ಕಾಮ್ರೇಡ್‌ ಕೆ.ಎಂ.ಶ್ರೀನಿವಾಸ್ ನಿಧನ

Com Srinivasಶಿವಮೊಗ್ಗ ಜಿಲ್ಲೆಯ ಹಿರಿಯ ಕಮ್ಯುನಿಸ್ಟ್ ನಾಯಕ ಕಾಮ್ರೇಡ್ ಕೆ.ಎಂ.ಶ್ರೀನಿವಾಸ್ ಇಂದು ಬೆಳಿಗ್ಗೆ ನಿಧನರಾದರು. ಅವರಿಗೆ 90 ವರ್ಷವಾಗಿತ್ತು. ಮುದ್ದಣ್ಣಗೌಡ ಮತ್ತು ರುಕ್ಮಿಣಿಯಮ್ಮ ದಂಪತಿಯ ಮಗನಾಗಿದ್ದ ಇವರು ತೀರ್ಥಹಳ್ಳಿ ತಾಲ್ಲೂಕಿನ ಆರಗ ಬಳಿಯ ಕಾಳಮ್ಮನಗುಡಿಯವರು.

ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ.ಪತ್ರಿಕೋದ್ಯಮ, ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಗಳಿಸಿದ್ದರು. ಖಾಸಗಿ ಪ್ರಾಕ್ಟೀಸನ್ನು ಒಂದು ವರ್ಷಕ್ಕೇ ನಿಲ್ಲಿಸಿ ಊರಿಗೆ ತೆರಳಿದ ಇವರು ಕರ್ನಾಟಕ ಪ್ರಾಂತ ರೈತ ಸಂಘದ ಜವಾಬ್ದಾರಿಯನ್ನು ವಹಿಸಿಕೊಂಡರು. ಜೊತೆಗೆ ಕಮ್ಯುನಿಸ್ಟ್ ಪಕ್ಷ ಕಟ್ಟಲು ತೊಡಗಿದರು. ಇವರಿಗೆ ಶಾಂತವೇರಿ ಗೋಪಾಲಗೌಡರ ಒಡನಾಟ ಇತ್ತು.

ಬಾಲ್ಯದಲ್ಲಿಯೇ ಇವರು 1942ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದರು. 1947ರಲ್ಲಿ ಮೈಸೂರು ಚಲೋ ಬೆಂಬಲಿಸಿ ಹೋರಾಟವನ್ನು ನಡೆಸಿದ್ದರು. ತೀರ್ಥಹಳ್ಳಿಯಲ್ಲಿ ನಡೆದ ಗೇಣಿದಾರರ ಹೋರಾಟಕ್ಕೆ ಶ್ರೀನಿವಾಸ್, ಅಪ್ಪಣ್ಣ ಹೆಗಡೆ, ಜಿ.ಎಸ್.ನಾಗರಾಜ್ ತ್ರಿವಳಿಗಳ ಕೊಡುಗೆ ಅಪಾರವಾದುದು. ಇವರ ಹೋರಾಟಗಳು ಜಮೀನ್ದಾರರ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದವು. ಹಾಗೆ ನೋಡಿದರೆ ಪ್ರಾಯೋಗಿಕ ನೆಲೆಯಲ್ಲಿ (ಪ್ರಚಾರ ಕಡಿಮೆ) ಕಾಗೋಡು ಸತ್ಯಾಗ್ರಹಕ್ಕಿಂತ ಹೆಚ್ಚಿನ ರೀತಿಯಲ್ಲಿ ಗೇಣಿ ರೈತರಿಗೆ ಪ್ರಯೋಜನವಾದ ಹೋರಾಟವನ್ನು ಇವರು ನಡೆಸಿದರು.

1967 ರ ಚುನಾವಣೆಯಲ್ಲಿ ಶಾಂತವೇರಿ ಗೋಪಾಲಗೌಡರನ್ನು  ಸಿಪಿಐ(ಎಂ)ನಿಂದ ಬೆಂಬಲಿಸಿ ಅವರನ್ನು ಗೆಲ್ಲಿಸುವಲ್ಲಿ ಸಕ್ರಿಯವಾಗಿ ದುಡಿದರು. 1972ರಲ್ಲಿ ಸಿಪಿಐ(ಎಂ) ಅಭ್ಯರ್ಥಿ ಅಪ್ಪಣ್ಣ ಹೆಗಡೆಯವರನ್ನು ಗೆಲ್ಲಿಸಲಿ ಅಪಾರ ಶ್ರಮವನ್ನು ಹಾಕಿದರು. ಅಪ್ಪಣ್ಣ ಹೆಗಡೆ ಗೆದ್ದೇ ಬಿಡುತ್ತಾರೆ ಎಂಬ ಅಭಿಪ್ರಾಯ ರೂಪುಗೊಂಡಿತ್ತು ಆದರೆ ಗೆಲ್ಲಲಿಲ್ಲ. 1977 ರಲ್ಲಿ ಶ್ರೀನಿವಾಸ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರು. 1978 ರಿಂದ 1985 ರವರೆಗೂ ವರಾಹಿ ಯೋಜನೆಯ ಸಂತ್ರಸ್ತರ ಪರವಾಗಿ ನಡೆಸಿದ ಯಶಸ್ವಿ ಹೋರಾಟ ಇವರು ನಾಯಕತ್ವ ಕೊಟ್ಟ ಹೋರಾಟಗಳಲ್ಲಿ ಗಮನಾರ್ಹವಾದದ್ದು.

ಅವಿಭಜಿತ ಸಿಪಿಐನ್ನು ಪ್ರತಿನಿಧಿಸಿ ಇವರು ವಿಜಯವಾಡದಲ್ಲಿ ನಡೆದ ಮಹಾಧಿವೇಶನದಲ್ಲಿ ಭಾಗವಹಿಸಿದ್ದರು. ಕಮ್ಯುನಿಸ್ಟ್ ಪಕ್ಷ ವಿಭಜನೆಯಾದಾಗ ಇವರು ಸಿಪಿಐ(ಎಂ)ನಲ್ಲಿ ಉಳಿದು ಪಕ್ಷವನ್ನು ಕಟ್ಟಲು ಶ್ರಮಿಸಿದರು.

ಕಾಮ್ರೆಡ್ ಶ್ರೀನಿವಾಸ್ ಅವರಿಗೆ ಶಾಂತವೇರಿ ಗೋಪಾಲಗೌಡ, ಉಡುಪಿ ಮಂಜಪ್ಪ, ಚಂದು ಕುಟ್ಟಿ, ಅಪ್ಪಣ್ಣ ಹೆಗಡೆ, ವಾಮನ ಭಟ್, ಸಿ.ಕೆ.ಜನಾರ್ಧನ್ ನಾಯಕ್, ಜಿ.ಎಸ್.ನಾಗರಾಜ್, ಯಡಗುಡ್ಡೆ ರಾಘವೇಂದ್ರ, ಜಾವಗಲ್ ವಿಜಯ್ ಕುಮಾರ್ ಮುಂತಾದವರು ಒಡನಾಡಿಗಳಾಗಿದ್ದರು.

ನಿರಂತರವಾಗಿ ಅಧ್ಯಯನ ಮಾಡುತ್ತಿದ್ದ ಕಾಮ್ರೇಡ್ ಶ್ರೀನಿವಾಸ್ ಅವರು ಮಾರ್ಕ್ಸ್, ಲೋಹಿಯಾ, ಅಂಬೇಡ್ಕರ್ ಅವರನ್ನು ಬರಹಗಳನ್ನು ಅಪಾರವಾಗಿ ಓದಿಕೊಂಡಿದ್ದರು.

ಅವರು ಅನಾರೋಗ್ಯ ಪೀಡಿತರಾಗಿ ಮನೆಯಲ್ಲಿದ್ದಾಗ ನನ್ನ ಸಂಶೋಧನೆಯ ಸಲುವಾಗಿ ನಾನು, ಸಮುದಾಯದ ರಾಜ್ಯ ಕಾರ್ಯದರ್ಶಿ ಟಿ.ಸುರೇಂದ್ರರಾವ್ ಮತ್ತು ಶಿವಮೊಗ್ಗದ ಸಮುದಾಯ ಸಂಚಾಲಕರಾದ ಕೆ.ಪ್ರಭಾಕರನ್ ಸೇರಿ ಸಂದರ್ಶನ ಮಾಡಿದಾಗಿನ ಅವರ ಹೋರಾಟದ ನೆನಪುಗಳು, ಅಂದಿನ ರಾಜಕೀಯ ಪಲ್ಲಟಗಳ ಒಂದು ಹೊಳಹು ಸಿಕ್ಕಿತ್ತು.

ಜನರಿಗಾಗಿ, ಕಮ್ಯುನಿಸ್ಟ್ ಪಕ್ಷಕ್ಕಾಗಿ ತಮ್ಮ ಜೀವನವನ್ನು ಧಾರೆ ಎರೆದ ಸಂಗಾತಿ ಶ್ರೀನಿವಾಸ್ ಒಬ್ಬ ಸರಳ, ಸಜ್ಜನಿಕೆಯ ಮಾದರಿ ಕಮ್ಯುನಿಸ್ಟ್ ಆಗಿದ್ದರು. ಅವರ ಅಗಲಿಕೆ ಇಂತಹ ಮಾದರಿಯ ಒಂದು ಪ್ರಮುಖ ಕೊಂಡಿ ಕಳಚಿದಂತೆ ಆಗಿದೆ.

ಅವರ ಪತ್ನಿ ಯಶೋಧರವರು ಕೂಡ ಪತಿಯೊಂದಿಗೆ ಹೋರಾಟಗಳಿಗೆ ಪರೋಕ್ಷವಾಗಿ ಬೆಂಬಲ ನೀಡಿದವರು. ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ಯು ಕಾಮ್ರೇಡ್ ಶ್ರೀನಿವಾಸ್ ರವರ ನಿಧನಕ್ಕೆ ತನ್ನ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸುತ್ತದೆ ಮತ್ತು ಅವರ ಮಡದಿ ಮತ್ತು ಮಕ್ಕಳಿಗೆ ತನ್ನ ಸಾಂತ್ವನವನ್ನು ವ್ಯಕ್ತಪಡಿಸುತ್ತದೆ.

Leave a Reply

Your email address will not be published. Required fields are marked *