ಎಡ-ಜಾತ್ಯಾತೀತ ಪ್ರಜಾಸತ್ತಾತ್ಮಕ ಏಳು ಪಕ್ಷಗಳ ಪ್ರತಿಭಟನೆ: ರಾಜ್ಯದಾದ್ಯಂತ ಯಶಸ್ವಿ

ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿ ಮತ್ತು ಕೋವಿಡ್ ನಿರ್ವಹಣೆಯಲ್ಲಿನ ಕೊಲೆಪಾತಕ ನಿರ್ಲಕ್ಷ್ಯವನ್ನು ಖಂಡಿಸಿ, ಕೋವಿಡ್ ಪರಿಹಾರಕ್ಕಾಗಿ ಒತ್ತಾಯಿಸಿ, ಎಡ ಮತ್ತು ಜಾತ್ಯಾತೀತ ಪ್ರಜಾಸತ್ತಾತ್ಮಕ ಏಳು ಪಕ್ಷಗಳು ಇಂದು ಕರೆ ನೀಡಿದ್ದ ರಾಜ್ಯವ್ಯಾಪಿ ಪ್ರತಿಭಟನೆಯು ಅತ್ಯಂತ ಯಶಸ್ವಿಯಾಗಿದೆ.

ಈ ಪ್ರತಿಭಟನೆಯಲ್ಲಿ ರಾಜ್ಯದಾದ್ಯಂತ ಭಾಗಿಯಾದ ಸಾವಿರಾರು ನಾಗರೀಕರು ಮತ್ತು ಕಾರ್ಯಕರ್ತರನ್ನು ನಮ್ಮ ಏಳು ಪಕ್ಷಗಳಾದ ಸಿಪಿಐ(ಎಂ), ಸಿಪಿಐ, ಎಸ್‌ಯುಸಿಐ(ಸಿ), ಸಿಪಿಐ(ಎಂಎಲ್‌) ಲಿಬರೇಷನ್‌, ಎಐಎಫ್‌ಬಿ, ಆರ್‌ಪಿಐ, ಸ್ವರಾಜ್‌ ಇಂಡಿಯಾ ಪಕ್ಷಗಳ ರಾಜ್ಯ ಘಟಕಗಳ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತವೆ.

ಕೋವಿಡ್ ಮತ್ತು ಲಾಕ್‌ಡೌನ್ ಸಂಕಷ್ಟದ ನಡುವೆಯೂ, ಕೋವಿಡ್ ಸುರಕ್ಷತೆಯೊಂದಿಗೆ ಊರೂರುಗಳು ಮತ್ತು ಮನೆ ಮನೆಗಳ ಮುಂದುಗಡೆ ಕೆಳಕಂಡ ಹಕ್ಕೊತ್ತಾಯಗಳಿಗಾಗಿ ಪ್ರತಿಭಟನೆ ನಡೆಸಲು ಕರೆ ಕೊಡಲಾಗಿತ್ತು. ಅದರಂತೆ, ಪ್ರತಿಭಟನೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಡೆದಿದೆ.

ತಕ್ಷಣವೇ ರಾಜ್ಯ ಸರಕಾರ ನಮ್ಮ ಎಲ್ಲಾ ಹಕ್ಕೊತ್ತಾಯಗಳನ್ನು ಪರಿಗಣಿಸುವಂತೆ ಮರಳಿ ಒತ್ತಾಯಿಸುತ್ತೇವೆ.

ಹಕ್ಕೊತ್ತಾಯಗಳು :

  1. ರಾಜ್ಯದ ಎಲ್ಲಾ 18 ವರ್ಷ ಮೇಲ್ಪಟ್ಟ ಜನತೆಗೆ ಉಚಿತ ಸಾರ್ವತ್ರಿಕ ಲಸಿಕೀಕರಣಕ್ಕೆ ವಿಳಂಬಿಸದೇ ತಕ್ಷಣವೇ ಕ್ರಮವಹಿಸಬೇಕು.
  2. ಆದಾಯ ತೆರಿಗೆ ವ್ಯಾಪ್ತಿಗೊಳಪಡದ ಎಲ್ಲಾ ಕುಟುಂಬಗಳಿಗೆ ಮಾಸಿಕ ತಲಾ 10 ಕೇಜಿ ಸಮಗ್ರ ಆಹಾರಧಾನ್ಯಗಳ ಮತ್ತು ಆರೋಗ್ಯ ಸುರಕ್ಷತಾ ಸಾಮಗ್ರಿಗಳಿರುವ ಪೊಟ್ಟಣವನ್ನು ಮತ್ತು 10 ಸಾವಿರ ರೂಪಾಯಿಗಳ ನೆರವನ್ನು ಕೋವಿಡ್ ಸಮಸ್ಯೆ ನಿಯಂತ್ರಣಕ್ಕೆ ಬಂದು ಯಥಾ ಸ್ಥಿತಿ ಮುಂದುವರೆಯುವವರೆಗೆ ನೀಡಬೇಕು.ಪ್ರತಿ ಗ್ರಾಮ/ ನಗರಗಳ ದಲಿತರು ಮತ್ತು ಬಡವರು ಕಾರ್ಯನಿರ್ವಹಿಸುವ ಪ್ರದೇಶಗಳಲ್ಲಿ ಇಂದಿರಾ ಕ್ಯಾಂಟೀನ್ ಗಳನ್ನು ವಿಸ್ಥರಿಸಬೇಕು ಮತ್ತು ಅವುಗಳನ್ನು ಬಲಗೊಳಿಸಬೇಕು.
  3. ಹೊಲಗಳಲ್ಲಿಯೇ ಕೊಳೆತು ಹೋದ ಹೂ, ಹಣ್ಣು, ಆಲುಗಡ್ಡೆ, ಈರುಳ್ಳಿ ಮುಂತಾದ ವಿವಿಧ ತರಕಾರಿ ಬೆಳೆಗಳಿಗೆ ತಲಾ ಎಕರೆಗೆ ಕನಿಷ್ಠ 25,000 ರೂಗಳನ್ನು ಒದಗಿಸಬೇಕು ಮತ್ತು ರಾಜ್ಯದ ಎಲ್ಲಾ ರೈತರು, ಕೂಲಿಕಾರರು, ಕಾರ್ಮಿಕರು, ಕಸುಬುದಾರರು, ದಲಿತರು, ಆದಿವಾಸಿಗಳು, ಅಲ್ಪ ಸಂಖ್ಯಾತರು ಮತ್ತು ಮಹಿಳೆಯರ ಎಲ್ಲ ರೀತಿಯ ಸಾಲಗಳನ್ನು ಒಂದು ಬಾರಿ ಕೇರಳದ ಋಣ ಮುಕ್ತ ಕಾಯ್ದೆ ಮಾದರಿಯಲ್ಲಿ ಮನ್ನಾ ಮಾಡಬೇಕು.
  4. ಕೇಂದ್ರ  ಸರಕಾರ ಜಾರಿಗೆ ತರುತ್ತಿರುವ ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರವಾದ ರೈತ ಹಾಗೂ ಕಾರ್ಮಿಕರ ಮತ್ತು ಗ್ರಾಹಕರ ವಿರೋಧಿಗಳಾದ ತಿದ್ದುಪಡಿ ಕೃಷಿ ಕಾಯ್ದೆಗಳು ಹಾಗೂ ಕಾರ್ಮಿಕ ಸಂಹಿತೆಗಳು, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ – 2020, ವಿದ್ಯುತ್ ತಿದ್ದುಪಡಿ ಮಸೂದೆ- 2020 ಹಾಗೂ ರಾಜ್ಯ ಸರಕಾರದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ – 2020, ಎಪಿಎಂಸಿ ತಿದ್ದುಪಡಿ ಕಾಯ್ದೆ – 2020, ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ – 2020 ಇವುಗಳನ್ನು ತಕ್ಷಣವೇ ವಾಪಾಸು ಪಡೆಯ ಬೇಕು. ಅದೇ ರೀತಿ ಸಾರ್ವಜನಕ ರಂಗದ ಉದ್ದಿಮೆಗಳು ಮತ್ತು ಸಂಸ್ಥೆಗಳ ಖಾಸಗೀಕರಣವನ್ನು ತಡೆಯಬೇಕು.
  5. ಕನಿಷ್ಟ ಬೆಂಬಲ ಬೆಲೆಯ ಖಾತ್ರಿ ಪಡಿಸಲು ಬೆಂಬಲ ಬೆಲೆ ಕಾಯ್ದೆ ಮತ್ತು ಪ್ರಕೃತಿ ವಿಕೋಪಗಳಿಂದ  ರೈತರ ಸಂರಕ್ಷಣೆಗೆ ಋಣ ಮುಕ್ತ ಕಾಯ್ದೆ ಗಳನ್ನು ಜಾರಿಗೊಳಿಸಬೇಕು.
  6. ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಗಳಿಗೂ ಹಾಗೂ 200 ದಿನಗಳಿಗೆ ವಿಸ್ಥರಿಸಬೇಕು. ಕೂಲಿಯನ್ನು  ವೇತನದಂತೆ ಈ ಕೂಡಲೇ 424 ರೂಗಳಿಗೆ ಹೆಚ್ಚಿಸಬೇಕು.
  7. ಕೋವಿಡ್ ಮುಂಚೂಣಿಯ ಎಲ್ಲಾ ಕಾರ್ಯಕರ್ತರಿಗೆ ವಿಮೆ ಸೌಲಭ್ಯಗಳೊಂದಿಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಮಸಣ ಕೆಲಸಗಾರರು, ಮುನಿಸಿಪಲ್ ಕೆಲಸಗಾರರು ಮುಂತಾದ ಶುಚಿ ಕಾರ್ಯದಲ್ಲಿತೊಡಗಿದವರಿಗೂ ಸೌಲಭ್ಯಗಳನ್ನು ವಿಸ್ಥರಿಸಬೇಕು.

Leave a Reply

Your email address will not be published. Required fields are marked *