ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ ಎಂದು ಬಿಂಬಿಸಲು ಪರೀಕ್ಷೆಗಳನ್ನು ದಿನಂಪ್ರತಿ ಕಡಿಮೆ ಮಾಡುತ್ತಿರುವುದು ಅನಾಹುತಕಾರಿಯಾಗಲಿದೆ. ಆದಕಾರಣ ಪರೀಕ್ಷೆ ಪ್ರಮಾಣ ಹೆಚ್ಚಿಸಿ ಸೋಂಕಿತರ ಶೀಘ್ರ ಪತ್ತೆಗೆ ಅನುಗೊಳಿಸಲು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಒತ್ತಾಯಿಸಿದೆ.
ಹಲವೆಡೆ ರೋಗ ಲಕ್ಷಣ ಇದೆ ಎಂದು ಸರ್ಕಾರಿ ಆಸ್ಪತ್ರೆಗೆ ಹೋಗುವ ರೋಗಿಗಳಿಗೆ ಪರೀಕ್ಷೆ ಮಾಡದೆ ಮಾತ್ರೆ ನೀಡಿ 4 ದಿನ ಬಿಟ್ಟು ಬರಲು ಹೇಳಲಾಗುತ್ತಿದೆ. ಇದರಿಂದಾಗಿ ಸೋಂಕು ಹರಡಲು ಸರ್ಕಾರವೇ ಅನುಗೊಳಿಸಿದಂತಾಗಿದೆ.
ರಾಜ್ಯ ಸರ್ಕಾರವೇ ಪರೀಕ್ಷೆ ಕಡಿಮೆ ಮಾಡಲು ಹೇಳಿದೆ ಎಂಬುದಂತೂ ಅಕ್ಷಮ್ಯ ಎಂದು ಸಿಪಿಐ(ಎಂ) ಖಂಡಿಸಿದೆ.
ಬಿಬಿಎಂಪಿಯಲ್ಲಿ ಪರೀಕ್ಷಾ ಕೀಟ್ಗಳ ಕೊರತೆಯಿಲ್ಲಾ ಎಂದು ಮುಖ್ಯ ಆಯುಕ್ತರು ಹೇಳುವಾಗ ಪರೀಕ್ಷೆಗಳ ಪ್ರಮಾಣ ಏಕೆ ಇಳಿಮುಖವಾಗಿದೆ ಎಂಬುದು ಜನತೆಯ ಪ್ರಶ್ನೆಯಾಗಿದೆ. ಕೋವಿಡ್ ಸೋಂಕಿಗೆ ಇರುವ ಪರಿಹಾರ ಎಂದರೆ ಶೀಘ್ರ ಪತ್ತೆ, ಶೀಘ್ರ ಆರೈಕೆ, ಮನೆಯಲ್ಲೆ ಪ್ರತ್ಯೇಕ ವಾಸ ಎಂಬುದನ್ನು ಸರ್ಕಾರವೇ ಹೇಳಿ ಪರೀಕ್ಷೆ ಪ್ರಮಾಣ ಕಡಿಮೆ ಮಾಡುತ್ತಿರುವುದು ಜನತೆಗೆ ರಾಜ್ಯ ಬಿಜೆಪಿ ಸರ್ಕಾರವು ಮಾಡುವ ದ್ರೋಹವಾಗಿದೆ ಜನತೆಯ ಮತ್ತಷ್ಟು ಸಾವು ನೋವಿಗೆ ಕಾರಣವಾಗಲಿದೆ ಎಂಬುದು ಸಿಪಿಐ(ಎಂ) ಪಕ್ಷದ ಅಭಿಪ್ರಾಯ.