಕಾರದ ದುರುಪಯೋಗ ಮಾಡಿಕೊಂಡ ಹಲವಾರು ನಿದರ್ಶನಗಳಿವೆ. ರಾಷ್ಟ್ರೀಯ ಚಿಹ್ನೆಗಳನ್ನು ಸಹ ಪಕ್ಷಪಾತದ ಉದ್ದೇಶಗಳಿಗಾಗಿ ಸ್ಪಷ್ಟವಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಖಂಡಿತವಾಗಿಯೂ, ‘ಆಪರೇಷನ್ ಸಿಂಧೂರ’ವನ್ನು ಆಳುವ ಪಕ್ಷ ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ಖಂಡಿತಾ ನೋಡಲು ಸಿಗಲಿದೆ.
ಭಾರತದ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು ಪುನಃಸ್ಥಾಪಿಸಲು, ಚುನಾವಣಾ ನೀತಿ ಸಂಹಿತೆಯನ್ನು ಸಕಾಲಿಕ ಅನುಷ್ಠಾನವನ್ನು ಖಚಿತಪಡಿಸಬೇಕು. ಭಾರತದ ಚುನಾವಣಾ ಆಯೋಗವು ನಿಷ್ಪಕ್ಷಪಾತವಾಗಿರುವುದು ಮಾತ್ರವಲ್ಲದೆ, ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರು ಅದನ್ನು ನಿಷ್ಪಕ್ಷಪಾತಿ ಎಂದು ಕಾಣುವಂತಿರಬೇಕು.
ಕ್ರಿಮಿನಲ್ ಹಿನ್ನೆಲೆಗಳು
ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ “ಕ್ರಿಮಿನಲ್ ಹಿನ್ನೆಲೆ”ಯನ್ನು ಬಹಿರಂಗಪಡಿಸಬೇಕು ಎಂಬ ಸುಪ್ರೀಂ ಕೋರ್ಟ್ನ ಆದೇಶವು ಜನರ ಆಯ್ಕೆಗಳ ಮೇಲೆ ಪ್ರಭಾವ ಬೀರುವಲ್ಲಿ ವಿಫಲವಾಗಿದೆ ಎಂಬುದು ಸ್ಪಷ್ಟವಾಗಿದೆ. ಇದು ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಖರ್ಚು ಹೆಚ್ಚಿಸಿದೆ. ಸಿಪಿಐ(ಎಂ)ಗೆ ಹೀಗೆ ತಿಳಿಯಪಡಿಸಬೇಕಾದ ಪ್ರಕರಣಗಳಲ್ಲಿ ಹೆಚ್ಚಿನವು ಅವರ ರಾಜಕೀಯ ಚಟುವಟಿಕೆಗಳ ಕಾರಣದಿಂದಾಗಿ ದಾಖಲಾಗಿರುವ ಪ್ರಕರಣಗಳು ಮತ್ತು ಗಂಭೀರ ಅಪರಾಧಗಳೊಂದಿಗೆ ಯಾವುದೇ ಸಂಬಂಧವಿರುವುದಿಲ್ಲ. ವಿಶೇಷವಾಗಿ ಈ ರೀತಿ ಹಲವಾರು ಮಾಧ್ಯಮಗಳಲ್ಲಿ ಹಲವಾರು ಬಾರಿ ತಿಳಿಯಪಡಿಸಬೇಕಾಗಿರುವುದು ಸಾಕಷ್ಟು ಹಣ ಸಂಗ್ರಹವಿಲ್ಲದ ನಮ್ಮಂತಹ ಪಕ್ಷಗಳಿಗೆ ಮತ್ತು ಇತರರಿಗೆ ಒಂದು ದೊಡ್ಡ ಹೊರೆಯಾಗಿದೆ.
ಚುನಾವಣೆಗಳ ಸಮಯದಲ್ಲಿ “ಏರುಬೆಲೆ” (ಸರ್ಜ್ಪ್ರೈಸಿಂಗ್) ವಿಧಿಸಿ ತಮ್ಮನ್ನು ಶ್ರೀಮಂತಗೊಳಿಸಿಕೊಳ್ಳುವ ಮಾಧ್ಯಮ ಸಂಸ್ಥೆಗಳಿಗೆ ಮಾತ್ರ ಇದು ಸಹಾಯ ಮಾಡುತ್ತದೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ನ ವರದಿಯ ಪ್ರಕಾರ, ಗೆಲುವು ಸಾಧಿಸಿದ 543 ಅಭ್ಯರ್ಥಿಗಳಲ್ಲಿ, 251 (ಶೇ. 46) ಜನರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ಈ ಪೈಕಿ 170 (ಶೇ. 31) ಜನರ ಮೇಲೆ ಬಲಾತ್ಕಾರ, ಕೊಲೆ ಮತ್ತು ಅಪಹರಣದಂತಹ ಗಂಭೀರ ಅಪರಾಧಗಳ ಆರೋಪಗಳಿವೆ.
ಮತದಾರರಿಗೆ ಮಾಹಿತಿ ನೀಡುವ ನ್ಯಾಯಾಲಯದ ಆಶಯ ಸರಿಯಾಗಿಲ್ಲ ಎಂಬುದು ಸ್ವಯಂ ವೇದ್ಯ. ಅಭ್ಯರ್ಥಿಗಳ ಆಯ್ಕೆಯು ಅವರ ಬಗ್ಗೆ ಮಾಹಿತಿಯ ಕೊರತೆಯಿಂದಲ್ಲ. ಕೊಲೆ, ಬಲಾತ್ಕಾರ ಅಥವಾ ಇತರ ಗಂಭೀರ ಅಪರಾಧಗಳ ಆರೋಪ ಹೊತ್ತಿರುವವರನ್ನು ಅವರು ಆಯ್ಕೆಮಾಡಲು ಕಾರಣಗಳು ಬೇರೆಯೇ ಅಂಶಗಳಲ್ಲಿವೆ. ಈ ಹಿನ್ನೆಲೆಯನ್ನು ಪರಿಗಣಿಸಿ ಮತ್ತು ಅಂದಿನಿಂದ ಗಳಿಸಿದ ಅನುಭವದ ಆಧಾರದ ಮೇಲೆ ಚುನಾವಣಾ ಆಯೋಗವು ತನ್ನ ಆದೇಶವನ್ನು ಪರಿಷ್ಕರಿಸುವಂತೆ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಬೇಕು.
ಚುನಾವಣಾ ಆಯೋಗದ ಸುಧಾರಣೆ
ಒಂದು ಸ್ವತಂತ್ರ ಸಂವಿಧಾನಿಕ ಸಂಸ್ಥೆಯಾಗಿ ಚುನಾವಣಾ ಆಯೋಗದ ಪಾತ್ರವನ್ನು ಬಲಪಡಿಸುವಲ್ಲಿ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯು ಬಹಳ ಮುಖ್ಯವಾಗಿದೆ ಎಂದು ಸಿಪಿಐ(ಎಂ) ನಂಬುತ್ತದೆ. ಈ ತಿಳುವಳಿಕೆಯ ಆಧಾರದ ಮೇಲೆಯೇ ಪಕ್ಷವು 2023 ರ ಸುಪ್ರೀಂ ಕೋರ್ಟ್ ತೀರ್ಪನ್ನುಸ್ವಾಗತಿಸಿತು. ಒಂದು ಸಂವಿಧಾನ ಪೀಠವು ತನ್ನ ತೀರ್ಪಿನಲ್ಲಿ, ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರನ್ನು ಪ್ರಧಾನಮಂತ್ರಿ, ಲೋಕಸಭೆಯ ವಿರೋಧ ಪಕ್ಷದ ನಾಯಕರು ಮತ್ತು ಭಾರತದ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ಸಮಿತಿಯು ನೇಮಿಸಬೇಕು ಎಂದು ಹೇಳಿತ್ತು.
ಆದಾಗ್ಯೂ, ಸರ್ಕಾರವು ಭಾರತದ ಮುಖ್ಯ ನ್ಯಾಯಾಧೀಶರ ಬದಲು “ಪ್ರಧಾನ ಮಂತ್ರಿ ನಾಮನಿರ್ದೇಶನ ಮಾಡುವ ಕೇಂದ್ರ ಸಂಪುಟದ ಮಂತ್ರಿ” ಎಂದು ವಿಧಿಸುವ ಕಾನೂನನ್ನು ಅಂಗೀಕರಿಸುವ ಮೂಲಕ ಸುಪ್ರೀಂ ಕೋರ್ಟ್ನ ಈ ತೀರ್ಪನ್ನು ದುರ್ಬಲಗೊಳಿಸಿತು; ಇದು ಕಾರ್ಯಾಂಗದ ಬಹುಮತದ ಅಭಿಪ್ರಾಯವು ಯಾವಾಗಲೂ ಮೇಲುಗೈ ಸಾಧಿಸುವುದನ್ನು ಖಚಿತಪಡಿಸುತ್ತದೆ. ಇದು ಚುನಾವಣಾ ಆಯೋಗದ ನಿಷ್ಪಕ್ಷಪಾತತೆ ಮತ್ತು ಸ್ವಾತಂತ್ರ್ಯವನ್ನು ನಾಶಪಡಿಸುತ್ತದೆ ಎಂದು ನಾವು ಬಲವಾಗಿ ನಂಬುತ್ತೇವೆ.
ಚುನಾವಣಾ ಆಯೋಗದ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯನ್ನು ಅದರ ಹೊಣೆಗಾರಿಕೆಯ ಅಗತ್ಯದೊಂದಿಗೆ ಪುಷ್ಟೀಕರಿಸಬೇಕು. 2024 ರ ಲೋಕಸಭಾ ಚುನಾವಣೆಗಳನ್ನು ಅದು ನಡೆಸಿದ ರೀತಿಯ ಬಗ್ಗೆ ಮತ್ತು ಅದರ ನಿಷ್ಪಕ್ಷಪಾತತೆಯ ವಿಶ್ವಾಸಾರ್ಹತೆಯು ಕ್ಷಯಿಸಿರುವುದರ ಬಗ್ಗೆ ಕಳವಳಗಳು ವ್ಯಕ್ತಗೊಂಡವು. ಇದು ಎಷ್ಟೊಂದು ಎದ್ದು ಕಂಡಿತೆಂದರೆ, ಕೆಲವು ಮಾಜಿ ಮುಖ್ಯ ಚುನಾವಣಾ ಆಯುಕ್ತರುಗಳು ಸಹ ತಮ್ಮ ಕಳವಳಗಳನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದರು.
ಇದನ್ನು ಪರಿಗಣಿಸಬೇಕಾಗಿದೆ ಮತ್ತು ಸರಿಪಡಿಸಬೇಕಾಗಿದೆ.