ಬಿಜೆಪಿ-ಆರ್‌ಎಸ್‌ಎಸ್ ಆಳ್ವಿಕೆಯನ್ನು ಸೋಲಿಸಲು ಒಗ್ಗೂಡಿ -ಸಿಪಿಐ(ಎಂ) ಮಹಾಧಿವೇಶನದ ಕರೆ

ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಹಂದರವನ್ನು ನಾಶಮಾಡಲು ಪ್ರಯತ್ನಿಸುತ್ತಿರುವ ಹಿಂದುತ್ವದ ವಿಷಕಾರಿ ಶಕ್ತಿಯ ವಿರುದ್ಧ ಭಾರತದ ಪ್ರತಿಯೊಬ್ಬ ಪ್ರಜೆಯನ್ನು ಸಜ್ಜುಗೊಳಿಸಲು ಉದ್ದೇಶಿಸಿರುವ ರಾಜಕೀಯ ನಿರ್ಣಯವನ್ನು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ)ನ 23ನೇ ಮಹಾಧಿವೇಶನ ಅಂಗೀಕರಿಸಿದೆ. ಎರಡು ದಿನಗಳ ಸುದೀರ್ಘ ಚರ್ಚೆಯ ನಂತರ ಅದರಲ್ಲಿ ಹೊಮ್ಮಿದ ಸಲಹೆಗಳು ಮತ್ತು ತಿದ್ದುಪಡಿಗಳನ್ನು ಪೊಲಿಟ್‌ಬ್ಯೂರೊ ಪರೀಕ್ಷಿಸಿತು, ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ಉತ್ತರವನ್ನು ನೀಡಿದರು, ತದನಂತರ ಮಹಾಧಿವೇಶನ ರಾಜಕೀಯ ನಿರ್ಣಯವನ್ನು ಅಂಗೀಕರಿಸಿತು.

ಇದನ್ನು ಓದಿ: ಭಾರತೀಯ ಸಂವಿಧಾನ ಮತ್ತು ಗಣರಾಜ್ಯವನ್ನು ರಕ್ಷಿಸಲು ಬಿಜೆಪಿಯನ್ನು ದೂರಮಾಡುವುದು ಮತ್ತು ಸೋಲಿಸುವುದು ಪ್ರಮುಖ ಕಾರ್ಯ-ಸೀತಾರಾಂ ಯೆಚುರಿ

Press conference 080422ಏಪ್ರಿಲ್ 8ರಂದು ಪತ್ರಿಕಾಗೋಷ್ಠಿಯಲ್ಲಿ ಮಾತಾಡುತ್ತ ಪಕ್ಷದ ಪಾಲಿಟ್‌ಬ್ಯುರೊ ಸದಸ್ಯೆ ಬೃಂದಾ ಕಾರಟ್, ಕರಡು ರಾಜಕೀಯ ನಿರ್ಣಯದ ಮೇಲಿನ ಚರ್ಚೆಯ ವಿವರಗಳನ್ನು ನೀಡಿದರು. ಚರ್ಚೆಯಲ್ಲಿ ಒಟ್ಟು 48 ಪ್ರತಿನಿಧಿಗಳು ಭಾಗವಹಿಸಿದ್ದರು. ಅವರಲ್ಲಿ 9 ಮಹಿಳೆಯರಿದ್ದರು. ಕರಡು ರಾಜಕೀಯ ನಿರ್ಣಯಕ್ಕೆ ಒಟ್ಟು 390 ತಿದ್ದುಪಡಿಗಳು ಮತ್ತು 12 ಸಲಹೆಗಳನ್ನು ಪ್ರತಿನಿಧಿಗಳು ಮಂಡಿಸಿದರು. ಈ  ಎಲ್ಲಾ ತಿದ್ದುಪಡಿಗಳು ಮತ್ತು ಸಲಹೆಗಳು ಮೂಲಭೂತವಾಗಿ ಕೇಂದ್ರ ಸಮಿತಿಯ ಕರಡಿನ ಆಶಯಕ್ಕೆ  ಅನುಗುಣವಾಗಿಯೇ ಇದ್ದವು, ಅದನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದ್ದವು… ಬಿಜೆಪಿ-ಆರ್‌ಎಸ್‌ಎಸ್ ಆಳ್ವಿಕೆಯನ್ನು ಏಕಾಂಗಿಯಾಗಿಸುವುದು ಮತ್ತು ಸೋಲಿಸುವುದು ಅದರ ಅಜೆಂಡಾದ ಕೇಂದ್ರವಾಗಿತ್ತು. ಇದಕ್ಕಾಗಿ ನಾವು ರಾಜಕೀಯ ಪಕ್ಷಗಳ ಆಚೆಯೂ ನೋಡಬೇಕಿದೆ. ಸಾಮಾಜಿಕ ಚಳುವಳಿಗಳು ಮತ್ತು ಜನಾಂದೋಲನಗಳು, ವಿದ್ಯಾರ್ಥಿ ಹೋರಾಟಗಳು ಮತ್ತು ದಲಿತ-ಆದಿವಾಸಿಗಳ ಪ್ರಶ್ನೆಗಳಿವೆ. ಇವು ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಕೆಲಸ ಮಾಡುತ್ತಿವೆ ಎಂದ ಬೃಂದಾ ಕಾರಟ್‍ ದಿಲ್ಲಿ ಗಡಿಗಳಲ್ಲಿ ನಡೆದ ರೈತ ಹೋರಾಟವನ್ನು ಉದಾಹರಣೆಯಾಗಿ ನೀಡಿದರು.

3 ವಿವಾದಾತ್ಮಕ ಕೃಷಿ ಕಾನೂನುಗಳ ಮೇಲೆ ಮೋದಿ ಸರ್ಕಾರದ ವಿರುದ್ಧ ಹೋರಾಡಲು 500ಕ್ಕೂ ಹೆಚ್ಚು ಸಂಘಟನೆಗಳು ಒಟ್ಟಾಗಿ ಸೇರಿಕೊಂಡಿವೆ. ಸಿಪಿಐ(ಎಂ) ಆ ವೇದಿಕೆಯನ್ನು ಬೆಂಬಲಿಸಿತು. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಆಂದೋಲನವು ಬಿಜೆಪಿ ಸರ್ಕಾರದ ವಿರುದ್ಧದ ಮೊದಲ ಬೃಹತ್ ಚಳುವಳಿಯಾಗಿದೆ. ಭಾರತದ ಪೌರತ್ವದ ಕಲ್ಪನೆಯು ಅಲುಗಾಡಿದಾಗ ಈ ಚಳುವಳಿ ಸ್ವಯಂಪ್ರೇರಿತವಾಗಿ ಸಜ್ಜುಗೊಂಡಿತು.

ಇದನ್ನು ಓದಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಸಿಪಿಐ(ಎಂ) ಮಹಾಧಿವೇಶನದ ಕರೆ

ಭಾರತದಲ್ಲಿ ಮಹಿಳೆಯರು ಈಗ ಅನಾಗರಿಕ ದಾಳಿಗಳನ್ನು ಎದುರಿಸುತ್ತಿದ್ದಾರೆ. ನಮಗೆ ಜನರ ಕಷ್ಟಗಳು ಮುಖ್ಯ. ಚುನಾವಣೆಯವರೆಗೆ ಕಾಯಲು ಸಾಧ್ಯವಿಲ್ಲ. ಇಂದು ನಾವು ಜನರ ನಡುವೆ ಹೋಗಬೇಕಾಗಿದೆ. ಇದು ಮನಸ್ಸಿನ ಹೋರಾಟವೇ ಹೊರತು ಮತಕ್ಕಾಗಿ ಅಲ್ಲ. ಅದಕ್ಕಾಗಿಯೇ ಸಿಪಿಐ(ಎಂ) ಜನರ ಕಾಳಜಿಯ ಮೇಲೆ ಗಮನ ಕೇಂದ್ರೀಕರಿಸುತ್ತಿದೆ ಎಂದು ಬೃಂದಾ ಕಾರಟ್ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತ ಹೇಳಿದರು.

ಚುನಾವಣೆ ಬಂದಾಗ ಈ ತಿಳುವಳಿಕೆಗೆ ಅನುಗುಣವಾಗಿ ಸೂಕ್ತ ತಂತ್ರಗಳನ್ನು ರೂಪಿಸಲಾಗುವುದು. ಈ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ. ನಮ್ಮ ಗುರಿ ಸ್ಪಷ್ಟವಾಗಿದೆ ಎಂದು ಬೃಂದಾ ಕಾರಟ್ ಹೇಳಿದರು. ಎಪ್ರಿಲ್‍ 8ರ ಸಂಜೆ ನಡೆದ ಅಧಿವೇಶನದಲ್ಲಿ ರಾಜಕೀಯ-ಸಂಘಟನಾತ್ಮಕ ವರದಿಯ ಕರಡು ಪ್ರತಿಯನ್ನು ಪೊಲಿಟ್ ಬ್ಯೂರೋ ಸದಸ್ಯ ಪ್ರಕಾಶ್ ಕಾರಟ್ ಮಂಡಿಸಿದರು. ಇದರ ಮೇಲೆ ಚರ್ಚೆಗಳು ಎಪ್ರಿಲ್‍ 9ರ ಬೆಳಿಗ್ಗೆಯ ಅಧಿವೇಶನದಲ್ಲಿ ಆರಂಭವಾಗಿವೆ.

Leave a Reply

Your email address will not be published. Required fields are marked *