ಝಾರ್ಖಂಡ್‍ನಲ್ಲಿ ಆದಿವಾಸಿ ಪ್ರತಿಭಟನಾಕಾರರ ಮೇಲೆ ಗೋಲೀಬಾರ್

ಬಿಜೆಪಿ ಸರಕಾರ ರಾಜ್ಯನಿರ್ಮಾಣದ ಉದ್ದೇಶವನ್ನೇ ಹುಸಿಯಾಗಿಸುತ್ತಿದೆ.

ಝಾರ್ಖಂಡ್‍ನ ಖುಂಟಿ ಜಿಲ್ಲೆಯ ಸೆಕೋ ಎಂಬ ಹಳ್ಳಿಯಲ್ಲಿ ಅಕ್ಟೋಬರ್ 22ರಂದು ಬುಡಕಟ್ಟು ಜನಗಳ ಮೇಲೆ ಪೋಲೀಸ್ ಗೋಳೀಬಾರಿಗೆ ಒಬ್ಬ ಬುಡಕಟ್ಟು ಮುಖಂಡ, ಅಬ್ರಹಾಂ ಮುಂಡಾ ಬಲಿಯಾಗಿದ್ದಾರೆ ಮತ್ತು ಇತರ ಐವರಿಗೆ ತೀವ್ರ ಗಾಯಗಳಾಗಿವೆ. ಈ ಗ್ರಾಮದ ಬುಡಕಟ್ಟು ಜನಗಳ ಒಂದು ಗುಂಪು ರಾಜ್ಯದ ರಾಜಧಾನಿ ರಾಂಚಿಯಲ್ಲಿ ‘ಆದಿವಾಸಿ ಅಧಿಕಾರ್ ಮಂಚ್’ ಸೇರಿದಂತೆ 42 ಆದಿವಾಸಿ ಸಂಘÀಟನೆಗಳ ಜಂಟಿ ವೇದಿಕೆ ‘ಆದಿವಾಸಿ ಸಂಘರ್ಷ ಮೋರ್ಚಾ’ ಕರೆ ನೀಡಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಲು ಹೊರಟಿದ್ದರು. ರಾಜ್ಯದ ಬಿಜೆಪಿ ಸರಕಾರ ಬುಡಕಟ್ಟು ಜನಗಳ ಪಾರಂಪರಿಕ ಮತ್ತು ಕಾನೂನುಬದ್ಧ ಭೂಮಿ ಲಭ್ಯತೆಯನ್ನು ವಂಚಿಸಲು ಛೋಟಾನಾಗ್ಪುರ್ ಮತ್ತು ಸಂತಾಲ್ ಪರಗಣಾ ಗೇಣಿ ಕಾಯ್ದೆಗೆ ತಿದ್ದುಪಡಿ ತರಲು ಹೊರಡಿಸಿರುವ ಸುಗ್ರೀವಾಜ್ಷೆ ವಿರುದ್ಧ ಅಕ್ಟೋಬರ್ 24ರಂದು ರ್ಯಾಲಿಯನ್ನು ಯೋಜಿಸಲಾಗಿತ್ತು.

ಸಿಪಿಐ(ಎಂ) ಪೊಲಿಟ್‍ಬ್ಯುರೊ ಈ ಗೋಲೀಬಾರನ್ನು ಬಲವಾಗಿ ಖಂಡಿಸಿದೆ.

ಕಳೆದ ಒಂದು ತಿಂಗಳಲ್ಲಿ ಝಾರ್ಖಂಡ್‍ನ ಬಿಜೆಪಿ ಸರಕಾರ ರಾಜ್ಯದ ಹಲವೆಡೆಗಳಲ್ಲಿ ಇಂತಹ ಪ್ರತಿಭಟನೆಗಳ ಮೇಲೆ ಗುಂಡು ಹಾರಿಸಿದೆ. ಈ ಅವಧಿಯಲ್ಲಿ ಪೋಲೀಸ್ ಕಸ್ಟಡಿಯಲ್ಲಿ ಎರಡು ಸಾವುಗಳು ಸಂಭವಿಸಿವೆ.

ಈ ಹಿಂದೆ ಬಿಹಾರ ರಾಜ್ಯದ ಭಾಗವಾಗಿದ್ದ ಝಾರ್ಖಂಡ್ ರಾಜ್ಯವನ್ನು ನಿರ್ಮಿಸಿದ್ದೇ ಬುಡಕಟ್ಟು ಜನಗಳ ಹಿತಾಸಕ್ತಿಗಳ ರಕ್ಷಣೆಯ ಹೆಸರಲ್ಲಿ. ತದ್ವಿರುದ್ಧವಾಗಿ ಬಿಜೆಪಿ ಸರಕಾರ ಸತತವಾಗಿ ಬುಡಕಟ್ಟು ಜನಗಳು ಮತ್ತು ಇತರ ದುರ್ಬಲ ವಿಭಾಗಗಳಿಗೆ ಬೆದರಿಕೆ ಒಡ್ಡುತ್ತಲೇ ಇದೆ, ಈ ಮೂಲಕ ಈ ರಾಜ್ಯದ ನಿರ್ಮಾಣದ ಉದ್ದೇಶವನ್ನೇ ನಿರಾಕರಿಸುತ್ತಿದೆ ಎಂದು ಪೊಲಿಟ್‍ಬ್ಯುರೊ ಟೀಕಿಸಿದೆ.

ಈಗ ಸ್ಥಾಪಿತಗೊಂಡಿರುವ ಸಂಸದೀಯ ಆಚರಣೆಗಳ ಪ್ರಕಾರ ಬುಡಕಟ್ಟು ಜನಗಳನ್ನು ಸಾಯಿಸುವುದು ಕೇವಲ ರಾಜ್ಯ ಕಾನೂನು ವ್ಯವಸ್ಥೆಯ ಪ್ರಶ್ನೆಯೆಂದು ಪರಿಗಣಿಸಲಾಗುತ್ತಿಲ್ಲ. ಕೇಂದ್ರ ಸರಕಾರ ಬುಡಕಟ್ಟು ಜನಗಳ ಹಕ್ಕುಗಳು ಲಭ್ಯವಿರುವಂತೆ ಮಾಡಲು ಮಧ್ಯಪ್ರವೇಶಿಸಬೇಕು, ಇದರಲ್ಲಿ ಪ್ರತಿಭಟನೆಯ ಪ್ರಜಾಪ್ರಭುತ್ವ ಹಕ್ಕು ಮತ್ತು ಭೂಮಿ ಮತ್ತು ಅರಣ್ಯ ಉತ್ಪನ್ನಗಳ ಮೇಲೆ ಅವರ ಹಕ್ಕುಗಳ ಇನ್ನಷ್ಟು ಅತಿಕ್ರಮಣ ಸಲ್ಲದು ಎಂಬುದೂ ಸೇರಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ನೆನಪಿಸಿದೆ.

ಎಡಪಕ್ಷಗಳ ರಾಜ್ಯ ಮುಖಂಡರ ಭೇಟಿ

ಸಿಪಿಐ(ಎಂ) ಝಾರ್ಖಂಡ್ ರಾಜ್ಯ ಕಾರ್ಯದರ್ಶಿ ಜಿ.ಕೆ.ಬಕ್ಷಿ, ಇತರ ರಾಜ್ಯ ಮುಖಂಡರುಗಳಾದ ರಾಜೇಂದ್ರ ಸಿಂಗ್ ಮುಂಡ, ಸುಧೀರ್ ದಾಸ್ ಮತ್ತು ಬೀರೇಂದ್ರ ಕುಮಾರ್, ಸಿಪಿಐ(ಎಂಎಲ್)ನ ರಾಜ್ಯ ಕಾರ್ಯದರ್ಶಿ ಜನಾರ್ಧನ ಪ್ರಸಾದ್ ಮತ್ತು ಎಸ್‍ಯುಸಿಐ(ಐ)ನ ಸಿದ್ದೇಶ್ವರ ಸಿಂಗ್ ರವರಿದ್ದ ಎಡಪಕ್ಷಗಳ ತಂಡ ಗೋಲೀಭಾರ್ ನಡೆದ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರು ಮತ್ತು ಅಬ್ರಹಾಂ ಮುಂಡರ ಕುಟುಂಬದ ಸದಸ್ಯರು ಮತ್ತು ಇತರ ಸಂತ್ರಸ್ತ ಕುಟುಂಬಗಳ ಸದಸ್ಯರನ್ನು ಭೇಟಿ ಮಾಡಿದರು.

ಪೋಲೀಸರು ಯಾವುದೇ ಮುನ್ಸೂಚನೆಯಿಲ್ಲದೆ ಗೋಲೀಬಾರ್ ನಡೆಸಿದರು ಎಂದು ಗ್ರಾಮಸ್ಥರು ತಂಡಕ್ಕೆ ಹೇಳಿದ್ದಾರೆ. ಬುಡಕಟ್ಟು ಜನಗಳು ಪೋಲೀಸರೊಂದಿಗೆ ಘಷಣೆಗಿಳಿದಿದ್ದರಿಂದ ಗೋಲೀಬಾರ್ ಮಾಡಬೇಕಾಯಿತು ಎನ್ನುವ ಪೋಲೀಸರ ಕತೆ ಕಪೋಲ ಕಲ್ಪಿತ , ಸಂಪೂರ್ಣ ಸುಳ್ಳು ಎಂದು ಅವರು ಹೇಳಿದ್ದಾರೆ. ಆದ್ದರಿಂದ ಈ ಗೋಲೀಬಾರ್‍ಗೆ ಕಾರಣಕರ್ತರಾದವರ ಮೇಲೆ ಸೆಕ್ಷನ್302ರ ಅಡಿಯಲ್ಲಿ ಕೊಲೆ ಯೋಜನೆಯ ಎಫ್‍ಐಆರ್ ಹಾಕಬೇಕು, ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಎಡಪಕ್ಷಗಳ ಮುಖಂಡರು ಆಗ್ರಹಿಸಿದ್ದಾರೆ. ]

ಬುಡಕಟ್ಟು ಜನಗಳು ರಾಂಚಿಯಲ್ಲಿ ರ್ಯಾಲಿಯಲ್ಲಿ ಶಾಂತಿಯುತವಾಗಿ ಭಾಗವಹಿಸುವುದನ್ನು ತಡೆಯುವ ಪ್ರಯತ್ನ ಜನಗಳ ಮೂಲಭೂತ ಸಂವಿಧಾನಿಕ ಹಕ್ಕನ್ನು ಮೊಟಕುಮಾಡುವ ಪ್ರಯತ್ನ ಎಂದು ಅವರು ಹೇಳಿದ್ದಾರೆ.  ಅಕ್ಟೋಬರ್ 24ರಂದು ಝಾರ್ಖಂಡ್ ರಾಜ್ಯಾದ್ಯಂತ ಬಿಜೆಪಿ ರಾಜ್ಯಸರಕಾರದ ಈ ಬುಡಕಟ್ಟು ಜನ-ವಿರೋಧಿ ಸುಗ್ರೀವಾಜ್ಞೆಯ ವಿರುದ್ಧ ಬಂದ್ ನಡೆದಿದೆ.

Leave a Reply

Your email address will not be published. Required fields are marked *