ಕೇಂದ್ರ ಬಜೆಟ್ 2019-20 : ಒಂದು ಚುನಾವಣಾ ಜುಮ್ಲಾ : ಮೋದಿ ಸರಕಾರದ ದಿವಾಳಿಕೋರತನದ ಮತ್ತೊಂದು ಪ್ರತಿಬಿಂಬ

ಸಿಪಿಐ(ಎಂ) ಪೊಲಿಟ್‌ಬ್ಯುರೊ ಇಂದು (ಫೆಬ್ರುವರಿ ೧ರಂದು) ಕೆಂದ್ರ ಬಜೆಟ್ ೨೦೧೯-೨೦ ಕುರಿತಂತೆ ನೀಡಿರುವ ಹೇಳಿಕೆಯ ಪೂರ್ಣ ಪಾಟವನ್ನು ಈ ಮುಂದೆ ಕೊಡಲಾಗಿದೆ:

ಮೋದಿ ಸರಕಾರ ಈಗ ಮಾಹಿತಿಗಳನ್ನು ಅಡಗಿಸುವಲ್ಲಿ ಮತ್ತು ತಿರುಚುವಲ್ಲಿ ಜನಗಳಿಗೆ ಜುಮ್ಲಾಗಳನ್ನು ಉಣಬಡಿಸುವಲ್ಲಿ ಹೆಸರುವಾಸಿಯಾಗಿ ಬಿಟ್ಟಿದೆ. ೨೦೧೯-೨೦ರ ಮಧ್ಯಂತರ ಬಜೆಟ್ ಇದೇ ದಾಟಿಯಲ್ಲಿರುವ ಇನ್ನೊಂದು ಕಸರತ್ತು. ಹಂಗಾಮಿ ಹಣಕಾಸು ಮಂತ್ರಿಗಳು ತಮ್ಮ ಭಾಷಣದಲ್ಲಿ ತನ್ನ ಭಾಷಣದಲ್ಲಿ ಮೋದಿ ಸರಕಾರದ ದಾಖಲೆಗಳ ಬಗ್ಗೆ ಮತ್ತು ಎಲ್ಲ ಭಾರತೀಯರಿಗೆ ಒಂದು ಸುಂದರ ಭವಿಷ್ಯದ ಆಶ್ವಾಸನೆಗಳ ಬಗ್ಗೆ ದೊಡ್ಡ-ದೊಡ್ಡ ಮಾತುಗಳನ್ನಾಡಿದರು. ಇದು ನರಳುತ್ತಿರುವ ದೇಶದ ಜನತೆಯ ಒಂದು ಕ್ರೂರ ಅಪಹಾಸ್ಯ.

ಸಂಸತ್ತಿನಲ್ಲಿ ಇಂದು ಮಂಡಿಸಿದ ಬಜೆಟ್ ಈ ವರ್ಷದ ಅಂತಿಮ ಬಜೆಟ್ ಆಗಿರಲು ಸಾಧ್ಯವಿಲ್ಲ. ಏಕೆಂದರೆ ಅದನ್ನು ಮಂಡಿಸಿರುವ ಸರಕಾರ ಮತ್ತು ಪರಿಶೀಲಿಸುವ ಲೋಕಸಭೆ ಈ ಬಜೆಟ್‌ಗೆ ಸಂಬಂಧಪಟ್ಟ ಹಣಕಾಸು ವರ್ಷದಲ್ಲಿ ಎರಡು ತಿಂಗಳೊಳಗೇ ಅಸ್ತಿತ್ವದಲ್ಲಿ ಇರುವುದಿಲ್ಲ. ೨೦೧೯-೨೦ರ ಹಣಕಾಸು ವರ್ಷದ ಆದಾಯ ಸಂಗ್ರಹದ ಮತ್ತು ಮಾಡುವ ಖರ್ಚಿನ ಬಾಬ್ತುಗಳಿಗಾಗಿ ವಹಿಸುವ ಕ್ರಮಗಳ ಅಂತಿಮ ಚಿತ್ರ ೧೭ನೇ ಲೋಕಸಭೆಗೆ ಚುನಾವಣೆಗಳ ಮೂಲಕ ಈ ದೇಶದ ಜನತೆ ತಮ್ಮ ಮನದ ಮಾತನ್ನು ಆಡಿದ ಮೇಲೆಯೇ ರೂಪುಗೊಳ್ಳುತ್ತದೆ ಎಂದು ಸಿಪಿಐ(ಎಂ) ಹೇಳಬಯಸುತ್ತದೆ. ಒಂದು ಮಧ್ಯಂತರ ಬಜೆಟನ್ನು ಬಿಜೆಪಿ ತಾನು ನೀಡುವಂತಿರದ ಆಶ್ವಾಸನೆಗಳನ್ನು ನೀಡಲಿಕ್ಕಾಗಿ ಬಳಸುತ್ತಿರುವುದು ಜನಗಳ ತೀರ್ಪು ಏನಿರಬಹುದು ಎಂಬ ಬಗ್ಗೆ ಅದರ ಭೀತಿ ಮತ್ತು ಹತಾಶೆಗೆ ಸಾಕ್ಷಿ.

ಎಪ್ರಿಲ್-ನವಂಬರ್‌ನ ಲಭ್ಯ ಅಂಕಿ-ಅಂಶಗಳ ಪ್ರಕಾರ ೨೦೧೮-೧೯ರಲ್ಲಿ ಕೇಂದ್ರೀಯ ತೆರಿಗೆಗಳಿಂದ ಒಟ್ಟು ಆದಾಯಗಳು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಕೇವಲ ೭.೧% ದಷ್ಟು ಹೆಚ್ಚಿವೆ. ಆದರೆ ೨೦೧೮-೧೯ರ ಪರಿಷ್ಕೃತ ಅಂದಾಜು ೨೦೧೭-೧೮ರ ನಿಜವಾದ ಅಂಕಿ-ಅಂಶಗಳಿಗೆ ಹೋಲಿಸಿದರೆ ೧೭% ದಷ್ಟು ಬೆಳವಣಿಗೆಯನ್ನು ತೋರಿಸುತ್ತದೆ. ಇದರ ನಂತರವೂ ರೆವಿನ್ಯೂ ಆದಾಯಗಳು ಕಳೆದ ವರ್ಷದ ಬಜೆಟ್ ಅಂದಾಜುಗಳಿಗಿಂತ ರೂ. ೨೩,೦೬೭ ಕೋಟಿಗಳಷ್ಟು ಕಡಿಮೆಯಿರುತ್ತದೆ ಎನ್ನಲಾಗಿದೆ. ಕಳೆದ ವರ್ಷ ತಾನು ಮಾಡಿದ್ದನ್ನು ಪುನರಾವರ್ತಿಸುತ್ತ ಈ ಸರಕಾರ ಈ ವರ್ಷವೂ ಆದಾಯ ತೆರಿಗೆಗಳ ಬಾಬ್ತಿನಲ್ಲಿ ಮತ್ತು ಜಿಎಸ್‌ಟಿ ಆದಾಯ ಬಾಬ್ತಿನಲ್ಲಿ ಆದಾಯಗಳನ್ನು ಉತ್ಪ್ರೇಕ್ಷಿಸಿ ನಮೂದಿಸಿದೆ.

ಅದಾಯ ತೆರಿಗೆಗಳಿಂದ ರೆವಿನ್ಯೂ ಸಂಗ್ರಹ ಪರಿಷ್ಕೃತ ಅಂದಾಜಿಗಿಂತ ಕನಿಷ್ಟ ೫೦,೦೦೦ ಕೋಟಿ ರೂ.ಗಳಷ್ಟು ಕಡಿಮೆಯೇ ಇರುತ್ತದೆ ಎಂಬುದು ಖಂಡಿತ. ಕೇಂದ್ರೀಯ ಜಿಎಸ್‌ಟಿ ರೆವಿನ್ಯೂ ಈಗಾಗಲೇ ಬಜೆಟ್ ಅಂದಾಜಿಗಿಂತ ೧ಲಕ್ಷ ಕೋಟಿ ರೂ.ಗಳಷ್ಟು ಕಡಿಮೆ ಇದೆ. ಜನವರಿ ೨೦೧೯ ರ ವರೆಗಿನ ಜಿಎಸ್‌ಟಿ ಸಂಗ್ರಹದ ಅಂಕಿ-ಅಂಶಗಳು ಇದು ಕೂಡ ಅವಾಸ್ತವ ಅಂಕಿ-ಅಂಶ ಎಂದು ಸೂಚಿಸುತ್ತವೆ. ಸರಕಾರ ನೋಟುರದ್ಧತಿ ಮತ್ತು ತನ್ನ ತೆರಿಗೆ ಸುಧಾರಣೆ ಕ್ರಮಗಳ ಪರಿಣಾಮಗಳ ಬಗ್ಗೆ ತಾನು ಪಸರಿಸಿದ ಸುಳ್ಳುಗಳು ಹೊರ ಬರದಿರಲಿ ಎಂದು ಅಂಕಿ-ಅಂಶಗಳನ್ನು ತಿರುಚುತ್ತಿದೆ. ಎಂಬುದು ಸ್ಪಷ್ಟವಾಗಿದೆ.

ಇಷ್ಟೊಂದು ರೆವಿನ್ಯೂ ಕೊರತೆ ಇದ್ದರೂ ಮೋದಿ ಸರಕಾರ ೨೦೧೬ರಲ್ಲಿ ಆರಂಭಿಸಿದ ಸಂಪತ್ತು ತೆರಿಗೆ ವಿನಾಯ್ತಿಯನ್ನು ಮುಂದುವರೆಸಿದೆ. ಶ್ರೀಮಂತ ಜನಗಳ ಒಡೆತನದ ಎರಡನೇ ಮನೆ ಕೂಡ ತೆರಿಗೆ ವಿನಾಯ್ತಿ ಪಡೆಯುತ್ತದೆ. ಮೋದಿ ಸರಕಾರ ಬಡವರನ್ನು ಹಿಂಡಿ ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರಾಗಿಸುವ ತನ್ನ ತರ್ಕವನ್ನು ಕ್ರೂರವಾಗಿ ಅನುಸರಿಸುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ರಾಜ್ಯ ಸರಕಾರಗಳ ಮೇಲೆ ದಾಳಿ

ಇನ್ನೂ ಆಘಾತಕಾರಿ ಸಂಗತಿಯೆಂದರೆ, ಕಡಿಮೆ ತೆರಿಗೆ ಆದಾಯಗಳ ಹೊರೆಯನ್ನು ರಾಜ್ಯಗಳಿಗೆ ವರ್ಗಾಯಿಸಲಾಗುತ್ತಿದೆ. ೨೦೧೮-೧೯ರ ನಿವ್ವಳ ಆದಾಯಗಳನ್ನು ಬಜೆಟ್ ಅಂದಾಜುಗಳಿಗಿಂತ ತುಸು ಹೆಚ್ಚಿನ ಮಟ್ಟದಲ್ಲಿ ಇಡಲಾಗಿದೆ. ಆದ್ದರಿಂದ ರೂ.೨೬,೬೩೯ ಕೋಟಿಗಳ ಕಡಿತವನ್ನು ಕೇಂದ್ರೀಯ ತೆರಿಗೆಗಳಲ್ಲಿ ರಾಜ್ಯಗಳ ಪಾಲಿಗೆ ಅನ್ವಯಿಸಲಾಗುತ್ತದೆ. ಅದೇ ರೀತಿಯಲ್ಲಿ ರಾಜ್ಯಗಳಿಗೆ ಜಿಎಸ್‌ಟಿ ಕೊರತೆಭರ್ತಿ ವರ್ಗಾವಣೆಯಲ್ಲೂ ಬಜೆಟ್ ಅಂದಾಜುಗಳಿಗೆ ಹೋಲಿಸಿದರೆ ರೂ.೩೮,೨೬೫ ಕೋಟಿ ಕಡಿತ ಮಾಡಲಾಗಿದೆ. ಇದಲ್ಲದೆ, ಕೇಂದ್ರದ ಬಜೆಟಿನಲ್ಲೂ ಕಾಣುವ ಜಿಎಸ್‌ಟಿ ರೆವಿನ್ಯೂ ಕೊರತೆ ಕೂಡ ರಾಜ್ಯ ಸರಕಾರಗಳ ಆದಾಯಗಳನ್ನು ತಟ್ಟುತ್ತದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಕೇಂದ್ರ ಸರಕಾರವು ರಾಜ್ಯ ಸರಕಾರಗಳ ಖರ್ಚಿನಲ್ಲಿ ತನ್ನ ಹಣಕಾಸು ಸ್ಥಿತಿಯನ್ನು ಉತ್ತಮವೆಂದು ತೋರಿಸಿಕೊಳ್ಳುವಂತೆ ಕಾಣುತ್ತದೆ ಎನ್ನುತ್ತ ಪೊಲಿಟ್‌ಬ್ಯುರೊ, ಇದೀಗ ಈ ಸರಕಾರದ ಸಹಕಾರಿ ಒಕ್ಕೂಟ ತತ್ವದ ನಿಜ ಹೂರಣ.

ಬೊಗಳೆಗಳು:

ರೈತರು: ಡಿಸೆಂಬರ್ ೧, ೨೦೧೮ರಿಂದ ಜಾರಿ ಮಾಡುವ ರೈತರ ಆದಾಯ ಬೆಂಬಲ ಸ್ಕೀಮಿಗೆ ಹೊಸದಾಗಿ ೨೦,೦೦೦ ಕೋಟಿ ರೂ.ಗಳನ್ನು ನೀಡಿರುವುದಾಗಿ ಹೇಳಿಕೊಂಡಿದ್ದರೂ, ೨೦೧೮-೧೯ರ ಒಟ್ಟು ಖರ್ಚುಗಳ ಪರಿಷ್ಕೃತ ಅಂದಾಜುಗಳು ಬಜೆಟ್ ಅಂದಾಜುಗಳಿಗಿಂತ ಅಷ್ಟರ ಮಟ್ಟದ ಹೆಚ್ಳವನ್ನೂ ತೋರಿಸುತ್ತಿಲ್ಲ. ಆದ್ದರಿಂದ ಈ ೨೦,೦೦೦ ಕೋಟಿ ರೂ.ಗಳು ಬರುತ್ತಿರುವುದು ಇತರ ಬಾಬ್ತುಗಳಲ್ಲಿ ಖರ್ಚುಗಳನ್ನು ಕಡಿತ ಮಾಡುವ ಮೂಲಕ, ನಿರ್ದಿಷ್ಟವಾಗಿ, ಜಿಎಸ್‌ಟಿ ಕೊರತೆ ಭರ್ತಿ ನಿಧಿಗೆ ಮಾಡಬೇಕಾದ ವರ್ಗಾವಣೆಯಿಂದ.

ಈ ನೀಡಿಕೆ ಕೂಡ ಒಂದು ಮೋಸವೇ- ನಾಲ್ಕು ಜನಗಳಿರುವ  ಒಂದು ರೈತ ಕುಟುಂಬಕ್ಕೆ ದಿನಕ್ಕೆ ತಲಾ ೪ರೂ. ಬೆಂಬಲದ ಆಶ್ವಾಸನೆ ನೀಡುವ ಒಂದು ಸ್ಕೀಮಿನ ಬಗ್ಗೆ ಬೇರೇನು ತಾನೇ ಹೇಳಲು ಸಾಧ್ಯ? ಕರ್ಷಕ ಸಂಕಟವನ್ನು ಉಲ್ಬಣಗೊಳಿಸಿ ರೈತರ ಆದಾಯಗಳನ್ನು ಅದಕ್ಕಿಂತ ಎಷ್ಟೋ ಹೆಚ್ಚಿನ ಪ್ರಮಾಣದಲ್ಲಿ ಧ್ವಂಸ ಮಾಡಿರುವುದಕ್ಕೆ ನೇರ ಹೊಣೆಗಾರನಾಗಿರುವ ಸರಕಾರ ಉತ್ಪಾದನಾ ಖರ್ಚಿನ ಒಂದೂವರೆ ಪಟ್ಟು ಕನಿಷ್ಟ ಬೆಂಬಲ ಬೆಲೆ ನೀಡುವ ಆಶ್ವಾಸನೆಯನ್ನು ಈಡೇರಿಸದೆ ಮಾಡಿರುವ ವಿಶ್ವಾಸಘಾತವನ್ನು ಮರೆಮಾಚಲು ಪ್ರಯತ್ನಿಸುತ್ತಿದೆ.

ಪೆನ್ಶನ್ ಸ್ಕೀಮ್: ಪ್ರಧಾನ ಮಂತ್ರಿ ಶ್ರಮ-ಯೋಗಿ ಮಂಡನ್- ಇಂತಹ ಇನ್ನೊಂದು ಬೊಗಳೆ. ಇದು ಒಬ್ಬ ವ್ಯಕ್ತಿ ೩೨ ವರ್ಷಗಳ ಕಾಲ ತಿಂಗಳಿಗೆ ೧೦೦ರೂ. ವಂತಿಗೆ ನೀಡಿದ ನಂತರ ೩೦೦೦ರೂ.ಗಳ ಒಂದು ಅಲ್ಪ ಪೆನ್ಶನ್‌ನ ಆಶ್ವಾಸನೆ ಕೊಡುತ್ತದೆ. ಮೂರು ದಶಕಗಳಿಗೂ ಹೆಚ್ಚು ಕಾಲದ ನಂತರ ಇದರ ಫಲಾನುಭವಿಗಳ ಆರ್ಥಿಕ ಸ್ಥಾನಮಾನ ಏನಿರುತ್ತದೆ ಎಂಬ ಬಗ್ಗೆ ಮೋದಿ ಸರಕಾರದ ನಿರೀಕ್ಷೆಯಾದರೂ ಏನು? ಈ ಮಹಾನ್ ಆಶ್ವಾಸನೆಗೆ ಸರಕಾರ ಇಂದು ಒದಗಿಸುವ ಮೊತ್ತವಾದರೂ ಏನು? ೫೦೦ ಕೋಟಿ ರೂ.ಗಳ ಒಂದು ರಾಜಧನ, ಇದನ್ನೂ ಅ ಫಲಾನುಭವಿ ಇಂದು ಪಡೆಯುವುದಿಲ್ಲ, ಅದು ಯಾವುದೋ ವಿಮಾ ಕಂಪನಿಯ ಪೆನ್ಶನ್ ಫಂಡ್‌ಗೆ ಹೋಗುತ್ತದೆ!

ಉದ್ಯೋಗ: ಹಂಗಾಮಿ ಹಣಕಾಸು ಮಂತ್ರಿಗಳು ಆರ್ಥಿಕ ಸನ್ನಿವೇಶದ ಬಗ್ಗೆ ಮಾತಾಡುವಾಗ ಎನ್.ಎಸ್.ಎಸ್.ಒ. ಮಾಹಿತಿಯ ಪ್ರಸ್ತಾಪವನ್ನೂ ಮಾಡದೆ ತಪ್ಪಿಸಿಕೊಂಡರು. ಹಾಗೆ ಮಾಡಿದ್ದರೆ ಉದ್ಯೋಗಾಕಾಂಕ್ಷಿಗಳು ಉದ್ಯೋಗದಾತರಾಗಿ ಬಿಟ್ಟಿದ್ದಾರೆ, ಅದರಿಂದಾಗಿ ಉದ್ಯೋಗಾವಕಾಶಗಳಲ್ಲಿ ಗಮನಾರ್ಹ ಬೆಳವಣಿಗೆಯಾಗಿದೆ ಎಂಬ ಸರಕಾರದ ದಾವೆಯ ಬಗ್ಗೆ ಸಿಕ್ಕಿ ಬೀಳುತ್ತಿದ್ದರು. ನಿಜ, ಉದ್ಯೋಗಾಕಾಂಕ್ಷಿಗಳು ಉದ್ಯೋಗದಾತರಾಗಿ ಬಿಟ್ಟಿದ್ದಾರೆ, ಆದರೆ ಸರಕಾರದ ಧೋರಣೆಗಳು ಅಂತಹ ಅನುಕೂಲ ಕಲ್ಪಿಸಿದ್ದರಿಂದಾಗಿ ಅಲ್ಲ, ಬದಲಾಗಿ, ಆ ಧೋರಣೆಗಳು ಉದ್ಯೋಗಗಳನ್ನು ತಿಂದು ಹಾಕಿ ಬದುಕುಳಿಯಲು ಏನಾದರೂ ದಾರಿ ಹುಡುಕಿಕೊಳ್ಳಲೇ ಬೇಕಾಗಿ ಬಂದುದರಿಂದ ಈ ಬಜೆಟ್ ಪಕೋಡಾ  ತರ್ಕಕ್ಕೆ ಅಧಿಕೃತ ಮುದ್ರ್ರೆಯೊತ್ತಿದೆ.

ಆದ್ದರಿಂದ ಕೇಂದ್ರ ಬಜೆಟ್ ೨೦೧೯-೨೦ ಮೋದಿ ಸರಕಾರದ ದಿವಾಳಿಕೋರತನದ ಮತ್ತೊಂದು ಪ್ರತಿಬಿಂಬವಾಗಿದೆ. ಎಷ್ಟೇ ಕತೆ ಹೊಸೆದರೂ ರೈತರ ಸಂಕಟ ಅಥವ ಜನಗಳು ವಾಸ್ತವವಾಗಿ ಅನುಭವಿಸುತ್ತಿರುವ ಬಡತನ ಮತ್ತು ಉದ್ಯೋಗಹೀನತೆಯನ್ನು ಅದು ನಿವಾರಿಸಲಾರದು. ಈ ಕರಾಳ ವಾಸ್ತವತೆ ೨೦೧೯ರ ಚುನಾವಣಾ ತೀರ್ಪಿನಲ್ಲಿ ಎದ್ದು ಕಾಣಲಿದೆ.

One thought on “ಕೇಂದ್ರ ಬಜೆಟ್ 2019-20 : ಒಂದು ಚುನಾವಣಾ ಜುಮ್ಲಾ : ಮೋದಿ ಸರಕಾರದ ದಿವಾಳಿಕೋರತನದ ಮತ್ತೊಂದು ಪ್ರತಿಬಿಂಬ

  1. ನಮಗೆ bjp ಬಗ್ಗೆ ತುಂಬ ಬೇಸರವಿದೆ. ಅವರ ಬೊಗಳೆ ಮಾತುಗಳನ್ನು ಕೇಳಿ ಕೇಳಿ ಜನಕ್ಕೆ ಬೇಸರ ಬಂದಿದೆ. ಇನ್ನುಮುಂದೆ ಜನರನ್ನು ಮೋಸ ಮಾಡಲು ಸಾದ್ಯಾವಿಲ್ಲ ಅದಕ್ಕಾಗಿ ಈ ರೀತಿ ಮಾತಾಡಲು ಹೊರಟಿದ್ದಾರೆ. ಜನರಿಗೆ ಇವರ ಬಗ್ಗೆ ಗೊತ್ತಿರುವುದರಿಂದ ಈ ಮುಂದಿನ ಚುನಾವಣೆಯಲ್ಲಿ ಇವರು ಸೊಲುವುದಂತು ನಿಜ ಸಂಗತಿ.

Leave a Reply

Your email address will not be published. Required fields are marked *