ನೋಟು ರದ್ಧತಿಯ ಮೊದಲ ವಾರ್ಷಿಕದಂದು ರಾಷ್ಟ್ರವ್ಯಾಪಿ ಪ್ರತಿಭಟನೆ: ಎಡಪಕ್ಷಗಳ ಕರೆ

ಭಾರತದ ಆರ್ಥಿಕತೆಯನ್ನು ಮತ್ತು ನಮ್ಮ ಬಹುಪಾಲು ಜನತೆಯ ಬದುಕಿನ ಪರಿಸ್ಥಿತಿಗಳನ್ನು ಹಾಳುಗೆಡವುತ್ತಿರುವ  ಆರ್ಥಿಕ ಧೋರಣೆಗಳ ವಿರುದ್ಧ ಪ್ರತಿಭಟನಾ ದಿನಾಚರಣೆಯನ್ನು ನಡೆಸಲು ಎಡಪಕ್ಷಗಳು ನಿರ್ಧರಿಸಿವೆ. ನೋಟುರದ್ಧತಿ ಮಾಡಿ ಒಂದು ವರ್ಷವಾಗುವ ನವಂಬರ್ 8ನ್ನು  ಕೇಂದ್ರದಲ್ಲಿ ಮತ್ತು ಹಲವು ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರಕಾರಗಳ ಆರ್ಥಿಕ ಧೋರಣೆಗಳ ವಿರುದ್ಧ ‘ಪ್ರತಿಭಟನಾ ದಿನ’ವಾಗಿ ಆಚರಿಸಲು ಸಿಪಿಐ(ಎಂ), ಸಿಪಿಐ, ಸಿಪಿಐ(ಎಂಎಲ್-ಲಿಬರೇಶನ್), ಅಖಿಲ ಭಾರತ ಫಾರ್ವರ್ಡ್ ಬ್ಲಾಕ್, ಆರ್‌ಎಸ್‌ಪಿ ಮತ್ತು ಎಸ್‌ಯುಸಿಐ (ಕಮುನಿಸ್ಟ್) ಈ ಆರು ಎಡಪಕ್ಷಗಳು ಕರೆ ನೀಡಿವೆ.

ದೇಶದ ಒಟ್ಟಾರೆ ಪರಿಸ್ಥಿತಿ ಹದಗೆಡುತ್ತಿದೆ ಮತ್ತು ಜನತೆಯ ಮೇಲೆ ವ್ಯಾಪಕ ಪ್ರಮಾಣದಲ್ಲಿ ದಾಳಿಗಳು ನಡೆಯುತ್ತಿವೆ ಎಂದು ಈ ಎಡಪಕ್ಷಗಳು ಆತಂಕ ವ್ಯಕ್ತಪಡಿಸಿವೆ. ಕೋಮುವಾದಿ ಧ್ರುವೀಕರಣವನ್ನು ತೀಕ್ಷ್ಣಗೊಳಿಸಲಾಗುತ್ತಿದೆ, ಸಂಸದೀಯ ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಬುಡಮೇಲು ಮಾಡಲಾಗುತ್ತಿದೆ  ಮತ್ತು ಜನತೆಯ ಪ್ರಜಾಪ್ರಭುತ್ವ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳ ಮೇಲೆ ಹಲ್ಲೆಗಳು ಹೆಚ್ಚುತ್ತಿವೆ.

ಪ್ರಧಾನ ಮಂತ್ರಿಗಳು ಇದ್ದಕ್ಕಿದ್ದಂತೆ ಮತ್ತು ಏಕಪಕ್ಷೀಯವಾಗಿ ನೋಟುರದ್ಧತಿಯನ್ನು ಪ್ರಕಟಿಸಿ ಒಂದು ವರ್ಷ ಪೂರೈಸುತ್ತಿದೆ. ಈ ನಡೆ, ಎಡಪಕ್ಷಗಳು ಎಚ್ಚರಿಸಿದಂತೆ, ಇದುಭಾರತೀಯ ಆರ್ಥಿಕದ ಆರೋಗ್ಯದ ಮೇಲೆ ವಿನಾಶಕಾರಿ ದುಷ್ಪರಿಣಾಮಗಳನ್ನು ಬೀರಿದೆ ಮತ್ತು ನಮ್ಮ ಬಹುಪಾಲು ಜನಗಳ ಮೇಲೆ ಅಭೂತಪೂರ್ವ  ಹೊರೆಗಳನ್ನು ಹಾಕಿದೆ.

ನೋಟುರದ್ಧತಿಯ ಘೋಷಿತ ಉದ್ದೇಶಗಳು ಯಾವವೂ ಈಡೇರಿಲ್ಲ. ಸುಮಾರಾಗಿ ಎಲ್ಲ ರದ್ದತಿಯಾದ ಹಣ ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿ ಬಂದಿದ್ದು, ಕಪ್ಪು ಹಣವನ್ನೆಲ್ಲ ಬಿಳಿ ಹಣವಾಗಿ ಪರಿವರ್ತಿಸಲಾಗಿದೆ, ಮತ್ತು ಈ ಪ್ರಕ್ರಿಯೆಯಲ್ಲಿ ಒಬ್ಬನಾದರೂ ಅಪರಾಧಿಗೂ ಶಿಕ್ಷೆಯಾಗಿಲ್ಲ. ಖೋಟಾ ಕರೆನ್ಸಿ ಕಾನೂನುಬದ್ಧಗೊಂಡಿದೆ. ಭಯೋತ್ಪಾದಕ ಚಟುವಟಿಕೆಗಳನ್ನು ಅಡಗಿಸುವ ಪ್ರಕಟಿತ ಉದ್ದೇಶಸಾಧನೆಗೆ ತದ್ವಿರುದ್ಧವಾಗಿ ಬಹಳಷ್ಟು ಸೇನಾಸಿಬ್ಬಂದಿ, ಭದ್ರತಾಪಡೆಗಳ ಸಿಬ್ಬಂದಿ ಮತ್ತು ಜನಸಾಮಾನ್ಯರು ಭಯೋತ್ಪಾದಕ ದಾಳಿಗಳಿಂದಾಗಿ ಪ್ರಾಣ ಕಳಕೊಂಡಿದ್ದಾರೆ. ವಾಸ್ತವವಾಗಿ ಭ್ರಷ್ಟಾಚಾರದ ಪ್ರಮಾಣ ದ್ವಿಗುಣಗೊಂಡಿದೆ ಎಂದು ಎಡಪಕ್ಷಗಳು ಅಭಿಪ್ರಾಯ ಪಟ್ಟಿವೆ.

ಇನ್ನೊಂದೆಡೆಯಲ್ಲಿ ನಮ್ಮ ಒಟ್ಟು ಆಂತರಿಕ ಉತ್ಪದನೆ (ಜಿಡಿಪಿ)ಗೆ ಮೂರನೇ ಒಂದು ಭಾಗಕ್ಕಿಂತಲೂ ಹೆಚ್ಚು  ಕೊಡುಗೆ ನೀಡುವ, 60ಶೇಕಡಾಕ್ಕಿಂತಲೂ ಹೆಚ್ಚು ಉದ್ಯೊÃಗಗಳನ್ನು ನೀಡಿರುವ ಅಸಂಘಟಿತ ವಲಯವನ್ನು ನೋಟುರದ್ಧತಿ ಪುಡಿಪುಡಿ ಮಾಡಿದೆ. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೊಗ ಯೋಜನೆಯ ಅಡಿಯಲ್ಲಿನ ನೀಡಿಕೆಗಳಲ್ಲಿ ತೀವ್ರ ಕಡಿತ, ಸಾರ್ವಜನಿಕ ವಿತರಣಾ ವ್ಯವಸ್ಥೆ ಸುಮಾರಾಗಿ ಕುಸಿದೇ ಹೋಗಿರುವುದು ಮತ್ತು ಆಧಾರ್ ಕಾರ್ಡ್ ಶರತ್ತುಗಳನ್ನು ಹೇರಿರುವುದು ನಮ್ಮ ಅತ್ಯಂತ ಅಂಚಿಗೆ ತಳ್ಳಲ್ಪಟ್ಟಿರುವ, ಅಸಹಾಯ ಜನವಿಭಾಗಗಳನ್ನು ವಂಚನೆಗೆ ಗುರಿಪಡಿಸಿದೆ.

ಈ ಸರಕಾರದ ಆರ್ಥಿಕ ಧೋರಣೆಗಳಿಂದಾಗಿ ಎಲ್ಲ ಮೂರು ವಲಯಗಳಲ್ಲೂ ಅಂದರೆ, ಕೃಷಿ, ಕೈಗಾರಿಕೆ ಮತ್ತು ಸೇವಾವಲಯಗಳಲ್ಲೂ ಆರ್ಥಿಕ ಚಟುವಟಿಕೆಗಳು ಗಮನಾರ್ಹ ಪ್ರಮಾಣದಲ್ಲಿ ನಿಧಾನಗೊಂಡಿವೆ. ಇದರ ಪರಿಣಾಮವಾಗಿ ನಿರುದ್ಯೊÃಗ ತೀವ್ರವಾಗಿ ಹೆಚ್ಚಿದೆ ಮತ್ತು ಕೃಷಿ ಸಂಕಟ ಇನ್ನಷ್ಟು ಉಲ್ಬಣಗೊಂಡಿದೆ.  ನಮ್ಮ ಯುವಜನ, ನಮ್ಮ ಜನಸಂಖ್ಯಾ ಅನುಕೂಲತೆಗ:ಳಿಂದಾಗಿ  ದೇಶಕ್ಕೆ ಒಂದು ಆಸ್ತಿಯಾಗುವ ಬದಲು  ಗೊತ್ತುಗುರಿಯಿಲ್ಲದೆ ಅಲೆಯುವಂತಾಗಿ ತೀವ್ರ ಆರ್ಥಿಕ ಮತ್ತು ಸಾಮಾಜಿಕ ಅಭದ್ರತೆಗೆ ಒಳಗಾಗುವಂತಾಗಿದೆ. ರೈತರ ಆತ್ಮಹತ್ಯೆಗಳು ಅಭೂತಪೂರ್ವ ಪ್ರ‍್ರಮಾಣವನ್ನು ತಲುಪಿವೆಯಷ್ಟೆಅಲ್ಲ, ಸರ್ವವ್ಯಾಪಿ ಕೃಷಿ ಬಿಕ್ಕಟ್ಟು ಗ್ರಾಮೀಣ ಪ್ರದೇಶಗಳಲ್ಲಿ ಜೀವನ ಪರಿಸ್ಥಿತಿಗಳನ್ನು ಶೋಚನೀಯಗೊಳಿಸಿದೆ. ಹಸಿವಿನಿಂದ ಸಾವುಗಳ ವರದಿಗಳು ಹೆಚ್ಚಿತ್ತಿರುವುದು ಅತ್ಯಂತ ಆತಂಕಕಾರಿ ಎಂದು ಎಡಪಕ್ಷಗಳು ಹೇಳಿವೆ.

ಇವೆಲ್ಲವೂ ಈ ಸರಕಾರದ ಧೋರಣೆಗಳು ಸಾಮಾನ್ಯ ಶ್ರಮಜೀವಿ ಜನಗಳ ಹಿತಗಳನ್ನು ಬಲಿಗೊಟ್ಟು ಜಾಗತಿಕ ಮತ್ತು ಸ್ಥಳೀಯ ಕಾರ್ಪೊರೇಟ್‌ಗಳು ಮತ್ತು ಆಳುವ ವರ್ಗಗಳ ಸೇವೆ ಮಾಡುವ ಉದ್ದೇಶ ಹೊಂದಿವೆ ಎಂಬುದನ್ನು ಸಾಬೀತು ಪಡಿಸಿವೆ.

ಈ ಹಿನ್ನೆಲೆಯಲ್ಲಿ ಎಡಪಕ್ಷಗಳು ನವಂಬರ್ 8ನ್ನು ‘ಪ್ರತಿಭಟನಾದಿನ’ವಾಗಿ ಆಚರಿಸಲು ನಿರ್ಧರಿಸಿವೆ. ಪ್ರತಿಭಟನೆಯ ಸ್ವರೂಪಗಳನ್ನು ದೇಶಾದ್ಯಂತ ಎಡಪಕ್ಷಗಳ ಸಂಬಂಧ ಪಟ್ಟ ರಾಜ್ಯಸಮಿತಿಗಳು ನಿರ್ಧರಿಸುತ್ತವೆ.

ತಕ್ಷಣವೇ ಮೋದಿ ಸರಕಾರ 2014ರಲ್ಲಿ ನೀಡಿದ ಆಶ್ವಾಸನೆಗಳನ್ನು, ಕೃಷಿ ಸಾಲಗಳ ಮನ್ನಾ, ಕನಿಷ್ಟ ಬೆಂಬಲ ಬೆಲೆಗಳನ್ನು ಉತ್ಪದನಾ ವೆಚ್ಚದ ಒಂದೂವರೆ ಪಟ್ಟಿನ ಮಟ್ಟಗಳಿಗೆ ಏರಿಸುವುದು ಮತ್ತು ಪ್ರತಿ ವರ್ಷ 2ಕೋಟಿ, ಅಂದರೆ ಈ ಸರಕಾರದ ಅಧಿಕಾರಾವಧಿಯಲ್ಲಿ 10 ಕೋಟಿ ಉದ್ಯೊಗಾವಕಾಶಗಳ ನಿರ್ಮಾಣದ ಆಶ್ವಾಸನೆಗಳನ್ನು ಜಾರಿಗೆ ತರಬೇಕು ಎಂದು ಎಡಪಕ್ಷಗಳು ಆಗ್ರಹಿಸಿವೆ.

ಎಲ್ಲ ಜನತೆ ಮುಂದೆ ಬಂದು ಈ ಸರಕಾರ ಮತ್ತು ಅದು ಹೊರಿಸುತ್ತಿರುವ ಸಂಕಟಗಳ ವಿರುದ್ಧ ಬಲವಾದ ಪ್ರತಿಭಟನೆಯನ್ನು ದಾಖಲಿಸಬೇಕು ಎಂದು ಎಡಪಕ್ಷಗಳು ಮನವಿ ಮಾಡಿಕೊಂಡಿವೆ. ಈ ಪ್ರತಿಭಟನಾ ಕಾರ್ಯಾಚರಣೆಯಲ್ಲಿ ಎಲ್ಲ ಪ್ರಜಾಪ್ರಭುತ್ವವಾದಿ ಮತ್ತು ಜಾತ್ಯತೀತ ಮನಸ್ಸಿನ ಜನಗಳು ಮತ್ತು ಪಕ್ಷಗಳು ಸೇರಿಕೊಳ್ಳಬೇಕು ಎಂದೂ ಎಡಪಕ್ಷಗಳು ಮನವಿ ಮಾಡಿಕೊಂಡಿವೆ.

ಜನಗಳ ಹೋರಾಟಗಳಿಗೆ ಎಡಪಕ್ಷಗಳ ಬೆಂಬಲ

ಎಡಪಕ್ಷಗಳು ರಾಜಸ್ತಾನ, ಮಹಾರಾಷ್ಟ್ರ,ಮಧ್ಯಪ್ರದೇಶ, ಛತ್ತಿಸ್‌ಗಡ ಮುಂತಾದ ರಾಜ್ಯಗಳಲ್ಲಿ ರೈತರು ಬೆಂಬಲ ಬೆಲೆಗಳು ಮತ್ತು ಕೃಷಿ ಸಾಲ ಮನ್ನಾಕ್ಕಾಗಿ ಹೋರಾಟಕ್ಕೆ ಇಳಿದಿರುವುದಕ್ಕೆ ಅವರನ್ನು ಅಭಿನಂದಿಸಿವೆ.

ಕಾರ್ಮಿಕ ಸಂಘಗಳು ಪ್ರಕಟಿಸಿರುವ ನವಂಬರ್ 9ರಿಂದ 11 ರವರೆಗಿನ ಮಹಾಪಡಾವ್ ಕಾರ್ಯಕ್ರಮಕ್ಕೆ, ನವಂಬರ್20ರ ರೈತರ ಪಾರ್ಲಿಮೆಂಟ್ ಚಲೋ ರ‍್ಯಾಲಿ ಮತ್ತು ಜನಪ್ರಿಯ ಹೋರಾಟಗಳ ಜನ ಏಕತಾ ಮತ್ತು ಜನ ಅಧಿಕಾರ್ ಮಂಚ್‌ನ ಹೋರಾಟಗಳಿಗೆ  ಎಡಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ. ಮೋದಿ ಸರಕಾರದ ಆರ್ಥಿಕ ಧೋರಣೆಗಳ ವಿಧ್ವಂಸಕಾರಿ ಪರಿಣಾಮಗಳಿಂದ  ನರಳುತ್ತಿರುವ ಜನಗಳು ಈ ಪ್ರತಿಭಟನೆಗಳಲ್ಲಿ ಸೇರಿಕೊಳ್ಳಬೇಕು ಎಂದು ಅವುಹೇಳಿವೆ.

ರೊಹಿಂಗ್ಯ ನಿರಾಶ್ರಿತರನ್ನುಸಾವಿನ ದವಡೆಗೆ ಕಳಿಸಬೇಡಿ

ರೊಹಿಂಗ್ಯ ಜನಗಳನ್ನು ನಿರಾಶ್ರಿತರೆಂದು ಪರಿಗಣಿಸಬೇಕು ಎಂದು ಎಡಪಕ್ಷಗಳು ಸರಕಾರಕ್ಕೆ ಕರೆ ನೀಡಿವೆ. ಅವರನ್ನು ಮ್ಯಾನ್ಮರ್‌ಗೆ ಹಿಂದಕ್ಕೆ ಕಳಿಸಬಾರದು, ಏಕೆಂದರೆ ಹಿಂದಕ್ಕೇನಾದರೂ ಕಳಿಸಿದರೆ ಅವರ ಸಾವು ಖಂಡಿತ. ಮ್ಯಾನ್ಮರ್‌ನಲ್ಲಿ ಆಂತರಿಕ ಸಾಮೂಹಿಕ ಹತ್ಯಾಕಾಂಡವನ್ನು ನಿಲ್ಲಿಸಲು ಅಂರ‍್ರಾಷ್ಟ್ರೀಯ ವೇದಿಕೆಗಳಲ್ಲಿ ಎಲ್ಲ ಸಾಧನಗಳನ್ನು ಬಳಸಬೇಕು, ಇದೊಂದು ಅಂತರ‍್ರಾಷ್ಟಿಯ ಮಾನವೀಯ ಬಿಕ್ಕಟ್ಟು ಎಂದು ಪರಿಗಣಿಸಿ ವಿಶ್ವಸಂಸ್ಥೆಯನ್ನು ಒಳಗೊಳ್ಳಬೇಕು ಎಡಪಕ್ಷಗಳು ಆಗ್ರಹಿಸಿವೆ.

Leave a Reply

Your email address will not be published. Required fields are marked *