ಪಾತಾಳಕ್ಕಿಳಿದ ರಾಜಕೀಯ ಅನೈತಿಕತೆ : ಮಹಾರಾಷ್ಟ್ರದ ಬೆಳವಣಿಗೆಗಳ ಕುರಿತು ಸಿಪಿಐ(ಎಂ) ಪೊಲಿಟ್ಬ್ಯುರೊ
ಬಿಜೆಪಿಯ ರಾಜಕೀಯ ಅನೈತಿಕತೆ ಪಾತಾಳವನ್ನು ಮುಟ್ಟಿದೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಮಹಾರಾಷ್ಟ್ರದಲ್ಲಿ ಅದು ಸರಕಾರ ರಚಿಸುತ್ತಿರುವ ಬಗೆಯನ್ನು ಕಟುವಾಗಿ ಟೀಕಿಸಿದೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಪ್ರತಿಜ್ಞಾ ಸ್ವೀಕಾರವನ್ನು ಗುಪ್ತವಾಗಿ ನಡೆಸಿರುವ ರೀತಿ ಬಿಜೆಪಿ ಅಧಿಕಾರ ಬಾಚಿಕೊಳ್ಳಲು ಯಾವ ಮಟ್ಟಕ್ಕೆ ಇಳಿಯಬಲ್ಲದು ಎಂಬುದನ್ನು ತೋರಿಸಿದೆ. ಇದು ಈ ಹಿಂದೆ ಗೋವಾ, ಕರ್ನಾಟಕ ಮತ್ತು ಈಶಾನ್ಯ ಭಾರತದ ರಾಜ್ಯಗಳು ಮುಂತಾದೆಡೆಗಳಲ್ಲಿ ಮಾಡಿದ್ದ ರೀತಿಯಲ್ಲೇ ಇದೆ.
ಸಂವಿಧಾನಿಕ ಅಧಿಕಾರಿಗಳ- ರಾಷ್ಟ್ರಪತಿಗಳ ಮತ್ತು ರಾಜ್ಯಪಾಲರ ಕಚೇರಿಗಳನ್ನು ತಮ್ಮ ರಾಜಕೀಯ ಉದ್ದೇಶಕ್ಕೆ ದುರುಪಯೋಗ ಪಡಿಸಿಕೊಂಡಿರುವುದು ದುರದೃಷ್ಟಕರ ಎಂದಿರುವ ಸಿಪಿಐ(ಎಂ) ಪೊಲಿಟ್ಬುರೊ ಮುಂದಿನ ಬೆಳವಣಿಗೆಗಳನ್ನು ನಿಕಟವಾಗಿ ಕಾದುನೋಡಲಾಗುತ್ತಿದೆ ಎಂದಿದೆ.
ಎಂತಹ ವಿಶ್ವಾಸ ಘಾತ!
(ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿಯವರ ಟ್ವೀಟ್ಗಳಿಂದ, 26 ನವಂಬರ್ 2019)
ಬಿಜೆಪಿ ಮಹಾರಾಷ್ಟ್ರದಲ್ಲಿ ಭಂಡತನದಿಂದ ಸಂವಿಧಾನವನ್ನು ಉಲ್ಲಂಘಿಸುವುದರಲ್ಲಿ ಮಗ್ನವಾಗಿರುವಾಗ ಮೋದಿಯವರು ಸಂಸತ್ತಿನಲ್ಲಿ ಸಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವುದರ ಬಗ್ಗೆ ಗುಣಗಾನ ಮಾಡುತ್ತಿದ್ದಾರೆ!
ಮೋದಿ-ಷಾ ಜೋಡಿಯ ‘ನ್ಯೂ ಇಂಡಿಯಾ’ದ ಕಣ್ಣೋಟ- ಹಣಬಲ, ಬೆದರಿಕೆಗಳು, ಭೀತಿ ಹುಟ್ಟಿಸುವುದು ಮತ್ತು ಕುದುರೆ ವ್ಯಾಪಾರದ ಮೂಲಕ ಪ್ರಜಾಪ್ರಭುತ್ವದ ಮರುನಿರೂಪಣೆ ವಿಫಲಗೊಂಡಿದೆ. ಬಿಜೆಪಿ ಮಹಾರಾಷ್ಟ್ರದಲ್ಲಿ ಮಣ್ಣು ಮುಕ್ಕಿದೆ
ನಮ್ಮ 70ನೇ ಸಂವಿಧಾನ ದಿನದಂದು ಎಲ್ಲ ಭಾರತೀಯರು, ವಿಶೇಷವಾಗಿ ಸಂವಿಧಾನಿಕ ಸ್ಥಾನಗಳಲ್ಲಿ ಇರುವವರು, ಸಂವಿಧಾನಿಕ ಮೌಲ್ಯಗಳು ಮತ್ತು ನೀತಿಗಳಿಗೆ ಬದ್ಧರಾಗಿರುತ್ತಾರೆ ಎಂದು ನಿರೀಕ್ಷಿಸಲಾಗುತ್ತದೆ.
ಮಹಾರಾಷ್ಟ್ರದ ರಾಜ್ಯಪಾಲರು ಈಗ ಮಾಡಬಹುದಾದ ಕನಿಷ್ಟ ಕೆಲಸವೆಂದರೆ ನೈತಿಕ ಪ್ರಜ್ಞೆಯನ್ನು ಪ್ರದರ್ಶಿಸುವುದು ಮತ್ತು ತನ್ನ ಹುದ್ದೆಯಿಂದ ತೊಲಗುವುದು.