ಎಪ್ರಿಲ್ ೨ರಂದು ಪ್ರಧಾನ ಮಂತ್ರಿಗಳೊಂದಿಗೆ ಮುಖ್ಯಮಂತ್ರಿಗಳ ವೀಡಿಯೋ ಕಾನ್ಫರೆನ್ಸ್ನಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಂತರ-ರಾಜ್ಯ ಗಡಿಗಳಲ್ಲಿ ಆವಶ್ಯಕ ಸರಕುಗಳ ಅನಿರ್ಬಂಧಿತ ಸಾಗಾಣಿಕೆ ಇರಬೇಕು ಎಂದು ಕೇಳಿದರು ಹಾಗೂ ಲಾಕ್ಡೌನ್ನಿಂದ ಅಂತರ-ರಾಜ್ಯ ಸರಕು ಸಾಗಾಣಿಕೆಗೆ ಅಡ್ಡಿಯಾಗುವುದಿಲ್ಲ ಎಂದು ಪ್ರಧಾನಿಗಳು ಆಶ್ವಾಸನೆ ಕೊಡಬೇಕು ಎಂದರು. ಎಲ್ಲ ರಾಜ್ಯಗಳು ಒಂದಾಗಿ ಮಹಾಮಾರಿಯ ವಿರುದ್ಧ ಹೋರಾಟ ನಡೆಸಬೇಕು, ನೆರೆ ರಾಜ್ಯಗಳು ಸರಕು ಸಾಗಾಣಿಕೆಗೆ ಅಡ್ಡಿ ಉಂಟು ಮಾಡಬಾರದು ಎಂದು ಕೇಳಿದರು.
ವಿದೇಶಗಳಲ್ಲಿ ದುಡಿಯುತ್ತಿರುವ ಭಾರತೀಯರಿಗೆ ಆಯಾಯ ದೇಶಗಳಲ್ಲಿ ಭಾರತದ ರಾಯಭಾರಿ ಕಚೇರಿಗಳು ಕ್ವಾರಂಟೈನ್ ಕೇಂದ್ರ ಗಳನ್ನು ತೆರೆಯಬೇಕು ಎಂದೂ ಅವರು ಕೇಳಿದರು.
ರಾಜ್ಯದ ಸಾಲ ಪಡೆಯುವ ಸಾಮರ್ಥ್ಯಕ್ಕೆ ಹಾಕಿರುವ ೩% ಮಿತಿಯನ್ನು ಈ ಬಿಕ್ಕಟ್ಟಿನ ಸಮಯದಲ್ಲಿ ೫%ಕ್ಕೆ ಏರಿಸಬೇಕು ಎಂದೂ ಕೇರಳ ಆಗ್ರಹಿಸಿದೆ.
ಈ ವಿಡಿಯೋ ಕಾನ್ಫರೆನ್ಸ್ನಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿಗಳು ರಾಜ್ಯದಲ್ಲಿ ಕೊರೊನ ವೈರಸ್ನಿಂದ ಸಾವು ಮತ್ತು ಸೋಂಕು ಹರಡದಂತೆ ಮಿತಗೊಳಿಸಲು ಮಾಡಿರುವ ಪ್ರಯತ್ನಗಳನ್ನು ಮೆಚ್ಚಿಕೊಂಡರು.
ಈಗ ರಾಜ್ಯದಲ್ಲಿ ೨೫೬ ಮಂದಿ ಕೊವಿಡೊ-೧೯ ಶುಶ್ರೂಷೆ ಪಡೆಯುತ್ತಿದ್ದಾರೆ. ೧,೬೫,೯೩೪ ಮಂದಿ ವೀಕ್ಷಣೆಗೆ ಒಳಪಟ್ಟಿದ್ದಾರೆ.
ಕೊರೊನ ವೈರಸ್ ವಿರುದ್ಧ ಸಮರದ ಭಾಗವಾಗಿ ರಾಜ್ಯದಲ್ಲಿ ಪ್ರಕಟಿಸಿದ್ದ ಉಚಿತ ರೇಷನ್ ಕಾರ್ಯಾರಂಭ ಮಾಡಿದೆ. ಮೊದಲ ಎರಡು ದಿನಗಳಲ್ಲಿ ಒಟ್ಟು ೨೮.೩೬ ಲಕ್ಷ ಕಾರ್ಡುದಾರರಿಗೆ ಇದನ್ನು ಹಂಚಲಾಗಿದೆ. ಎಪ್ರಿಲ್ ೩೦ ರ ವರೆಗೆ ಎಲ್ಲರಿಗೂ ಇದನ್ನು ಹಂಚಲಾಗುವುದು. ಕಡಿಮೆ ಆದಾಯದ ಕುಟುಂಬಗಳಿಗೆ ೩೫ ಕೆ.ಜಿ ಮತ್ತು ಹೆಚ್ಚಿನ ಆದಾಯದ ಕುಟುಂಬಗಳಿಗೆ ೧೫ ಕೆ.ಜಿ. ಆಹಾರಧಾನ್ಯಗಳನ್ನು ಕೊಡಲಾಗುತ್ತಿದೆ. ೧೭ ಐಟಂಗಳಿರುವ ೮೭ ಲಕ್ಷ ಕಿರಾಣಿ ಕಿಟ್ಗಳನ್ನು ರೇಶನ್ ಅಂಗಡಿಗಳ ಮೂಲಕ ಹಂಚಲಾಗುತ್ತಿದೆ.