ಅಯೋಧ್ಯೆಯಲ್ಲಿ ಯಥಾಸ್ಥಿತಿಯನ್ನು ಬದಲಿಸಬಾರದು

ಕೇಂದ್ರ ಸರಕಾರ ಅಯೋಧ್ಯೆಯಲ್ಲಿ ಸ್ವಾಧೀನ ಪಡಿಸಿಕೊಂಡ ಭೂಮಿಯಲ್ಲಿ ಯಥಾಸ್ಥಿತಿ ಇರಬೇಕು ಎಂಬ ನ್ಯಾಯಾಲಯದ ಆದೇಶವನ್ನು  “ವಿವಾದವಿಲ್ಲದ ಭೂಮಿಯ ಮೇಲಿಂದ ತೆಗೆಯಬೇಕು” ಎಂದು ಸುಪ್ರಿಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿರುವ ಬಗ್ಗೆ ತನಗೆ ಬಲವಾದ ಅಸಮ್ಮತಿ ಇದೆ ಎಂದು ಸಿಪಿಐ(ಎಂ) ಪೊಲಿಟ್‌ ಬ್ಯುರೊ ಹೇಳಿದೆ.

ಅದು ಈ ಭೂಮಿಯನ್ನು ರಾಮಮಂದಿರ ಕಟ್ಟಲಿಕ್ಕೆಂದು ವಿ ಹೆಚ್‌ ಪಿ ರಚಿಸಿರುವ ರಾಮಜನ್ಮಭೂಮಿ ನ್ಯಾಸ್‌ ಗೆ ವಹಿಸಿಕೊಡಬೇಕೆಂದಿದೆ.

ಕೇಂದ್ರ ಸರಕಾರ ಸ್ವಾಧೀನ ಪಡಿಸಿಕೊಂಡಿರುವ ೬೭ ಎಕ್ರೆ ಭೂಮಿಯಲ್ಲಿ ಯಥಾಸ್ಥಿತಿ ಕಾಪಾಡಬೇಕು ಎಂದು ೧೯೯೩ರಲ್ಲಿ ಸುಪ್ರಿಂ ಕೋರ್ಟ್ ಆದೇಶ ನೀಡಿತ್ತು. ಇದರಲ್ಲಿ ಕೇವಲ ೦.೩೧೩ ಎಕ್ರೆ ಮಾತ್ರವೇ ವಿವಾದಾಸ್ಪದವಾಗಿರುವಂತದ್ದು ಎಂದು ಕೇಂದ್ರ ಸರಕಾರ ಈಗ ಹೇಳುತ್ತಿದೆ.

ಕೇಂದ್ರದ ಈ ನಡೆ ಸಂಘ ಪರಿವಾರವನ್ನು ಸಂತುಷ್ಟಗೊಳಿಸಲಿಕ್ಕಾಗಿಯೇ ಎಂದು ಪೊಲಿಟ್‌ ಬ್ಯುರೊ ಅಭಿಪ್ರಾಯ ಪಟ್ಟಿದೆ. ಏನೇ ಆಗಲಿ ತಕ್ಷಣವೇ ರಾಮಮಂದಿರವನ್ನು ಕಟ್ಟಬೇಕು ಎಂದು ಸಂಘ ಪರಿವಾರ ಈಗ ಆಗ್ರಹಿಸುತ್ತಿದೆ. ಇವೆಲ್ಲವನ್ನೂ ಮುಂಬರುವ ಲೋಕಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗುತ್ತಿದೆ ಎಂಬುದು ಸ್ವಯಂವೇದ್ಯ ಎಂದಿರುವ ಸಿಪಿಐ(ಎಂ) ಪೊಲಿಟ್‌ ಬ್ಯುರೊ ಸುಪ್ರಿಂಕೋರ್ಟ್ ತೀರ್ಪು ಬರುವ ಮೊದಲೇ ಅದನ್ನು ನಿರುಪಯುಕ್ತಗೊಳಿಸುವ ಅಡ್ಡಹಾದಿಯ ಪ್ರಯತ್ನ ಇದು ಎಂದು ಖಂಡಿಸಿದೆ.

Leave a Reply

Your email address will not be published. Required fields are marked *