ರೈತರ ಧೀರ ಹೋರಾಟದ ಐತಿಹಾಸಿಕ ವಿಜಯಕ್ಕೆ ವೀರವಂದನೆ

ಸಂಯುಕ್ತ ಕಿಸಾನ್ ಮೋರ್ಚಾದ ನೇತೃತ್ವದಲ್ಲಿ ರೈತರು  ವರ್ಷವಿಡೀ ನಡೆಸಿರುವ ಉತ್ಸಾಹಭರಿತ, ಸ್ಪೂರ್ತಿದಾಯಕ ಮತ್ತು ಧೀರ ಹೋರಾಟದ ಐತಿಹಾಸಿಕ ವಿಜಯಕ್ಕೆ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯೂರೋ ವೀರವಂದನೆಗಳನ್ನು ಸಲ್ಲಿಸುವುದಾಗಿ ಹೇಳಿದೆ.

ಹಟಮಾರಿ  ಪ್ರಧಾನಿ ಮತ್ತು ಅವರ ಸರ್ಕಾರವು ಬಗ್ಗಲೇಬೇಕಾಗಿ ಬಂದಿದೆ. ಆದರೂ ಮೋದಿಯವರು ಈ ಕರಾಳ ಕಾಯ್ದೆಗಳನ್ನು ಸಮರ್ಥಿಸಿಕೊಳ್ಳುತ್ತಲೇ ಇದ್ದಾರೆ, ರೈತರ ಒಂದು ವರ್ಗವನ್ನು ದಾರಿ ತಪ್ಪಿಸಲಾಗುತ್ತಿದೆ  ಎಂದು ದೂಷಿಸುತ್ತಿದ್ದಾರೆ. ನಮ್ಮ ರೈತರ ಸಾವಿನ ಬಗ್ಗೆ ಅಥವಾ ಅವರ ಮೇಲಿನ ದಾಳಿಗಳ ಬಗ್ಗೆ ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ.

ಈ ಕರಾಳ ಕಾನೂನುಗಳನ್ನು ರದ್ದುಗೊಳಿಸುವಾಗ ಸಂಸತ್ತು ಎಲ್ಲಾ ಕೃಷಿ ಬೆಳೆಗಳನ್ನು ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಗಳಲ್ಲಿ ಮಾರಾಟ ಮಾಡುವ ಕಾನೂನುಬದ್ಧ ಹಕ್ಕನ್ನು ರೂಪಿಸಬೇಕು ಎಂದು ಸಿಪಿಐ(ಎಂ) ಪುನರುಚ್ಚರಿಸಿದೆ.

ಈ ಹೋರಾಟದಲ್ಲಿ 750ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಅವರು ಬಿಜೆಪಿ ಆಡಳಿತದಿಂದ ಮಿಲಿಟರಿ ಮಾದರಿಯ ರಸ್ತೆ ತಡೆಗಳು, ಬೆದರಿಕೆಗಳು, ಭೀತಿಕಾರಕ ಕೃತ್ಯಗಳು  ಮತ್ತು ಕೊಲೆಗಡುಕ ದೈಹಿಕ ದಾಳಿಗಳನ್ನು ಎದುರಿಸಿದರು. ಇಂತಹ ಕೃತ್ಯಗಳಲ್ಲಿ ತೊಡಗಿರುವವರ ಎಲ್ಲರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಸಿಪಿಐ(ಎಂ) ಪೊಲಿಟ್‍ ಬ್ಯುರೊ, ನಮ್ಮ ರೈತರ ದೃಢಸಂಕಲ್ಪ ಶ್ಲಾಘನಾರ್ಹ ಎಂದಿದೆ ಮತ್ತು ಅವರು ತಮ್ಮ ಹಳ್ಳಿಗಳಿಗೆ ಹಿಂದಿರುಗುವ ಮೊದಲು ಈ ಭರವಸೆಗಳು ಸಾಕಾರಗೊಳ್ಳುವವರೆಗೆ ಕಾಯುತ್ತಾರೆ  ಎಂದಿರುವ ಸಂಯುಕ್ತ ಕಿಸಾನ್‍ ಮೋರ್ಚಾದ ನಿಲುವನ್ನು  ಅನುಮೋದಿಸಿದೆ.

Leave a Reply

Your email address will not be published. Required fields are marked *