ಜನವಿರೋಧಿ ಕಾಯ್ದೆಗಳನ್ನು ವಾಪಾಸು ಪಡೆಯಲು ಮತ್ತು ಜನತೆಯ ಹಕ್ಕುಗಳನ್ನು ಪರಿಗಣಿಸಲು ಒತ್ತಾಯ

ಕಳೆದ ಪಾರ್ಲಿಮೆಂಟ್ ಅಧಿವೇಶನದಲ್ಲಿ ಪಾರ್ಲಿಮೆಂಟಿನ ಎಲ್ಲಾ ನೀತಿ ನಿಯಮಗಳನ್ನು ಗಾಳಿಗೆ ತೂರಿ, ವಿರೋಧ ಪಕ್ಷಗಳ ಹಾಗೂ ಮೈತ್ರಿ ಆಡಳಿತ ಪಕ್ಷದ ಮಂತ್ರಿಯೊಬ್ಬರ ರಾಜಿನಾಮೆ ಮತ್ತು ತೀವ್ರ ವಿರೋಧದ ನಡುವೆಯೂ ಬಲವಂತವಾಗಿ ಅಂಗೀಕರಿಸಿ ಪ್ರಕಟಿಸಿದ, ಕಾರ್ಪೋರೇಟ್ ಕಂಪನಿಗಳ ಲೂಟಿಗೆ ನೆರವಾಗುವ ಕಾರ್ಮಿಕ ವಿರೋಧಿ `ಕಾರ್ಮಿಕ ಸಂಹಿತೆಗಳು-2020‘ ಮತ್ತು ಪಾರಂಪರಿಕ ಕೃಷಿಕರ ನಾಶಕ `ಕಾರ್ಪೋರೇಟ್ ಕೃಷಿ ಕಾಯ್ದೆ-2020‘ ಗಳು ಮತ್ತು ದೇಶದ ಎಲ್ಲಾ ಗ್ರಾಹಕರ ಲೂಟಿಗೊಳಪಡಿಸುವ `ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ-2020‘ ಗಳನ್ನು ಮತ್ತು ವಿದ್ಯುತ್ ರಂಗದ ಖಾಸಗೀಕರಣದ ವಿದ್ಯುತ್ ಮಸೂದೆಯನ್ನು ತೀವ್ರವಾಗಿ ಪ್ರತಿರೋಧಿಸಿ, ಒಂದೆಡೆ ದೇಶದ ಬಹುತೇಕ ಎಲ್ಲಾ ಕಾರ್ಮಿಕರು ಹಾಗೂ ಇನ್ನೊಂದೆಡೆ ರೈತ ಅಥವಾ ಕೃಷಿಕ ಸಮುದಾಯಗಳು ಬೀದಿಗಿಳಿದು ಚಳುವಳಿ ನಡೆಸುತ್ತಿವೆ.

ರಾಜ್ಯ ಸರಕಾರಗಳು ಇವುಗಳನ್ನು ವಿರೋಧಿಸಿವೆ.

ಆದಾಗಲೂ, ಕೇಂದ್ರ ಸರಕಾರ ಅವುಗಳನ್ನು ಹಿಂಪಡೆಯದೇ ಕಾರ್ಪೋರೇಟ್ ಲೂಟಿಗೆ ನೆರವಾಗುವ ನೀತಿಯನ್ನು ಮುಂದುವರೆಸಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ.

ರಾಜ್ಯದ ಹಾಗೂ ದೇಶದ ದುಡಿಯುವ ಜನರ ಮತ್ತು ದೇಶದ ಹಿತ ರಕ್ಷಣೆಗಾಗಿ ನಡೆಯುವ ಈ ಚಳುವಳಿಯನ್ನು ನಾವು ಪೂರ್ಣವಾಗಿ ಬೆಂಬಲಿಸುತ್ತೇವೆ ಮತ್ತು ಇವುಗಳು ದೇಶದ ಸ್ವಾತಂತ್ರ‍್ಯ ಹಾಗೂ ಸ್ವಾವಲಂಬನೆ ಮತ್ತು ಸಾರ್ವಭೌಮತೆಗೆ, ಆಹಾರದ ಭದ್ರತೆಗೆ ತೀವ್ರ ಬೆದರಿಕೆಯಾಗಿದ್ದು ಅವುಗಳನ್ನು ಈ ಕೂಡಲೇ ಹಿಂಪಡೆಯಲು ಮರಳಿ ಒತ್ತಾಯಿಸುತ್ತೇವೆ.

ದೇಶ ಒಂದು ಗಂಭೀರವಾದ ಬಿಕ್ಕಟ್ಟನ್ನು ಎದುರಿಸುತ್ತಿರುವಾಗಲೇ, ಕೋವಿಡ್-19 ಸಾಂಕ್ರಾಮಿಕವು ದೇಶವನ್ನು ತೀವ್ರವಾಗಿ ಬಾಧಿಸಿದೆ. ಇದು ಮತ್ತು ಅದನ್ನು ಎದುರಿಸಲು ಪೂರ್ವ ಭಾವಿ ಯೋಜಿಸದೇ ಏಕಾಏಕಿಯಾಗಿ ಘೋಷಿಸಲಾದ ಲಾಕ್‌ಡೌನ್ ಗಳು ದೇಶವನ್ನು ಮತ್ತಷ್ಟು ಆಳವಾದ ಬಿಕ್ಕಟ್ಟಿಗೆ ದೂಡಿವೆ. ಸದರಿ ಆರ್ಥಿಕ ಬಿಕ್ಕಟ್ಟು ಮುಖ್ಜವಾಗಿ ಜನರ ಬಳಿ ಕೊಂಡುಕೊಳ್ಳುವ ಶಕ್ತಿಯ ಕೊರತೆಯಿಂದ ಮುಂದುವರೆಯುತ್ತಲಿದೆ. ಸಾಂಕ್ರಮಿಕದ ಕಾಲದಲ್ಲಿ ಜನತೆ ಮತ್ತಷ್ಠು ಆದಾಯದ ಕೊರತೆ ಮತ್ತು ನಿರುದ್ಯೋಗವನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಸದರಿ ಆರ್ಥಿಕ ಬಿಕ್ಕಟ್ಟು ನಿವಾರಣೆಗಾಗಿ ಮತ್ತು ಜನತೆಯ ಆರ್ಥಿಕ ಸಂಕಷ್ಟವನ್ನು ನಿವಾರಿಸಲು, ಆದಾಯ ತೆರಿಗೆ ವ್ಯಾಪ್ತಿಗೊಳಪಡದ ಎಲ್ಲ ಕುಟುಂಬಗಳಿಗೆ ಕನಿಷ್ಠ ಆರು ತಿಂಗಳ ಕಾಲ ಮಾಸಿಕ 7,500 ರೂ ಹಾಗೂ ತಲಾ 15 ಕೆಜಿ ಸಮಗ್ರ ಆಹಾರದ ಕಿಟ್ ಗಳನ್ನು, ಕೋವಿಡ್- 19 ರ ಸುರಕ್ಷತಾ ಅಗತ್ಯಗಳನ್ನು ಪೂರೈಸಬೇಕಾಗಿದೆ. ಅದೇ ರೀತಿ ನಗರ ಪ್ರದೇಶವೂ ಸೇರಿದಂತೆ ದೇಶದಾದ್ಯಂತ ರಾಷ್ಟ್ರೀಯ ಉದ್ಯೋಗ ಖಾತ್ರಿ ಕೆಲಸವನ್ನು 200 ದಿನಗಳಿಗೆ ವಿಸ್ಥರಿಸುವುದು ಮತ್ತು ಕನಿಷ್ಟ ಕೂಲಿಯನ್ನು 750 ರೂ ಗಳಿಗೆ ವಿಸ್ತರಿಸುವುದು ಅಗತ್ಯವಿದೆ. ಆದ್ದರಿಂದ, ಇವುಗಳಿಗೆ ಬೇಕಾದ ಅಗತ್ಯ ಬಜೆಟ್ ಹಾಗೂ ನೆರವನ್ನು ಘೋಷಿಸಲು ಒತ್ತಾಯಿಸುತ್ತೇವೆ.

ಅದೇ ರೀತಿ, ಕೋವಿಡ್-19ನ್ನು ಎದುರಿಸಲಿಕ್ಕಾಗಿ, ಒದಗಿಸಲು ಉದ್ದೇಶಿಸಿರುವ ವ್ಯಾಕ್ಸಿನ್ ನ್ನು ಉಚಿತವಾಗಿ ದೇಶದ ಎಲ್ಲಾ ನಾಗರಿಕರಿಗೆ ಕೇಂದ್ರ ಸರಕಾರವೇ ಒದಗಿಸುವಂತೆಯೂ ಈ ಮೂಲಕ ಒತ್ತಾಯಿಸುತ್ತೇವೆ.

ಯು. ಬಸವರಾಜ        ಸಾತಿ ಸುಂದರೇಶ್       ಶಿವಶಂಕರ್ ಜಿ.ಆರ್.            ಕ್ಲಿಪ್ಟನ್
ಕಾರ್ಯದರ್ಶಿ              ಕಾರ್ಯದರ್ಶಿ               ಕಾರ್ಯದರ್ಶಿ                ಕಾರ್ಯದರ್ಶಿ
ಸಿಪಿಐ(ಎಂ)                  ಸಿಪಿಐ                         ಎಫ್‌.ಬಿ.             ಸಿಪಿಐ(ಎಂ)ಲಿಬರೇಷನ್

Leave a Reply

Your email address will not be published. Required fields are marked *