ಜನಾರ್ಧನರೆಡ್ಡಿಯವರ ಅಕ್ರಮ ಆಸ್ತಿ ಮುಟ್ಡುಗೋಲು ವಿಳಂಬ: ಸಿಪಿಐ(ಎಂ) ಖಂಡನೆ

ಜನಾರ್ಧನ ರೆಡ್ಡಿ ಅವರು ಅಕ್ರಮ ಗಣಿಕಾರಿಕೆಯ ಮೂಲಕ ಸಂಗ್ರಹಿಸಲಾದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನ್ಯಾಯಾಲಯಗಳು ಆದೇಶಿಸಿ, ಈ ಕುರಿತು ಖಾರವಾಗಿ ಪ್ರಶ್ನಿಸಿದ್ದರೂ ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರಕಾರದ ಶಾಮೀಲು ನೀತಿಯನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಬಲವಾಗಿ ಖಂಡಿಸುತ್ತದೆ. ಇನ್ನಷ್ಠು ವಿಳಂಬ ಮಾಡದೇ ತಕ್ಷಣ ಜನಾರ್ಧನ ರೆಡ್ಡಿಯವರ ಅಕ್ರಮ ಆಸ್ತಿಗಳ ಮುಟ್ಟುಗೋಲಿಗೆ ಕ್ರಮ ವಹಿಸಲು ಸಿಪಿಐ(ಎಂ) ಪಕ್ಷ ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತದೆ.

ಉನ್ನತ ನ್ಯಾಯಾಲಯದ ಸುಪರ್ಧಿಯಲ್ಲಿ ತನಿಖೆ ನಡೆಸಿದ ಕೇಂದ್ರೀಯ ತನಿಖಾ ದಳ(ಸಿಬಿಐ), ಜನಾರ್ಧನ ರೆಡ್ಡಿಯವರ ಅಕ್ರಮ ಆಸ್ತಿ ಮುಟ್ಟುಗೋಲಿಗೆ  ಕ್ರಮವಹಿಸುವಂತೆ ನಿರಂತರವಾಗಿ ಒತ್ತಾಯಿಸುತ್ತಿದ್ದರೂ, ರಾಜ್ಯ ಸರಕಾರ ಆ ಕುರಿತು ಕ್ರಮವಹಿಸದಿರುವುದು, ಲೂಟಿಕೋರರ ಹಾಗೂ ಭ್ರಷ್ಠತೆಯ ಜೊತೆಗಿನ ರಾಜ್ಯ ಸರಕಾರದ ನಂಟನ್ನು ಇದು ಸ್ಪಷ್ಟಪಡಿಸುತ್ತದೆ.

ಕೊನೆಗೆ, ಕೇಂದ್ರ ಸರಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಸಿಬಿಐ ಸಂಸ್ಥೆಯು, ಸರಕಾರದ ವಿಳಂಬ ನೀತಿಯನ್ನು ಖಂಡಿಸಿ ಉಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ನ್ಯಾಯಾಲಯವು ಖಾರವಾಗಿ ಪ್ರಶ್ನಿಸಿದೆ. ಇಷ್ಠಾದರೂ ಸರಕಾರಕ್ಕೆ ನಾಚಿಕೆ ಇಲ್ಲವಾಗಿದೆ ಎಂದು ಸಿಪಿಐ(ಎಂ) ಕಟುವಾಗಿ ವಿಮರ್ಶಿಸಿದೆ.

ಬಿಜೆಪಿ ಹಾಗೂ ಆರ್.ಎಸ್.ಎಸ್. ನಾಯಕತ್ವ ಈ ರೀತಿಯ ದುರುದ್ದೇಶ ಪೂರಿತ ವಿಳಂಬ ಧೋರಣೆಯ ಮೂಲಕ, ಬಿಜೆಪಿ ಪಕ್ಷದ ಒಡಕನ್ನು ತಡೆಯುವ ಶಾಮೀಲು ಧೋರಣೆಯನ್ನು ಅನುಸರಿಸಿರುವುದು ಮೇಲ್ನೋಟಕ್ಕೆ ಸ್ಪಷ್ಠವಾಗಿ ಕಂಡು ಬರುತ್ತದೆ. ಈ ಕಾರಣಗಳಿಂದಲೇ, ರಾಜ್ಯ ಸರಕಾರ, ಬಿಜೆಪಿ ಹಾಗೂ ಆರ್.ಎಸ್.ಎಸ್.ಗಳು, ಈ ಸರಕಾರಿ ಸಂಸ್ಥೆಯ ಕೆಲಸದ ಮೇಲೆ ತಮ್ಮ ಅಧಿಕಾರದ ಪ್ರಭಾವ ಬೀರಿ ಅದು ಕಾರ್ಯ ನಿರ್ವಹಿಸದಂತೆ ಇದುವರೆಗೆ ತಡೆ ಹಿಡಿದಿರುವುದು ಈ ಮೂಲಕ ಮತ್ತೊಮ್ಮೆ ಬಹಿರಂಗಗೊಂಡಿದೆ.

ಇದೀಗ, ಜನಾರ್ಧನ ರೆಡ್ಡಿಯವರು ಬಿಜೆಪಿಯಿಂದ ಹೊರ ನಡೆದು ಸ್ವತಂತ್ರವಾಗಿ ಪ್ರತ್ಯೇಕ ಪಕ್ಷ ರಚಿಸಿದ ನಂತರ, ಬಿಜೆಪಿಗುಂಟಾದ ಹಿನ್ನಡೆ ಹಾಗೂ ಉಂಟಾಗಬಹುದಾದ ಸೋಲಿನ ಭೀತಿಯಿಂದ ಅವರನ್ನು ಮಣಿಸಲು ಮತ್ತು ಬಿಜೆಪಿ ಜೊತೆ ಕೈ ಜೋಡಿಸುವಂತೆ ಪುನಃ ಜನಾರ್ಧನರೆಡ್ಡಿಯವರ ಮೇಲೆ ಒತ್ತಡ ಹೇರಲು, ಸಿಬಿಐ ಮೂಲಕ ಈ ಕ್ರಮವಹಿಸಲಾಗಿದೆ ಎಂಬ ರಾಜಕೀಯ ವಲಯದ ಭಾವನೆಗೆ ಇಂಬು ನೀಡಿದೆ.

ಸರಕಾರಿ ಸಂಸ್ಥೆಗಳ ಮೇಲೆ ತಮ್ಮ ಅಧಿಕಾರ ಬಲದ ಪ್ರಭಾವ ಭೀರಿ ಅದರ ಸ್ವತಂತ್ರ ಕಾರ್ಯಾಚರಣೆಗೆ ಭಂಗ ಉಂಟು ಮಾಡುವ ಬಿಜೆಪಿ ಹಾಗೂ ಆರ್.ಎಸ್.ಎಸ್.ಗಳ ಅಧಿಕಾರ ದುರುಪಯೋಗವನ್ನು ಸಿಪಿಐ(ಎಂ) ಬಲವಾಗಿ ಖಂಡಿಸುತ್ತದೆ ಮತ್ತು ಅವುಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕೆಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಬಲವಾಗಿ ಒತ್ತಾಯಿಸುತ್ತದೆ.

ಅದೇ ರೀತಿ, ಜನಾರ್ಧನ ರೆಡ್ಡಿಯವರ ಅಕ್ರಮ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ವಿಫಲರಾದ ಹಾಗೂ ಕಾನೂನು ಬಾಹಿರ ರಾಜಕೀಯ ಒತ್ತಡಕ್ಕೆ ಮಣಿದ ಅಧಿಕಾರಿಗಳ ಮೇಲೆ ಸೂಕ್ತ ಕಾನೂನಿನ ಕ್ರಮವಹಿಸುವಂತೆಯೂ ರಾಜ್ಯ ಸರಕಾರಕ್ಕೆ ಸಿಪಿಐ(ಎಂ) ಒತ್ತಾಯಿಸುತ್ತದೆ.

ಯು.ಬಸವರಾಜ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ

Leave a Reply

Your email address will not be published. Required fields are marked *