75 ವರ್ಷಗಳ ನಂತರವೂ ಅಜ್ಞಾನದ ಪ್ರದರ್ಶನ: ಸಿಪಿಐ(ಎಂ) ಕೇರಳ ರಾಜ್ಯ ಕಾರ್ಯದರ್ಶಿ

ತನ್ನನ್ನು ಟೀಕಿಸಿದರೆ ಸಚಿವ ಸ್ಥಾನದಿಂದ ವಜಾ ಮಾಡುವುದಾಗಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಬೆದರಿಕೆ ಹಾಕಿರುವುದು ಭಾರತದ ಸಂವಿಧಾನ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಬಗ್ಗೆ ಅಜ್ಞಾನವನ್ನು ತೋರಿಸುತ್ತದೆ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ)ನ ಕೇರಳ ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್‍ ಮಾಸ್ಟರ್ ಟಿಪ್ಪಣಿ ಮಾಡಿದ್ದಾರೆ.

‘ಇಷ್ಟವನ್ನು ಹಿಂಪಡೆಯುವ’ ಅಧಿಕಾರ ರಾಜ್ಯಪಾಲರಿಗೆ ಇಲ್ಲ. ಅವರು ಮುಖ್ಯಮಂತ್ರಿಗಳ ಸಲಹೆಯ ಮೇರೆಗೆ ಮಾತ್ರ ಸಚಿವರನ್ನು ನೇಮಿಸಬಹುದು ಮತ್ತು ತೆಗೆದುಹಾಕಬಹುದು ಎಂದು ನೆನಪಿಸಿರುವ ಅವರು  ರಾಜ್ಯಪಾಲರ ಪಿಆರ್‌ಒ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಟಿಪ್ಪಣಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸವಾಲು ಹಾಕುತ್ತಿದೆ ಎಂದು ಟೀಕಿಸಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಕೇರಳದ ರಾಜ್ಯಪಾಲರಿಗೆ ನೆನಪಿಲ್ಲದಿರುವುದು ಅಚ್ಚರಿ ಮೂಡಿಸಿದೆ. ಅವರ ಇತ್ತೀಚಿನ ಹಸ್ತಕ್ಷೇಪವನ್ನು ಜನರು, ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಭಾರತೀಯ ಸಂವಿಧಾನದ ಮೂಲಭೂತ ತತ್ವಗಳ ಮೇಲಿನ ಆಕ್ರಮಣವಾಗಿ ಮಾತ್ರ ನೋಡಬಹುದಾಗಿದೆ ಎಂದು ಅವರು ಹೇಳಿದ್ದಾರೆ.

“ರಾಜ್ಯಪಾಲರು ಪ್ರಜಾಪ್ರಭುತ್ವಕ್ಕೆ ಕಳಂಕ ತರುವ ಇಂತಹ ಪ್ರಯತ್ನಗಳಿಂದ ಹಿಂದೆ ಸರಿಯಬೇಕು. ನೀವು ಸಂವಿಧಾನದ 163,164 ನೇ ವಿಧಿಗಳು ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಓದಬೇಕೆಂದು ವಿನಂತಿಸುತ್ತೇವೆ. ಸಹಿ ಹಾಕದೆ ವಿಧಾನಸಭೆ ಅಂಗೀಕರಿಸಿದ ವಿಧೇಯಕಗಳನ್ನು ತಡೆಹಿಡಿಯುತ್ತಿರುವುದು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿರುವುದು ಘನತೆಯೇ ಎಂಬುದನ್ನು ರಾಜ್ಯಪಾಲರು ಸ್ಪಷ್ಟಪಡಿಸಬೇಕು. ಮಂತ್ರಿಗಳು ರಾಜ್ಯದ ಜನರಿಂದ ಚುನಾಯಿತರಾಗುತ್ತಾರೆ, ಅವರು ಜನರಿಗೆ ಜವಾಬ್ದಾರರು, ವಸಾಹತುಶಾಹಿ ಕಾಲದ ಪಳೆಯುಳಿಕೆಗಳಾದ ಹುದ್ದೆಗಳಿಗೆ ಅಲ್ಲ ಎಂದು ಅವರಿಗೆ ಮತ್ತೊಮ್ಮೆ ನೆನಪಿಸಬೇಕಾಗುತ್ತದೆ” ಎನ್ನುತ್ತ ಗೋವಿಂದನ್‍ ಮಾಸ್ಟರ್ ಟ್ವೀಟ್ ಹಿಂಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ಅವರಿಗೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *