ಕೃಷಿ ಕಾಯ್ದೆಗಳ ಶವಯಾತ್ರೆ ಪ್ರತಿಭಟನೆಗೆ ತಡೆ ಸಿಪಿಐ(ಎಂ) ಖಂಡನೆ

ರಾಷ್ಟ್ರಾದ್ಯಂತ ಕೃಷಿ ಕಾಯ್ದೆಗಳು ಕಾರ್ಮಿಕ ಸಂಹಿತೆಗಳ ರದ್ದತಿಗಾಗಿ ನಡೆದಿರುವ ಹೋರಾಟದ ಭಾಗವಾಗಿ ಮಾರ್ಚ್ 26 ರಂದು ಬೆಳಿಗ್ಗೆ ನಗರದ ಟೌನ್ ಹಾಲ್ ನಿಂದ ರೈತ ಕಾರ್ಮಿಕರ ಸಂಘಟನೆಗಳ ಸಂಯುಕ್ತ ಹೋರಾಟ ಕರ್ನಾಟಕ ನಡೆಸಲು ಉದ್ದೇಶಿಸಿದ್ದ ಕಾಯ್ದೆಗಳ ಶವಯಾತ್ರೆ ಪ್ರತಿಭಟನೆಗೆ ತಡೆ ಒಡ್ಡಿರುವ ರಾಜ್ಯ ಬಿಜೆಪಿ ಸರಕಾರದ ಕ್ರಮವನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಖಂಡಿಸಿವೆ.

ಶವಯಾತ್ರೆ ಪ್ರತಿಭಟನೆಗೆ ಅವಕಾಶ ನೀಡದೆ ಪ್ರತಭಟನಾಕಾರರನ್ನು ಬಂಧಿಸಿರುವ ಬಿಜೆಪಿ ರಾಜ್ಯ ಸರಕಾರದ ಕ್ರಮವು ಖಂಡನೀಯ. ಪ್ರತಿಭಟನೆ ಮಾಡುವುದು ಭಾರತದ ಪ್ರಜೆಗಳ ಸಂವಿಧಾನದತ್ತ ಹಕ್ಕು ಅಂತಹ ಹಕ್ಕನ್ನು ಮೊಟಕುಗೊಳಿಸುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ. ಅಂತಹ ಕ್ರಮಕ್ಕೆ ಪ್ರಜಾಪ್ರಭುತ್ವ ವಿರೋಧಿ ಬಿಜೆಪಿ ರಾಜ್ಯ ಸರಕಾರವು ಮುಂದಾಗಿದೆ. ಕನಿಷ್ಠ ಪ್ರತಿಭಟನೆಗೂ ಅವಕಾಶ ನೀಡದ ಸರ್ವಾಧಿಕಾರಿ ಧೋರಣೆಯನ್ನು ಬಿಜೆಪಿ ರಾಜ್ಯ ಸರಕಾರವು ಮುಂದಾಗಿರುವುದನ್ನು ಸಿಪಿಐ(ಎಂ) ಖಂಡಿಸಿದೆ.

ಪ್ರಜಾಪ್ರಭುತ್ವ ರೀತಿಯಲ್ಲಿ ರೈತ ಪಂಚಾಯ್ತಿಯಲ್ಲಿ ಭಾಗವಹಿಸಿದ್ದ ರೈತ ನಾಯಕರಾದ ರಾಕೇಶ್ ಟಿಕಾಯತ್ ವಿರುದ್ಧ ಮೊಕದ್ದಮೆ ದಾಖಲಿಸಿರುವ ಬಿಜೆಪಿ ರಾಜ್ಯ ಸರಕಾರವು ಅದರ ಮುಂದುವರಿದ ಭಾಗವಾಗಿ ಪ್ರತಿಭಟನೆಗೆ ತಡೆ ಒಡ್ಡುವ ಪ್ರಜಾಪ್ರಭುತ್ವ ವಿರೋಧಿ ಕ್ರಮಕ್ಕೆ ಮುಂದಾಗಿದೆ.

ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದಲ್ಲಿ ಸಂತ್ರಸ್ತ ಯುವತಿಯ ದೂರಿನ ಮೇರೆಗೆ ಕೇಸ್ ದಾಖಲಿಸದ, ಆ ಯುವತಿ ಮತ್ತವರ ಕುಟುಂಬಕ್ಕೆ ರಕ್ಷಣೆ ನೀಡಲಾಗದ, ಆಕೆಯನ್ನು ಪತ್ತೆ ಹಚ್ಚಲು ವಿಫಲವಾಗಿರುವ ರಾಜ್ಯ ಬಿಜೆಪಿ ಸರಕಾರವು ಶಾಂತಿಯುತ ರೈತ ಕಾರ್ಮಿಕ ಹೋರಾಟಗಾರರನ್ನು ಬಂಧಿಸಿ ಹೋರಾಟಕ್ಕೆ ತಡೆ ಹೊಡ್ಡಿರುವ ಕ್ರಮವು, ಪ್ರಜಾಪ್ರಭುತ್ವ ಹಕ್ಕುಗಳನ್ನು ಸಂರಕ್ಷಿಸುವಲ್ಲಿ ಬಿಜೆಪಿ ರಾಜ್ಯ ಸಕಾ೯ರದ ವೈಫಲ್ಯವನ್ನು ತೋರುತ್ತದೆ ಎಂದು ಸಿಪಿಐ(ಎಂ) ಖಂಡಿಸಿದೆ.

ಕೆ. ಎನ್. ಉಮೇಶ್
ಕಾರ್ಯದರ್ಶಿ, ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ.

ಎನ್.ಪ್ರತಾಪ್ ಸಿಂಹ
ಕಾರ್ಯದರ್ಶಿ, ಸಿಪಿಐ(ಎಂ)ಬೆಂಗಳೂರು ಉತ್ತರ ಜಿಲ್ಲಾ ಸಮಿತಿ.

Leave a Reply

Your email address will not be published. Required fields are marked *