ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರ ಕಛೇರಿಗಳ ಮುಂದೆ ಪ್ರತಿಭಟನೆ: ಎಡ ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳ ಕರೆ

ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನ ವಿರೋಧಿ ನೀತಿಗಳನ್ನು ವಿರೋಧಿಸಿ ಹಾಗೂ ಕೋವಿಡ್-19 ರ ನಿವಾರಣೆಗೆ ಅಗತ್ಯ ಕ್ರಮವಹಿಸದೇ ಇರುವ ಕೊಲೆಪಾತಕ ನಿರ್ಲಕ್ಷ್ಯವನ್ನು ಖಂಡಿಸಿ, ಕೋವಿಡ್ ಹಾಗೂ ಲಾಕ್‌ಡೌನ್‌ಗಳಿಗೆ ಪರಿಣಾಮಕಾರಿ ಪರಿಹಾರಕ್ಕಾಗಿ ಒತ್ತಾಯಿಸಿ, ಮುಂಬರುವ ಜೂನ್‌ 15, 2021ರಂದು ಮುಖ್ಯಮಂತ್ರಿ ಹಾಗೂ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರ ಮತ್ತು ಶಾಸಕರ ಕಛೇರಿಗಳ ಮುಂದೆ ಎಡ ಮತ್ತು ಜಾತ್ಯಾತೀತ ಪ್ರಜಾಸತ್ತಾತ್ಮಕ ಪಕ್ಷಗಳು ಜಂಟಿ ಪ್ರತಿಭಟನೆಯನ್ನು ನಡೆಸಲಿವೆ. ತುರ್ತು ಪರಿಹಾರದ ಕ್ರಮವಹಿಸಲು ಒತ್ತಾಯಿಸಲಿವೆ.

ಮೇ 28, 2021ರಂದು ಆನ್‌ಲೈನ್ ಪ್ರತಿಭಟನಾ ಬಹಿರಂಗ ಸಭೆ ಮೂಲಕ ಮತ್ತು ಜೂನ್ 01ರಂದು ರಾಜ್ಯದಾದ್ಯಂತ ಸಹಸ್ರಾರು ಜನತೆ ಮನೆ ಮನೆ ಮುಂದೆ ಪ್ರತಿಭಟನೆಗಳನ್ನು ನಡೆಸಿದೆ. ಆದಾಗಲೂ ಜನರ ಹಕ್ಕುಗಳನ್ನು ಸರಕಾರಗಳು ಗಂಭೀರವಾಗಿ ಪರಿಗಣಿಸದೇ ಹೋದುದರಿಂದ ಈ  ಪ್ರತಿಭಟನೆಯನ್ನು ಕೋವಿಡ್ ಸುರಕ್ಷತೆಯೊಂದಿಗೆ ಹಮ್ಮಿಕೊಂಡಿವೆ.

ತಜ್ಞರ ಸೂಚನೆಯಂತೆ  ಸರಕಾರಗಳು, ಮುನ್ನೆಚ್ಚರಿಕೆಯನ್ನು ಕೈಗೊಳ್ಳದೇ, ಪಾತಕ ನಿರ್ಲಕ್ಷ್ಯ ವಹಿಸಿದ್ದರಿಂದ, ಕೋವಿಡ್-19ರ ಎರಡನೇ ಅಲೆಯ ಬಾಧೆಗೆ ರಾಜ್ಯವು ತುತ್ತಾಯಿತು. ಈ ದುಸ್ಥಿತಿ ಮತ್ತಷ್ಠು ಉಲ್ಬಣಗೊಳ್ಳಲು ವಿವೇಚನಾ ರಹಿತವಾಗಿ ಮೇಲಿಂದ, ಮೇಲೆ ಲಾಕ್‌ಡೌನ್‌ಗಳನ್ನು  ಹೇರಲಾಯಿತು.

ಇದಲ್ಲದೇ, ಜನರ ಮೇಲೆ ಬೆಲೆ ಏರಿಕೆಯ ಹೊರೆಯನ್ನು ಹೇರಲಾಗುತ್ತಿದೆ ಮತ್ತು ಕೃಷಿ ಭೂಮಿ ಹಾಗೂ ಎಲ್ಲರ ಕಸುಬುಗಳನ್ನು, ಕಸಿಯುವ ಮತ್ತು ಕಾರ್ಮಿಕರನ್ನು ಹಾಗೂ ಗ್ರಾಹಕ ಸಮುದಾಯಗಳನ್ನು  ಲೂಟಿಗೊಳಪಡಿಸಲು, ಕಾರ್ಪೋರೇಟ್ ಕಾಯ್ದೆಗಳನ್ನು ಮತ್ತು ವಿದ್ಯುತ್, ಸಾರಿಗೆ, ಹಣಕಾಸು ಮುಂತಾದ ಸಾರ್ವಜನಿಕ ಉದ್ದಿಮೆಗಳನ್ನು ಕಾರ್ಪೋರೇಟ್ ಲೂಟಿಗೆ ತೆರೆದಿವೆ.

ಜನರ ಈ ಗಂಭೀರ ದುಸ್ಥಿತಿಯ ಸಂದರ್ಭದಲ್ಲಿಯೇ, ವಿರೋಧದ ನಡುವೆ ಅವುಗಳ ಜಾರಿಯ ಕ್ರೌರ್ಯವನ್ನು ಮೆರೆಯುತ್ತಿವೆ.

ಇವುಗಳ ಜೊತೆ, ಬಿಜೆಪಿಯ ಕೆಲ ಶಾಸಕರು, ಸಂಘಪರಿವಾರದ ಶಕ್ತಿಗಳು, ಬೆಡ್, ಔಷಧಿ, ಲಸಿಕೆ, ಆಮ್ಲಜನಕಗಳ ಕಾಳಸಂತೆಯಲ್ಲಿ ತೊಡಗಿವೆ ಮತ್ತು ಜಾತಿ ಹಾಗೂ ರಾಜಕೀಯ ತಾರತಮ್ಯ ಎಸಗುತ್ತಿವೆ.

ಜನರ ಪ್ರಾಣ ಹಾಗೂ ಆರೋಗ್ಯಕ್ಕಿಂತಲೂ, ಕಾರ್ಪೋರೇಟ್ ಲೂಟಿಯೇ ಈ ಸರಕಾರಗಳಿಗೆ ಮುಖ್ಯವಾಗಿದೆ.

ಈ ಎಲ್ಲ ದುಷ್ಪರಿಣಾಮಗಳನ್ನು ರಾಜ್ಯದ ದುಡಿಯುವ ಜನರು ವರ್ತಕರು ಹಾಗೂ ಕೈಗಾರಿಕೆಗಳು, ಅಸಹಾಯಕರು, ದಲಿತರು, ಆದಿವಾಸಿಗಳು,ಮಹಿಳೆಯರು, ತೀವ್ರವಾಗಿ ಅನುಭವಿಸುತ್ತಿದ್ದಾರೆ.

ಇಂತಹ ಕೊಲೆಪಾತಕ ದುಸ್ಥಿತಿಗಳಿಗೆ ಕಾರಣವಾದ ಸರಕಾರಗಳೇ ಜನತೆಗೆ ಪರಿಹಾರ ನೀಡಬೇಕಾಗಿದೆ.

ಜನರ ಒತ್ತಡಕ್ಕೆ ಮಣಿದು, ಒಲ್ಲದ ಮನಸ್ಸಿನಿಂದ  ಅಗ್ಗದ ಪ್ರಚಾರ ಪಡೆಯಲು  ಕೇವಲ 1,423 ಕೋಟಿ ರೂ.ಗಳ ಪರಿಹಾರದ ಎರಡು ಪ್ಯಾಕೇಜ್‌ಗಳೆಂಬ ಅಣಕಗಳನ್ನು ಘೋಷಿಸಲಾಗಿದೆ. ಇವುಗಳು ಯಾವುದೇ ರೀತಿಯಲ್ಲೂ ಜನತೆಯ ಕೋವಿಡ್ ಮತ್ತಿತರೇ ಭಾರೀ ಸಂಕಷ್ಠಕ್ಕೆ ಪರಿಹಾರಗಳಾಗಿಲ್ಲ ಎಂದು ಎಡ ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳು ಬಲವಾಗಿ ಖಂಡಿಸುತ್ತವೆ.

ಜನತೆಯ ಒತ್ತಾಯ ಹಾಗೂ ಸುಪ್ರಿಂ ಕೋರ್ಟ್‌ ಮದ್ಯಪ್ರವೇಶಕ್ಕೆ ಮಣಿದು 18 ವರ್ಷಕ್ಕೆ ಮೇಲಿನವರಿಗೆ ಉಚಿತ ಲಸಿಕೆ ನೀಡುವುದಾಗಿ ಕೇಂದ್ರ ಸರಕಾರ ಹೇಳಿರುವುದು ದೇಶದ ಜನತೆಯ ಹೋರಾಟಕ್ಕೆ ದೊರೆತ ಜಯವಾಗಿದೆ. ಆದರೇ, ಲಾಕ್‌ಡೌನ್ ಪರಿಹಾರವಾಗಿ ಕೇಂದ್ರ ಸರಕಾರ ನೀಡಿರುವುದು ಕೇವಲ 10 ಕೆಜಿ ಮುಗ್ಗುಲು ಅಕ್ಕಿ ಮಾತ್ರವೇ? ಇತರ ಪರಿಹಾರದ ಘೋಷಣೆ ಮಾಡಲಿಲ್ಲ.ರಾಜ್ಯ ಸರಕಾರ ಬಡವರಿಗೆ ನೀಡುವ ಅಕ್ಕಿಯ ಕಡಿತವನ್ನು ಹಿಂಪಡೆದಿಲ್ಲ. ಹೊಲಗಳಲ್ಲಿ ಕೊಳೆಯಲು ಬಿಟ್ಟ  ಉತ್ಪನ್ನಗಳಿಗೆ ಸೂಕ್ತ ಪರಿಹಾರ ಈಗಲೂ ನೀಡಿಲ್ಲ. ಕೂಲಿಕಾರರು, ರೈತರು, ಕಸುಬುದಾರರು, ಕಾರ್ಮಿಕರು,ವಿದ್ಯಾವಂತ ನಿರುದ್ಯೋಗಿಗಳಿಗೆ ನೆರವಿಲ್ಲ.

ಎಂದಿನಂತೆ, ವಿದ್ಯಾರ್ಥಿಗಳಿಗೆ ನೀಡುವ ಹಾಲು ಪುಡಿಯ 100 ಕೋಟಿ ರೂ.ಗಳನ್ನು 2ನೇ ಪ್ಯಾಕೇಜ್‌ನಲ್ಲಿ ಸೇರಿಸಿರುವುದನ್ನು ನೋಡಿದರೇ, ಸರಕಾರದ ಖಾಳಜಿ ಎಂತಹ ಕಳಪೆ ಮಟ್ಟದ್ದೆಂಬುದು ತಿಳಿಯುತ್ತದೆ. ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುವ ಆಶಾ, ಅಂಗನವಾಡಿಯವರಿಗೆ ಕೊಡಲಾಗುವ ಪರಿಹಾರ ನಾಚಿಕೆಗೇಡಿನದಾಗಿದೆ.

ಇಡೀ ರಾಜ್ಯದ 6.8 ಕೋಟಿ ಜನತೆ ಕೋವಿಡ್ ಸಂಕಟದಲ್ಲಿದ್ದರೇ ರಾಜ್ಯ ಸರಕಾರ ಕೇವಲ 5 ಲಕ್ಷ ಜನರಿಗೆ ಮಾತ್ರವೇ ಪರಿಹಾರ ಘೋಷಿಸಿದೆ. ಕುಟುಂಬಕ್ಕೊಬ್ಬರಿಗೆಂಬ ಸರಕಾರದ ನೀತಿಯಿಂದ ಬಹುತೇಕರು ಬೇಸ್ತು ಬೀಳಲಿದ್ದಾರೆ. ಈ ಅಣಕದ ಪರಿಹಾರವಾದರೂ ಬೇಗನೆ ಜನತೆಗೆ ಸಿಗಬಲ್ಲದೇ?

ಜನರ ಪ್ರಾಣಗಳ ಜೊತೆ ಆಟವಾಡುವುದನ್ನು ನಿಲ್ಲಿಸಿ, ಕೇರಳ, ತಮಿಳ್ನಾಡು, ಆಂದ್ರ ರಾಜ್ಯಗಳಂತೆ ಪರಿಹಾರಗಳನ್ನು ನೀಡಿ  ಜನರನ್ನು ರಕ್ಷಿಸಲು  ಮರಳಿ ನಾವು ಒತ್ತಾಯಿಸುತ್ತೇವೆ.

ಹಕ್ಕೊತ್ತಾಯಗಳು:

  1. ಉಚಿತ ಹಾಗೂ ಸಾರ್ವತ್ರಿಕ ಲಸಿಕೀಕರಣಕ್ಕೆ ಕೂಡಲೇ ಕ್ರಮವಹಿಸಬೇಕು. ಬೆಡ್, ಲಸಿಕೆ, ಔಷದಿ, ಆಮ್ಲಜನಕಗಳ ಹಗರಣಗಳು, ಜಾತಿ ಹಾಗೂ ರಾಜಕೀಯ ತಾರತಮ್ಯದ ಪ್ರಕರಣಗಳನ್ನು ಸ್ವತಂತ್ರ ಉನ್ನತ ನ್ಯಾಯಾಂಗ ತನಿಖೆಗೊಳಪಡಿಸಬೇಕು.
  2. ಆದಾಯ ತೆರಿಗೆಯಡಿ ಬಾರದ ಎಲ್ಲಾ ಕುಟುಂಬಗಳಿಗೆ ಮಾಸಿಕ ತಲಾ 10 ಕೇಜಿ ಸಮಗ್ರ ಆಹಾರಧಾನ್ಯ ಮತ್ತು ಆರೋಗ್ಯ ಸುರಕ್ಷತಾ ಸಾಮಗ್ರಿಗಳ ಪೊಟ್ಟಣವನ್ನು ಮತ್ತು ಕೇಂದ್ರ ಸರಕಾರದ ಸಹಾಯ ಪಡೆದು 10,000 ರೂಗಳ ನೆರವನ್ನು ಕೋವಿಡ್ ನಿಯಂತ್ರಣಕ್ಕೆ ಬರುವವರೆಗೆ ನೀಡಬೇಕು. ದಲಿತರು, ಬಡವರ ಪ್ರದೇಶಗಳಲ್ಲಿ ಇಂದಿರಾ ಕ್ಯಾಂಟೀನ್ ಗಳನ್ನು ವಿಸ್ಥರಿಸಬೇಕು, ಬಲಗೊಳಿಸಬೇಕು.
  3. ಹೊಲಗಳಲ್ಲಿಯೇ ಕೊಳೆತು ಹೋದ ಹೂ, ಹಣ್ಣು, ಆಲುಗಡ್ಡೆ, ಈರುಳ್ಳಿ ಮುಂತಾದ ಬೆಳೆಗಳಿಗೆ, ಎಕರೆಗೆ ಕನಿಷ್ಠ 25,000 ರೂಗಳನ್ನು ಒದಗಿಸಬೇಕು ಮತ್ತು ರಾಜ್ಯದ ರೈತರು, ಕೂಲಿಕಾರರು, ಕಾರ್ಮಿಕರು, ಕಸುಬುದಾರರು, ದಲಿತರು, ಆದಿವಾಸಿಗಳು, ಅಲ್ಪ ಸಂಖ್ಯಾತರು ಮತ್ತು ಮಹಿಳೆಯರ ಎಲ್ಲ ರೀತಿಯ ಸಾಲಗಳನ್ನು  ಕೇರಳದ ಋಣ ಮುಕ್ತ ಕಾಯ್ದೆ ಮಾದರಿಯಲ್ಲಿ ಮನ್ನಾ ಮಾಡಬೇಕು.
  4. ಕೇಂದ್ರ ಸರಕಾರ ಜಾರಿಗೊಳಿಸುವ ಕಾರ್ಪೋರೇಟ್ ಕಂಪನಿಗಳ ಪರವಾದ ರೈತ ಹಾಗೂ ಕಾರ್ಮಿಕರ ಮತ್ತು ಗ್ರಾಹಕರ ವಿರೋಧಿಗಳಾದ ತಿದ್ದುಪಡಿ ಕೃಷಿ ಕಾಯ್ದೆಗಳು ಹಾಗೂ ಕಾರ್ಮಿಕ ಸಂಹಿತೆಗಳು, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ – 2020, ವಿದ್ಯುತ್ ತಿದ್ದುಪಡಿ ಮಸೂದೆ- 2020 ಹಾಗೂ ರಾಜ್ಯ ಸರಕಾರದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ – 2020, ಎಪಿಎಂಸಿ ತಿದ್ದುಪಡಿ ಕಾಯ್ದೆ – 2020, ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ – 2020 ಗಳನ್ನು ತಕ್ಷಣ ಹಿಂಪಡೆಯ ಬೇಕು. ಸಾರ್ವಜನಕ ರಂಗದ ಉದ್ದಿಮೆಗಳ ಖಾಸಗೀಕರಣವನ್ನು ತಡೆಯಬೇಕು.
  5. ಕನಿಷ್ಟ ಬೆಂಬಲ ಬೆಲೆ ಖಾತರಿಯ ಕಾಯ್ದೆ ಮತ್ತು ಪ್ರಕೃತಿ ವಿಕೋಪಗಳಿಂದ  ರೈತರ ಸಂರಕ್ಷಣೆಗೆ ಋಣ ಮುಕ್ತ ಕಾಯ್ದೆ ಗಳನ್ನು ಜಾರಿಗೊಳಿಸಬೇಕು.
  6. ಕಾರ್ಮಿಕರಿಗೆ ಲಾಕ್ ಡೌನ್ ಕಾಲಾವಧಿಯ ವೇತನ ಮತ್ತು ಉದ್ಯೋಗ ರಕ್ಷಿಸಲು ಅಗತ್ಯ ಆದೇಶ ಹೊರಡಿಸಿ ಜಾರಿಗೊಳಿಸಬೇಕು.
  7. ಉದ್ಯೋಗ ಖಾತ್ರಿಯನ್ನು ನಗರಗಳಿಗೆ ಹಾಗೂ 200 ದಿನಗಳಿಗೆ ವಿಸ್ಥರಿಸಬೇಕು. ಕೂಲಿಯನ್ನು  ಕೃಷಿ ರಂಗದ ವೇತನದಂತೆ 424 ರೂ. ಗಳಿಗೆ ಹೆಚ್ಚಿಸಬೇಕು.
  8. ಕೋವಿಡ್ ಮುಂಚೂಣಿಯ ಎಲ್ಲಾ ಕಾರ್ಯಕರ್ತರಿಗೆ ವಿಮೆ ಸೌಲಭ್ಯ- ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಮಸಣ ಕೆಲಸಗಾರರು, ಮುನಿಸಿಪಲ್ ಮುಂತಾದ ಶುಚಿ ಕಾರ್ಯದಲ್ಲಿ ತೊಡಗಿದವರಿಗೂ ಸೌಲಭ್ಯಗಳನ್ನು ವಿಸ್ಥರಿಸಬೇಕು.

 

ಇಂತಿ ತಮ್ಮ ವಿಶ್ವಾಸಿಗಳು

ಸಹಿ/-

ಯು. ಬಸವರಾಜ, ರಾಜ್ಯ ಕಾರ್ಯದರ್ಶಿ, ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸ್‌ವಾದಿ)-ಸಿಪಿಐ(ಎಂ)

ಸಾತಿ ಸುಂದರೇಶ್, ರಾಜ್ಯ ಕಾರ್ಯದರ್ಶಿ,  ಭಾರತ ಕಮ್ಯುನಿಸ್ಟ್ ಪಕ್ಷ-ಸಿಪಿಐ

ಕೆ‌. ಉಮಾ, ರಾಜ್ಯ ಕಾರ್ಯದರ್ಶಿ, ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯ(ಕಮ್ಯೂನಿಸ್ಟ್‌)-ಎಸ್‌ಯುಸಿಐ(ಸಿ)

ಕ್ಲಿಫ್ಟನ್ ರೋಜಾರಿಯೋ ಜಿ ಬಿ, ಕಾರ್ಯದರ್ಶಿ, ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ, ಲೆನಿನ್ ವಾದಿ) ಲಿಬರೇಷನ್, ಸಿಪಿಐ(ಎಂಎಲ್‌) ಲಿಬರೇಷನ್‌

ಜಿ.ಆರ್. ಶಿವಶಂಕರ್, ಕಾರ್ಯದರ್ಶಿ, ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್-ಎಐಎಫ್‌ಬಿ

ಚಾಮರಸ ಮಾಲೀ ಪಾಟೀಲ, ಅಧ್ಯಕ್ಷರು, ಸ್ವರಾಜ್ ಇಂಡಿಯಾ

ಮೋಹನ್ ರಾಜ್, ಅಧ್ಯಕ್ಷರು, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ-ಆರ್‌ಪಿಐ

Leave a Reply

Your email address will not be published. Required fields are marked *