ದುರಾಗ್ರಹ ಬಿಟ್ಟು ಕೃಷಿ ಕಾಯ್ದೆಗಳನ್ನು ರದ್ದು ಮಾಡಿ-ಮೋದಿ ಸರಕಾರಕ್ಕೆ ಎಡಪಕ್ಷಗಳ ಆಗ್ರಹ

ಕೇಂದ್ರ ಸರಕಾರ ತನ್ನ ಮೊಂಡುತನವನ್ನು ಬಿಡಬೇಕು, ಈ ವಾರ ಆರಂಬವಾಗಲಿರುವ ಸಂಸತ್ತಿನ ಬಜೆಟ್‍ ಅಧಿವೇಶನದಲ್ಲಿ ಈ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಲಾಗುವುದು ಎಂದು ತಕ್ಷಣವೇ ರೈತರಿಗೆ ತಿಳಿಸಬೇಕು ಎಂದು ಎಡಪಕ್ಷಗಳು ಆಗ್ರಹಿಸಿವೆ.

ಈಗಾಗಲೇ ಸರಕಾರ ಈ ಕಾಯ್ದೆಗಳನ್ನು ಹದಿನೆಂಟು ತಿಂಗಳು ಅಮಾನತಿನಲ್ಲಿಡಲು ತಾನು ಸಿದ್ಧ ಎಂದು ಹೇಳಿದೆ. ಸಂಸತ್ತು ಮಾಡಿರುವ ಶಾಸನಗಳು ರಾಷ್ಟ್ರಪತಿಗಳು ಸಹಿ ಮಾಡಿ, ರಾಜಪತ್ರ(ಗಜೆಟ್‍)ದಲ್ಲಿ ಅಧಿಸೂಚಿತಗೊಂಡ ಮೇಲೆ ಈ ನಾಡಿನ ಕಾನೂನುಗಳಾಗುತ್ತವೆ. ಅವನ್ನು ಅಮಾನತಿನಲ್ಲಿಡಲು ಸಾಧ್ಯವಿಲ್ಲ. ಅವನ್ನು ರದ್ದುಗೊಳಿಸದಿದ್ದರೆ ಜಾರಿಗೊಳಿಸಬೇಕಾಗುತ್ತದೆ. ಆದ್ದರಿಂದ ಸರಕಾರ ತರ್ಕಬದ್ಧವಾಗಿರಬೇಕು, ಈ ಕಾಯ್ದೆಗಳನ್ನು ರದ್ದು ಮಾಡಿ, ಕರ್ಷಕ ಸುಧಾರಣೆಗಳ ಬಗ್ಗೆ ರೈತರು ಮತ್ತು ರಾಜ್ಯಸರಕಾರಗಳೂ ಸೇರಿದಂತೆ ಇತರ ಭಾಗೀದಾರರೊಂದಿಗೆ ಚರ್ಚಿಸಬೇಕು, ಆನಂತರ ಯಾವುದಾದರೂ ಪ್ರಸ್ತಾವಗಳಿದ್ದರೆ ಅವುಗಳನ್ನು  ಪರಿಶೀಲಿಸಲು ಮತ್ತು ಚರ್ಚಿಸಲು ಸಂಸತ್ತಿನ ಮುಂದೆ ತರಬೇಕು ಎಂದು ಎಡಪಕ್ಷಗಳು ಸೂಚಿಸಿವೆ.

ದಿಲ್ಲಿಯ ಗಡಿಗಳಲ್ಲಿ ತೀವ್ರ ಚಳಿಗಾಳಿ ಎದುರಿಸುತ್ತಲೇ ಪ್ರತಿಭಟಿಸುತ್ತಿರುವ ಲಕ್ಷಾಂತರ ರೈತರು, ಮತ್ತು ಅವರಿಗೆ ಸೌಹಾರ್ದ ವ್ಯಕ್ತಪಡಿಸುತ್ತ ದೇಶಾದ್ಯಂತ ಶಾಂತಿಯುತವಾಗಿ  ಪ್ರತಿಭಟಿಸುತ್ತಿರುವ ಇನ್ನೂ ಲಕ್ಷಾಂತರ ಜನಗಳ  ದೃಢನಿರ್ಧಾರ, ಐಕ್ಯತೆ ಮತ್ತು ದೃಢ ಸಂಕಲ್ಪವನ್ನು ಎಡಪಕ್ಷಗಳು ಪ್ರಶಂಸಿಸಿವೆ.

ಇದುವರೆಗೆ ಈ ಹೋರಾಟದಲ್ಲಿ ನೂರಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಪ್ರತಿಭಟನಾ ಚಳುವಳಿಗಳು ದಿನೇದಿನೆ ಬಲಗೂಡಿಸಿಕೊಳ್ಳುತ್ತಿವೆ. ರೈತರು ನಮ್ಮ ಜಾತ್ಯತೀತ, ಪ್ರಜಾಸತ್ತಾತ್ಮಕ ಸಂವಿಧಾನದ ರಕ್ಷಣೆಗೆ ಮತ್ತು ಈ ಕಾಯ್ದೆಗಳ ರದ್ಧತಿಗೆ ಗಣತಂತ್ರ ದಿನದಂದು ‘ಟ್ರಾಕ್ಟರ್ ಪರೇಡ್‍’ ನಡೆಸುವ ದೃಢ ಸಂಕಲ್ವವನ್ನು ಮಾಡಿದ್ದಾರೆ. ಇದು ಪ್ರಶಂಸಾರ್ಹ ಎನ್ನುತ್ತ ಎಡಪಕ್ಷಗಳು ನಮ್ಮ ಅನ್ನದಾತರ ಈ ಚಾರಿತ್ರಿಕ ಹೋರಾಟಕ್ಕೆ ಬೆಂಬಲ ಮತ್ತು ಸೌಹಾರ್ದವನ್ನು ಪುನರುಚ್ಛರಿಸುವುದಾಗಿ ಐದು ಎಡಪಕ್ಷಗಳಾದ ಸಿಪಿಐ(ಎಂ), ಸಿಪಿಐ, ಸಿಪಿಐ(ಎಂಎಲ್)-ಲಿಬರೇಷನ್, ಫಾರ್ವರ್ಡ್ ಬ್ಲಾಕ್‍ ಮತ್ತು ಆರ್.ಎಸ್..ಪಿ.ಯ ಪ್ರಧಾನ ಕಾರ್ಯದರ್ಶಿಗಳು ಜಂಟಿಯಾಗಿ ನೀಡಿರುವ ಹೇಳಿಕೆ ತಿಳಿಸಿದೆ.

Leave a Reply

Your email address will not be published. Required fields are marked *