ಏತ ನೀರಾವರಿ ಕಾಮಗಾರಿ ಅವ್ಯವಸ್ಥೆ ಖಂಡಿಸಿ ಸಿಪಿಐ(ಎಂ) ಪ್ರತಿಭಟನೆ

ಸರಕಾರದ ಮಹತ್ವಕಾಂಕ್ಷೆ ಯೋಜನೆಯ ಕಾಮಗಾರಿಯಿಂದ ಸ್ಥಳೀಯ ನಿವಾಸಿಗಳಿಗೆ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಶಾಸಕರು ಮದ್ಯೆಪ್ರವೇಶಿಸುವಂತೆ ಆಗ್ರಹಿಸಿ ಮಂಗಳವಾರ ಸಂಜೆ ಗುಲ್ವಾಡಿ ಏತ ನೀರಾವರಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷದ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕು ಬೈಂದೂರು ವಲಯ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.

ಕಾಮಗಾರಿಯಿಂದ ಹಾನಿಗೊಳಗಾದ ಕುಡಿಯುವ ನೀರಿನ ಬಾವಿ ದುರಸ್ತಿಗೊಂಡಿಲ್ಲ. ಚರಂಡಿಯೊಳಗೆ ಅಳವಡಿಸಿದ ಬೃಹದಾಕಾರದ ವಿದ್ಯುತ್ ಕಂಬಗಳು ಗುಲ್ವಾಡಿಯ ಗ್ರಾಮ ಭವಿಷ್ಯದಲ್ಲಿ ಅಭಿವೃದ್ಧಿಗೆ ತೊಡಕಾಗಲಿದೆ. ಈ ಬಗ್ಗೆ ಶಾಸಕರು ಲೋಕೊಪಯೋಗಿ ಇಲಾಖೆ ಜತೆ ಮಾತುಕತೆ ನಡೆಸಿ ರಸ್ತೆ ಅಗಲೀಕರಣಕ್ಕೆ ತೊಡಕಾಗದಂತೆ ಕ್ರಮವಹಿಸಬೇಕು. ಸೌಪರ್ಣಿಕ ನದಿ ತೀರದಿಂದ ಖಾಸಗಿ ಜಾಗದವರನ್ನು ಮನವೊಲಿಸಿ ವಿದ್ಯುತ್ ಕಂಬಗಳನ್ನು ಅಳವಡಿಸಲು ಬೈಂದೂರು ಶಾಸಕರು ಕಾಳಜಿ ವಹಿಸಿದರೆ ಗುಲ್ವಾಡಿ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದು ವಲಯ ಸಮಿತಿ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು.

ಜಿಲ್ಲಾ ಸಮಿತಿ ಸದಸ್ಯ ಎಚ್.ನರಸಿಂಹ ಮಾತನಾಡಿ ʻಏತ ನೀರಾವರಿ ಯೋಜನೆಯಿಂದ ಗುಲ್ವಾಡಿಯ ಸುತ್ತಮತ್ತಲ ಗ್ರಾಮಗಳಿಗೆ ಬಹಳಷ್ಟು ಪ್ರಯೋಜನವಿದೆ. ಆದರೆ ಸ್ಥಳೀಯ ಗ್ರಾಮಪಂಚಾಯತ್ ಆಡಳಿತ ಕಡೆಗಣಿಸಿ ಕಾಮಗಾರಿ ನಡೆಸಲಾಗುತ್ತಿದೆ. ಸ್ಥಳೀಯಾಡಳಿತ ಹಾಗು ಜನರಿಗೆ ಯಾವುದೇ ಮಾಹಿತಿ ನೀಡದೇ ಕಾಮಗಾರಿ ನಡೆಸಲಾಗುತ್ತಿದೆ ಇದರಿಂದ ಸ್ಥಳೀಯ ಜನರು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಸಮಸ್ಯೆ ಬಗೆಹರಿಸಲು ಸಂಬಂದಪಟ್ಟವರು ಮುಂದಾಗಬೇಕು ಎಂದರು.

ಸ್ಥಳೀಯ ಮುಖಂಡ ಜಿ.ಡಿ. ಪಂಜುಪೂಜಾರಿ ಪ್ರಾಸ್ತಾವಿಕ ಮಾತನಾಡಿ `ಕಾಮಗಾರಿಯಿಂದ ಕೃಷಿ ಚಟುವಟಿಕೆಗಳಿಗೆ ಆಗುತ್ತಿರುವ ಹಾನಿ ತಪ್ಪಿಸಬೇಕು. ಹಾನಿಯಾದರೆ ಪರಿಹಾರ ನೀಡಬೇಕು. ಬಡಕಾರ್ಮಿಕರ ಮಕ್ಕಳು ಓದುತ್ತಿರುವ ಗುಲ್ವಾಡಿ ಹಾಗು ಮಾವಿನಕಟ್ಟೆ ಸರಕಾರಿ ಶಾಲೆಯ ಅಭಿವೃದ್ಧಿಗೆ ಸಹಕರಿಸಬೇಕೆಂದರು. ಸ್ಥಳೀಯರಿಗೆ ಮಾಹಿತಿ ನೀಡದೇ ಕಾಮಗಾರಿ ನಡೆಸುತ್ತಿದ್ದು ಶಾಸಕರು ಜನರ ಪರವಾಗಿ ಮಾತಾಡುತ್ತಿಲ್ಲ. ಸಮಸ್ಯೆ ಮುಂದುವರಿದರೆ ಊರ ಜನರೊಂದಿಗೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದರು.

ಪ್ರತಿಭಟನೆಯ ನಂತರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಸನ್ನ ಅವರಿಗೆ ಸಿಪಿಐ(ಎಂ) ಮುಖಂಡರು ಮನವಿ ನೀಡಿದರು.

ಪ್ರತಿಭಟನೆಯನ್ನುದ್ದೇಶಿಸಿ ಜಿಲ್ಲಾ ಸಮಿತಿ ಸದಸ್ಯ ವೆಂಕಟೇಶ ಕೋಣಿ ಮಾತನಾಡಿದರು. ಜಿ.ಬಿ ಮಹಮ್ಮದ್, ಜಮಾಲ್ ಗುಲ್ವಾಡಿ, ಗ್ರಾಮಪಂಚಾಯತ್ ಸದಸ್ಯ ಹಂಝ, ಅಣ್ಣಪ್ಪ ಅಬ್ಬಿಗುಡ್ಡಿ, ನಾಗರಾಜ, ನೀಲಾ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *