ರಾಜ್ಯದ ಜನತೆಯ ಜೀವ ಉಳಿಸಲು ಮತ್ತು ಪರಿಹಾರ ಒದಗಿಸುವಂತೆ ಒತ್ತಾಯಿಸುವ ಮನವಿ

ರಾಜ್ಯದ ಜನತೆಯ ಜೀವ ಉಳಿಸಲು ಮತ್ತು ಪರಿಹಾರ ಒದಗಿಸುವಂತೆ ಒತ್ತಾಯಿಸಿ ಸಿಪಿಐ(ಎಂ), ಸಿಪಿಐ, ಎಸ್‌ಯುಸಿಐ(ಸಿ), ಸಿಪಿಐ(ಎಂಎಲ್‌) ಲಿಬರೇಷನ್‌, ಎಐಎಫ್‌ಬಿ, ಆರ್‌ಪಿಐ, ಸ್ವರಾಜ್‌ ಇಂಡಿಯಾ ಪಕ್ಷಗಳ ರಾಜ್ಯ ಘಟಕಗಳ ವತಿಯಿಂದ ಜಂಟಿಯಾಗಿ ಹಮ್ಮಿಕೊಂಡಿದ್ದ ಪ್ರತಿಭಟನೆ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದ ಪೂರ್ಣ ವಿವರ ಕೆಳಗಿನಂತಿವೆ:

ದಿನಾಂಕ : 01.06.2021

ಇವರಿಗೆ ,
ಶ್ರೀ ಬಿ ಎಸ್ ಯಡಿಯೂರಪ್ಪರವರು,
ಮುಖ್ಯಮಂತ್ರಿಗಳು,
ಕರ್ನಾಟಕ ಸರಕಾರ,
ವಿಧಾನ ಸೌಧ, ಬೆಂಗಳೂರು.

ಮಾನ್ಯರೇ ,

ವಿಷಯ : ರಾಜ್ಯದ ಜನತೆಯ ಜೀವ ಉಳಿಸಲು ಮತ್ತು ಪರಿಹಾರ ಒದಗಿಸುವಂತೆ ಒತ್ತಾಯಿಸುವ ಮನವಿ

ಉಲ್ಲೇಖ : ನಮ್ಮ ಮನವಿ ದಿನಾಂಕ  ಮೇ 05, 2021

ಮೇಲ್ಕಂಡ ವಿಷಯಕ್ಕೆ ಸಂಬಂದಿಸಿ ನಮ್ಮ ಎಲ್ಲಾ ಏಳು ಪಕ್ಷಗಳು ಉಲ್ಲೇಖದ ಪತ್ರದಂತೆ ರಾಜ್ಯದಲ್ಲಿ ಕೋವಿಡ್ ದುಸ್ಥಿತಿಯನ್ನು ಎದುರಿಸಲು ರಾಜ್ಯ ಸರಕಾರ ಕೈಗೊಳ್ಳಬೇಕಾದ ಕ್ರಮಗಳನ್ನು ವಿವರಿಸಿದ್ದೆವು. ಆದರೇ ತಮ್ಮ ಸರಕಾರ, ನಮ್ಮ ಹಾಗೂ ಜನತೆಯ ಒತ್ತಾಯಗಳನ್ನು ಈಗಲೂ ಗಂಭೀರವಾಗಿ ಪರಿಗಣಿಸದೇ ಇರುವುದು ಮತ್ತು ಅಗತ್ಯ ಕ್ರಮವಹಿಸುವಲ್ಲಿ ಉದಾಸೀನದಿಂದಿರುವುದು ಮತ್ತು ಜನತೆ ಸಂಕಷ್ಠದಲ್ಲಿರುವಾಗಲೇ, ಜನತೆಯ ತೀವ್ರ ವಿರೋಧದ ನಡುವೆ, ಮರೆ ಮೋಸದ ಮೂಲಕ ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರವಾದ ನೀತಿಗಳನ್ನು  ಜಾರಿಗೊಳಿಸುತ್ತಿರುವುದು ತೀವ್ರ ಖಂಡನೀಯವಾಗಿದೆ.

ತಾವು ಪ್ರಕಟಿಸಿದ ಕೋವಿಡ್ ಪರಿಹಾರವು ಸಂಕಷ್ಟದಲ್ಲಿರುವ ಜನತೆಯನ್ನು ಅಣಕಿಸಿದಂತೆ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಪಕ್ಷಗಳು, ಸರಕಾರದ ಕೊಲೆಪಾತಕ ನಿರ್ಲಕ್ಷ್ಯವನ್ನು ಮತ್ತು ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರವಾದ ನೀತಿಗಳನ್ನು ಪ್ರತಿರೋಧಿಸಿ ರಾಜ್ಯದಾದ್ಯಂತ ಈ ದಿನ ಊರೂರುಗಳಲ್ಲಿ ಮತ್ತು ಮನೆ ಮನೆಗಳಲ್ಲಿ ಅಗತ್ಯ ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ಪ್ರತಿಭಟನೆ ನಡೆಸಿ, ಉಲ್ಲೇಖಿತ ಪತ್ರದ ಹಕ್ಕೊತ್ತಾಯಗಳು ಮತ್ತು ಈ ಕೆಳಕಂಡ ಹಕ್ಕೊತ್ತಾಯಗಳನ್ನು ಪರಿಗಣಿಸುವಂತೆ ಮರಳಿ ಒತ್ತಾಯಿಸುವೆವು.

ಹಕ್ಕೊತ್ತಾಯಗಳು :

  1. ರಾಜ್ಯದ ಎಲ್ಲಾ 18 ವರ್ಷ ಮೇಲ್ಪಟ್ಟ ಜನತೆಗೆ ಉಚಿತ ಸಾರ್ವತ್ರಿಕ ಲಸಿಕೀಕರಣಕ್ಕೆ ವಿಳಂಬಿಸದೇ ತಕ್ಷಣವೇ ಕ್ರಮವಹಿಸಬೇಕು.
  2. ಆದಾಯ ತೆರಿಗೆ ವ್ಯಾಪ್ತಿಗೊಳಪಡದ ಎಲ್ಲಾ ಕುಟುಂಬಗಳಿಗೆ ಮಾಸಿಕ ತಲಾ 10 ಕೇಜಿ ಸಮಗ್ರ ಆಹಾರಧಾನ್ಯಗಳ ಮತ್ತು ಆರೋಗ್ಯ ಸುರಕ್ಷತಾ ಸಾಮಗ್ರಿಗಳಿರುವ ಪೊಟ್ಟಣವನ್ನು ಮತ್ತು 10 ಸಾವಿರ ರೂಪಾಯಿಗಳ ನೆರವನ್ನು ಕೋವಿಡ್ ಸಮಸ್ಯೆ ನಿಯಂತ್ರಣಕ್ಕೆ ಬಂದು ಯಥಾ ಸ್ಥಿತಿ ಮುಂದುವರೆಯುವವರೆಗೆ ನೀಡಬೇಕು. ಪ್ರತಿ ಗ್ರಾಮ/ ನಗರಗಳ ದಲಿತರು ಮತ್ತು ಬಡವರು ಕಾರ್ಯನಿರ್ವಹಿಸುವ ಪ್ರದೇಶಗಳಲ್ಲಿ ಇಂದಿರಾ ಕ್ಯಾಂಟೀನ್ ಗಳನ್ನು ವಿಸ್ತರಿಸಬೇಕು ಮತ್ತು ಅವುಗಳನ್ನು ಬಲಗೊಳಿಸಬೇಕು.
  3. ಹೊಲಗಳಲ್ಲಿಯೇ ಕೊಳೆತು ಹೋದ ಹೂ, ಹಣ್ಣು, ಆಲುಗಡ್ಡೆ, ಈರುಳ್ಳಿ ಮುಂತಾದ ವಿವಿಧ ತರಕಾರಿ ಬೆಳೆಗಳಿಗೆ ತಲಾ ಎಕರೆಗೆ ಕನಿಷ್ಠ 25,000 ರೂಪಾಯಿಗಳನ್ನು ಒದಗಿಸಬೇಕು ಮತ್ತು ರಾಜ್ಯದ ಎಲ್ಲಾ ರೈತರು, ಕೂಲಿಕಾರರು, ಕಾರ್ಮಿಕರು, ಕಸುಬುದಾರರು, ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಎಲ್ಲ ರೀತಿಯ ಸಾಲಗಳನ್ನು ಒಂದು ಬಾರಿ ಕೇರಳದ ಋಣ ಮುಕ್ತ ಕಾಯ್ದೆ ಮಾದರಿಯಲ್ಲಿ ಮನ್ನಾ ಮಾಡಬೇಕು.
  4. ಕೇಂದ್ರ  ಸರಕಾರ ಜಾರಿಗೆ ತರುತ್ತಿರುವ ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರವಾದ ರೈತ ಹಾಗೂ ಕಾರ್ಮಿಕರ ಮತ್ತು ಗ್ರಾಹಕರ ವಿರೋಧಿಗಳಾದ ತಿದ್ದುಪಡಿ ಕೃಷಿ ಕಾಯ್ದೆಗಳು ಹಾಗೂ ಕಾರ್ಮಿಕ ಸಂಹಿತೆಗಳು, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ-2020, ವಿದ್ಯುತ್ ತಿದ್ದುಪಡಿ ಮಸೂದೆ-2020 ಹಾಗೂ ರಾಜ್ಯ ಸರಕಾರದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ-2020, ಎಪಿಎಂಸಿ ತಿದ್ದುಪಡಿ ಕಾಯ್ದೆ-2020, ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ-2020 ಇವುಗಳನ್ನು ತಕ್ಷಣವೇ ವಾಪಾಸು ಪಡೆಯಬೇಕು. ಅದೇ ರೀತಿ ಸಾರ್ವಜನಿಕ ರಂಗದ ಉದ್ದಿಮೆಗಳು ಮತ್ತು ಸಂಸ್ಥೆಗಳ ಖಾಸಗೀಕರಣವನ್ನು ತಡೆಯಬೇಕು.
  5. ಕನಿಷ್ಟ ಬೆಂಬಲ ಬೆಲೆಯ ಖಾತ್ರಿಪಡಿಸಲು ಬೆಂಬಲ ಬೆಲೆ ಕಾಯ್ದೆ ಮತ್ತು ಪ್ರಕೃತಿ ವಿಕೋಪಗಳಿಂದ  ರೈತರ ಸಂರಕ್ಷಣೆಗೆ ಋಣ ಮುಕ್ತ ಕಾಯ್ದೆಗಳನ್ನು ಜಾರಿಗೊಳಿಸಬೇಕು.
  6. ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಗಳಿಗೂ ಹಾಗೂ 200 ದಿನಗಳಿಗೆ ವಿಸ್ತರಿಸಬೇಕು. ಕೂಲಿಯನ್ನು  ವೇತನದಂತೆ ಈ ಕೂಡಲೇ 424 ರೂ.ಗಳಿಗೆ ಹೆಚ್ಚಿಸಬೇಕು.
  7. ಕೋವಿಡ್ ಮುಂಚೂಣಿಯ ಎಲ್ಲಾ ಕಾರ್ಯಕರ್ತರಿಗೆ ವಿಮೆ ಸೌಲಭ್ಯಗಳೊಂದಿಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಮಸಣ ಕೆಲಸಗಾರರು, ಮುನಿಸಿಪಲ್ ಕೆಲಸಗಾರರು ಮುಂತಾದ ಶುಚಿ ಕಾರ್ಯದಲ್ಲಿ ತೊಡಗಿದವರಿಗೂ ಸೌಲಭ್ಯಗಳನ್ನು ವಿಸ್ತರಿಸಬೇಕು.

ಇಂತಿ

ಯು. ಬಸವರಾಜ, ರಾಜ್ಯ ಕಾರ್ಯದರ್ಶಿ ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸ್‌ವಾದಿ)-ಸಿಪಿಐ(ಎಂ)

ಸಾತಿ ಸುಂದರೇಶ್, ರಾಜ್ಯ ಕಾರ್ಯದರ್ಶಿ ಭಾರತ ಕಮ್ಯುನಿಸ್ಟ್ ಪಕ್ಷ-ಸಿಪಿಐ(ಎಂ)

ಕೆ‌. ಉಮಾ, ಕಾರ್ಯದರ್ಶಿ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯ(ಕಮ್ಯುನಿಸ್ಟ್‌)-ಎಸ್‌ಯುಸಿಐ(ಸಿ)

ಕ್ಲಿಫ್ಟನ್ ರೋಜಾರಿಯೋ ಜಿ ಬಿ, ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ, ಲೆನಿನ್‌ವಾದಿ-ಲಿಬರೇಷನ್)-ಸಿಪಿಐ(ಎಂಎಲ್‌) ಲಿಬರೇಷನ್‌

ಜಿ.ಆರ್. ಶಿವಶಂಕರ್, ಕಾರ್ಯದರ್ಶಿ, ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್-ಎಐಎಫ್‌ಬಿ

ಮೋಹನ್ ರಾಜ್, ಅಧ್ಯಕ್ಷರು, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ-ಆರ್‌ಪಿಐ

ಚಾಮರಸ ಮಾಲೀ ಪಾಟೀಲ, ಅಧ್ಯಕ್ಷರು, ಸ್ವರಾಜ್ ಇಂಡಿಯಾ

ರಾಜ್ಯ ಘಟಕಗಳು, ಬೆಂಗಳೂರು.

Leave a Reply

Your email address will not be published. Required fields are marked *