ಮೇ 14ರಂದು ಭಾರತದ ಸರ್ವೋಚ್ಛ ನ್ಯಾಯಾಲಯದ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡ ಬಿ.ಆರ್. ಗವಾಯಿ ಅವರು ಮುಂಬೈನಲ್ಲಿ ಮೇ 18ರಂದು ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ, ಅಲ್ಲಿ ಅವರಿಗೆ ನೀಡಲಾದ ಶಿಷ್ಟಾಚಾರದ ಕೊರತೆಯು ಭಾರತ ದೇಶವನ್ನು ಕಾಡುತ್ತಿರುವ ನಿರಂತರ ಜಾತಿ ತಾರತಮ್ಯದ ಸ್ಪಷ್ಟ ದ್ಯೋತಕವಾಗಿದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಎಂ.ಎ.ಬೇಬಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನು ಅಲಂಕರಿಸಿದ ಎರಡನೇ ದಲಿತ ನ್ಯಾಯಮೂರ್ತಿ ಗವಾಯಿ ಅವರಿಗೆ ಮಹಾರಾಷ್ಟ್ರ ಸರ್ಕಾರವು ಆತ್ಮೀಯ ಸ್ವಾಗತವನ್ನು ನೀಡಬೇಕಿತ್ತು. ಬದಲಾಗಿ, ಅವರನ್ನು ಅಗೌರವದಿಂದ ನಡೆಸಿಕೊಳ್ಳಲಾಗಿದೆ. ಭಾರತದ ಹಿಂದುತ್ವ ಆಡಳಿತಗಾರರು ಮೂಲಭೂತವಾಗಿ ದಲಿತ ವಿರೋಧಿಗಳಾಗಿದ್ದಾರೆ.
‘ಮುಖ್ಯ ನ್ಯಾಯಮೂರ್ತಿಯೊಬ್ಬರು ಮೊದಲ ಬಾರಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದಾಗ, ರಾಜ್ಯದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು ಅಥವಾ ಮುಂಬೈ ಪೊಲೀಸ್ ಆಯುಕ್ತರು ಹಾಜರಾಗದಿರಲು ನಿರ್ಧರಿಸಿದರೆ, ಅವರು ತಮ್ಮ ನಿರ್ಧಾರದ ಸೂಕ್ತತೆಯ ಬಗ್ಗೆ ಚಿಂತಿಸಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ಗವಾಯಿಯವರೇ ಹೇಳಿದ್ದಾರೆ. ಶಿಷ್ಟಾಚಾರಗಳು ಹೊಸ ಪರಿಕಲ್ಪನೆಯಲ್ಲ, ಅವು ಒಂದು ಸಾಂವಿಧಾನಿಕ ಸಂಸ್ಥೆಯು ಮತ್ತೊಂದು ಸಂಸ್ಥೆಗೆ ನೀಡುವ ಗೌರವವನ್ನು ಪ್ರತಿನಿಧಿಸುತ್ತವೆ ಎಂದು ಬೇಬಿ ಹೇಳಿದ್ದಾರೆ.
“ಈ ಘಟನೆಯು ಬಿಜೆಪಿ ಸರ್ಕಾರವು ನಿರ್ವಹಿಸುತ್ತಿರುವ ದಲಿತ ವಿರೋಧಿ ನಿಲುವಿನ ಮತ್ತೊಂದು ಉದಾಹರಣೆಯಾಗಿದೆ. ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಅಗೌರವದ ವರ್ತನೆಯನ್ನು ನಾವು ಬಲವಾಗಿ ಪ್ರತಿಭಟಿಸುತ್ತೇವೆ” ಎಂದು ಕಾಮ್ರೇಡ್ ಬೇಬಿ ಕಠಿಣ ಶಬ್ದಗಳಲ್ಲಿ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.