ಕಳೆದ ಒಂದೂವರೇ ವರ್ಷದಿಂದ ದೇಶದ ಜನತೆ ತೀವ್ರ ರೀತಿಯ ಕೋವಿಡ್ ಸಂಕಷ್ಠ ಎದುರಿಸುತ್ತಿರುವಾಗಲೇ ಅವರ ಸಂಕಟ ನಿವಾರಣೆಗೆ ಕ್ರಮವಹಿಸುವ ಬದಲು ಅವರ ಮೇಲೆ ಭಾರೀ ಬೆಲೆ ಏರಿಕೆಯ ಹೊರೆ ಹೇರುವ ಕ್ರೌರ್ಯವನ್ನು ಮೆರೆಯುತ್ತಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಪೆಟ್ರೋಲ್ ಬೆಲೆಯು 25 ರೂ. ಗಳಷ್ಟು ಹೆಚ್ಚಳಗೊಂಡಿದೆ. ಕಳೆದ ಒಂದು ತಿಂಗಳಲ್ಲಿ 16 ಬಾರಿ ಬೆಲೆ ಏರಿಸಲಾಗಿದೆ. ಈಗದು 100 ರೂ.ಗಳನ್ನು ದಾಟಿದೆ. ಡೀಸೆಲ್ ಬೆಲೆಯು 100 ರೂ.ಗಳಿಗೆ ಹತ್ತಿರವಾಗಿದೆ. ಅಡುಗೆ ಅನಿಲವೂ ಭಾರಿ ಏರಿಕೆ ಕಂಡಿದೆ.
ಇದು ಅತ್ಯಂತ ಅಸಹನೀಯವಾಗಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಕೇಂದ್ರ ಸರಕಾರದ ಈ ಜನವಿರೋಧಿ ಹಾಗೂ ಲೂಟಿಕೋರ ನೀತಿಯನ್ನು ಬಲವಾಗಿ ಖಂಡಿಸುತ್ತದೆ. ಇದು ಸಹಜವಾಗಿಯೇ ಎಲ್ಲ ಅಗತ್ಯ ವಸ್ತುಗಳ ಬೆಲೆಗಳ ಏರಿಕೆಗೆ ಕಾರಣವಾಗಿದೆ.
ಜಾಗತಿಕವಾಗಿ ಕಚ್ಛಾ ತೈಲದಲ್ಲಿ ಯಾವುದೇ ಬೆಲೆ ಏರಿಕೆ ಆಗದಿದ್ದರೂ ದೇಶದಲ್ಲಿ ಈ ಪ್ರಮಾಣದಲ್ಲಿ ಇವುಗಳ ಬೆಲೆಗಳು ಏರಿಕೆಯಾಗಲೂ ಕೇಂದ್ರ ಸರಕಾರವೇ ನೇರ ಹೊಣೆಗಾರನಾಗಿದೆ. ಇದು ಜನತೆಯನ್ನು ದೊಡ್ಡ ಪ್ರಮಾಣದಲ್ಲಿ ಲೂಟಿಗೊಳಪಡಿಸುವ ವಿಚಾರವಾಗಿದ್ದು ಇದನ್ನು ರಾಜ್ಯದಾದ್ಯಂತ ಪ್ರತಿರೋಧಿಸುವಂತೆ ಜನತೆಗೆ ಸಿಪಿಐ(ಎಂ) ಕರೆ ನೀಡುತ್ತದೆ.
ಯು. ಬಸವರಾಜ, ರಾಜ್ಯ ಕಾರ್ಯದರ್ಶಿ