ಕೇರಳದಲ್ಲಿ ಬಿಜೆಪಿ- ಆರೆಸ್ಸೆಸ್‍ ಇಬ್ಬಂದಿತನ

ಶಾಂತಿಯನ್ನು ನೆಲೆಗೊಳಿಸುವ ಮತ್ತು ರಾಜಕೀಯ ಘರ್ಷಣೆಗಳು ನಡೆಯದಂತೆ ಮಾಡುವ ಬಗ್ಗೆ ಅವರಿಗೆ ಆಸಕ್ತಿಯೇನೂ ಇಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.  – ಸಿಪಿಐ(ಎಂ) ಪೊಲಿಟ್‍ಬ್ಯುರೊ

ಕೇರಳದ ತಿರುವನಂತಪುರ ಜಿಲ್ಲೆಯಲ್ಲಿ ಸಿಪಿಐ(ಎಂ) ಮತ್ತು ಬಿಜೆಪಿ-ಆರೆಸ್ಸೆಸ್ ನಡುವಿನ ಇತ್ತೀಚಿನ ಘರ್ಷಣೆಗಳನ್ನು ಕುರಿತಂತೆ ಬಿಜೆಪಿ ಮುಖಂಡತ್ವ ಇಬ್ಬಂದಿತನದಲ್ಲಿ ತೊಡಗಿದೆ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಟೀಕಿಸಿದೆ. ಕೇಂದ್ರ ಗೃಹಮಂತ್ರಿ ಶ್ರೀ ರಾಜನಾಥ ಸಿಂಗ್ ಘರ್ಷಣೆಗಳನ್ನು ತಡೆಯಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‍ರನ್ನು ಆಗ್ರಹಿಸಿದರು. ಕೇರಳ ಮುಖ್ಯಮಂತ್ರಿಗಳು ಶಾಂತಿಯನ್ನು ಕಾಪಾಡಲು ಹಾಗೂ ಇಂತಹ ಘಟನೆಗಳನ್ನು ತಪ್ಪಿಸುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಲು ಜುಲೈ 31ರಂದು ಸಿಪಿಐ(ಎಂ) ಮತ್ತು ಬಿಜೆಪಿ-ಆರೆಸ್ಸೆಸ್‍ನ ರಾಜ್ಯ ಮುಖಂಡರ ಸಭೆ ಕರೆದರು.

ಈ ಸಭೆ ಕೆಲವು ನಿರ್ಣಯಗಳನ್ನು ಕೈಗೊಂಡಿತು ಮತ್ತು ಇದನ್ನನುಸರಿಸಿ ಮೂರು ಜಿಲ್ಲೆಗಳಲ್ಲಿ ಇಂತಹ ಸಭೆಗಳನ್ನು ನಡೆಸಲು ಕೂಡ ನಿರ್ಧರಿಸಿತು. ಈ ಸಭೆಗಳೂ ನಡೆದಿವೆ ಹಾಗೂ ಇವು ಒಂದು ಚೌಕಟ್ಟನ್ನು ಒದಗಿಸಿವೆ. ಎರಡೂ ಕಡೆಯವರು ಘರ್ಷಣೆಗಳನ್ನು ತಪ್ಪಿಸುವಂತೆ ಮಾಡುವುದಾಗಿ ಹಾಗೂ ಹಿಂಸಾಚಾರಕ್ಕೆ ಇಳಿಯುವವರ ವಿರುದ್ದ ಪೋಲೀಸರು ಕ್ರಮ ಕೈಗೊಳ್ಳುವಂತೆ ಮಾಡುವುದಾಗಿ ವಚನ ನೀಡಿದರು. ಆಗಸ್ಟ್ 6ರಂದು ಒಂದು ಸರ್ವ ಪಕ್ಷ ಸಭೆಯೂ ನಡೆಯಲಿದೆ ಎಂದು ಆಗಸ್ಟ್‍ 4ರಂದು ನೀಡಿರುವ ಹೇಳಿಕೆಯೊಂದರಲ್ಲಿ ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಇಂತಹ ಒಂದು ಸಂಧರ್ಭದಲ್ಲೇ  ಬಿಜೆಪಿಯ ಮುಖಂಡತ್ವ ಮತ್ತು ಒಬ್ಬ ಕೇಂದ್ರೀಯ ಮಂತ್ರಿ ಕೇರಳದ ಸಿಪಿಐ(ಎಂ)ನ ವಿರುದ್ಧ ಆಧಾರರಹಿತ ಮತ್ತು ಪಕ್ಷಪಾತಪೂರ್ಣ ಆಪಾದನೆ ಮಾಡಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್‍ ಮತ್ತು ಕೇಂದ್ರೀಯ ಮಂತ್ರಿ ಸ್ಮೃತಿ ಇರಾಣಿ  ಕೇರಳ ಮುಖ್ಯಮಂತ್ರಿಗಳ ಮುತುವರ್ಜಿಗಳು ಫಲಿತಾಂಶಗಳನ್ನು ತೋರಿಸಿದ್ದರೂ ಅವರ ಪ್ರಾಮಾಣಿಕತೆಯನ್ನು ಪ್ರಶ್ನಿಸುವ ಮಟ್ಟಕ್ಕೂ ಹೋಗಿದ್ದಾರೆ.

ಹೀಗೆ ಗೃಹಮಂತ್ರಿಗಳು ಒಂದು ನಿಲುವು ತಳೆಯುತ್ತಾರೆ, ಇನ್ನೊಬ್ಬ ಕೇಂದ್ರೀಯ ಮಂತ್ರಿ ಮತ್ತು ಬಿಜೆಪಿ ಮುಖಂಡತ್ವ ತದ್ವಿರುದ್ಧ ನಿಲುವು ತಳೆಯುತ್ತದೆ. ಇದು ಬಿಜೆಪಿ-ಆರೆಸ್ಸೆಸ್‍ಗೆ ಶಾಂತಿಯನ್ನು ನೆಲೆಗೊಳಿಸುವ ಮತ್ತು ರಾಜಕೀಯ ಘರ್ಷಣೆಗಳು ನಡೆಯದಂತೆ ಮಾಡುವ ಬಗ್ಗ ಆಸಕ್ತಿಯೇನೂ ಇಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಅಭಿಪ್ರಾಯ ಪಟ್ಟಿದೆ.

ಮೇ 2016ರಲ್ಲಿ ಚುನಾವಣಾ ಫಲಿತಾಂಶಗಳು ಪ್ರಕಟವಾದ ದಿನವೇ ಬಿಜೆಪಿ-ಆರೆಸ್ಸೆಸ್‍ ತಮ್ಮ ಹಲ್ಲೆಗಳನ್ನು ಆರಂಭಿಸಿದ್ದರು ಎಂಬುದನ್ನು ಸಿಪಿಐ(ಎಂ) ಪೊಲಿಟ್‍ ಬ್ಯುರೊ ನೆನಪಿಸಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‍ ರವರ ಚುನಾವಣಾ ಕ್ಷೇತ್ರದಲ್ಲಿ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದ ಸಿಪಿಐ(ಎಂ) ಕಾರ್ಯಕರ್ತರೊಬ್ಬರ ಹತ್ಯೆಯಾಯಿತು.

ಎಲ್‍ಡಿಎಫ್‍ ಸರಕಾರ ರಚನೆಯಾದ ಮೇಲೆ ಹದಿಮೂರು ಸಿಪಿಐ(ಎಂ) ಕಾರ್ಯಕರ್ತರು ಮತ್ತು ಇತರರು ಕೊಲ್ಲಲ್ಪಟ್ಟಿದ್ದಾರೆ(ಕೊಲೆಯಾದವರ ಪಟ್ಟಿ ಈ ಕೆಳಗಿದೆ). 200ಕ್ಕೂ ಹೆಚ್ಚು ಪಕ್ಷದ ಸದಸ್ಯರು ಮತ್ತು ಹಿತೈಷಿಗಳು ಗಾಯಗೊಂಡಿದ್ದಾರೆ, ಆಸ್ಪತ್ರೆಗೆ ಸೇರಿಸಲ್ಪಟ್ಟಿದ್ದಾರೆ. 165ಕ್ಕೂ ಹೆಚ್ಚು ಮನೆಗಳು ಮತ್ತು 51 ಪಕ್ಷದ ಕಚೇರಿಗಳು ಮತ್ತು ಹಲವಾರು ಸಾಮೂಹಿಕ ಸಂಘಟನೆಗಳ ಕಚೇರಿಗಳಿಗೆ ಬೆಂಕಿ ಹಾಕಲಾಗಿದೆ, ಅವನ್ನು ಹಾಳುಗೆಡವಲಾಗಿದೆ ಎಂಬುದನ್ನೂ ನೆನಪಿಸಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ಇವರ ಆಟದ ಯೋಜನೆ ಸುಸ್ಪಷ್ಟ ಎಂದಿದೆ.

ಸಿಪಿಐ(ಎಂ) ಕಾರ್ಯಕರ್ತರ ವಿರುದ್ಧ ಉದ್ರೇಕಕಾರಿ  ಕಾರ್ಯಾಚರಣೆಗಳನ್ನು ನಡೆಸುವುದು ಮತ್ತು ಅನಗತ್ಯವಾದ ದೈಹಿಕ ಹಲ್ಲೆಗಳನ್ನು ನಡೆಸಿ ಸಿಪಿಐ(ಎಂ) ಹಿಂಸಾಚಾರ ನಡೆಸುತ್ತಿದೆ ಎಂದು ಕೂಗಾಡುವುದು ಹಾಗೂ ಇಂತಹ ದಾಳಿಗಳನ್ನು ತಡೆಯುತ್ತಿಲ್ಲ ಎಂದು ಎಲ್‍ಡಿಎಫ್‍ ಸರಕಾರವನ್ನು ದೂಷಿಸುವುದು. ಇದೇ ಅವರ ಆಟದ ಯೋಜನೆ.

ಕೇರಳದ ಜನತೆಗೆ ರಾಜಕೀಯ ಹಿಂಸಾಚಾರಕ್ಕೆ ಹೊಣೆ ಯಾರು ಎಂಬದು ಚೆನ್ನಾಗಿ ತಿಳಿದಿದೆ. ಎಲ್‍ಡಿಎಫ್‍ ಸರಕಾರ ಎಡ ಮತ್ತು ಪ್ರಜಾಪ್ರಭುತ್ವವಾದಿ ರಂಗದ ಚುನಾವಣಾ ಪ್ರಣಾಳಿಕೆಯಲ್ಲಿ ವಿಶದಪಡಿಸಿದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುವಲ್ಲಿ ಗಂಭೀರವಾಗಿ ತೊಡಗಿರುವಾಗ  ಹಿಂಸಾಚಾರವನ್ನು ನಡೆಸಲಾಗುತ್ತಿದೆ ಎಂಬುದನ್ನು ಅವರು ಕಾಣುತ್ತಿದ್ದಾರೆ ಎಂದಿರುವ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಅತ್ಯುನ್ನತ ಮಟ್ಟದ ಕೋಮು ಸೌಹಾರ್ಧವನ್ನು ಮತ್ತು ಸಾಮಾಜಿಕ ಸಾಮರಸ್ಯವನ್ನು ಈಗಲೂ ಕಾಯ್ದುಕೊಂಡಿರುವ ಕೇರಳದ ಜನತೆ ಖಂಡಿತವಾಗಿಯೂ ರಾಜ್ಯದಲ್ಲಿ ಶಾಂತಿ ಮತ್ತು ಸಾಮಾನ್ಯ ಸ್ಥಿತಿಯನ್ನು ಕದಡುತ್ತಿರುವ ಇಂತಹ ಪ್ರಯತ್ನಗಳನ್ನು ವಿಫಲಗೊಳಿಸಲು ಎದ್ದು ನಿಲ್ಲುತ್ತಾರೆ ಎಂಬ ಆಶಯವನ್ನು ವ್ಯಕ್ತಪಡಿಸಿದೆ.

ಎಲ್‍ಡಿಎಫ್‍ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ-ಆರೆಸ್ಸೆಸ್‍ ಮಂದಿ ಕೊಂದಿರುವವರ ಪಟ್ಟಿ:

  • ಸಿ.ವಿ. ರವೀಂದ್ರನ್, ಪಿಣರಾಯಿ, ಕಣ್ಣೂರು
  • ಸಿವಿ,ಧನರಾಜ್, ಕಣ್ಣೂರು
  • ಶಶಿಕುಮಾರ್, ತ್ರಿಶೂರ್
  • ಟಿ.ಸುರೇಶ್‍ ಕುಮಾರ್‍, ತಿರುವನಂತಪುರಂ
  • ಮೋಹನನ್, ಕಣ್ಣೂರು
  • ಆನಂದು, ಅಲಪುಳ
  • ಮುಹಮ್ಮದ್ ಮುಹಝಿನ್, ಮಲಪ್ಪುರಂ
  • ಜಿ.,ಜಿಶ್ನು, ಅಲಪುಳ
  • ಶಿಬು, ಅಲಪುಳ
  • ಪಿ.ಮುಳೀಧರನ್‍, ಮಲಪ್ಪುರಂ,
  • ರಿಯಾಝ್‍ ಮೌಲವಿ, ಕಾಸರಗೋಡು
  • ಫೈಝಲ್‍, ಮಲಪ್ಪುರಂ
  • ಸುರೇಶ್( ಕಾಂಗ್ರೆಸ್‍-ಐ ಬೆಂಬಲಿಗರು) , ತ್ರಿಶೂರ್

Leave a Reply

Your email address will not be published. Required fields are marked *