ಈಗ ಕೇರಳ ಎಲ್‌ಡಿಎಫ್ ಸರಕಾರದ ಮೇಲೆ ಗುರಿ

Prakash_karat
 ಪ್ರಕಾಶ ಕಾರಟ್

ಕೇರಳದ ಎಡ ಪ್ರಜಾಪ್ರಭುತ್ವ ರಂಗದ ಸರಕಾರವನ್ನು ಕಳಂಕಿತಗೊಳಿಸುವ, ಅದರ ಹೆಸರುಗೆಡಿಸುವ ಪ್ರಯತ್ನಗಳು ಕಳೆದ ಕೆಲವು ವಾರಗಳಲ್ಲಿ ಹೆಚ್ಚುತ್ತಿವೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಬಿಜೆಪಿ ಚಿನ್ನದ ಕಳ್ಳಸಾಗಾಣಿಕೆಯ ಪ್ರಕರಣವನ್ನು ಬಳಸಿಕೊಂಡು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಎಲ್‌ಡಿಎಫ್ ಸರಕಾರದ ಮೇಲೆ ಗುರಿಯಿಡಲು ಚಳುವಳಿಗಳನ್ನು ನಡೆಸಿವೆ.

ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವಂತೆ ಕಾಂಗ್ರೆಸ್ ಮತ್ತು ಬಿಜೆಪಿಗಳು ಸರಕಾರದ ಮೇಲೆ ತಮ್ಮ ದಾಳಿಯ ಹರಹನ್ನು ವಿಸ್ತರಿಸಲು ಮುಚ್ಚುಮರೆಯಿಲ್ಲದೆ ಮುಂದಡಿಯಿಟ್ಟಿವೆ. ಕೆಲವು ಕೇಂದ್ರೀಯ ಏಜೆನ್ಸಿಗಳನ್ನು ಕೂಡ ಈ ದುಷ್ಟ ಆಟದಲ್ಲಿ ಸೇರಿಸಿಕೊಳ್ಳಲಾಗಿದೆ.

ಸದ್ಯ, ನಾಲ್ಕು ಕೇಂದ್ರೀಯ ಏಜೆನ್ಸಿಗಳು- ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್‌ಐಎ), ಕಸ್ಟಮ್ಸ್, ಜಾರಿ ನಿರ್ದೇಶನಾಲಯ(ಇ.ಡಿ.) ಮತ್ತು ಕೇಂದ್ರೀಯ ತನಿಖಾ ಬ್ಯೂರೊ(ಸಿಬಿಐ)- ಚಿನ್ನದ ಕಳ್ಳಸಾಗಾಣಿಕೆಯ ಪ್ರಕರಣದ ತನಿಖೆ ಮಾಡುತ್ತಿವೆ ಮತ್ತು ಅದನ್ನು ತಮ್ಮ ತನಿಖೆಗಳನ್ನು ಸರಕಾರದ ವಿವಿಧ ಪರಿಯೋಜನೆಗಳು ಮತ್ತು ಸ್ಕೀಮುಗಳಿಗೆ ವಿಸ್ತರಿಸಲು ಜಿಗಿ ಹಲಗೆಯಾಗಿ ಉಪಯೋಗಿಸುತ್ತಿವೆ.

ಜುಲೈನಲ್ಲಿ ರಾಜತಾಂತ್ರಿಕ ಬ್ಯಾಗೇಜಿನ ಮೂಲಕ ಚಿನ್ನದ ಕಳ್ಳಸಾಗಾಣಿಕೆ ಕಂಡು ಬಂದಾಗ, ಮುಖ್ಯಮಂತ್ರಿಗಳು ತಕ್ಷಣವೇ ಒಂದು ಸೂಕ್ತ ಕೇಂದ್ರೀಯ ಏಜೆನ್ಸಿ ಮೂಲಕ ತನಿಖೆ ನಡೆಸುವಂತೆ ಕೇಳಿದರು. ಇದು ಅಗತ್ಯವಾಗಿತ್ತು, ಏಕೆಂದರೆ ಇದು ರಾಜ್ಯ ಸರಕಾರದ ಅಧಿಕಾರ ವ್ಯಾಪ್ತಿಯ ಹೊರಗಿರುವ ಒಂದು ವಿಷಯವಾಗಿತ್ತು ಮತ್ತು ವಿದೇಶದಿಂದ ರಾಜತಾಂತ್ರಿಕ ದಾರಿಗಳ ಮೂಲಕ ಕಳ್ಳಸಾಗಾಣಿಕೆಯ ವಿಷಯ ಅದರಲ್ಲಿತ್ತು. ಗೃಹ ಮಂತ್ರಾಲಯ, ಇದರಲ್ಲಿ ಮೇಲ್ನೋಟಕ್ಕೆ ಯಾವುದೇ ಭಯೋತ್ಪಾದಕರಿಗೆ ನಿಧಿ ಸಂಗ್ರಹಿಸುವ ಅಥವ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯ ಆಧಾರಗಳು ಕಾಣದಿದ್ದರೂ, ತನಿಖೆಯನ್ನು ಎನ್‌ಐಎ ಗೆ ವಹಿಸಿತು. ಪ್ರಕರಣವನ್ನು ಆರಂಭದಲ್ಲಿ  ದಾಖಲಿಸಿಕೊಂಡ ಕಸ್ಟಮ್ಸ್ ನವರು ತಮ್ಮ ತನಿಖೆಯನ್ನು ಮುಂದುವರೆಸುತ್ತಿದ್ದಾರೆ. ಕ್ರಿಯೆಗಿಳಿದ ಇ.ಡಿ. ಮುಖ್ಯಮಂತ್ರಿಗಳ ಕಚೇರಿಯಲ್ಲಿ ಪ್ರಮುಖ ಕಾರ್ಯದರ್ಶಿ ಮತ್ತು ಐಟಿ ಕಾರ್ಯದರ್ಶಿಯಾಗಿದ್ದ ಶಿವಶಂಕರ್ ಅವರ  ಬಂಧನವನ್ನು ನಡೆಸಿತು, ಈಗ ತನ್ನ ತನಿಖೆಯನ್ನು ಕೇರಳ ಫೈಬರ್ ಆಪ್ಟಿಕ್ ನೆಟ್‌ವರ್ಕ್(ಕೆ-ಫೊನ್), ಕೊಚಿ ಸ್ಮಾರ್ಟ್ ಸಿಟಿ, ಟಾರಸ್ ಪ್ರಾಜೆಕ್ಟ್ ಮತ್ತು ಇ-ಮೊಬೊಲಿಟಿ ಪ್ರಾಜೆಕ್ಟ್ ಮುಂತಾದ ಇತರ ಸರಕಾರೀ ಪರಿಯೋಜನೆಗಳಿಗೆ ವಿಸ್ತರಿಸಿದೆ.

LDF nov 16-2
ನವಂಬರ್ ೧೬ ರಂದು ರಾಜ್ಯಾದ್ಯಂತ ೨೫ ಲಕ್ಷ ಜನಗಳು ಪ್ರತಿಭಟನಾ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದರು. ಇವುಗಳಲ್ಲಿ ಜನಪರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಛಿದ್ರಗೊಳಿಸುವ ಕೇಂದ್ರೀಯ ಏಜೆನ್ಸಿಗಳ ಪ್ರಯತ್ನಗಳನ್ನು ಖಂಡಿಸಲಾಯಿತು.

ಈ ನಡುವೆ, ಸಿಬಿಐ, ಯು.ಎ.ಇ.ಯ ರೆಡ್ ಕ್ರೆಸೆಂಟ್ ‘ಲೈಫ್ ಮಿಶನ್’ ಆಡಿಯಲ್ಲಿ  ಫ್ಲಾಟ್‌ಗಳ ನಿರ್ಮಾಣಕ್ಕೆ ಸಂಬಂಧಪಟ್ಟ ಪ್ರಕರಣದಲ್ಲಿ ಮೇಲಿಂದ ಧುಮುಕಿ ಬಿಟ್ಟಿದೆ. ರೆಡ್ ಕ್ರೆಸೆಂಟ್ ೨೦೧೮ರ ತೀವ್ರ ಪ್ರವಾಹದಿಂದ ಸಂತ್ರಸ್ತರಾದವರಿಗೆ ಫ್ಲಾಟ್‌ಗಳನ್ನು ಒದಗಿಸುವ ಲೈಫ್ ಮಿಶನ್‌ನ ಪರಿಯೋಜನೆಯ ಭಾಗವಾಗಿ ೧೪೨ ಫ್ಲಾಟ್‌ಗಳನ್ನು ನಿರ್ಮಿಸಲು ಒಂದು ಖಾಸಗಿ ಬಿಲ್ಡರ್‌ನೊಂದಿಗೆ ಕಾಂಟ್ರಾಕ್ಟ್ ಮಾಡಿಕೊಂಡಿತು. ಕೇರಳ ಸರಕಾರ ಅಥವ ಲೈಫ್ ಮಿಶನ್  ಈ ಕಾಂಟ್ರಾಕ್ಟ್ ನ ಭಾಗೀದಾರರೇನೂ ಅಲ್ಲ. ಆದರೂ ಒಬ್ಬ ಕಾಂಗ್ರೆಸ್ ಶಾಸಕನ ದೂರಿನ ಮೇಲೆ ವಿದೇಶಿ ವಂತಿಗೆಗಳು (ನಿಯಂತ್ರಣ ಕಾಯ್ದೆ(ಎಫ್‌ಸಿಆರ್‌ಎ)ಯ ಉಲ್ಲಂಘನೆಯ ಕೇಸನ್ನು ಹಾಕಿದೆ ಮತ್ತು ಎಫ್‌ಐಆರ್ ನಲ್ಲಿ ಲೈಫ್ ಮಿಶನ್‌ನ ಅಧಿಕಾರಿಗಳನ್ನು ಸಿಗಿಸಿದೆ. ಈ ವಿಷಯದಲ್ಲಿ ಒಂದು ವಿಜಿಲೆನ್ಸ್ ತನಿಖೆಯನ್ನು ಆರಂಭಿಸಿರುವ ರಾಜ್ಯ ಸರಕಾರಕ್ಕೆ ಈ ಬಗ್ಗೆ ತಿಳಿಸಿಯೇ ಇಲ್ಲ. ಎಫ್‌ಸಿಆರ್‌ಎ ವಿದೇಶಿ ವಂತಿಗೆಗಳು/ ಕೊಡುಗೆಗಳಿಗೆ ಸಂಬಂಧಪಟ್ಟದ್ದು, ಈ ಸ್ವರೂಪದ ವಾಣಿಜ್ಯ ಕಾಂಟ್ರಾಕ್ಟ್ ಅದರ ವ್ಯಾಪ್ತಿಗೆ ಬರುವುದಿಲ್ಲ. ಲೈಫ್ ಮಿಶನ್‌ನ ಅಧಿಕಾರಿಗಳು ಕೇರಳ ಹೈಕೋರ್ಟಿನಲ್ಲಿ ಹಾಕಿದ ಅರ್ಜಿಯನ್ನು ಪರಿಶೀಲಿಸಿ ಈ ವಿಷಯ ಎಫ್‌ಸಿಆರ್‌ಎ ನ ಸಂಬಂಧಪಟ್ಟ ಪರಿಚ್ಛೇದದ ಅಡಿಯಲ್ಲಿ ಬರುವುದಿಲ್ಲ ಎಂದು ಸಿಬಿಐ ತನಿಖೆಗೆ ಎರಡು ತಿಂಗಳ ತಡೆಯಾಜ್ಞೆ ಬಂದಿದೆ.

ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವಂತೆ ಕಾಂಗ್ರೆಸ್ ಮತ್ತು ಬಿಜೆಪಿ ಎಲ್‌ಡಿಎಫ್ ಸರಕಾರದ ಮೇಲೆ ತಮ್ಮ ದಾಳಿಯ ಹರಹನ್ನು ವಿಸ್ತರಿಸಲು ಮುಚ್ಚುಮರೆಯಿಲ್ಲದೆ ಮುಂದಡಿಯಿಟ್ಟಿವೆ. ಕೆಲವು ಕೇಂದ್ರೀಯ ಏಜೆನ್ಸಿಗಳನ್ನು ಕೂಡ ಈ ದುಷ್ಟ ಆಟದಲ್ಲಿ ಸೇರಿಸಿಕೊಳ್ಳಲಾಗಿದೆ.ಸದ್ಯ, ನಾಲ್ಕು ಕೇಂದ್ರೀಯ ಏಜೆನ್ಸಿಗಳು  ಚಿನ್ನದ ಕಳ್ಳಸಾಗಾಣಿಕೆಯ ತಮ್ಮ ತನಿಖೆಗಳನ್ನು ಸರಕಾರದ ವಿವಿಧ ಪರಿಯೋಜನೆಗಳು ಮತ್ತು ಸ್ಕೀಮುಗಳಿಗೆ ವಿಸ್ತರಿಸಲು ಜಿಗಿ-ಹಲಗೆಯಾಗಿ ಉಪಯೋಗಿಸುತ್ತಿವೆ. ದಿಲ್ಲಿಯಲ್ಲಿ ನಾಲ್ಕು ಪುಟಗಳನ್ನು ಸೇರಿಸಿದ ಸಿಎಜಿ ವರದಿಯನ್ನು ಎಲ್‌ಡಿಎಫ್ ಸರಕಾರದ ವಿರುದ್ಧ ಒಂದು ಅಸ್ತ್ರವಾಗಿಸುವ ಪ್ರಯತ್ನದಲ್ಲಿ ಕಾಂಗ್ರೆಸ್-ಬಿಜೆಪಿ ಶಾಮೀಲಾಗಿವೆ.ಸಿಪಿಐ(ಎಂ) ಮತ್ತು ಎಲ್‌ಡಿಎಫ್ ಈ ಪಿತೂರಿಗಳಿಗೆ ಇದಿರೇಟು ನೀಡಲು ಮತ್ತು ಅವನ್ನು ಜನಗಳ ಮುಂದೆ ಬಯಲಿಗೆಳೆಯಲು ನಿರ್ಧಾರ ಮಾಡಿವೆ.

ಅತ್ತ ಕಾಂಗ್ರೆಸ್ ಪಕ್ಷದ ಅಖಿಲ ಭಾರತ ಮುಖಂಡತ್ವ, ಅದರ ಅಧ್ಯಕ್ಷರಾಗಿರುವ ಸೋನಿಯಾ ಗಾಂಧಿ, ಸಾರ್ವಜನಿಕವಾಗಿಯೇ ಸಿಬಿಐ, ಎನ್‌ಐಎ, ಮತ್ತು ಮಾದಕ ವಸ್ತುಗಳ ಬ್ಯುರೋವನ್ನು ಪ್ರತಿಕ್ಷಗಳ ಮೇಲೆ ಗುರಿಯಿಡಲು ಬಳಸಲಾಗುತ್ತಿದೆ ಎಂದು ಘೋಷಿಸಿರುವಾಗ,  ಕೇರಳದಲ್ಲಿ ಪ್ರತಿಪಕ್ಷದ ಮುಖಂಡ ರಮೇಶ ಚೆನ್ನಿತಾಲ ಮತ್ತು ಇತರ ರಾಜ್ಯ ಕಾಂಗ್ರೆಸ್ ಮುಖಂಡರುಗಳು ಮತ್ತೆ-ಮತ್ತೆ ಸಿಬಿಐ ಮತ್ತು ಇತರ ಕೇಂದ್ರೀಯ ಏಜೆನ್ಸಿಗಳ ತನಿಖೆಗಳನ್ನು ನಡೆಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ರಾಹುಲ್ ಗಾಂಧಿ ಕೂಡ ತನ್ನ ಹಿಂದಿನ ಕೇರಳ ಭೇಟಿ ಕಾಲದಲ್ಲಿ ಇದೇ ರೀತಿಯಲ್ಲಿ ಕೇಂದ್ರೀಯ ಏಜೆನ್ಸಿಗಳ ದುರುಪಯೋಗದ ಟಿಪ್ಪಣಿ ಮಾಡಿದಾಗ, ರಮೇಶ ಚೆನ್ನಿತಾಲ ಅವನ್ನು ನಿರಾಕರಿಸಿ, ಇಂತಹ ವಿಷಯಗಳನ್ನು ರಾಜ್ಯ ಕಾಂಗ್ರೆಸ್ ನಿರ್ಧರಿಸುತ್ತದೆ ಎಂದಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರ ನಡುವೆ ಸಂಯೋಜನೆ ಇದೆ ಎಂಬುದು ಅವರು ಕೇಂದ್ರೀಯ ಏಜೆನ್ಸಿಗಳ ತನಿಖೆಗಳಿಗೆ ಸಂಬಂಧಪಟ್ಟಂತೆ ಎಲ್ಲ ಬೆಳೆದು ಬರುತ್ತಿರುವ ಪ್ರಶ್ನೆಗಳಲ್ಲಿ ಒಂದೇ ರೀತಿಯ ಹೇಳಿಕೆಗಳನ್ನು ಕೊಡುವಾಗ ಎದ್ದು ಕಾಣುತ್ತಿದೆ.

ಲೈಫ್ ಮಿಶನ್ ಕೇರಳದಲ್ಲಿ ಸ್ವಂತ ಮನೆಯಿಲ್ಲದ ಎಲ್ಲ ಕುಟುಂಬಗಳಿಗೆ ಮನೆಗಳನ್ನು ಒದಗಿಸುವ ಕೆಲಸದಲ್ಲಿ ತೊಡಗಿದೆ. ಇದುವರೆಗೆ ಕಳೆದ ಮೂರು ವರ್ಷಗಳಲ್ಲಿ ಎರಡೂವರೆ ಲಕ್ಷ ಮನೆಗಳನ್ನು ಫಲಾನುಭವಿಗಳಿಗೆ ಒದಗಿಸಲಾಗಿದೆ; ಕೆ-ಫೊನ್ ಪ್ರಾಜೆಕ್ಟ್ ನ ಗುರಿ ಪ್ರತಿ ಹಳ್ಳಿಗೆ ಇಂಟರ್ನೆಟ್ ಬ್ರಾಡ್ ಬ್ಯಾಂಡ್ ಸಂಪರ್ಕ ಕೊಡುವುದು, ಮತ್ತು ರಾಜ್ಯದಲ್ಲಿ ಪ್ರತಿಮನೆಗೆ ಸಂಪರ್ಕ ನೀಡುವುದು. ಸ್ಮಾರ್ಟ್ ಸಿಟಿ ಮತ್ತು ಇ-ಮೊಬಿಲಿಟಿ(ವಿದ್ಯುತ್ ಬಸ್‌ಗಳ ಬಳಕೆ) ಮಹತ್ವದ ಅಭಿವೃದ್ಧಿ ಪರಿಯೋಜನೆಗಳು. ಈ ಎಲ್ಲ ಅಭಿವೃದ್ಧಿ ಯೋಜನೆಗಳನ್ನು ಇ.ಡಿ. ಮತ್ತು ಸಿಬಿಐ ಕಡತಗಳನ್ನು ಸಲ್ಲಿಸುವಂತೆ ಆದೇಶಿಸುವ ಮೂಲಕ ಮತ್ತು ಇವುಗಳ ಅನುಷ್ಠಾನಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಿರುಕುಳ ಕೊಡುವ ಮೂಲಕ ಅಸ್ತವ್ಯಸ್ತಗೊಳಿಸಲು ಪ್ರಯತ್ನಿಸುತ್ತಿವೆ.

ಎಲ್‌ಡಿಎಫ್ ಸರಕಾರದ ಅಭಿವೃದ್ಧಿ ಯೋಜನೆಗಳ ಮೇಲೆ ದಾಳಿಗಳು ಕೇರಳ ಮೂಲರಚನೆ ಹೂಡಿಕೆ ನಿಧಿ ಮಂಡಳಿ(ಕೆಐಐಎಫ್‌ಬಿ) ಮೇಲೆ ಮಹಾಲೆಕ್ಕ ಪರಿಶೋಧಕರ(ಸಿಎಜಿ) ವರದಿಯೊಂದಿಗೆ ವಿಸ್ತಾರಗೊಂಡಿದೆ. ಕೆಐಐಎಫ್‌ಬಿ ರಾಜ್ಯದಲ್ಲಿ ಮೂಲರಚನೆ ಅಭಿವೃದ್ಧಿಗೆ ನಿಧಿಗಳನ್ನು ಅಣಿನೆರೆಸಲು ಒಂದು ಮಹತ್ವದ ವಾಹನವಾಗಿ ಬಿಟ್ಟಿದೆ. ಸಾಲಗಳು ಮತ್ತು ಸಾಲಪತ್ರಗಳನ್ನು ನೀಡುವ ಮೂಲಕ ಇದು ಸುಮಾರು ೬೦,೦೦೦ ಕೋಟಿ ರೂ.ಗಳನ್ನು ಎತ್ತಿದೆ. ಈ ನಿಧಿಗಳನ್ನೇ ಸರಕಾರೀ ಶಾಲೆಗಳನ್ನು ಸ್ಮಾರ್ಟ್ ತರಗತಿಗಳು ಮತ್ತು ಕಂಪ್ಯೂಟರ್ ಲ್ಯಾಬ್‌ಗಳ ಮೂಲಕ ಜಾಗತಿಕ ಮಟ್ಟಗಳಿಗೆ ಏರಿಸಲು ಒದಗಿಸಲಾಗಿದೆ. ಇದುವರೆಗೆ ಈ ರೀತಿಯಲ್ಲಿ ೩೧೦ ಶಾಲೆಗಳನ್ನು ಕಟ್ಟಲಾಗಿದೆ ಮತ್ತು ಮೇಲ್ಮಟ್ಟಕ್ಕೆ ಏರಿಸಲಾಗಿದೆ.  ರಸ್ತೆಗಳು, ಸೇತುವೆಗಳು ಮತ್ತು ಆಸ್ಪತ್ರೆಗಳ ನಿರ್ಮಾಣವನ್ನು ದೊಡ್ಡ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಹಿಂದಿನ ನಾಲ್ಕು ವರ್ಷಗಳಲ್ಲಿ ಹಣಕಾಸು ಮತ್ತು ಸಾಮಾಜಿಕ ಮೂಲರಚನೆಗಳ ಅಭಿವೃದ್ಧಿ ಎದ್ದು ಕಾಣುತ್ತಿರುವುದು ಕೆಐಐಎಫ್‌ಬಿ ಎತ್ತಿದ ನಿಧಿಗಳಿಂದಾಗಿ. ರಾಜ್ಯ ಸರಕಾರಗಳು ಸಾಲ ಎತ್ತುವುದಕ್ಕೆ ಕಠಿಣ ಮಿತಿಗಳಿರುವುದರಿಂದಾಗಿ ಮತ್ತು ಮೂಲರಚನೆ ಅಭಿವೃದ್ಧಿಗೆ ಕೇಂದ್ರ ಸರಕಾರದ ಹಣಕಾಸು ಬೆಂಬಲದ ಕೊರತೆಯಿಂದಾಗಿ ಕೇರಳ ಸರಕಾರ ಈ ವಿಧಾನವನ್ನು ಅನುಸರಿಸಬೇಕಾಗಿ ಬಂತು. ಸಿಎಜಿ ತನ್ನ ಅಂತಿಮ ವರದಿಯಲ್ಲಿ ಇರುವ ಒಂದು ವಿಭಾಗದಲ್ಲಿ ವಿದೇಶಗಳಲ್ಲಿ ಸಾಲಪತ್ರಗಳ ಮೂಲಕ ರಾಜ್ಯಗಳು ನಿಧಿಗಳನ್ನು ಸಂಗ್ರಹಿಸುವುದು ಅಸಂವಿಧಾನಿಕ  ಎಂದು ಹೇಳಲಾಗಿದೆ.

LDF nov 16-3ಎಂಟು ತಿಂಗಳ ದೀರ್ಘಕಾಲದವರೆಗೆ ನಡೆದ ಕೆಐಐಫ್‌ಬಿ ಯ ಲೆಕ್ಕ ಪರಿಶೋಧನೆಯಲ್ಲಿ ಅಲ್ ಕೌಂಟೆಂಟ್ ಜನರಲ್ ಎತ್ತಿದ ಎಲ್ಲ ೭೬ ಪ್ರಶ್ನೆಗಳಿಗೆ ವಿವರವಾದ ಉತ್ತರಗಳನ್ನು ನೀಡಲಾಯಿತು,  ಕೆಐಐಎಫ್‌ಬಿಯ ಪ್ರಾಜೆಕ್ಟ್ ಗಳ ಯಾವುದೇ ನಿಧಿ ನೀಡಿಕೆಯಲ್ಲಿ ಅನಿಯಮಿತತೆಗಳು ಕಂಡು ಬರಲಿಲ್ಲ. ದಿಲ್ಲಿಯಲ್ಲಿ ಕರಡು ವರದಿಗೆ  ಕೆಐಐಎಫ್‌ಬಿ ಎತ್ತಿದ ಸಾಲಗಳು ಅಸಂವಿಧಾನಿಕ ಎಂದು ಹೇಳುವ ನಾಲ್ಕು ಪುಟಗಳನ್ನು ಸೇರಿಸಲಾಯಿತು ಎಂಬ ಆಶ್ಚರ್ಯಕರ ಸಂಗತಿಯನ್ನು ಕೇರಳದ ಹಣಕಾಸು ಮಂತ್ರಿ ಥಾಮಸ್ ಐಸಾಕ್ ಹೊರಗೆಡಹಿದ್ದಾರೆ. ಈ ವಿಷಯವನ್ನು ಕುರಿತಂತೆ ಎಂದೂ ರಾಜ್ಯ ಸರಕಾರದ ಅಭಿಪ್ರಾಯಕ್ಕೆ ಅದರೊಡನೆ ಸಮಾಲೋಚನೆ ನಡೆಸಿಲ್ಲ ಎಂದು ಹಣಕಾಸು ಮಂತ್ರಿಗಳು ಒತ್ತಿ ಹೇಳಿದ್ದಾರೆ. ಕೆಐಐಎಫ್‌ಬಿ ಒಂದು ಕಾರ್ಪೊರೇಟ್ ಸಂಸ್ಥೆಯಾದ್ದರಿಂದ ಅದಕ್ಕೆ ಈಗಿರುವ ನಿಯಮಗಳ ಪ್ರಕಾರ ಸಾಲಗಳನ್ನು ಎತ್ತುವ ಹಕ್ಕು ಇದೆ ಎಂದೂ ಅವರು ಖಡಾಖಂಡಿತವಾಗಿ ಹೇಳಿದ್ದಾರೆ.

ಸಿಎಜಿ ವರದಿಯನ್ನು ಎಲ್‌ಡಿಎಫ್ ಸರಕಾರದ ವಿರುದ್ಧ ಒಂದು ಅಸ್ತ್ರವಾಗಿಸುವ ಪ್ರಯತ್ನದಲ್ಲಿ ಕಾಂಗ್ರೆಸ್-ಬಿಜೆಪಿಯ ಶಾಮೀಲು ಸ್ವಯಂವೇದ್ಯ. ಆರೆಸ್ಸೆಸ್ ಸಂಘಟನೆಯಾದ ಸ್ವದೇಶೀ ಜಾಗರಣ್ ಮಂಚ್(ಎಸ್‌ಜೆಎಂ) ಹೈಕೋರ್ಟಿನಲ್ಲಿ ಒಂದು ಅರ್ಜಿ ಸಲ್ಲಿಸಿ, ವಿದೇಶಗಳಲ್ಲಿ ಮಾರಿದ ಸಾಲಪತ್ರಗಳು ಕಾನೂನುಬಾಹಿರ ಎಂದು ಘೋಷಿಸಿ  ಈ ಮೂಲಕ ಕೆಐಐಎಫ್‌ಬಿ ಸಂಗ್ರಹಿಸಿದ ನಿಧಿಗಳನ್ನು ಸ್ಥಗಿತಗೊಳಿಸಬೇಕು ಎಂದು ಕೇಳಿದೆ. ಈ ಎಸ್‌ಜೆಎಂ ನ್ನು  ಪ್ರತಿನಿಧಿಸುವ ವಕೀಲ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮ್ಯಾಥ್ಯು ಕುಳಾಲನಾಡನ್. ಎಲ್‌ಡಿಎಫ್ ಸರಕಾರದ ಜನಪರ ಕಾರ್ಯಕ್ರಮಗಳನ್ನು ಮತ್ತು ಅಭಿವೃದ್ಧಿ ಪ್ರಯತ್ನಗಳನ್ನು ಛಿದ್ರಗೊಳಿಸುವ ಗ್ಯಾಂಗ್‌ ನಂತೆ ವರ್ತಿಸಲು ಬಿಜೆಪಿಗಾಗಲೀ, ಕಾಂಗ್ರೆಸ್‌ಗಾಗಲೀ ಯಾವುದೇ ಅಳುಕೂ ಇಲ್ಲ.

ಕೇರಳದಲ್ಲಿ ಸಿಪಿಐ(ಎಂ) ಮತ್ತು ಎಲ್‌ಡಿಎಫ್ ಈ ಪಿತೂರಿಗಳಿಗೆ ಇದಿರೇಟು ನೀಡಲು ಮತ್ತು ಅವುಗಳನ್ನು ಜನಗಳ ಮುಂದೆ ಬಯಲಿಗೆಳೆಯಲು ನಿರ್ಧಾರ ಮಾಡಿವೆ. ನವಂಬರ್ ೧೬ ರಂದು ರಾಜ್ಯಾದ್ಯಂತ ೨೫ ಲಕ್ಷ ಜನಗಳು ಪ್ರತಿಭಟನಾ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದರು. ಇವುಗಳಲ್ಲಿ ಜನಪರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಛಿದ್ರಗೊಳಿಸುವ ಕೇಂದ್ರೀಯ ಏಜೆನ್ಸಿಗಳ ಪ್ರಯತ್ನಗಳನ್ನು ಖಂಡಿಸಲಾಯಿತು.

ಕೇರಳ ಸ್ಥಳೀಯ ಸಂಸ್ಥೆಗಳಿಗೆ- ಮೂರು ಹಂತಗಳ ಪಂಚಾಯತುಗಳು, ನಗರ ಸಭೆಗಳು, ಮಹಾನಗರಸಭೆಗಳಿಗೆ ಚುನಾವಣೆಗಳು ಸಿದ್ಧಗೊಳ್ಳುತ್ತಿರುವಂತೆ, ಪೂರ್ಣ ಹುರುಪಿನಿಂದ ಕೂಡಿದ ಎಲ್‌ಡಿಎಫ್ ಪರವಾಗಿರುವ ರಾಜಕೀಯ ಅಣಿನೆರಿಕೆ, ಈ ಸಮಯಸಾಧಕ, ಛಿದ್ರಕಾರೀ ಕೂಟಗಳಿಗೆ ಒಂದು ತಕ್ಕ ಉತ್ತರವಾಗಲಿದೆ.

Leave a Reply

Your email address will not be published. Required fields are marked *