ಅನಿಲ್ ಇಂಗಳಗಿ ಕೊಲೆಗೈದ ಅಪರಾಧಿಗಳನ್ನು ಬಂಧಿಸಿ

ಬೂದಿಗಾಳ್ ಪಿ.ಹೆಚ್ ಗ್ರಾಮದ ಅನಿಲ್ ಇಂಗಳಗಿ ಎಂಬ ದಲಿತ ಯುವಕನನ್ನು ಕೊಲೆ ಮಾಡಿರುವ ಅಪರಾಧಿಗಳನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ರಾಜ್ಯದ ಮುಖ್ಯಮಂತ್ರಿಗಳಿಗೆ ಭಾರತ ಕಮ್ಯೂನಿಸ್ಟ್ ಪಕ್ಷ ( ವಾದಿ), ಕರ್ನಾಟಕ ರಾಜ್ಯ ಸಮಿತಿಯು ಮನವಿ ಸಲ್ಲಿಸಿದೆ.

ಇವರಿಗೆ,

ಮಾನ್ಯ ಮುಖ್ಯಮಂತ್ರಿಗಳು,

ಕರ್ನಾಟಕ ಸರಕಾರ, ವಿಧಾನಸೌಧ, ಬೆಂಗಳೂರು.

ಮಾನ್ಯರೇ,

ವಿಷಯ: ದೇವಸ್ಥಾನದಲ್ಲಿ ಸಮನಾಗಿ ಕುಳಿತ ಕಾರಣಕ್ಕೆ ಕೊಲೆಗೈದ ಅಪರಾಧಿಗಳನ್ನು ಕೂಡಲೇ ಬಂಧಿಸಿ, ಶಿಕ್ಷಿಸಲು ಸಿಪಿಐಎಂ ಒತ್ತಾಯ.

ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಬೂದಿಗಾಳ್ ಪಿ.ಹೆಚ್. ಗ್ರಾಮದ ಅನಿಲ್ ಇಂಗಳಗಿ ಎಂಬ ಯುವಕನು ಮಲ್ಲಿಕಾರ್ಜುನ ದೇವಸ್ಥಾನದ ಕಟ್ಟೆಯ ಮೇಲೆ ತಮ್ಮ ಸಮನಾಗಿ ಕುಳಿತನೆಂಬ ಕಾರಣಕ್ಕೆ ಸದರಿ ಗ್ರಾಮದ ಸಿದ್ದು ಬಿರಾದಾರ್ ಹಾಗೂ ಸಂತೋಷ ಬಿರಾದಾರ್ ಎಂಬುವವರು ಕೊಲೆಗೈಯ್ದಿದ್ದಾರೆಂದು ಹೇಳಲಾಗಿದೆ.

ಇದೊಂದು ಜಾತಿ ತಾರತಮ್ಯ ಹಾಗೂ ಅಸ್ಪೃಶ್ಯಾಚರಣೆಯ ಅಕ್ಷಮ್ಯವಾದ ಹೇಯ ಮತ್ತು ಬರ್ಬರ ದುಷ್ಕೃತ್ಯವಾಗಿದೆ. ಇದನ್ನು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಬಲವಾಗಿ ಖಂಡಿಸುತ್ತದೆ. ಇದು ಈಗಲೂ ಗ್ರಾಮೀಣ ಪ್ರದೇಶದಲ್ಲಿ ಭಾರತದ ಸಂವಿಧಾನಾತ್ಮಕ ಕಾನೂನುಗಳು ಜಾರಿಯಲ್ಲಿಲ್ಲವೆಂಬ ಬಲಹೀನತೆಯನ್ನು ಮತ್ತೊಮ್ಮೆ ಎತ್ತಿ ತೋರಿದೆ.

ತಕ್ಷಣವೇ ಅಪರಾಧಿಗಳನ್ನು ಬಂಧಿಸಬೇಕು ಹಾಗೂ ಅವರ ಈ ದುಷ್ಕೃತ್ಯದ ಮೇಲೆ ಕಠಿಣ ಕಾನೂನಿನ ಕ್ರಮ ಕೈಗೊಳ್ಳಬೇಕೆಂದು ಸಿಪಿಐ(ಎಂ) ರಾಜ್ಯ ಸಮಿತಿ ಒತ್ತಾಯಿಸುತ್ತದೆ. ಅದೇ ರೀತಿ ಕೂಡಲೇ ಕೊಲೆಗೀಡಾದ ಅನಿಲ್ ಇಂಗಳಗಿ ಕುಟುಂಬಕ್ಕೆ ಅಗತ್ಯ ಪರಿಹಾರಗಳನ್ನು ಘೋಷಿಸಬೇಕು.

ಸದರಿ ಗ್ರಾಮದ ದಲಿತರಿಗೆ ಅಗತ್ಯ ರಕ್ಷಣೆಯನ್ನು ಒದಗಿಸಲು ಹಾಗೂ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯಾಚರಣೆ ತಡೆ ಕಾಯ್ದೆಗಳನ್ನು ಆ ಪ್ರದೇಶದಲ್ಲಿ ಕೂಡಲೇ ಜಾರಿಗೆ ತರಲು ಅಗತ್ಯ ಕ್ರಮವಹಿಸುವಂತೆ ಸಿಪಿಐ(ಎಂ) ಒತ್ತಾಯಿಸುತ್ತದೆ.

ದಲಿತರ ಮೇಲಿನ ಇಂತಹ ದೌರ್ಜನ್ಯ ಹಾಗೂ ಅಪರಾಧಗಳನ್ನು ತಡೆಯಲು ಮತ್ತು ಕಠಿಣ ಕ್ರಮವಹಿಸಲು ಪರಿಶಿಷ್ಠ ಜಾತಿ ಹಾಗೂ ಪಂಗಡದವರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ಮತ್ತಷ್ಠು ಬಲಗೊಳಿಸಬೇಕಾಗಿದೆ. ಈ ಕುರಿತು ಅಗತ್ಯ ಕ್ರಮವಹಿಸುವಂತೆ ಒತ್ತಾಯಿಸುತ್ತದೆ.

ವಂದನೆಗಳೊಂದಿಗೆ,

ಯು. ಬಸವರಾಜ

ಸಿಪಿಐ(ಎಂ) ಕಾರ್ಯದರ್ಶಿ

Leave a Reply

Your email address will not be published. Required fields are marked *