ಬಂಧಿತ ಕ್ರೈಸ್ತ ಸನ್ಯಾಸಿನಿಯರನ್ನು ಭೇಟಿ ಮಾಡಲು ಅನುಮತಿ ನಿರಾಕರಣೆ

ಸಿಪಿಐ(ಎಂ) ಪೊಲಿಟ್‍ಬ್ಯುರೊ ಖಂಡನೆ

ಸುಳ್ಳು ಆರೋಪಗಳ ಮೇಲೆ ಛತ್ತೀಸ್‌ಗಢ ಜಿಆರ್‌ಪಿ (ಸರಕಾರಿ ರೈಲ್ವೆ ಪೊಲೀಸ್) ಬಂಧಿಸಿರುವ ಕ್ರೈಸ್ತ ಸನ್ಯಾಸಿನಿಯರನ್ನು ಭೇಟಿ ಮಾಡಲು ದುರ್ಗ್ ಜೈಲು ಆಡಳಿತವು ಸಿಪಿಐ(ಎಂ), ಸಿಪಿಐ ಮತ್ತು ಕೆಸಿ(ಎಂ) ನಾಯಕರ ನಿಯೋಗಕ್ಕೆ ಅನುಮತಿ ನಿರಾಕರಿಸಿರುವುದನ್ನು ಸಿಪಿಐ(ಎಂ)  ಪೊಲಿಟ್‌ಬ್ಯುರೊ ಬಲವಾಗಿ ಖಂಡಿಸಿದೆ. ಪಾರದರ್ಶಕತೆ, ಹೊಣೆಗಾರಿಕೆ ಮತ್ತು ವ್ಯಕ್ತಿಗಳ ಹಕ್ಕುಗಳನ್ನು ನಿಗ್ರಹಿಸುವ ಈ ಪ್ರಯತ್ನ ಅಸಮರ್ಥನೀಯ ಎಂದು ಅದು ಹೇಳಿದೆ.

ಸಿಪಿಐ(ಎಂ) ನಾಯಕರಾದ ಬೃಂದಾ ಕಾರಟ್ ಮತ್ತು ಸಂಸದರಾದ ಕೆ.ರಾಧಾಕೃಷ್ಣನ್ ಮತ್ತು ಎ.ಎ.ರಹೀಮ್, ಸಿಪಿಐ ನಾಯಕರಾದ ಆನಿ ರಾಜಾ ಮತ್ತು ಸಂಸದ ಪಿ.ಪಿ.ಸುನೀರ್ ಮತ್ತು ಕೇರಳ ಕಾಂಗ್ರೆಸ್ (ಎಂ) ನಾಯಕರು ಮತ್ತು ಸಂಸದ ಜೋಸ್ ಕೆ.ಮಣಿ ಅವರನ್ನು ಒಳಗೊಂಡ ನಿಯೋಗವು ಜುಲೈ 29ರಂದು ಬಂಧಿತ ಸನ್ಯಾಸಿನಿಯರನ್ನು ಭೇಟಿ ಮಾಡಲು ನಿರ್ಧರಿಸಿತ್ತು. ಈ ಭೇಟಿಗೆ ಸಾಕಷ್ಟು ಮುಂಚಿತವಾಗಿ ಲಿಖಿತ ಅನುಮತಿ ಕೋರಿದ್ದರೂ, ಕ್ಷುಲ್ಲಕ ಕಾರಣಗಳ ಮೇಲೆ ಅನುಮತಿ ನಿರಾಕರಿಸಲಾಯಿತು. ಬಲವಾದ ಪ್ರತಿಭಟನೆಯ ನಂತರವೇ ಅವರಿಗೆ ಜುಲೈ 30ರಂದು ಭೇಟಿ ಮಾಡಲು ಅನುಮತಿ ನೀಡಲಾಗಿದೆ.

ರಾಜಕೀಯ ಮುಖಂಡರು ಮತ್ತು ಜನಪ್ರತಿನಿಧಿಗಳಿಗೆ ದಸ್ತಗಿರಿಯಾದವರನ್ನು ಭೇಟಿ ಮಾಡಲು ಮತ್ತು ಅವರ ಸ್ಥಿತಿಯನ್ನು ಅಂದಾಜಿಸಲು ಅನುಮತಿ ನೀಡಲು ಆರಂಭದಲ್ಲಿ ನಿರಾಕರಿಸಿರುವುದು ಸೂಕ್ತ ಪ್ರಕ್ರಿಯೆ ಮತ್ತು ಮಾನವ ಹಕ್ಕುಗಳ ಬಗ್ಗೆ ರಾಜ್ಯದ ಕಳವಳಕಾರೀ  ನಿರ್ಲಕ್ಷ್ಯವನ್ನು ಮತ್ತಷ್ಟು ಒತ್ತಿಹೇಳುತ್ತದೆ ಎಂದಿರುವ ಪೊಲಿಟ್‍ಬ್ಯುರೊ, ಇಂತಹ ಕ್ರಮಗಳು ಪ್ರಜಾಪ್ರಭುತ್ವ ತತ್ವಗಳಿಗೆ ನೇರ ಅವಮಾನವಾಗಿದ್ದು, ತನಿಖೆಯನ್ನು ಹತ್ತಿಕ್ಕುವ ಮತ್ತು ಭಿನ್ನಾಭಿಪ್ರಾಯದ ಧ್ವನಿಗಳನ್ನು ಅಡಗಿಸುವ ಗುರಿಯನ್ನು ಹೊಂದಿವೆ,  ಇದು ಕೇಂದ್ರ ಮತ್ತು ರಾಜ್ಯಗಳಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರಗಳ ಸರ್ವಾಧಿಕಾರಶಾಹೀ ಸ್ವಭಾವವನ್ನು ಒತ್ತಿಹೇಳುತ್ತದೆ ಎಂದು ಹೇಳಿದೆ.

ಈ ಕ್ರೈಸ್ತ ಸನ್ಯಾಸಿನಿಯರ ವಿರುದ್ಧ ಹೊರಿಸಲಾದ ಆರೋಪಗಳು ಆಧಾರರಹಿತವಾಗಿವೆ ಮತ್ತು ಅವರ ಮೂಲಭೂತ ಹಕ್ಕುಗಳ ಸಂಪೂರ್ಣ ಉಲ್ಲಂಘನೆಯಾಗಿದೆ. ಸನ್ಯಾಸಿನಿಯರ ಬಂಧನವು ಒಂದು ಆಕಸ್ಮಿಕ ಘಟನೆಯಲ್ಲ, ಬದಲಾಗಿ ಧಾರ್ಮಿಕ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುವ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಕಿರುಕುಳ ನೀಡುವ ಒಂದು ವ್ಯಾಪಕ ಮಾದರಿಯ ಭಾಗವಾಗಿದೆ. ಈ ಬಂಧನದಲ್ಲಿ ಭಜರಂಗದಳದ ಆಣತಿಯಂತೆ ಅನುಸರಿಸುವ  ಒಂದು ಮಾದರಿಯಿದೆ ಎಂದಿರುವ ಪೊಲಿಟ್‍ಬ್ಯುರೊ,  ನಮ್ಮ ಸಂವಿಧಾನದಲ್ಲಿ ಪ್ರತಿಷ್ಠಾಪಿಸಿರುವಂತೆ ಒಬ್ಬರ ನಂಬಿಕೆಯನ್ನು ಮುಕ್ತವಾಗಿ ಮತ್ತು ಶಾಂತಿಯುತವಾಗಿ ಆಚರಿಸುವ ಹಕ್ಕನ್ನು ಯಾವುದೇ ಬೆಲೆ ತೆತ್ತಾದರೂ ರಕ್ಷಿಸಬೇಕು ಎಂದು ಹೇಳಿದೆ.

Leave a Reply

Your email address will not be published. Required fields are marked *