ಒಂದು ಚುನಾಯಿತ ಸರಕಾರಕ್ಕೆ ಸುಪ್ರಿಂ ಕೋರ್ಟ್ತೀರ್ಪನ್ನು ಜಾರಿಗೊಳಿಸಿದ್ದಕ್ಕಾಗಿ ‘ಬುದ್ಧಿವಾದ’!
ಪ್ರಧಾನ ಮಂತ್ರಿಗಳು ಕೇರಳದ ಕೊಳ್ಳಂನಲ್ಲಿ ಒಂದು ಸಾರ್ವಜನಿಕ ಸಭೆಯಲ್ಲಿ ಶಬರಿಮಲೆ ಕುರಿತಂತೆ ಎಲ್ಡಿಎಫ್ ಸರಕಾರದ ನಿಲುವು “ನಾಚಿಕೆಗೇಡಿನದ್ದು’ ಎಂದಿದ್ದಾರೆ. ಇದು ಅತ್ಯಂತ ಹೇಯವಾದ ಮತ್ತು ಖಂಡನಾರ್ಹವಾದ ಹೇಳಿಕೆ, ಅವರು ಒಂದು ಚುನಾಯಿತ ಸರಕಾರಕ್ಕೆ ಅದು ಸುಪ್ರಿಂ ಕೋರ್ಟಿನ ತೀರ್ಪನ್ನು ಜಾರಿಗೊಳಿಸಿದ್ದಕ್ಕಾಗಿ ಈ ರೀತಿ ‘ಬುದ್ಧಿವಾದ’ ಹೇಳುತ್ತಿದ್ದಾರೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಹೇಳಿದೆ.
ಶ್ರೀಯುತ ಮೋದಿಯವರು ತಾನು ಸಂವಿಧಾನದ ಅಡಿಯಲ್ಲಿ ಪ್ರತಿಜ್ಞೆ ಕೈಗೊಂಡಿದ್ದೇನೆ ಎಂಬುದನ್ನು ಮರೆತಿದ್ದಾರೆ, ಅವರು ಒಬ್ಬ ಆರೆಸ್ಸೆಸ್ ಪ್ರಚಾರಕನಂತೆ ಮಾತಾಡುತ್ತಿದ್ದಾರೆ, ದೇಶದ ಪ್ರಧಾನ ಮಂತ್ರಿಯಂತೆ ಅಲ್ಲ. ಅವರ ಹೇಳಿಕೆ ಭಾರತೀಯ ಸಂವಿಧಾನದ ಮೇಲೆ ಒಂದು ನೇರ ಹಲ್ಲೆ ಎಂದು ಪೊಲಿಟ್ ಬ್ಯುರೊ ವರ್ಣಿಸಿದೆ.
ಅವರ ಈ ಹೇಳಿಕೆ ಭವಿಷ್ಯದ ಮಟ್ಟಿಗೆ ಅಪಾಯಕಾರಿ ಪರಿಣಾಮಗಳನ್ನು ಹೊಂದಿದೆ. ಏಕೆಂದರೆ ಬಿಜೆಪಿ ಮತ್ತು ಆರೆಸ್ಸೆಸ್ ನ ಹಿತಗಳಿಗೆ ಸೂಕ್ತವಾಗಿರದ ಯಾವುದೇ ಸುಪ್ರಿಂ ಕೋರ್ಟ್ ತೀರ್ಪನ್ನು ಅದು ಮುರಿಯುತ್ತದೆ ಮತ್ತು ಅಂತಹ ತೀರ್ಪನ್ನು ಜಾರಿಗೊಳಿಸುವ ಒಂದು ಸರಕಾರದ ಮೇಲೆ ಪ್ರಹಾರ ಮಾಡುತ್ತದೆ ಎಂಬುದೇ ಇದರ ಅರ್ಥವಾಗಿದೆ.
ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದೊಂದು ಅಭೂತಪೂರ್ವ ಸನ್ನಿವೇಶ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಸಂವಿಧಾನ ಮತ್ತು ಜಾತ್ಯತೀತ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬೆಲೆ ಕೊಡುವವರೆಲ್ಲರೂ ಪ್ರಧಾನ ಮಂತ್ರಿಗಳ ಈ ನಿಲುವನ್ನು ಖಂಡಿಸುತ್ತಾರೆ ಎಂದು ಹೇಳಿದೆ.