ಕರ್ನಾಟಕದಲ್ಲಿ ಬಿಜೆಪಿಯಿಂದ ಜನತಂತ್ರ ಬುಡಮೇಲು ಕೃತ್ಯ

ಕರ್ನಾಟಕದಲ್ಲಿ ಜನತಾಂತ್ರಿಕ ನಿಯಮಗಳನ್ನು ಬಿಜೆಪಿ ಬುಡಮೇಲು ಮಾಡುತ್ತಿರುವುದು ಮೋದಿ ಸರಕಾರದಡಿ ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ವ್ಯಾಪಕ ದಾಳಿಯ ಭಾಗವಾಗಿದೆ. ಪ್ರಜಾಪ್ರಭುತ್ವ ಮತ್ತು ಜನತಾಂತ್ರಿಕ ಸಂಸ್ಥೆಗಳನ್ನು ರಕ್ಷಿಸುವುದು, ಚುನಾವಣೆ ಸುಧಾರಣೆಗಳು ಮತ್ತು ಪಕ್ಷಾಂತರಿ ಹಾಗೂ ಭ್ರಷ್ಟ ಜನಪ್ರತಿನಿಧಿಗಳಿಗೆ ಶಿಕ್ಷೆ ನೀಡುವುದು ಮುಂದಿನ ದಿನಗಳಲ್ಲಿ ದೇಶದ ಜನತಾಂತ್ರಿಕ ಶಕ್ತಿಗಳ ಕಾರ್ಯಸೂಚಿಯ ಆದ್ಯತೆಯಾಗಬೇಕು.

ಪ್ರಕಾಶ್ ಕಾರಟ್

ಕಾಂಗ್ರೆಸ್, ಜನತಾ ದಳ (ಎಸ್)ದ 12 ಮತ್ತು ಮೈತ್ರಿಕೂಟಕ್ಕೆ ಬೆಂಬಲ ನೀಡುತ್ತಿದ್ದ ಇಬ್ಬರು ಪಕ್ಷೇತರ ಶಾಸಕರು- ಹೀಗೆ ಒಟ್ಟು 14 ಶಾಸಕರು ರಾಜಿನಾಮೆ ನೀಡುವುದರೊಂದಿಗೆ ಕರ್ನಾಟಕದ ರಾಜಕೀಯ ಬೆಳವಣಿಗೆಗಳು ಚರಮ ಸ್ಥಿತಿಯನ್ನು ತಲುಪಿವೆ. ಕುಮಾರಸ್ವಾಮಿ ಸರಕಾರವನ್ನು ಉರುಳಿಸಲು ಕಳೆದ ಒಂದು ವರ್ಷದಿಂದ ಬಿಜೆಪಿ ಹಲವು ಬಾರಿ ನಡೆಸಿದ ಪ್ರಯತ್ನಗಳ ನಂತರ ಈ ಬೆಳವಣಿಗೆ ನಡೆದಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ತಾನು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಹುಮತದಿಂದ ತನಗೆ ಸರಕಾರ ನಡೆಸಲಾಗದು  ಎಂಬ ವಾಸ್ತವವನ್ನು ಜೀರ್ಣಿಸಿಕೊಳ್ಳಲು ಬಿಜೆಪಿಗೆ ಆಗುತ್ತಿಲ್ಲ. ಆಳುವ ಮೈತ್ರಿಕೂಟದ ಶಾಸಕರಿಗೆ ಆಮಿಷ ಒಡ್ಡಲು ಹಾಗೂ ಲಂಚ ನೀಡಲು ಬಿಜೆಪಿ ಯಾವುದೇ ಹಿಂಜರಿಕೆ ತೋರಿಲ್ಲ. ಕೆಲವು ವರ್ಷಗಳ ಹಿಂದೆ ತಾನು ಚಾಲ್ತಿಗೆ ತಂದ ಆಪರೇಷನ್ ಕಮಲಕ್ಕೆ  ಅದು ಮುಂದಾಗಿದೆ.

ಚುನಾಯಿತ ಪ್ರತಿನಿಧಿಗಳಿಗೆ ಲಂಚ ನೀಡಿ ಹಾಗೂ ಸ್ಥಾನಮಾನದ ಆಮಿಷಗಳನ್ನೊಡ್ಡುವುದು ಹಾಗೂ ಚುನಾಯಿತ ಸರಕಾರವನ್ನು ಬುಡಮೇಲು ಮಾಡಲು ಅಪಾರ ಪ್ರಮಾಣದ ಸಂಪನ್ಮೂಲವನ್ನು ಬಳಕೆ ಮಾಡುವುದು ಬಿಜೆಪಿಯ ಚಾಳಿಯಾಗಿ ಬಿಟ್ಟಿದೆ. ಇದಕ್ಕೂ ಮೊದಲು ಅರುಣಾಚಲ ಪ್ರದೇಶ ಮತ್ತು ಗೋವಾದಲ್ಲಿ ಸರಕಾರಗಳನ್ನು ರಚಿಸಲಿಕ್ಕಾಗಿ ಅದು ಪಕ್ಷಾಂತರಗಳನ್ನು ನಡೆಸಿತ್ತು. ಇಂಥ ಕೀಳು ಮಟ್ಟದ ತಂತ್ರಗಳ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮಲಿನಗೊಳಿಸಲು ಮೋದಿ-ಷಾ ಜೋಡಿ ನೇರವಾಗಿ ಹೊಣೆಗಾರನಾಗಿದೆ.

ರಚನೆಯಾದಂದಿನಿಂದ ಯಾವುದೇ ತಾಳಮೇಳವಿಲ್ಲದ ಅಥವಾ ದಿಕ್ಕುದೆಸೆಯಿಲ್ಲದಂತೆ ವರ್ತಿಸುತ್ತಿರುವ ಕಾಂಗ್ರೆಸ್-ಜೆಡಿಎಸ್ ರಚಿಸಿದ ಅಸ್ಥಿರ ಸರಕಾರದ ಸನ್ನಿವೇಶವನ್ನು ಬಳಸಿಕೊಂಡು ಇಂಥ ಪಕ್ಷಾಂತರಗಳನ್ನು ಸಂಘಟಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಕಾಂಗ್ರೆಸ್ ನಾಯಕರ ಕಚ್ಚಾಟ ಮತ್ತು ಅದರ ಕೆಲವು ಅಧಿಕಾರದಾಹಿ ಶಾಸಕರ ಕುತಂತ್ರಗಳು ಕೂಡ ಪ್ರಸ್ತುತ ಸನ್ನಿವೇಶಕ್ಕೆ ಕೊಡುಗೆ ನೀಡಿವೆ.

ಕರ್ನಾಟಕದ ರಾಜಕೀಯದಲ್ಲಿನ ಈ ಅವನತಿಯು ಭಾರತೀಯ ರಾಜಕೀಯ ವ್ಯವಸ್ಥೆಯನ್ನು ಕಾಡುತ್ತಿರುವ ಇನ್ನೂ ಆಳವಾದ ರೋಗದ ಸೂಚನೆಯಾಗಿದೆ. ದೊಡ್ಡ ಹಣಕಾಸು ಮತ್ತು ನವ ಉದಾರವಾದಿ ಬಂಡವಾಳದ  ಆಕ್ರಮಣವು ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಪಕ್ಷ ವ್ಯವಸ್ಥೆಯ ಸಾರವನ್ನೇ ನಾಶಮಾಡಿದೆ. ಆಯ್ಕೆಯಾಗುತ್ತಿರುವ ಹೆಚ್ಚೆಚ್ಚು ಶಾಸಕರು ರಿಯಲ್ ಎಸ್ಟೇಟ್, ಸಾರಾಯಿ ದಂಧೆ, ಕಂಟ್ರಾಕ್ಟ್ ಇತ್ಯಾದಿ ವ್ಯಾಪಾರಿ ಹಿತಾಸಕ್ತಿ ಹೊಂದಿರುವವರಾಗಿದ್ದಾರೆ ಅಥವಾ ಗ್ರಾಮೀಣ ಸಮಾಜದ ಶ್ರೀಮಂತ ವರ್ಗಗಳಿಗೆ ಸೇರಿದವರಾಗಿದ್ದಾರೆ. ಈ ಶಕ್ತಿಗಳಿಗೆ ಬಂಡವಾಳಶಾಹಿ ಪಕ್ಷಗಳ ಟಿಕೆಟ್ ಸಿಗುತ್ತದೆ. ಈ ಜನರಲ್ಲಿ ಯಾವುದೇ ತತ್ವ ಸಿದ್ಧಾಂತದ ಲವಲೇಷವೂ ಇರುವುದಿಲ್ಲ.

ಕರ್ನಾಟಕದಲ್ಲಿ ಶಾಸಕರ ಕುದುರೆ ವ್ಯಾಪಾರ ನಡೆದಂತೆ  ಆಂಧ್ರ ಪ್ರದೇಶದಲ್ಲಿ ತೆಲುಗು ದೇಶಂ ಶಾಸಕರು ಮತ್ತು ಸಂಸತ್ ಸದಸ್ಯರು ಬಿಜೆಪಿಗೆ ಸೇರಿದ್ದನ್ನು ನಾವು ನೋಡಿದ್ದೇವೆ. ಪಕ್ಷಾಂತರ ಮಾಡಿದ ತೆಲುಗುದೇಶಂನ ಎಲ್ಲಾ ನಾಲ್ವರು ರಾಜ್ಯಸಭೆ ಎಂಪಿಗಳು ವ್ಯಾಪಾರೋದ್ಯಮಿಗಳು ಎನ್ನುವುದು ಗಮನಾರ್ಹ.

ಬಿಜೆಪಿ ರಾಜಕೀಯದಲ್ಲಿ ವ್ಯಾಪಾರವನ್ನು ಬೆರೆಸುವ ಈ ವಿದ್ಯಮಾನದ ಉತ್ತುಂಗವನ್ನು ಪ್ರತಿನಿಧಿಸುತ್ತದೆ. ಈ ಪಕ್ಷ ಕಾರ್ಪೊರೇಟ್‌ಗಳಿಂದ ಹೆಚ್ಚು ಅನುಕೂಲ ಪಡೆದ ಪಕ್ಷವಾಗಿದ್ದು ತನ್ನ ರಾಜಕೀಯ ಕುತಂತ್ರದಾಟಗಳಿಗೆ ಈ ಹಣವನ್ನು ಬಳಸಿಕೊಳ್ಳುತ್ತಿದೆ.

ಪಕ್ಷಾಂತರ ಮಾಡಿದ ಶಾಸಕರನ್ನು ಉದ್ಯಮಿ ಹಾಗೂ ಬಿಜೆಪಿ ನಾಯಕನಾಗಿರುವ ರಾಜ್ಯಸಭೆಯ ಸದಸ್ಯರೊಬ್ಬರ ಮಾಲಿಕತ್ವದ ಖಾಸಗಿ ಜೆಟ್ ಕಂಪೆನಿಯ ವಿಮಾನದಲ್ಲಿ ಮುಂಬಯಿಯ ಒಂದು ಪಂಚತಾರಾ ಹೊಟೇಲ್‌ಗೆ ಕರೆದುಕೊಂಡು ಹೋಗಿದ್ದು ಅಚ್ಚರಿಯ ಸಂಗತಿಯೇನೂ ಅಲ್ಲ.

ಕರ್ನಾಟಕದಲ್ಲಿ ಜನತಾಂತ್ರಿಕ ನಿಯಮಗಳನ್ನು ಬಿಜೆಪಿ ಬುಡಮೇಲು ಮಾಡುತ್ತಿರುವುದು ಮೋದಿ ಸರಕಾರದಡಿ ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ವ್ಯಾಪಕ ದಾಳಿಯ ಭಾಗವಾಗಿದೆ. ಪ್ರಜಾಪ್ರಭುತ್ವ ಮತ್ತು ಜನತಾಂತ್ರಿಕ ಸಂಸ್ಥೆಗಳನ್ನು ರಕ್ಷಿಸುವುದು, ಚುನಾವಣೆ ಸುಧಾರಣೆಗಳು ಮತ್ತು ಪಕ್ಷಾಂತರಿ ಹಾಗೂ ಭ್ರಷ್ಟ ಜನಪ್ರತಿನಿಧಿಗಳಿಗೆ ಶಿಕ್ಷೆ ನೀಡುವುದು ಮುಂದಿನ ದಿನಗಳಲ್ಲಿ ದೇಶದ ಜನತಾಂತ್ರಿಕ ಶಕ್ತಿಗಳ ಕಾರ್ಯಸೂಚಿಯ ಆದ್ಯತೆಯಾಗಬೇಕು.

ಅನು: ವಿಶ್ವ

Leave a Reply

Your email address will not be published. Required fields are marked *