ಕಳೆದ ತಿಂಗಳು ಬೆಂಗಳೂರಿನಲ್ಲಿ ಸುರಿದ ಮಳೆಯಿಂದ ಉಂಟಾದ ಅನಾಹುತಗಳ ನಂತರವು ಸರಿಯಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ರಾಜ್ಯ ಬಿಜೆಪಿ ಸರ್ಕಾರ ಮತ್ತು ಬಿಬಿಎಂಪಿಯ ದುರಾಡಳಿತದಿಂದ 2-3 ದಿನ ಬೆಂಗಳೂರಿನಲ್ಲಿ ಸುರಿದ ಮಳೆ ಅಬ್ಬರಕ್ಕೆ ರಾಜಕಾಲುವೆಯಲ್ಲಿ ಯುವಕ ಕೊಚ್ಚಿಹೊಗಿದ್ದರೆ, ಒಬ್ಬ ಮಹಿಳೆ ಬಲಿಪಡೆದಿದೆ, ಹಲವು ಪ್ರದೇಶಗಳು ಜಲಾವೃತಗೊಂಡು ಮನೆಗಳು, ವಾಹನಗಳು ಹಾನಿಗೀಡಾಗುವಂತೆ ಮಾಡಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಬೆಂಗಳೂರು ಜಿಲ್ಲಾ ಸಮಿತಿಗಳು ಆರೋಪಿಸಿವೆ.
ಬೆಂಗಳೂರಿನ ಕೆರೆಗಳ, ರಾಜಕಾಲುವೆಗಳ ಒತ್ತುವರಿ ತೆರೆವು ಮಾಡದ, ರಸ್ತೆಗುಂಡಿ ಮುಚ್ಚದ ಪರಿಣಾಮ, ಸಮರ್ಪಕವಲ್ಲದ ಒಳ ಚರಂಡಿ ವ್ಯವಸ್ಥೆಯಿಂದ ಮಳೆ ನೀರು ರಸ್ತೆಗಳ ಮೇಲೆ ಹರಿದು ಮನೆಗಳಿಗೆ ನುಗ್ಗಿದೆ, ಹಲವು ಪ್ರದೇಶಗಳು ಈಜುಕೊಳಗಂತಾಗಿದೆ.
ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಡಿ ಮೂಲಭೂತ ಸೌಕರ್ಯಗಳಿಗಾಗಿ ಸಾವಿರಾರು ಕೋಟಿ ನೀಡಲಾಗಿದ್ದರೂ ಅದೂ ದರ್ಬಳಕೆ ಆಗುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಅನುದಾನ ಎಲ್ಲಿ, ಯಾವುದಕ್ಕೆ ಬಳಕೆಯಾಗುತ್ತಿದೆ ಎಂಬ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇಲ್ಲ. ಹೀಗಾಗಿ ಇದೂ ದರ್ಬಳಕೆ ಆಗಿರುವ ಸಾಧ್ಯತೆ ಇದೆ. ಬಿಬಿಎಂಪಿಯಿಂದ ಈ ಕಾಮಗಾರಿಗಳಿಗೆ ಅನುದಾನ ಮಂಜೂರಾಗಿದ್ದರೂ ಕೆಲಸಗಳು ಆಗಿಲ್ಲ. ಆ ಹಣವಲ್ಲ ರಾಜಕಾರಣಿಗಳ, ಭ್ರಷ್ಟ ಅಧಿಕಾರಿಗಳ ಜೋಬು ತುಂಬಿದೆ ಎಂದು ಸಿಪಿಐ(ಎಂ) ಆರೋಪಿಸಿದೆ.
ಹಾಗಾಗಿ ಕೂಡಲೇ ರಾಜ್ಯ ಬಿಜೆಪಿ ಸರ್ಕಾರ ಮತ್ತು ಬಿಬಿಎಂಪಿ ಆಡಳಿತ ಮಳೆಯಿಂದ ಮೃತರಾದ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ, ಅವರ ಮಕ್ಕಳು ಮತ್ತು ಅವಲಂಬಿತರಿಗೆ ವಿದ್ಯಾಭ್ಯಾಸ, ಉದ್ಯೋಗ ನೀಡಬೇಕು, ಮಳೆ ಸಂತ್ರಸ್ತರಿಗೆ ಪರಿಹಾರ ಒದಗಿಸಬೇಕು, ಕೆರೆ, ರಾಜಕಾಲುವೆ ಒತ್ತುವರಿ ತೆರೆವುಗೊಳಿಸಲು, ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮಗಳನ್ನು ಕೈಗೊಳ್ಳಬೇಕೆಂದು ಸಿಪಿಐ(ಎಂ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಒತ್ತಾಯಿಸುತ್ತದೆ.
ಎನ್. ಪ್ರತಾಪ್ ಸಿಂಹ, ಸಿಪಿಐ(ಎಂ) ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿ
ಬಿ.ಎನ್. ಮಂಜುನಾಥ್, ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ