ಉತ್ತರಪ್ರದೇಶದಲ್ಲಿ ಆದಿತ್ಯನಾಥ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಂದಿನಿಂದ ಅಲ್ಪಸಂಖ್ಯಾತ ಸಮುದಾಯದ ಮೇಲೆ ಕ್ರೂರ ದಾಳಿಗಳು ನಡೆಯುತ್ತಿವೆ. ಕಾನೂನುಬಾಹಿರ ಕಸಾಯಿಖಾನೆಗಳನ್ನು ಮುಚ್ಚುವ ಹೆಸರಿನಲ್ಲಿ ಉತ್ತರಪ್ರದೇಶ ಸರಕಾರ ಎಲ್ಲ ಕಸಾಯಿಖಾನೆಗಳ ಮೇಲೆ ಗುರಿಯಿಟ್ಟಿದೆ. ಇದೆಲ್ಲ ಗೋಮಾಂಸದ ಕಾನೂನುಬಾಹಿರ ವ್ಯಾಪಾರವನ್ನು ಹತೋಟಿಗೆ ತರಲಿಕ್ಕಾಗಿ ಎಂದು ನೆವ ಕೊಡಲಾಗುತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಮಾಂಸದ ಅಂಗಡಿಗಳ ಮೇಲೆ ವ್ಯಾಪಕವಾದ ದಾಳಿಗಳು ನಡೆದಿರುವ ಉದಾಹರಣೆಗಳಿವೆ. ಈ ದಾಳಿಗಳನ್ನು ಸಿಪಿಐ(ಎಂ) ಬಲವಾಗಿ ಖಂಡಿಸಿದೆ.
ಭಾರತದ ಒಟ್ಟು ಮಾಂಸದ ರಫ್ತಿನಲ್ಲಿ ಸುಮಾರು 50% ಉತ್ತರಪ್ರದೇಶದಿಂದಲೇ ಆಗುತ್ತಿದೆ ಎಂಬುದನ್ನು ಗಮನಿಸಬೇಕು. ಆದ್ದರಿಂದ ಇಂತಹ ಧೋರಣೆ ನೇರವಾಗಿ ಮತ್ತು ಪರೋಕ್ಷವಾಗಿ 25ಲಕ್ಷ ಮಂದಿಯ ಜೀವನೋಪಾಯವನ್ನು ತಟ್ಟುತ್ತದೆ. ಅಲ್ಲದೆ ಮಾಂಸದ ಉತ್ಪಾದನೆ ಮತ್ತು ಮಾರಾಟದಲ್ಲಿ ತೊಡಗಿರುವ ಎಲ್ಲ ವಿಭಾಗಗಳ ಮೇಲೆ ಗುರಿಯಿಡಲಾಗುತ್ತಿದೆ, ದೈಹಿಕ ಹಲ್ಲೆಗಳನ್ನೂ ನಡೆಸಲಾಗುತ್ತಿದೆ.
ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳಿಗೆ ಇರುವ ಸಂವಿಧಾನಿಕ ಭರವಸೆಗಳಿಗೆ ರಕ್ಷಣೆ ದೊರೆಯುವಂತೆ ಮಾಡಬೇಕು ಮತ್ತು ಉತ್ತರಪ್ರದೇಶದ ಬಿಜೆಪಿ ರಾಜ್ಯ ಸರಕಾರ ಇಂತಹ ವಿನಾಶಕಾರಿ ದಾರಿ ಹಿಡಿಯದಂತೆ ತಡೆಯಬೇಕು ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಕರೆ ನೀಡಿದೆ.