ಜನರಲ್ಲಿ ಕೋವಿಡ್‌ ಲಸಿಕೆ ಬಗ್ಗೆ ಇರುವ ಆತಂಕ ನಿವಾರಿಸಲು ಮನವೊಲಿಸಬೇಕು

ಕೋವಿಡ್‌ ಲಸಿಕೆಯ ಕುರಿತು ರಾಜ್ಯದಲ್ಲಿ ಇಂದಿಗೂ ಜನರಲ್ಲಿ ವಿಶ್ವಾಸವನ್ನು ಮೂಡಿಸಿಲ್ಲ, ಹಾಗೆಯೇ ಲಸಿಕೆ ಪಡೆಯಲು ಹಲವು ಕಡೆಗಳಲ್ಲಿ ನಿರಾಕರಣೆ ಕೇಳಿ ಬರುತ್ತಿದ್ದೆ, ಇದೇ ಸಂದರ್ಭದಲ್ಲಿ ಲಸಿಕೆ ನಿರಾಕರಣೆ ಮಾಡುವ ಜನರನ್ನು ಮನವೊಲಿಸುವ ಬದಲು ಬಲವಂತ ಮಾಡುವ ಮತ್ತು ದಂಡನೆಗೆ ಗುರಿಪಡಿಸುವುದನ್ನು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷವು ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದೆ:

ದಿನಾಂಕ : 19.06.2021

ಇವರಿಗೆ,
ಶ್ರೀ ಬಿ.ಎಸ್. ಯಡಿಯೂರಪ್ಪರವರು
ಮುಖ್ಯಮಂತ್ರಿಗಳು,
ಕರ್ನಾಟಕ ಸರಕಾರ,
ವಿಧಾನಸೌಧ, ಬೆಂಗಳೂರು.

ಮಾನ್ಯರೇ,

ವಿಷಯ: ಆತಂಕದಿಂದ ಕೋವಿಡ್ ಲಸಿಕೆಯನ್ನು ಪಡೆಯಲು ವಿರೋಧಿಸುತ್ತಿರುವವರ ಮನವೊಲಿಸಲು ಕ್ರಮವಹಿಸಬೇಕೇ ಹೊರತು ದಂಡನೆಯ ಕ್ರಮಸಲ್ಲದು

ಲಸಿಕೆಯ ಕುರಿತು ಪ್ರಚಲಿತವಿರುವ ಆತಂಕಗಳಿಂದಾಗಿ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಲು ಗ್ರಾಮೀಣ ಪ್ರದೇಶದಲ್ಲಿ ವಿರೋಧ ವ್ಯಾಪಕವಾಗಿದ್ದು, ಸದರಿ ಆತಂಕ ನಿವಾರಿಸಲು ಮತ್ತು ಅಂತಹ ಆತಂಕಿತರ ಮನವೊಲಿಸಲು ಅಗತ್ಯ ಕ್ರಮಗಳನ್ನು ರಾಜ್ಯ ಸರಕಾರ ತಕ್ಷಣವೇ ಕೈಗೊಳ್ಳಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಕರ್ನಾಟಕ ರಾಜ್ಯ ಸಮಿತಿ ಮನವಿ ಮಾಡುತ್ತದೆ.

ಆದರೇ ಕೆಳಗಡೆ ಅಂತಹ ಪ್ರಯತ್ನಗಳನ್ನು ಮತ್ತಷ್ಠು ವಿಸ್ತರಿಸಿ ಮನವೊಲಿಸುವ ಬದಲು ಆತಂಕಿತರನ್ನು ದಂಡಿಸುವ ಕ್ರಮಗಳನ್ನು ಜಾರಿಗೊಳಿಸುತ್ತಿರುವುದು ತೀವ್ರ ಖಂಡನೀಯವಾಗಿದೆ.

ರಾಯಚೂರು ಜಿಲ್ಲೆಯಲ್ಲಿ ಇಂತಹ ಜನ ವಿರೋಧಿ ಹಾಗೂ ಆತಂಕ ನಿವಾರಿಸಲು ಕ್ರಮವಹಿಸದೇ ಬಲವಂತ ಮಾಡುವ ಮತ್ತು ಅದಕ್ಕಾಗಿ ದಂಡಿಸುವ ಕ್ರಮಗಳು ನಡೆದಿರುವುದು ಆತಂಕಕಾರಿ ಬೆಳವಣಿಗೆಗಳಾಗಿವೆ.

ರಾಯಚೂರು ತಾಲೂಕಿನ ದುಗನೂರು ಗ್ರಾಮದಲ್ಲಿ 17.06.2021ರಂದು ಆರೋಗ್ಯ ಕಾರ್ಯಪಡೆ ನೇತೃತ್ವದಲ್ಲಿ ಆರೋಗ್ಯ ಗಣತಿ ಹಾಗೂ ಲಸಿಕೆ ಅಭಿಯಾನ ಕಾರ್ಯಕ್ರಮದಲ್ಲಿ ತೊಡಗಿದ್ದಾಗ ಅಲ್ಲಿನ ದಲಿತ ಕುಟುಂಬದವರೊಬ್ಬರು ತಮಗಿರುವ ಆತಂಕದಿಂದಾಗಿ ಲಸಿಕೆಯನ್ನು ತಿರಸ್ಕರಿಸಿದ್ದು ವಿವಾದವಾಗಿದೆ. ಆರೋಗ್ಯ ಕಾರ್ಯಕರ್ತರನ್ನು ನಿಂದಿಸಿರುವುದು ನಡೆದಿದೆಯೆನ್ನಲಾಗಿದೆ. ಈ ರೀತಿಯಲ್ಲಿ ಆರೋಗ್ಯ ಕಾರ್ಯಕರ್ತರನ್ನು ನಿಂದಿಸಿ ಕರ್ತವ್ಯಕ್ಕೆ ತೊಂದರೆ ಕೊಡುವುದು ಖಂಡನೀಯವೇ ಆಗಿದೆ.

ಆದರೇ, ಜಿಲ್ಲಾಡಳಿತ ಸದರಿ ನಿಂದನೆ ಮಾಡಿದ ಕುಟುಂಬದ ಮೇಲೆ ಕ್ರಮವಹಿಸಿ, ಆ ಕುಟುಂಬದ ಪಡಿತರ ಚೀಟಿಯನ್ನು ಮತ್ತು ವಿದ್ಯುತ್ ಸಂಪರ್ಕ ಕಡಿತ ಮಾಡಿರುವುದು ಇದು ಅದಕ್ಕಿಂತಲೂ ಅಮಾನವೀಯವಾಗಿದೆ. ಇಂತಹ ಜನ ವಿರೋಧಿ ಕ್ರಮಗಳನ್ನು ತಕ್ಷಣವೇ ವಾಪಾಸು ಪಡೆಯುವಂತೆ ರಾಜ್ಯ ಸರಕಾರ ರಾಯಚೂರು ಜಿಲ್ಲಾ ಆಡಳಿತಕ್ಕೆ ಆದೇಶ ನೀಡಬೇಕು.

ಜನತೆಗೆ ಲಸಿಕೆಯ ಬಗೆಗಿರುವ ಮತ್ತು ಆರೋಗ್ಯ ನಿರ್ವಹಣೆಯಲ್ಲಿರುವ  ಆತಂಕಗಳನ್ನು ನಿವಾರಿಸಲು ಮತ್ತು ಅಂತಹ ಆತಂಕಿತರ ವಿಶ್ವಾಸಕ್ಕಾಗಿ ಮನವೊಲಿಸುವ ಕ್ರಮಗಳಿಗೆ ಜಿಲ್ಲಾ ಆಡಳಿತಗಳು ಕ್ರಮವಹಿಸಬೇಕೇ ಹೊರತು, ಈ ರೀತಿ ಮಾನ ಹಕ್ಕುಗಳ ಉಲ್ಲಂಘನೆಗೆ ಕ್ರಮವಹಿಸಬಾರದು. ಆ ರೀತಿಯ ಕ್ರಮಗಳು ಜನಗಳು ಕೋವಿಡ್ ಎದುರಿಸಲು ಸಹಕಾರಿಯಾಗಲಾರವು. ಬಲವಂತವು, ಅವರನ್ನು ಮತ್ತಷ್ಠು ಆತಂಕಕ್ಕೀಡು ಮಾಡಿ ಅಪಾಯ ಉಂಟು ಮಾಡುವ ಸಂಭವಗಳಿವೆ. ಯಾರಾದರೂ ಕರ್ತವ್ಯ ನಿರ್ವಹಣೆಗೆ ಗಂಭೀರವಾಗಿ ಅಡ್ಡಿಪಡಿಸಿದಲ್ಲಿ ಅಂತಹವರ ಮೇಲೆ ಬೇರೇ ರೀತಿಯ ಕ್ರಮಗಳನ್ನು ವಹಿಸಬಹುದಾಗಿದೆಯೇ ಹೊರತು, ಈ ನಡೆ ಸರಿಯಾದ ಕ್ರಮವಾಗಿಲ್ಲ. ಇಂತಹ ಕ್ರಮಗಳಿಂದ ಆತಂಕಿತ ಕುಟುಂಬಗಳು ಕೋವಿಡ್ ಹಾಗೂ ಲಾಕ್‌ಡೌನ್ ಸಂದರ್ಭಗಳಲ್ಲಿ ಮತ್ತಷ್ಠು ತೊಂದರೆಗೀಡಾಗಲಿವೆಯೆಂಬುದನ್ನು ಗಮನಿಸಬೇಕು.

ಇಂತಹದ್ದೆ ಹಲವು ಕ್ರಮಗಳನ್ನು ಹಲವೆಡೆ ಕೈಗೊಂಡಿರುವ ವರದಿಗಳಿವೆ.

ಆದ್ದರಿಂದ ಕೂಡಲೇ, ರಾಜ್ಯ ಸರಕಾರ ಮಧ್ಯ ಪ್ರವೇಶಿಸಿ ಜನತೆಯ ಮನವೊಲಿಸುವ ಕಾರ್ಯಕ್ಕೆ ಆದ್ಯತೆ ನೀಡುವಂತೆ ಕ್ರಮವಹಿಸಲು ರಾಜ್ಯದಾದ್ಯಂತ ಎಲ್ಲಾ ಜಿಲ್ಲಾ/ತಾಲೂಕಾ ಆಡಳಿತಗಳಿಗೆ ಸೂಚಿಸಲು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ರಾಜ್ಯ ಸಮಿತಿ ಒತ್ತಾಯಿಸುತ್ತದೆ.

 

ಯು. ಬಸವರಾಜ ರಾಜ್ಯ ಕಾರ್ಯದರ್ಶಿ

Leave a Reply

Your email address will not be published. Required fields are marked *