ಹಣ್ಣು ವ್ಯಾಪಾರಿಗಳ ಮೇಲೆ ಶ್ರೀರಾಮ ಸೇನೆಯ ಗುಂಡಾಧಾಳಿ – ಕ್ರಮ ವಹಿಸಿ, ಇಲ್ಲವೇ ತೊಲಗಿ: ಸಿಪಿಐ(ಎಂ) ಒತ್ತಾಯ

 ನೆನ್ನೆ(ಏಪ್ರಿಲ್‌ 09) ಧಾರವಾಡ ಜಿಲ್ಲೆಯ ನುಗ್ಗಿಕೇರಿಯಲ್ಲಿ ಕಳೆದ ಎರಡು ದಶಕಗಳಿಂದ ಹಣ್ಣು ವ್ಯಾಪಾರದಲ್ಲಿ ತೊಡಗಿದ್ದ ಸಣ್ಣ ವ್ಯಾಪಾರಿಗಳ ಮೇಲೆ ಧಾಳಿ ನಡೆಸಿ ಹಲ್ಲೆ ಮಾಡಿರುವುದಲ್ಲದೇ ಅವರು ಮಾರಾಟಕ್ಕಾಗಿ ಸಂಗ್ರಹಿಸಿದ್ದ ಕಲ್ಲಂಗಡಿ ಹಣ್ಣುಗಳನ್ನು ರಸ್ತೆಗೆ ದೂಡಿ ನಾಶ ಪಡಿಸಿದ ಶ್ರೀ ರಾಮ ಸೇನೆಯ ಗುಂಡಾಧಾಳಿಯನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ.

ಮಾತ್ರವಲ್ಲಾ, ರಾಜ್ಯ ಸರಕಾರ ಈ ಕೂಡಲೇ ಈ ಗುಂಡಾದಾಳಿಯಲ್ಲಿ ತೊಡಗಿದವರನ್ನು ಮತ್ತು ಅವರಿಗೆ ನಿರ್ದೇಶನ ನೀಡಿದ ಗುಂಡಾ ನಾಯಕರನ್ನು ಬಂಧಿಸಿ ಅವರ ಮೇಲೆ ಗುಂಡಾ ಕಾಯ್ದೆಯಡಿ ಮೊಕದ್ದಮೆಗಳನ್ನು ದಾಖಲಿಸಿ ಅಗತ್ಯ ಕಾನೂನಿನ ಕ್ರಮವಹಿಸಬೇಕೆಂದು ಮತ್ತು ನಷ್ಟಕ್ಕೊಳಗಾದ ಮುಸ್ಲಿಂ ವ್ಯಾಪಾರಿಗಳಿಗೆ ತಕ್ಷಣವೇ ನಷ್ಟ ಪರಿಹಾರವನ್ನು ಒದಗಿಸಲು ಕ್ರಮವಹಿಸಬೇಕೆಂದು ಸಿಪಿಐ(ಎಂ) ಪಕ್ಷವು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಲವಾಗಿ ಒತ್ತಾಯಿಸುತ್ತದೆ.

ಅದೇ ರೀತಿ,  ರಾಜ್ಯದಾದ್ಯಂತ ಇರುವ ಎಲ್ಲ ಅಲ್ಪಸಂಖ್ಯಾತ ಹಾಗು ಮುಸ್ಲಿಂ ವ್ಯಾಪಾರಿಗಳಿಗೆ ಇಂತಹ ಗುಂಡಾಗಳಿಂದ ರಕ್ಷಣೆ ಒದಗಿಸಬೇಕೆಂದು ಸಿಪಿಐ(ಎಂ) ಒತ್ತಾಯಿಸುತ್ತದೆ.

ಇಂತಹ ಘಟನೆಗಳು ರಾಜ್ಯದ ಸೌಹಾರ್ಧತೆಯನ್ನು ದುರ್ಬಲಗೊಳಿಸುವುದು ಮಾತ್ರವಲ್ಲ ಎಲ್ಲ ಜನತೆಯ ಮೇಲೆ ಧಾಳಿ ನಡೆಸಿ ಹಫ್ತಾ ವಸೂಲಿ ಮಾಡುವಂಹ ಮಾಫಿಯಾ ಶಕ್ತಿಗಳಿಗೆ ಜನ್ಮ ನೀಡಲಿವೆ. ಇದರಿಂದ ಕೇವಲ ಮುಸ್ಲಿಂ ಧರ್ಮದ ವ್ಯಾಪಾರಿಗಳು ಮಾತ್ರವಲ್ಲಾ ಎಲ್ಲ ಧರ್ಮೀಯರು ಸಂಕಷ್ಟಕ್ಕೆ ಈಡಾಗುತ್ತಾರೆ ಎಂಬುದು ಅವಶ್ಯವಾಗಿ ಗಮನಿಸಬೇಕೆಂದು ರಾಜ್ಯದ ಎಲ್ಲ ವ್ಯಾಪಾರಿಗಳಿಗೆ ಮತ್ತು ನಾಗರೀಕರನ್ನು ಎಚ್ಚರಿಸಿದೆ.

ರಾಜ್ಯ ಸರಕಾರವು ಇಂತಹ ಗುಂಡಾ ಧಾಳಿಯನ್ನು ನಿಗ್ರಹಿಸಲಾಗದಂತೆ ದುರ್ಬಲಗೊಳಿಸಲಾಗಿದೆ. ಆರ್.ಎಸ್.ಎಸ್. ಹಿಡಿತದಲ್ಲಿ ಸರಕಾರ ಸಿಲುಕಿರುವುದರಿಂದ ಈ ಮತಾಂಧ ಗುಂಡಾಗಳು ಬಹಿರಂಗ ಧಾಳಿಗೆ ಮುಂದಾಗುತ್ತಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಇಂಹತ ಗೂಂಡಾಗಿರಿಗಳು ಹೆಚ್ಚಾಗುವಂತಾಗಿದೆ.

ಈಗಾಗಲೇ, ಗದಗ ಜಿಲ್ಲೆಯ ನರಗುಂದದ ಇಬ್ಬರು ಅಲ್ಪಸಂಖ್ಯಾತ ಯುವಕರನ್ನು ಬಹಿರಂಗವಾಗಿ ಭಜರಂಗ ದಳದ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ನಡೆಸಿ ಒಬ್ಬ ಯುವಕನನ್ನು ಕೊಂದಿದ್ದಾರೆ. ಅದೇ ರೀತಿ ದಕ್ಷಿಣ ಜಿಲ್ಲೆಯ ಆದಿವಾಸಿ ಯುವಕನ ಮೇಲೆಯು ದಾಳಿ ಮಾಡಲಾಗಿದೆ. ಶಿವಮೊಗ್ಗದ ಭಜರಂಗ ದಳದ ಕಾರ್ಯಕರ್ತನನ್ನು ಕೊಲ್ಲಲಾಗಿದೆ.
ಕಾನೂನು ಸುವ್ಯವಸ್ಥೆಯನ್ನು ಕಾಪಾಡಲಾಗದಂತೆ ಅಧಿಕಾರಿಗಳನ್ನು ದುರ್ಬಲಗೊಳಿಸಿರುವುದು ತೀವ್ರ ಖಂಡನೀಯವಾಗಿದೆ.

ಮುಖ್ಯಮಂತ್ರಿಗಳು ಇಂತಹ ಗುಂಡಾ ಮಾಫಿಯಾ, ಮತಾಂಧ ಶಕ್ತಿಗಳನ್ನು ನಿಗ್ರಹಿಸಲು ಮಧ್ಯಪ್ರವೇಶಿಸಿ ಕಾನೂನು ಸುವ್ಯವಸ್ಥೆಯನ್ನು ಬಲಗೊಳಿಸಬೇಕು. ಇಲ್ಲವಾದರೆ ನಿಮ್ಮಂತಹ ಮುಖ್ಯಮಂತ್ರಿಗಳ ಅವಶ್ಯಕತೆ ರಾಜ್ಯಕ್ಕಿಲ್ಲ. ಆದ್ದರಿಂದ ತಾವು ರಾಜೀನಾಮೆ ನೀಡಿ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸುವಂತೆ ಒತ್ತಾಯಿಸಿ ಸಿಪಿಐ(ಎಂ) ತನ್ನ ಪ್ರಬಲ ಆಗ್ರಹವಾಗಿದೆ.

ಯು.ಬಸವರಾಜ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ

Leave a Reply

Your email address will not be published. Required fields are marked *