ಐ.ಆರ್.ಎಸ್. ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಗಳನ್ನು ವಜಾ ಮಾಡಿ-ರಾಜ್ಯ ಸಮಿತಿ ಆಗ್ರಹ

ಭಾರೀ ಶ್ರೀಮಂತರಿಗೆ ಕೊವಿಡ್‍ ತೆರಿಗೆಯ ಸೂಚನೆಗೆ ಸರಕಾರದ ಸಿಟ್ಟು- ಶ್ರೀಮಂತ-ಪರ ನಿಲುವಿನ ಭಂಡ ಪ್ರದರ್ಶನ
ಮೋದಿ ಸರಕಾರ ಇಂಡಿಯನ್ ರೆವಿನ್ಯೂ ಸರ್ವಿಸ್(ಐ.ಆರ್.ಎಸ್.)ನ ಅಧಿಕಾರಿಗಳ ಗುಂಪೊಂದರ ವಿರುದ್ಧ ಅವರು  ತೆರಿಗೆ ಆದಾಯಗಳನ್ನು ಹೆಚ್ಚಿಸುವ ಕುರಿತ ಒಂದು ಪ್ರಸ್ತಾವವನ್ನು ಅಧಿಕೃತ ಅನುಮತಿಯಿಲ್ಲದೆ ಪ್ರಕಟಿಸಿದ್ದಾರೆಂದು ಹೇಳಿ ಶಿಸ್ತು ಕ್ರಮಗಳಿಗೆ ಮುಂದಾದ ಕೇಂದ್ರ ಸರಕಾರದ ಬೆದರಿಕೆಯನ್ನು  ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ  ಮತ್ತು ಕೂಡಲೇ ಅಂತಹ ಕ್ರಮಗಳನ್ನು ಕೈ ಬಿಡಲು ಒತ್ತಾಯಿಸುತ್ತದೆ‌.
ಕೊವಿಡ್ -19 ವೈರಾಣುವಿನ ಗಂಭೀರ ಪರಿಣಾಮಗಳ ನಡುವೆ ಅರ್ಥವ್ಯವಸ್ಥೆಯನ್ನು ಮತ್ತೆ ಕಟ್ಟಲು ಒಂದು ಹಣಕಾಸು ಮಾರ್ಗ-ನಕಾಶೆ ತಯಾರಿಸುವಲ್ಲಿ ನೆರವಾಗುವ ಸಲಹೆ-ಸೂಚನೆಗಳನ್ನು ಕೊಡಬೇಕೆಂಬ  ಕೇಂದ್ರ  ಸರಕಾರದ ಕೇಳಿಕೆಗೆ ಸ್ಪಂದಿಸಿ, ಈ ಪ್ರಸ್ತಾವಗಳನ್ನು ಐ.ಆರ್.ಎಸ್. ಅಧಿಕಾರಿಗಳ ಈ ಗುಂಪು ‘ಫೋರ್ಸ್'( ಫಿಸ್ಕಲ್ ಆಪ್ಶನ್ಸ್ ಅಂಡ್ ರೆಸ್ಪಾನ್ಸಸ್ ಟು ಕೊವಿಡ್-೧೯ ಎಪಿಡೆಮಿಕ್-ಕೊವಿಡ್-೧೯ ಸಾಂಕ್ರಾಮಿಕಕ್ಕೆ ವಿತ್ತೀಯ ಆಯ್ಕೆಗಳು ಮತ್ತು ಸ್ಪಂದನೆಗಳು) ಎಂಬ ಪ್ರಬಂಧವನ್ನು ತಯಾರಿಸಿತ್ತು. ಅದು ಶ್ರೀಮಂತರ ಆದಾಯ ತೆರಿಗೆಯ ದರಗಳನ್ನು ೪೦%ಕ್ಕೆ ಹೆಚ್ಚಿಸಬೇಕು, ಮತ್ತು ೪% ದರದಲ್ಲಿ ಕೊವಿಡ್-19ರ ಸೆಸ್ ಹಾಕಬೇಕು ಎಂಬುದು ಅದರಲ್ಲಿ ನೀಡಿರುವ ಎರಡು ಪ್ರಮುಖ ಸೂಚನೆಗಳು ಎನ್ನಲಾಗಿದೆ.
ಇದರಿಂದ ಕೋಪಗೊಂಡ ಸರಕಾರ  ಶಿಸ್ತು ಕ್ರಮಕ್ಕೆ ಮುಂದಾಗಿರುವುದು ನಾಚಿಕೆಗೇಡು. ಇದು ಶ್ರೀಮಂತರನ್ನು ರಕ್ಷಿಸುವ ಅದರ ನಾಚಿಕೆಗೆಟ್ಟ ಬಣ್ಣವನ್ನು ಬಯಲುಗೊಳಿಸಿದೆ.
ಇದು ಮಾತ್ರವಲ್ಲಾ, ಉದ್ದೇಶಪೂರ್ವಕವಾಗಿಯೇ ಸುಸ್ತಿದಾರರಾಗಿರುವವರು ಮತ್ತು ತಲೆಮರೆಸಿಕೊಂಡಿರುವ ಬಂಡವಾಳದಾರರ ಸಾಲಗಳ ಸುಮಾರು 68,000.ಕೋಟಿ ರೂ ಗೂ ಅಧಿಕ ಮೊತ್ತ ರೈಟ್ ಆಫ್ ಮಾಡಿರುವುದು ಈಗ ಆರ್.ಟಿ.ಐ. ನಿಂದ ಬಯಲಾಗಿದೆ. ಇದೆಲ್ಲವೂ ಜನಗಳನ್ನು ಲೂಟಿ ಹೊಡೆಯುವ ಸರಕಾರ-ಕಾರ್ಪೊರೇಟ್ ಶಾಮೀಲುತನವನ್ನು ಮಗದೊಮ್ಮೆ ಬಯಲಿಗೆಳೆದಿದೆ ಎಂದು ಸಿಪಿಐಎಂ ಹೇಳಿದೆ. 
 
ಸರಕಾರ ತನ್ನ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿ ಭತ್ಯೆಯನ್ನು ಹಿಂದಿನ ದಿನಾಂಕದಿಂದಲೇ ಮತ್ತು ಮುಂದೆಯೂ  ಅನ್ವಯವಾಗುವಂತೆ ಸ್ಥಂಭನಗೊಳಿಸಿರುವುದು ಮತ್ತು ಕೋವಿಡ್ – 19 ವೈರಾಣು ವಿರುದ್ಧದ ಹೋರಾಟದಲ್ಲಿ ತೊಡಗಿರುವ ಬಹುಸಂಖ್ಯಾತ ಬಡವರಿಗೆ ಗಂಭೀರವಾಗಿ ನೆರವಾಗದಿರುವುದು ಎಲ್ಲವೂ   ಅದರ  ಶ್ರೀಮಂತ-ಪರ, ಬಡವರ-ವಿರೋಧಿ ಮತ್ತು ದುಡಿಯುವ ಜನ-ವಿರೋಧಿ ನಿಲುವನ್ನು ಎತ್ತಿ ತೋರಿಸುತ್ತದೆ ಎಂದು ಸಿಪಿಐಎಂ ವಿವರ್ಶಿಸಿದೆ.
ಅರ್ಥ ವ್ಯವಸ್ಥೆಯ ಪುನರುಜ್ಜೀವನದ ಬಗ್ಗೆ ಒಂದು ಮುಕ್ತ ಮತ್ತು ಪಾರದರ್ಶಕ ಸಂವಾದವನ್ನು ಆರಂಭಿಸಬೇಕೆಂದು ಒತ್ತಾಯಿಸಿದೆಯಲ್ಲದೇ,  ಭಾರೀ ಶ್ರೀಮಂತರಿಗೆ ಲೂಟಿ ಮಾಡಲು ಮತ್ತು ಸಂಪತ್ತು ರಾಶಿ ಹಾಕಿಕೊಳ್ಳಲು ಬಿಟ್ಟು, ಕೊವಿಡ್ ಪರಿಣಾಮಗಳ ಹೊರೆಯನ್ನು ಬಡವರು ಮತ್ತು ದುಡಿಯುವ ಜನಗಳ ಹೆಗಲ ಮೇಲೆ ಏಕಪಕ್ಷೀಯವಾಗಿ ವರ್ಗಾಯಿಸುವ ಸರಕಾರದ ನಡೆಗಳನ್ನು ಒಪ್ಪಲಾಗದ್ದು ಮತ್ತು ಖಂಡಿತವಾಗಿಯೂ ಪ್ರತಿರೋಧಿಸುವ ವಿಚಾರವಾಗಿದೆ ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಹೇಳಿದೆ.
ಯು. ಬಸವರಾಜ
ಕಾರ್ಯದರ್ಶಿ

Leave a Reply

Your email address will not be published. Required fields are marked *