ವಿದ್ಯುತ್ ಖಾಸಗೀಕರಣದಿಂದ ರೈತರಿಗೆ ದೊಡ್ಡ ಸಂಕಷ್ಟ-ಯು. ಬಸವರಾಜು

Electricity

ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಕೈಗಾರಿಕೆಗಳು ಮುಚ್ಚಿ ಹೋಗುತ್ತಿವೆ. ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ರೈತರು ಸಾಲಗಾರರಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ನಡುವೆ ಪ್ರಾಕೃತಿಕ ವಿಕೋಪ, ಕೋವಿಡ್-19ದ ನಡುವೆ ಜನರಿಗೆ ರಕ್ಷಣೆ ನೀಡಬೇಕಾದ ಕೇಂದ್ರ, ರಾಜ್ಯ ಸರ್ಕಾರಗಳು ಹೊಸ ಸಂಕಷ್ಟಗಳನ್ನು ಜನರ ಮೇಲೆ ಹೇರುವ ಕೆಲಸ ಮಾಡುತ್ತಿವೆ.

ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರಕಾರಗಳು, ಲೂಟಿಕೋರ ಕಾರ್ಪೋರೇಟ್ ಕಂಪನಿಗಳಿಗೆ ದೇಶ ಹಾಗೂ ರಾಜ್ಯವನ್ನು ತೆರೆದು ಲೂಟಿಗೊಳಪಡಿಸುವ ದುರುದ್ದೇಶದಿಂದಲೇ ಜಾರಿಗೊಳಪಡಿಸುವ, ರೈತ ವಿರೋಧಿಯಾದ, ಒಪ್ಪಂದ ಕೃಷಿ ಕಾಯ್ದೆ, ವಿದ್ಯುತ್ ರಂಗವನ್ನು ಖಾಸಗೀಕರಣ ಮಾಡುವ ವಿದ್ಯುತ್ ತಿದ್ದುಪಡಿ ಮಸೂದೆ, ಏಪಿಎಂಸಿ ತಿದ್ದುಪಡಿ ಕಾಯ್ದೆ, ಭೂಸುಧಾರಣಾ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ, ಒಟ್ಟು ಐದು ಕೃಷಿ ಕಾಯ್ದೆಗಳನ್ನು ಮತ್ತು ಕಾರ್ಮಿಕ ವಿರೋಧಿಯಾದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಾಗೂ ದೇಶದ ಗ್ರಾಹಕರನ್ನು ಲೂಟಿಗೊಳಪಡಿಸುವ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಗಳನ್ನು ತಕ್ಷಣವೇ ವಾಪಾಸು ಪಡೆಯಬೇಕೆಂದು ಮತ್ತು ಸಾರ್ವಜನಿಕ ರಂಗದ ಉದ್ದಿಮೆಗಳಾದ ಬ್ಯಾಂಕ್, ವಿಮೆ, ಬಿಎಸ್‌ಎನ್‌ಎಲ್, ವಿಮಾನ, ರೈಲ್ವೇ, ಸಮುದ್ರ ಸಾರಿಗೆ, ಮುಂತಾದವುಗಳ ಮಾರಾಟವನ್ನು ಕೂಡಲೇ ನಿಲ್ಲಿಸಬೇಕು, ಇದು ದೇಶದ ಸ್ವಾತಂತ್ರ‍್ಯವನ್ನು ಮರಳಿ ಕಾರ್ಪೊರೇಟ್ ಕಂಪನಿಗಳಿಗೆ ಒತ್ತೆ ಇಡುವ ದುಷ್ಠತನವಾಗಿದೆಯೆಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜು ರವರು ಖಂಡಿಸಿದರು.

ಕಳೆದ ಐದಾರು ತಿಂಗಳಿಂದ ಈ ಕುರಿತಂತೆ ರೈತರು, ಕಾರ್ಮಿಕರು ತೀವ್ರ ರೀತಿಯ ಚಳುವಳಿಯನ್ನು ನಡೆಸುತ್ತಿದ್ದಾರೆ. ದೆಹಲಿ ಸುತ್ತ – ಮುತ್ತ ಲಕ್ಷಾಂತರ ರೈತ ಕುಟುಂಬಗಳು ಕಳೆದ 110 ಕ್ಕೂ ಹೆಚ್ಚು ದಿನಗಳಿಂದ ಅನಿರ್ಧಿಷ್ಠ ಸಾಮೂಹಿಕ ಪ್ರತಿಭಟನಾ ಧರಣಿಯಲ್ಲಿ ತೊಡಗಿದ್ದಾರೆ. ಆದಾಗಲೂ ಕೇಂದ್ರ ಸರಕಾರ ರೈತರನ್ನು ಓಡಿಸುವ ದಮನಕಾರಿ ನೀತಿಯನ್ನು ಅನುಸರಿಸುತ್ತಿದೆಯೇ ಹೊರತು ಅವರ ಕೋರಿಕೆಯನ್ನು ಪರಿಗಣಿಸುತ್ತಿಲ್ಲ. ಅದೇ ರೀತಿ, ರಾಜ್ಯದ ರೈತ- ಕಾರ್ಮಿಕರ ತೀವ್ರ ತರದ ಚಳುವಳಿಗೆ ಯಾವುದೇ ಬೆಲೆಯನ್ನು ನೀಡುತ್ತಿಲ್ಲವೆಂದು ಸರಕಾರಗಳ ನಿರ್ಲಕ್ಷ್ಯವನ್ನು ಸಿಐಟಿಯು ರಾಜ್ಯ ಮುಖಂಡ ಪರಮೇಶ್ವರ ಖಂಡಿಸಿದರು.

ರೈತರ ಕುರಿತು ಅನುಸರಿಸುವ ಗೋಸುಂಬೆ ನೀತಿಯನ್ನು ಕೈಬಿಟ್ಟು, ಬೆಲೆಗಳ ಏರಿಳಿತ ಮಾಡಿ ಕೃಷಿಕರನ್ನು ಉತ್ಪನ್ನಗಳನ್ನು ಲೂಟಿಗೊಳಪಡಿಸುವ ಕಾರ್ಪೋರೇಟ್ ಹಾಗೂ ಸಗಟು ವ್ಯಾಪಾರವನ್ನು ನಿಯಂತ್ರಿಸಲು ಕೃಷಿ ಆಯೋಗದ ಅಧ್ಯಕ್ಷರಾಗಿದ್ದ ಡಾ.ಎಂ.ಎಸ್ ಸ್ವಾಮಿನಾಥನ್ ಸಲಹೆಯಂತೆ ವೈಜ್ಞಾನಿಕವಾಗಿ ಕನಿಷ್ಠ ಬೆಂಬಲ ಬೆಲೆ ನಿಗದಿಸಿ ಅದು ರೈತರಿಗೆ ಖಾತರಿಯಾಗಿ ದೊರೆಯುವಂತೆ ಕನಿಷ್ಟ ಬೆಂಬಲ ಬೆಲೆ ಖಾತರಿ ಕಾಯ್ದೆಯನ್ನು ಜಾರಿಗೊಳಿಸುವಂತೆ ಮತ್ತು ಸಾರ್ವಜನಿಕ ರಂಗದ ಸಾಲ ಅಗತ್ಯದಷ್ಠು ದೊರೆಯುವಂತೆ ಮಾಡುವ ಮತ್ತು ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಫಸಲಿಗೆ ಹಾಗೂ ಉದ್ಯೋಗಕ್ಕೆ ನಷ್ಟ ಉಂಟಾದಾಗ ಸಾಲಮನ್ನಾ ಮಾಡುವಂತಹ ಕೇರಳ ಮಾದರಿಯಲ್ಲಿ ಋಣ ಮುಕ್ತ ಕಾಯ್ದೆಯನ್ನು ಜಾರಿಗೊಳಿಸುವಂತೆ ಸಿಪಿಐ(ಎಂ) ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣಶೆಟ್ಟಿ ಹೇಳಿದರು.

ಮುಖ್ಯಮಂತ್ರಿ ಯಡೆಯೂರಪ್ಪನವರು ಅಕ್ರಮವಾಗಿ ಜಾರಿಗೊಳಿಸುತ್ತಿರುವ ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಗೆ ಜಾನುವಾರು ಹಿತ ರಕ್ಷಣೆಯ ಯಾವುದೇ ಉದ್ದೇಶವಿರುವುದಿಲ್ಲ, ಬದಲಿಗೆ ಕೃಷಿಕರ ಉಪಕಸುಬನ್ನು ಅಪಹರಿಸಿ, ಹೈನುಗಾರಿಕೆ ಮತ್ತು ಜಾನುವಾರು ಆಧಾರಿತ ಹೈನು, ಮಾಂಸ, ಚರ್ಮ ಹಾಗೂ ಔಷಧಿ ಉದ್ಯಮಗಳನ್ನು ಕಾರ್ಪೋರೇಟ್ ಕಂಪನಿಗಳ ಲೂಟಿಗೆ ತೆರೆಯುವ ಮತ್ತು ಜನತೆಯನ್ನು ಒಡೆದಾಳುವ ಹಾಗೂ ಜನತೆಯ ಆಹಾರದ ಉದ್ಯೋಗದ ಮತ್ತು ಬದುಕುವ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದಮನ ಮಾಡುವ ದುರುದ್ದೇಶವಿದೆಯೆಂದು ಸಿಪಿಐ(ಎಂ) ಮುಖಂಡರಾದ ಕೆ. ಶಂಕರ್ ಕಟುವಾಗಿ ಠೀಕಿಸಿದರು.

ಕೋವಿಡ್ – 19 ರ ಸಂಕಷ್ಠದಿಂದ ಜನರ ರಕ್ಷಣೆಗೆ ಕ್ರಮವಹಿಸಲು ಸಿಪಿಐ(ಎಂ) ಒತ್ತಾಯ

ರಾಜ್ಯದಲ್ಲಿ ಮಾರ್ಪಾಟುಗೊಳ್ಳುತ್ತಿರುವ ಕೋವಿಡ್ – 19 ರ ವೈರಾಣುವಿನಿಂದ ರಕ್ಷಿಸಲು ನಿಜ ಕಾಳಜಿಯನ್ನು ತೋರಿಸುವಂತೆ ಮುಖ್ಯಮಂತ್ರಿಗಳನ್ನು ಸಿಪಿಐ(ಎಂ) ಬಲವಾಗಿ ಒತ್ತಾಯಿಸಿದೆ.

ಬರೀ ಮಾರ್ಗ ಸೂಚಿಗಳಿಂದ ಬಾಯಿಪ್ರಚಾರದ ಮಾತುಗಳಿಂದ ಅದನ್ನು ತಡೆಯಲು ಮತ್ತು ಜನತೆಯನ್ನು ಹಾಗೂ ರಾಜ್ಯವನ್ನು ಆರ್ಥಿಕ ಸಂಕಷ್ಠದಿಂದ ರಕ್ಷಿಸಲು ಸಾಧ್ಯವಿಲ್ಲ. ಅದಕ್ಕಾಗಿ ಅಗತ್ಯ ನೆರವನ್ನು ಘೋಷಿಸಬೇಕೆಂದು ಒತ್ತಾಯಿಸುತ್ತದೆ.

ತಾವು ಖಾಸಗೀ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಒದಗಿಸಲು ನಿರ್ಧರಿಸುವ ವೇಳೆಗೆ ಹಲವಾರು ವೈರಾಣು ಬಾಧಿತರು ಸರಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು, ವೆಂಟಿಲೇಟರ್‌ಗಳು ಇಲ್ಲದೇ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ ಮತ್ತು ಖಾಸಗೀ ಆಸ್ಪತ್ರೆಗಳ ಲಕ್ಷಾಂತರ ರೂಗಳ ಲೂಟಿಗೆ ಒಳಗಾಗಿದ್ದಾರೆ. ದೈಹಿಕ ಅಂತರ ಕಾಯ್ದುಕೊಳ್ಳಲು ಹೇಳುತ್ತಾರೆ, ಸಾರಿಗೆ ವಾಹನಗಳಲ್ಲಿ ಕುರಿಗಳಂತೆ ತುಂಬುತ್ತಾರೆ. ಜನತೆ ದುಡಿಯುವ ಪ್ರದೇಶಗಳಲ್ಲಿ ಸುರಕ್ಷತೆಯ ಕುರಿತಂತೆ ಆತಂಕಿತರಾಗಿದ್ದಾರೆ. ಮಕ್ಕಳಿಗೆ ಶಿಕ್ಷಣದ ಮೂಲಕ ಸಿಗುತ್ತಿದ್ದ ನೆರವು ಸಿಗುತ್ತಿಲ್ಲ.

ಸಿಪಿಐ(ಎಂ) ಕಳೆದ ವರ್ಷದಿಂದಲೇ ಅದಾಯ ತೆರಿಗೆ ವ್ಯಾಪ್ತಿಗೆ ಬಾರದ, ಪ್ರತಿ ಕುಟುಂಬದ ತಲಾ ವ್ಯಕ್ತಿಗೆ 10 ಕೇಜಿ ಆಹಾರ ಧಾನ್ಯ ಮತ್ತು ಮಾಸಿಕ 7,500 ರೂ ನೆರವು ನೀಡಬೇಕೆಂಬ ಒತ್ತಾಯವನ್ನು ಪರಿಗಣಿಸದೇ ಜನತೆಯನ್ನು ಸಂಕಷ್ಠಕ್ಕೆ ದೂಡಿದೆ. ಈಗಲಾದರೂ, ಕಾರ್ಪೋರೇಟ್ ಕಂಪನಿಗಳ ಲೂಟಿಗೆ ನೆರವಾಗುವುದನ್ನು ನಿಲ್ಲಿಸಿ, ಜನತೆಗೆ ನೆರವಾಗುವಂತೆ ಸಿಪಿಐ(ಎಂ) ಒತ್ತಾಯಿಸುತ್ತದೆ.

Leave a Reply

Your email address will not be published. Required fields are marked *