ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನ ವಿರೋಧಿ ನೀತಿಗಳನ್ನು ಬಲವಾಗಿ ಪ್ರತಿರೋಧಿಸಿ ಮತ್ತು ಕೋವಿಡ್ ಬಾಧೆಯಿಂದ ಜನತೆಯನ್ನು ರಕ್ಷಿಸಲು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ), ಭಾರತ ಕಮ್ಯುನಿಸ್ಟ್ ಪಕ್ಷ-ಸಿಪಿಐ, ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯ(ಕಮ್ಯುನಿಸ್ಟ್)-ಎಸ್ಯುಸಿಐ(ಸಿ), ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸ್ವಾದಿ, ಲೆನಿನ್ ವಾದಿ -ಲಿಬರೇಷನ್)-ಸಿಪಿಐ(ಎಂಎಲ್) ಲಿಬರೇಷನ್, ಫಾರ್ವರ್ಡ್ ಬ್ಲಾಕ್, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯ-ಆರ್ಪಿಐ, ಸ್ವರಾಜ್ ಇಂಡಿಯಾ ಪಕ್ಷಗಳ ರಾಜ್ಯ ಘಟಕಗಳ ವತಿಯಿಂದ ಒಟ್ಟು ಏಳು ಎಡ ಮತ್ತು ಜಾತ್ಯಾತೀತ ಪ್ರಜಾಸತ್ತಾತ್ಮಕ ರಾಜಕೀಯ ಪಕ್ಷಗಳು ನಾಳೆ (28.05.2021ರಂದು) ಬೃಹತ್ ಆನ್ಲೈನ್ ಪ್ರತಿಭಟನಾ ಬಹಿರಂಗ ಸಭೆಯನ್ನು ಸಂಘಟಿಸಲು ನಿರ್ಧರಿಸಿವೆ. ಪ್ರತಿಭಟನಾ ಸಭೆಯಲ್ಲಿ ನೇರವಾಗಿ ಹಾಗೂ ಅಪ್ರತ್ಯಕ್ಷವಾಗಿ ಸುಮಾರು 01 ಲಕ್ಷ ಜನತೆ ಭಾಗಿಯಾಗುವಂತೆ ಕ್ರಮವಹಿಸಲು ನಿರ್ಧರಿಸಿದ್ದೇವೆ.
ಸದರಿ ಪ್ರತಿಭಟನಾ ಸಭೆಯು ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಕ್ಷಣವೇ ರೈತ-ಕಾರ್ಮಿಕ ಮತ್ತು ಗ್ರಾಹಕ ವಿರೋಧಿಯಾದ ಅದೇ ರೀತಿ, ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರವಾದ ಕೃಷಿ ಕಾಯ್ದೆಗಳು, ಕಾರ್ಮಿಕ ಸಂಹಿತೆಗಳು, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯಾ ನಿಷೇಧ ತಿದ್ದುಪಡಿ ಕಾಯ್ದೆಗಳನ್ನು ಮತ್ತು ಸಾರ್ವಜನಿಕ ರಂಗದ ಖಾಸಗೀಕರಣವನ್ನು ವಾಪಾಸ್ಸು ಪಡೆಯುವಂತೆ ಒತ್ತಾಯಿಸಲಿದೆ.
ಅದೇ ರೀತಿ, ಸಾರ್ವತ್ರಿಕ ಉಚಿತ ಕೋವಿಡ್ ಲಸಿಕೆಗಾಗಿ, ಕೋವಿಡ್ ಸೋಂಕಿತರೆಲ್ಲರಿಗೆ ಉಚಿತ ಶೂಶೃಷೆ ಹಾಗೂ ಔಷಧಿಗಳಿಗಾಗಿ ಮತ್ತು ನಿರುದ್ಯೋಗ ಪರಿಹಾರಕ್ಕಾಗಿ ಒತ್ತಾಯಿಸಲಿದೆ.