ಜಾನುವಾರು ಹತ್ಯೆ ನಿಷೇಧ ಸುಗ್ರೀವಾಜ್ಞೆ ಜಾರಿಗೆ ತೀವ್ರ ವಿರೋಧ

ರಾಜ್ಯ ಸರಕಾರ ಜಾನುವಾರು ಹತ್ಯೆ ನಿಷೇಧ ಸುಗ್ರೀವಾಜ್ಞೆಯನ್ನು ರಾಜ್ಯದ ಜನತೆಯ ತೀವ್ರ ವಿರೋಧದ ನಡುವೆಯೂ ಜಾರಿಗೆ ತರಲು ಮುಂದಾಗುತ್ತಿರುವ ದೌರ್ಜನ್ಯದ ಕ್ರಮವನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಕರ್ನಾಟಕ ರಾಜ್ಯ ಸಮಿತಿಯು ಬಲವಾಗಿ ಖಂಡಿಸುತ್ತದೆ ಮತ್ತು ಈ ಕೂಡಲೇ ಅದನ್ನು ವಾಪಾಸು ಪಡೆಯುವಂತೆ ಒತ್ತಾಯಿಸುತ್ತದೆ.

ಇದೊಂದು ಕರಾಳ ಸುಗ್ರೀವಾಜ್ಞೆಯಾಗಿದ್ದು ಜಾನುವಾರು ಉಪ ಕಸುಬು ಮತ್ತು ಜಾನುವಾರು ಆಧಾರಿತ ಹೈನೋದ್ಯಮ, ಮಾಂಸೋದ್ಯಮ, ಚರ್ಮೋದ್ಯಮ ಮತ್ತು ಔಷದ ಉದ್ಯಮಗಳನ್ನು ನಾಶಗೊಳಿಸಿ ಮತ್ತು ಕಾರ್ಪೋರೇಟ್ ಕಂಪನಿಗಳ ತೆಕ್ಕೆಗೆ ಅವುಗಳನ್ನು ಅತ್ಯಂತ ವೇಗವಾಗಿ ದೂಡುವ ವಿನಾಶಕಾರಿ ಹುನ್ನಾರವಿದಾಗಿದೆ. ಇದರಿಂದ ಮಿಲಿಯಂತರ ಜನತೆಯ ಉದ್ಯೋಗಗಳು ನಾಶವಾಗಲಿವೆ ಮತ್ತು ಇದು ನಿರುದ್ಯೋಗದ ಪಡೆಯನ್ನು ವ್ಯಾಪಕವಾಗಿ ಹೆಚ್ಚಿಸಲಿದೆ.

ಇದು, ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ದಲಿತ ಸಮುದಾಯಗಳ, ಅಲ್ಪಸಂಖ್ಯಾತ ಬಹುತೇಕರ ಆಹಾರದ ಹಾಗೂ ಉದ್ಯೋಗದ ಹಕ್ಕಿನ ಮೇಲಿನ ಧಾಳಿಯಾಗಿದೆ. ಇದರಿಂದ ದಲಿತ ಸಂಕುಲ ಪರಂಪರೆಯಿಂದ ತನ್ನ ಬದುಕಿಗಾಗಿ ಬಳಸುತ್ತಾ ಬಂದ ಏಕೈಕ ಪೌಷ್ಠಿಕ ಆಹಾರದ ಅಭಾವವನ್ನು ತೀವ್ರವಾಗಿ ಎದುರಿಸಿ, ಸಂಕುಲ ಸಂರಕ್ಷಣೆಯ ಸಮಸ್ಯೆಯನ್ನು ಗಂಭೀರವಾಗಿ ಎದುರಿಸಲಿದೆ.

ಮಾತ್ರವಲ್ಲಾ, ರಾಜ್ಯದಲ್ಲಿ ಕೋಮು ವಿಭಜನೆಗೆ ಮತ್ತು ದ್ವೇಷಕ್ಕೆ ಇದು ಕುಮ್ಮಕ್ಕು ನೀಡಲಿದೆ. ಅಲ್ಪಸಂಖ್ಯಾತರ ಮೇಲಿನ ದಾಳಿಗೆ ನೆರವಾಗಲಿದೆ.

ಒಟ್ಟಾರೇ ಇದು ಜಾತ್ಯಾತೀತ ಪ್ರಜಾಸತ್ತೆಯ ಸಂವಿಧಾನದ ವಿರೋಧಿಯಾಗಿದೆ.

ಇಂತಹ ಯಾವುದೇ ಸಂಕಷ್ಠಗಳ ನಿವಾರಣೆಗೆ ಅಗತ್ಯವಾದ ಯಾವುದೇ ಪರಿಹಾರದ ಬಗೆಗೆ ಸದರಿ ಸುಗ್ರೀವಾಜ್ಞೆ ಮತ್ತು ಸರಕಾರ ಕ್ರಮವಹಿಸಿಲ್ಲ.

ರಾಜ್ಯವು ಈಗಾಗಲೇ ತೀವ್ರ ಅರ್ಥಿಕ ಹಾಗೂ ಸಾಮಾಜಿಕ ಸಂಕಷ್ಠಗಳನ್ನು ಎದುರಿಸುತ್ತಿದ್ದು, ಈ ಸುಗ್ರೀವಾಜ್ಞೆಯು ಮತ್ತಷ್ಠು ಸಂಕಷ್ಠವನ್ನು ಹೇರಲಿದೆ. ಆದ್ದರಿಂದ ಅದನ್ನು ವಾಪಾಸು ಪಡೆಯುವುದು ಅಗತ್ಯವಿದೆ.

ಯು. ಬಸವರಾಜ,

ಕಾರ್ಯದರ್ಶಿ

Leave a Reply

Your email address will not be published. Required fields are marked *