ಐಪಿಎಲ್ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತ

ಅವೈಜ್ಞಾನಿಕ, ಅವ್ಯವಸ್ಥಿತ ಆಯೋಜನೆಯಿಂದಾಗಿ 11 ಜನರ ಸಾವು

ಬೆಂಗಳೂರು : RCB ಕ್ರಿಕೆಟ್ ತಂಡದ ಗೆಲುವಿನ ಸಂಭ್ರಮಾಚರಣೆಯ ಹೊತ್ತಿನಲ್ಲಿ ಆಯೋಜಕರ ಅವೈಜ್ಞಾನಿಕ, ಅವ್ಯವಸ್ಥಿತ ಆಯೋಜನೆಯಿಂದಾಗಿ ಕಾಲ್ತುಳಿತಕ್ಕೆ ಸಿಲುಕಿ 11 ಜನರ ಜೀವವನ್ನು ಬಲಿ ಪಡೆದಿದೆ. ಇದೊಂದು ಅತ್ಯಂತ ದುರಂತದ ಘಟನೆಯಾಗಿದ್ದು, ಇದರ ಹೊಣೆಗಾರಿಕೆಯನ್ನು ಕರ್ನಾಟಕ ಸರಕಾರ ಹೊರಬೇಕು ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)ದ ರಾಜ್ಯ ಕಾರ್ಯದರ್ಶಿ ಡಾ. ಕೆ. ಪ್ರಕಾಶ್ ಆಗ್ರಹಿಸಿದ್ದಾರೆ.

ನಿಧನರಾದ ಜೀವಗಳಿಗೆ ಸಂತಾಪಗಳನ್ನು ಸೂಚಿಸಿ, ಕುಟುಂಬದವರಿಗೆ ಸಾಂತ್ವನಗಳನ್ನು ಹೇಳಿರುವ ಅವರು, ಐಪಿಎಲ್ ಒಂದು ಖಾಸಗೀ ಸಂಸ್ಥೆ ಆಯೋಜಿಸಿದ ಕ್ರೀಡಾಕೂಟವಾಗಿದೆ. ಅದರ ಗೆಲುವು ನಲಿವುಗಳನ್ನು ಕ್ರೀಡಾ ಪ್ರೇಮಿಗಳು ಅವರಿಗೆ ಬೇಕಾದ ಹಾಗೆ ನಿನ್ನೆ ಇಡಿಯಾಗಿ ಸಂಭ್ರಮಿಸಿದ್ದಾರೆ. ಆದರೆ ಸರಕಾರವೊಂದು ಕ್ರೀಡೆಯನ್ನು ರಾಜಕೀಯವಾಗಿ ಬಳಸಿಕೊಳ್ಳುವ ಪ್ರಯತ್ನ ಮಾಡಿ, ಹತ್ತಾರು ಜೀವಗಳ ಬಲಿಗೆ ಕಾರಣವಾಗಿದೆ.

ಕ್ರಿಕೆಟ್ ಕ್ರೀಡೆಯನ್ನು ವ್ಯಾಪಾರೀಕರಣ ಮತ್ತು ಖಾಸಗೀಕರಣಕ್ಕೆ ಒಳಪಡಿಸಿದ ಪರಿಣಾಮವಾಗಿ ಉಂಟಾಗಿರುವ ಕ್ರಿಕೆಟ್ ಸರಕೀಕರಣದ ಲಾಭವನ್ನು ರಾಜಕೀಯವಾಗಿ ಪಡೆಯಲು ರಾಜ್ಯ ಸರ್ಕಾರ ಮುಂದಾಗಿ ಈ ಸಂಭ್ರಮಾಚರಣೆಯನ್ನು ಆಯೋಜಿಸಿದೆ ಎಂಬುದು‌ ನಿಸ್ಸಂದೇಹ. ಹಾಗೆ ಮಾಡುವಾಗ ಸರಿಯಾದ ಪೂರ್ವ ಸಿದ್ಧತೆಗಳನ್ನು ಬಂದೋಬಸ್ತ್ ಮಾಡಿಕೊಳ್ಳದೇ, ಅವಸರದಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ ಸರಕಾರದ ಕ್ರಮ ಖಂಡನೀಯ ಎಂದಿರುವ ಅವರು, ಈ ದುರಂತದ ನಿಜವಾದ ಕಾರಣವನ್ನು ಸಮಗ್ರ ತನಿಖೆಯ ಮೂಲಕ ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಸರಕಾರದ ಖರ್ಚು ವೆಚ್ಚದಲ್ಲಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ನಿಧನರಾದ‌ ಕುಟುಂಬಕ್ಕೆ ಸೂಕ್ತ ಪರಿಹಾರಗಳನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಜೂನ್ 3ರ ರಾತ್ರಿ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್.ಸಿ.ಬಿ. ತಂಡವು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ ಗೆಲುವು ಪಡೆದು ಟ್ರೋಫಿ ತನ್ನದಾಗಿಸಿಕೊಂಡಿತು. ಈ ಗೆಲುವಿನ ಸಂಭ್ರಮಾಚರಣೆಯನ್ನು ಜೂನ್ 4ರಂದು ಆರ್.ಸಿ.ಬಿ. ಫ್ರಾಂಚೈಸಿ  ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತು ರಾಜ್ಯ ಸರ್ಕಾರವು ವಿಧಾನಸೌಧ ಮುಂಭಾಗ ಆಯೋಜಿಸಿದ್ದವು. ಸಂಭ್ರಮಾಚರಣೆಗೆ ಸಾವಿರಾರು ಜನರು ಸೇರುವುದನ್ನು ರಾಜ್ಯ ಸರ್ಕಾರ ಅಂದಾಜಿಸಿ ಸರಿಯಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ಪರಿಣಾಮ ಹಾಗೂ ಭದ್ರತಾ ವೈಫಲ್ಯದಿಂದ ಕಾಲ್ತುಳಿತ ಸಂಭವಿಸಿ 11 ಜನರ ಸಾವು ಸಂಭವಿಸಿದೆ ಮತ್ತು ಹಲವಾರು ಮಂದಿಯನ್ನು ಗಂಭೀರವಾದ ಗಾಯದ ಸ್ಥಿತಿಗೆ ದೂಡುವಂತೆ ಮಾಡಿದೆ.

Leave a Reply

Your email address will not be published. Required fields are marked *