ರಾಜ್ಯದಲ್ಲಿ ಎನ್‌ಇಪಿ ಜಾರಿಯ ವಿರುದ್ಧ ಪ್ರತಿಭಟನೆ

ಕೇಂದ್ರದ ಸರಕಾರವು ಕಳೆದ ವರ್ಷ ಜಾರಿಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ರಾಜ್ಯದಲ್ಲಿ ಜಾರಿಗೆ ತರುತ್ತಿರುವ ರಾಜ್ಯದ ಬಿಜೆಪಿ ಸರಕಾರವು ಕೂಡಲೇ ಈ ನೀತಿಯನ್ನು ಜಾರಿಗೆ ತರಬಾರದೆಂದು ಆಗ್ರಹಿಸಿ ಸೆಪ್ಟೆಂಬರ್‌ 01ರಂದು ಹಮ್ಮಿಕೊಂಡಿರುವ ಪ್ರತಿಭಟನೆಯ ಸಂದರ್ಭದಲ್ಲಿ ಸಲ್ಲಸಲಾಗುವ ಮನವಿ ಪತ್ರದ ಹೇಳಿಕೆ ಕೆಳಗಿನಂತಿವೆ:

ಇವರಿಗೆ,
ಶ್ರೀ ಬಸವರಾಜ ಬೊಮ್ಮಾಯಿರವರು,
ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ
ವಿಧಾನಸೌಧ, ಬೆಂಗಳೂರು.

ಮಾನ್ಯರೇ ,

ವಿಷಯ: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿಗೊಳಿಸುತ್ತಿರುವುದನ್ನು ತಕ್ಷಣವೇ ತಡೆ ಹಿಡಿಯಲು ಸಿಪಿಐಎಂ ಒತ್ತಾಯ

ಕನ್ನಡ ಭಾಷೆ ಹಾಗೂ ಕನ್ನಡಿಗರ ಅಭಿವೃದ್ಧಿಗೆ ಮಾರಕವಾದ, ಅದರಲ್ಲೂ ಎಲ್ಲ ಮಹಿಳೆಯರು, ದಲಿತರು ಹಾಗೂ ಹಿಂದುಳಿದ ವರ್ಗಗಳ ಬಡವರಿಗೆ ಅಂದರೇ ರಾಜ್ಯದ ಶೇ 95 ರಷ್ಠು ಜನರಿಗೆ ಶಿಕ್ಷಣವನ್ನು ಮರೀಚಿಕೆಯಾಗಿಸುವ ಅತ್ಯಂತ ಅಪಾಯಕಾರಿಯಾದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿಗೊಳಿಸುತ್ತಿರುವ ಕೆಲಸವನ್ನು ಈ ಕೂಡಲೇ ಸ್ಥಗಿತಗೊಳಿಸುವಂತೆ ರಾಜ್ಯ ಸರಕಾರವನ್ನು, ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಒತ್ತಾಯಿಸುತ್ತದೆ.

ಈ ನೀತಿಯು ರಾಜ್ಯದ ಕನ್ನಡ ಹಾಗೂ ಕನ್ನಡಿಗರ ಇತರೇ ಮಾತೃ ಭಾಷೆಗಳಾದ ತುಳು, ಕೊಡವಾ, ತೆಲುಗು, ಉರ್ದು, ಮರಾಠಿ, ಕೊಂಕಣಿ, ಲಂಬಾಣಿ ಮುಂತಾದ ಭಾಷೆಗಳ ಮೇಲೆ ಇಂಗ್ಲೀಷ್ ಹಾಗೂ ಸಂಸ್ಕೃತ, ಹಿಂದಿ ಭಾಷೆಗಳನ್ನು ಹೇರುವ ಹುನ್ನಾರವನ್ನು ಅದು ಹೊಂದಿದೆ. ಇದರಿಂದ ಈ ಭಾಷೆಗಳು ಮತ್ತಷ್ಟು ಅಪಾಯವನ್ನು ಎದುರಿಸಲಿವೆ.

ಮಾತ್ರವಲ್ಲಾ, ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣವನ್ನು ಕಾರ್ಪೊರೇಟ್ ಕಂಪನಿಗಳ ಹಾಗೂ ಖಾಸಗೀ ಶಿಕ್ಷಣ ಸಂಸ್ಥೆಗಳ ಬೃಹತ್ ಲೂಟಿಗೆ ರಾಜ್ಯವನ್ನು ತೆರೆಯುವ ಮುಂದುವರಿದ ಸಂಚಿನ ಭಾಗವಿದಾಗಿದೆ. ಇದರಿಂದ ಲಕ್ಷಾಂತರ ಅಂಗನವಾಡಿ ಕೇಂದ್ರಗಳು, ಏಕೋಪಾಧ್ಯಾಯ ಹಾಗೂ ವಿದ್ಯಾರ್ಥಿಗಳ ಕೊರತೆ ಎದುರಿಸುವ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು ಮುಚ್ಚಿ ಹೋಗಲಿವೆ.

ಬಾಣಂತಿಯರು, ಗರ್ಭಿಣಿ ಮಹಿಳೆಯರು,ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ನೀಡಲಾಗುತ್ತಿರುವ ಪೌಷ್ಟಿಕ ಆಹಾರದ ಯೋಜನೆಯು ಕಣ್ಮರೆಯಾಗಲಿದೆ.

ಅಗ್ಗದ ದರದ ಆಧುನಿಕ ನೈಪುಣ್ಯತೆ ಪಡೆದ ಗುಲಾಮರನ್ನು ಕಾರ್ಪೊರೇಟ್ ಕಂಪನಿಗಳಿಗೆ ಒದಗಿಸುವ ಮತ್ತು ಮತೀಯ ಭಾವನೆಗಳನ್ನು ಹರಡುವ, ರಾಜ್ಯದ ಸಮಗ್ರತೆ, ಏಕತೆಗೆ ಭಂಗ ಉಂಟುಮಾಡುವ ದುರುದ್ದೇಶವನ್ನು ಅದು ಹೊಂದಿದೆ.

ಇದು ಸ್ವಾತಂತ್ರ್ಯ ನಂತರ ದೇಶದಲ್ಲಿ ಶೈಕ್ಷಣಿಕ ಹಾಗೂ ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿನ ಸಾಧನೆಗಳ ಮುನ್ನಡೆಗೆ ಮತ್ತು ರಾಜ್ಯದಲ್ಲಿ ಬೆಳೆಯುತ್ತಿರುವ ಜನತೆಯ ವೈಜ್ಞಾನಿಕ ಮನೋಭಾವದ ಮೇಲೆ ಬಲವಾದ ತಡೆಯಾಗಲಿದೆ.

ಇದು ರಾಜ್ಯದಲ್ಲಿ ಶೈಕ್ಷಣಿಕ ಮತ್ತು ಆ ಸಂಬಂಧಿ ಇತರೆ ವಲಯಗಳ ಉದ್ಯೋಗಿಗಳನ್ನು ವ್ಯಾಪಕವಾದ ನಿರುದ್ಯೋಗಕ್ಕೆ ಮತ್ತು ಸಾರ್ವಜನಿಕ ಕ್ಷೇತ್ರದ ಉದ್ಯೋಗಗಳನ್ನು ಕಡಿತಗೊಳಿಸುವಿಕೆಗೆ ಕಾರಣವಾಗಲಿದೆ. ಅದೇ ರೀತಿ, ದುರ್ಬಲರ ಸಾಮಾಜಿಕ ನ್ಯಾಯದ ಮೀಸಲಾತಿಯ ಹಕ್ಕನ್ನು ಹೊಸಕಿ ಹಾಕಲಿದೆ.

ಇಷ್ಠೊಂದು ಗಂಭೀರ ಅಪಾಯಗಳನ್ನು ರಾಜ್ಯದ ಜನತೆಯ ಮೇಲೆ ಹೇರಲಿರುವ ಇದು ಮತ್ತಷ್ಟು ವ್ಯಾಪಕ ಚರ್ಚೆಗೊಳಪಡಿಸದೇ ಜಾರಿಗೊಳಿಸಬಾರದು. ಕಳೆದ ಎರಡು ವರ್ಷಗಳ ಕಾಲ ರಾಜ್ಯದ ಜನತೆ ಕೋವಿಡ್ ಸಂಕಷ್ಠದಲ್ಲಿದ್ದುದ ರಿಂದ ಜನತೆಗೆ ವ್ಯಾಪಕವಾಗಿ ಭಾಗಿಯಾಗಿ, ಈ ವಿಚಾರದಲ್ಲಿ ಅಭಿಪ್ರಾಯ ನೀಡಲು ಸಾಧ್ಯವಾಗಿಲ್ಲ ವೆಂಬುದನ್ನು ತಾವು ಗಮನಿಸಬೇಕು.

ಆದ್ದರಿಂದ, ರಾಜ್ಯದ ವಿಧಾನ ಸಭೆ ಹಾಗೂ ಪರಿಷತ್ತಿನಲ್ಲಿ , ಎಲ್ಲ ರಾಜಕೀಯ ಪಕ್ಷಗಳ ಜೊತೆ ಮತ್ತು ಶೈಕ್ಷಣಿಕ ವಲಯದ ತಜ್ಞರು, ಭಾಷಾ ತಜ್ಞರು, ಅಕಾಡೆಮಿಕ್ ವಲಯ ಗಳು, ಶಿಕ್ಷಕರ, ಅಧ್ಯಾಪಕ, ಪ್ರಾಧ್ಯಾಪಕರು, ವಿದ್ಯಾರ್ಥಿ ಸಂಘಟನೆಗಳು ಹಾಗೂ ವಿಶ್ವ ವಿದ್ಯಾನಿಲಯಗಳು ಮುಂತಾದ ಗಣ್ಯ ಸಂಸ್ಥೆಗಳು ಹಾಗೂ ನಾಗರೀಕರ ಜೊತೆ ವ್ಯಾಪಕವಾಗಿ ಚರ್ಚಿಸಲು ಅಗತ್ಯ ಕ್ರಮಗಳನ್ನು ವಹಿಸಬೇಕು ಮತ್ತು ಅದುವರೆಗೆ ಅದನ್ನು ಯಾವುದೇ ಕಾರಣಕ್ಕೆ ಜಾರಿಗೊಳಿಸಬಾರದೆಂದು ಸಿಪಿಐಎಂ ಬಲವಾಗಿ ಒತ್ತಾಯಿಸುತ್ತದೆ.

ತಕ್ಷಣವೇ ಅದರ ಜಾರಿಯನ್ನು ತಡೆಯಲು ತಾವು ಮಧ್ಯ ಪ್ರವೇಶಿಸ ಬೇಕೆಂದು ವಿನಂತಿಸುತ್ತೇವೆ.

ಯು.ಬಸವರಾಜ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ

Leave a Reply

Your email address will not be published. Required fields are marked *