ಭಾರತದ ಪ್ರಮುಖ ಎಡಪಕ್ಷ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ದ 23ನೇ ಮಹಾಧಿವೇಶನ ಎಪ್ರಿಲ್ ತಿಂಗಳಲ್ಲಿ ಕೇರಳದ ಕಣ್ಣೂರಿನಲ್ಲಿ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಕರ್ನಾಟಕ ರಾಜ್ಯ ಸಮ್ಮೇಳನ ಜನವರಿ 2 ರಿಂದ 4 ರ ವರೆಗೆ ಗಂಗಾವತಿಯಲ್ಲಿ ನಡೆಯಲಿದೆ. ಕರ್ನಾಟಕದ ಜನತೆಯ, ಅದರಲ್ಲೂ ಕಾರ್ಮಿಕರ, ರೈತರ ಮತ್ತು ಇತರ ದುಡಿಯುವ ಜನವಿಭಾಗಗಳ ಹಿತರಕ್ಷಣೆಯಲ್ಲಿ ಕಳೆದ ಮೂರು ವರ್ಷಗಳ ಅನುಭವಗಳು ಮತ್ತು ಅದರ ಬೆಳಕಿನಲ್ಲಿ ಮುನ್ನಡೆಯ ದಾರಿಯನ್ನು ರೂಪಿಸುವುದು ಈ ಸಮ್ಮೇಳನದ ಪ್ರಮುಖ ಕಾರ್ಯಸೂಚಿ. ದುಡಿಯುವ ಜನವಿಭಾಗಗಳ ನಡುವೆ ಕೆಲಸ ಮಾಡುತ್ತಿರುವವರ ಪ್ರತಿನಿಧಿಗಳು ಇದನ್ನು ಆಮೂಲಾಗ್ರವಾಗಿ ಚರ್ಚಿಸಲಿದ್ದಾರೆ. ಇದಕ್ಕಾಗಿ ರಾಜ್ಯ ಮುಖಂಡತ್ವ ಸಿದ್ಧಪಡಿಸಿರುವ ಕರಡು ವರದಿಯ ಕೆಲವು ಅಂಶಗಳನ್ನು ಇಲ್ಲಿ ನಮ್ಮ ಓದುಗರಿಗಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ.
ಸಿಪಿಐ(ಎಂ) ಕರ್ನಾಟಕ 23ನೆಯ ರಾಜ್ಯ ಸಮ್ಮೇಳನದ ಕರಡು ವರದಿಯ ಆಯ್ದ ಭಾಗಗಳು
ಮೇ 13, 2020 ರಂದು ಕರ್ನಾಟಕ ಸರಕಾರ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ-2020 ನ್ನು ಪ್ರಕಟಿಸಿತು. ಜೂನ್ 11 ರಂದು ನಡೆದ ಮಂತ್ರಿ ಮಂಡಲದ ಸಭೆಯಲ್ಲಿ ಕರ್ನಾಟಕ ಭೂ ಸುಧಾರಣಾ ಕಾಯ್ದೆ-1961 ರ ಕಲಂ 5,63,79,(ಎ)(ಬಿ)(ಸಿ) ಮತ್ತು 80 ಗಳಿಗೆ ತಿದ್ದುಪಡಿ ಮಾಡಲು ನಿರ್ಧರಿಸಿತು. ಈ ತಿದ್ದುಪಡಿಗಳು ರಾಜ್ಯದ ಕೃಷಿ ರಂಗದಲ್ಲಿ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ನೆರವಾಗಲಿವೆ ಎಂದೂ ಮತ್ತು ಆ ಮೂಲಕ ಕೃಷಿ ಆಧಾರಿತ ಕೈಗಾರಿಕೆಗಳ ಹೆಚ್ಚಳಕ್ಕೆ ನೆರವಾಗಲಿವೆ ಎಂದೂ ಹಾಗೂ ನಿರುದ್ಯೋಗದ ನಿವಾರಣೆಗೆ ಸಾಧನವಾಗಲಿವೆ ಎಂದೂ ಹೇಳಲಾಗುತ್ತದೆ. ಕೃಷಿ ರಂಗದ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ವ್ಯಾಪಕವಾಗಿ ಹೆಚ್ಚಿಸಲು ಕೃಷಿಯಲ್ಲಿ ಆಸಕ್ತಿ ಹೊಂದಿರುವ ಯಾರು ಬೇಕಾದರೂ ಜಮೀನುಗಳನ್ನು ಹೊಂದಲು ಅವಕಾಶ ನೀಡುವುದಾಗಿ ಘೋಷಿಸಿದೆ. ವಿಧಾನ ಸಭೆಯನ್ನು ಕರೆದು ಅಲ್ಲಿ ಚರ್ಚಿಸಿ ನಿರ್ಧರಿಸುವ ಪ್ರಕ್ರಿಯೆ ವಿಳಂಬವಾಗುವುದರಿAದ ತಡ ಮಾಡದೆ, ಸುಗ್ರೀವಾಜ್ಞೆಯನ್ನು ಹೊರಡಿಸಿದೆ.
ಸರ್ಕಾರದ ಈ ನಡೆ ಸಾರ್ವಜನಿಕವಾಗಿ ತೀವ್ರ ಠೀಕೆಗೊಳಗಾಗಿದೆ. ಇವು ಲೂಟಿಕೋರ ಕಾರ್ಪೋರೆಟ್ ಕಂಪನಿಗಳ ಪರವಾದವುಗಳೆಂದು ಹಾಗೂ ಕಪ್ಪು ಹಣವನ್ನು ಬಿಳಿ ಮಾಡುವ ಖದೀಮರಿಗೆ ನೆರವಾಗುವ ಉದ್ದೇಶದಿಂದ ತರಲಾಗಿವೆ ಎಂದು ಮತ್ತು ಉಳುವವರನ್ನು ಭೂ ಒಡೆಯರಾಗಿಸುವ ಪ್ರಗತಿಪರ ಭೂ ಸುಧಾರಣೆಗಳನ್ನು ಬುಡಮೇಲು ಮಾಡಿ ಉಳ್ಳವವರನ್ನು ಭೂ ಒಡೆಯರನ್ನಾಗಿಸುವ ಉದ್ದೇಶವನ್ನು ಹೊಂದಿವೆ ಎಂದು ಖಂಡನೆಗೆ ಒಳಗಾಗಿವೆ. ಫಲವತ್ತಾದ ಕೃಷಿ ಜಮೀನುಗಳನ್ನು ಸಂಕಷ್ಟದಲ್ಲಿರುವ ರೈತರ ಕೈಗಳಿಂದ ಕೃಷಿಯೇತರ ಉದ್ದೇಶದ ಹೆಸರಿನಲ್ಲಿ ಕಿತ್ತುಕೊಂಡು ರೈತರನ್ನು ಬೀದಿಪಾಲು ಮಾಡುವ ದುರುದ್ದೇಶಕ್ಕೆ ಸರಕಾರ ಬೆಂಬಲ ನೀಡಲು ಮುಂದಾಗಿದೆ. ಸರಕಾರದ ಈ ಕೃಷಿ ವಿರೋಧಿ, ಕೃಷಿಕ ವಿರೋಧಿ ನಡೆಯನ್ನು ಬಲವಾಗಿ ಎದುರಿಸಿ ಹಿಮ್ಮೆಟ್ಟಿಸಬೇಕಾಗಿದೆ.
ಎಪಿಎಂಸಿ ತಿದ್ದುಪಡಿ ಮಸೂದೆ-2020
ರೈತರಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಅವಕಾಶ ಕಲ್ಪಿಸುವ ಹೆಸರಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ಬೃಹತ್ ಕಾರ್ಪೋರೇಟ್ ಕಂಪನಿಗಳ ಲೂಟಿಗೆ ತೆರೆದಿಡಲು ಕೇಂದ್ರ ಸರ್ಕಾರ ಮುಂದಾಗಿದೆ. ಕೃಷಿ ಮಾರುಕಟ್ಟೆಗಳನ್ನು ತಮ್ಮ ವಶದಲ್ಲಿಟ್ಟುಕೊಂಡು ರೈತರಿಗೆ ನಿರಂತರ ಮೋಸ ಮಾಡುವುದನ್ನು ತಡೆಗಟ್ಟುವ ಉದ್ದೇಶದಿಂದ 1960 ಮತ್ತು 1970ರಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ಆರಂಭಿಸಲಾಗಿತ್ತು. ಎಪಿಎಂಸಿಗಳ ಸ್ಥಾಪನೆಯಿಂದಾಗಿ ರೈತರ ಶೋಷಣೆ ಸ್ವಲ್ಪ ಮಟ್ಟಿಗಾದರೂ ನಿಯಂತ್ರಿಸಲ್ಪಟ್ಟಿತು. ಸರಕಾರಕ್ಕೆ ಗಣನೀಯ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಮಾಡಲು ಸಾಧ್ಯವಾಯಿತು. ಗಣನೀಯ ಸಂಖ್ಯೆಯಲ್ಲಿ ನಿರುದ್ಯೋಗಿ ಯುವಕರಿಗೆ, ಹಮಾಲಿ ಕಾರ್ಮಿಕರಿಗೆ ಎಪಿಎಂಸಿ ಆವರಣಗಳಲ್ಲಿ ಸರಕನ್ನು ಹೇರುವ, ಇಳಿಸುವ, ಸ್ವಚ್ಛಮಾಡುವ ಮೊದಲಾದ ಕೆಲಸ ದೊರೆಯುವಂತಾಯಿತು.
ಆದರೆ ಇಂದು ಕೇಂದ್ರ ಸರ್ಕಾರ ಕೃಷಿ ರಂಗವನ್ನೇ ಕಾರ್ಪೋರೇಟ್ ಕಂಪನಿಗಳಿಗೆ ಹಸ್ತಾಂತರ ಮಾಡಲು ಮುಂದಾಗಿದೆ. ಸುಧಾರಣೆ ಎಂದರೆ ಖಾಸಗೀಕರಣ ಎಂದು ಬಿಂಬಿಸುತ್ತದೆ. ಮುಕ್ತ ಮಾರುಕಟ್ಟೆಯಲ್ಲೇ ರೈತರಿಗೆ ಲಾಭದಾಯಕ ಬೆಲೆ ಸಿಗಲಿದೆ ಎಂದು ನಂಬಿಸುತ್ತಿದೆ. ಕೃಷಿ ಉತ್ಪನ್ನಗಳ ಸಾಗಣೆ ವಿಚಾರದಲ್ಲಿ ದಶಕಗಳಿಂದ ಇದ್ದ ನಿರ್ಬಂಧಗಳನ್ನು ತೆಗೆದುಹಾಕಲಾಗುತ್ತದೆ. ವರ್ತಕರ ಹಿಡಿತದಿಂದ ರೈತರನ್ನು ಮುಕ್ತಗೊಳಿಸಲಾಗುತ್ತದೆ. ಅಲ್ಲಿ ಸ್ಪರ್ಧೆಗೆ ಅವಕಾಶ ಇರುವುದರಿಂದ ರೈತರಿಗೆ ಲಾಭದಾಯಕ ಬೆಲೆ ಸಿಗುತ್ತದೆ ಎಂದು ವಾದಿಸಲಾಗುತ್ತದೆ.
ಕೃಷಿ ಮಾರುಕಟ್ಟೆ ರಾಜ್ಯದ ಪಟ್ಟಿಯಲ್ಲಿ ಬರುವ ವಿಷಯವಾದ್ದರಿಂದ ಕೇಂದ್ರ ಸರ್ಕಾರಕ್ಕೆ ನೇರವಾಗಿ ಕಾಯ್ದೆಯನ್ನು ಅಂಗೀಕರಿಸಲು ಸಾಧ್ಯವಾಗದಿರುವುದರಿಂದ ಮಾದರಿ ಕೃಷಿ ಉತ್ಪನ್ನ ಹಾಗೂ ಜಾನುವಾರು ಮಾರುಕಟ್ಟೆ ಕಾಯ್ದೆ 2017 ಅನ್ನು ರಚಿಸಿ ಎಲ್ಲಾ ರಾಜ್ಯಗಳಲ್ಲಿ ಅದೇ ಮಾದರಿಯಲ್ಲಿ ತಮ್ಮ ಎಪಿಎಂಸಿ ಕಾಯ್ದೆಗಳನ್ನು ತಿದ್ದುಪಡಿ ಮಾಡುವಂತೆ ಸೂಚಿಸಲಾಯಿತು. ಈ ಸೂಚನೆ ಪಾಲಿಸದಿದ್ದರೆ ಅನುದಾನ ನೀಡಲಾಗುವುದಿಲ್ಲ ಎಂಬ ಬೆದರಿಕೆಯನ್ನು ಸಹ ಹಾಕಲಾಯಿತು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಎಪಿಎಂಸಿ ತಿದ್ದುಪಡಿ ಮಸೂದೆಯನ್ನು 2020ರಲ್ಲಿ ಅಂಗೀಕರಿಸಿತು.
ಎಪಿಎಂಸಿಗಳಲ್ಲಿ ನ್ಯೂನತೆಗಳು ಇಲ್ಲದಿರಲಿಲ್ಲ. ಆದರೆ ಸ್ವಲ್ಪ ಮಟ್ಟಿಗಾದರೂ ಅವು ರೈತರಿಗೆ ಸಹಾಯಕವಾಗಿದ್ದವು. ಒಂದಷ್ಟು ನಿಯಂತ್ರಣ ಇತ್ತು. ಈ ತಿದ್ದುಪಡಿಗಳಿಂದ ರೈತರು ಎಪಿಎಂಸಿ ಹೊರಗಡೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಾದ್ಯವಾಗುವುದರಿಂದ ಎಪಿಎಂಸಿಗಳು ನಿಧಾನವಾಗಿ ಬಂದ್ ಆಗುವುವು. ಕಾರ್ಪೋರೇಟ್ ಕಂಪನಿಗಳೇ ದೈತ್ಯ ಖರೀದಿದಾರರಾಗುತ್ತಾರೆ. ಕಾರ್ಪೋರೇಟ್ಕರಣದಿಂದ ಈಗಾಗಲೇ ಎಪಿಎಂಸಿಗಳು ನಷ್ಟ ಅನುಭವಿಸತೊಡಗಿವೆ. ಅರ್ಧದಷ್ಟು ಸಿಬ್ಬಂದಿಗಳನ್ನು ಕಡಿತ ಮಾಡಲಾಗಿದೆ. ಗ್ರಾಮೀಣ ನಿರುದ್ಯೋಗ ತೀವ್ರಗೊಂಡಿದೆ. ಗ್ರಾಮೀಣ ಕೆಲಸಗಾರರು ಹೊಟ್ಟೆಪಾಡಿಗಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದು ಹೆಚ್ಚಾಗಿದೆ. ಕೇರಳದಲ್ಲಿ ಎಪಿಎಂಸಿ ಮಾರುಕಟ್ಟೆಗಳೇ ಇಲ್ಲ. ಆದರೂ ಅಲ್ಲಿಯ ಎಡ ರಂಗ ಸರ್ಕಾರ ರೈತರ ಪರ ಮದ್ಯಪ್ರವೇಶ ಮಾಡುತ್ತಿರುತ್ತದೆ. ಅಲ್ಲಿ ಕೃಷಿ ರಂಗದ ಕಾಯ್ದೆಗಳು ರೈತ ಸ್ನೇಹಿಯಾಗಿವೆ. ಮೋದಿ ಸರ್ಕಾರದ ಕೃಷಿ ಕಾಯ್ದೆಗಳನ್ನು ಅಲ್ಲಿ ತಿರಸ್ಕಕರಿಸಲಾಗಿದೆ.
ಜಾನುವಾರು ಹತ್ಯಾ ನಿಷೇದ ಮಸೂದೆ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂಪಡೆದಿದ್ದ. ಜಾನುವಾರು ಹತ್ಯೆ ನಿಷೇದ ಮಸೂದೆಯನ್ನು ಪುನಃ ಯಾವುದೇ ಚರ್ಚೆಗೆ ಅವಕಾಶ ನೀಡದೆ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ಅಂಗೀಕರಿಸಿದೆ. ಜಾನುವಾರು ಅಂದರೆ ಹಸು, ಎಮ್ಮೆ, ಅವುಗಳ ಕರುಗಳಾದ ಹೋರಿ, ಎತ್ತು, ಕೋಣಗಳಾಗಿವೆ. ಈ ಕಾಯ್ದೆ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಜನತೆಯ ಆಹಾರದ ಹಕ್ಕನ್ನು ಅದು ನಾಶ ಮಾಡುತ್ತದೆ. ಯಾರು ಯಾವ ಆಹಾರ ಸೇವಿಸಬೇಕೆಂಬುದನ್ನು ಅವರವರೇ ತೀರ್ಮಾನಿಸಬೇಕೆ ಹೊರತು ಬಲವಂತವಾಗಿ ಅಲ್ಲ. ಅಸಂಖ್ಯಾತ ಜನ ಹೈನೋದ್ಯಮ, ಮಾಂಸೋದ್ಯಮ ಮತ್ತು ಚರ್ಮೋದ್ಯಮಗಳನ್ನು ಅವಲಂಭಿಸಿ ಜೀವನ ಸಾಗಿಸುತ್ತಿರುತ್ತಾರೆ. ಸರ್ಕಾರ ಈ ಕಾಯ್ದೆಯ ಮೂಲಕ ಕಾರ್ಪೋರೇಟ್ ಕಂಪೆನಿಗಳಿಗೆ ಪ್ರವೇಶ ನೀಡಿ ಲೂಟಿ ಮಾಡಲು ಅವಕಾಶ ನೀಡಲು ಮುಂದಾಗಿವೆ. ಈಗಾಗಲೇ ಬಾರೀ ಪ್ರಮಾಣದಲ್ಲಿ ಜಾನುವಾರುಗಳ ಹತ್ಯೆ ಮಾಡಿ ಮಾಂಸವನ್ನು ರಫ್ತು ಮಾಡುವ ಕಂಪೆನಿಗಳಿಗೆ ಬಾರೀ ಲಾಭಗಳಿಕೆ ಸಾಧ್ಯವಾಗಲಿದೆ. ಹೈನೋದ್ಯಮದಲ್ಲಿ ತೊಡಗಿರುವ ರೈತರಿಗೆ ಬಾರೀ ಹಾನಿ ಆಗಲಿದೆ. ಜನರ ಆಹಾರದ ಹಕ್ಕಿನ ಮೇಲೆ ದಾಳಿ ಮಾಡಲು ಹೊರಟಿರುವ ಸರ್ಕಾರ ಶಾಲಾ ಮಕ್ಕಳಿಗೆ ಬಿಸಿ ಊಟದಲ್ಲಿ ಮೊಟ್ಟೆಯನ್ನು ನೀಡುವ ಪ್ರಸ್ತಾವವನ್ನು ಕೈಬಿಡಲು ನಿರ್ಧರಿಸಿದೆ. ಇದರಿಂದಾಗಿ ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ನಿರಾಕರಿಸುವ ಹುನ್ನಾರ ನಡೆದಿದೆ. ಆಹಾರದ ಹಕ್ಕಿನ ಮೇಲಿನ ಈ ದಾಳಿಯನ್ನು ಬಲವಾಗಿ ವಿರೋಧಿಸಬೇಕಾಗಿದೆ.
ಕಾರ್ಮಿಕ ಕಾನೂನುಗಳ ತಿದ್ದುಪಡಿ ಸುಗ್ರೀವಾಜ್ಞೆ ವಿಧೇಯಕಕ್ಕೆ ಸೋಲು
ಕೈಗಾರಿಕ ವಿವಾದಗಳ ಕಾಯ್ದೆಗೆ ತಿದ್ದುಪಡಿ ತಂದು ಕಾರ್ಖಾನೆಗಳ ಮುಚ್ಚಲು, ಲೇ ಆಫ್, ರಿಟ್ರೆಂಚ್ಮೆAಟ್ ಮಾಡಲು ಸರ್ಕಾರÀದ ಅನುಮತಿಯ ಕಡ್ಡಾಯವನ್ನು 300 ಕ್ಕಿಂತ ಹೆಚ್ಚಿನ ಕಾರ್ಮಿಕರನ್ನು ಹೊಂದಿರುವ ಕಾರ್ಖಾನೆಗಳಿಗೆ ಮಾತ್ರ ಕಡ್ಡಾಯ ಮಾಡುವ, ಕಾರ್ಖಾನೆ ಕಾಯ್ದೆಗೆ ತಿದ್ದುಪಡಿ ಮಾಡಿ ಕಾರ್ಖಾನೆಯ ಪರಿಭಾಷೆಯಿಂದ ವಿದ್ಯುತ್ ಸಹಿತ 10 ಕಾರ್ಮಿಕರ ಗರಿಷ್ಠ ಮಿತಿಯನ್ನು 20 ಕ್ಕೆ ಹಾಗು ವಿದ್ಯುತ್ ರಹಿತ 20 ಕಾರ್ಮಿಕರ ಗರಿಷ್ಠ ಮಿತಿಯನ್ನು 40 ಕ್ಕೆ ಹೆಚ್ಚಿಸುವ ಹಾಗು ಗುತ್ತಿಗೆ ಕಾರ್ಮಿಕರ ಕಾಯ್ದೆಗೆ ತಿದ್ದುಪಡಿ ತಂದು ಕಡ್ಡಾಯ ನೋಂದಣಿ ಮತ್ತು ಪರವಾನಗಿಗೆ ಅಗತ್ಯವಿರುವ ಕಾರ್ಮಿಕರ ಕನಿಷ್ಟ ಸಂಖ್ಯೆಯನ್ನು ಪ್ರಸ್ತುತ 20 ರಿಂದ 50 ಕ್ಕೆ ಹೆಚ್ಚಿಸುವ ಕಾರ್ಮಿಕ ಕಾನೂನುಗಳ ತಿದ್ದುಪಡಿ ಸುಗ್ರೀವಾಜ್ಞೆಯನ್ನು ಕೋವಿಡ್ ನೆಪದಲ್ಲಿ ಲಾಕ್ಡೌನ್ ವೇಳೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಹೊರಡಿಸಿತ್ತು. ಸದರಿ ಸುಗ್ರೀವಾಜ್ಞೆಯನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ಹೋರಾಟವನ್ನು ತೀವ್ರವಾಗಿ ನಡಿಸಿದ್ದವು. ಸದರಿ ಸುಗ್ರೀವಾಜ್ಞೆಯ ವಿರುದ್ಧ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಮತ್ತು ಜೆಡಿ(ಎಸ್) ಮತ ಚಲಾಯಿಸಿದ ಕಾರಣ ವಿಧೇಯಕಕ್ಕೆ ಸೋಲುಂಟಾಯಿತು. ಆನಂತರ ಸದರಿ ಸುಗ್ರೀವಾಜ್ಞೆಯನ್ನು ಮತ್ತೆ ಹೊರಡಿಸಲು ಯತ್ನಿಸಿದಾಗ ನಮ್ಮ ಪಕ್ಷವು ರಾಜಭವನದ ಮುಂದೆ ಪ್ರತಿಭಟನೆ ನಡೆಸಿ ಶಾಸನ ಸಭೆಯಲ್ಲಿ ಸೋತ ಸುಗ್ರೀವಾಜ್ಞೆಯನ್ನು ಮತ್ತೆ ಹೊರಡಿಸುವುದು ಅಸಿಂಧು ಎಂಬ ಸುಪ್ರೀಂ ಕೋರ್ಟ್ ಸಂವಿಧಾನ ಪೀಠದ ತೀರ್ಪನ್ನು ಉಲ್ಲೇಖಿಸಿ ಪ್ರಚಾರ ನಡೆಸಿತು. ಪರಿಣಾಮವಾಗಿ ಮತ್ತೆ ಸುಗ್ರೀವಾಜ್ಞೆಯನ್ನು ಹೊರಡಿಸಲಿಲ್ಲ. ಇದು ಕಾರ್ಮಿಕರ ಹೋರಾಟಕ್ಕೆ ಪ್ರಧಾನವಾಗಿ ಸಿಐಟಿಯು ನಡೆಸಿದ ಹೋರಾಟಕ್ಕೆ ಸಂದ ಜಯವಾಗಿದೆ. ಕೇಂದ್ರ ಸರ್ಕಾರ 29 ಕಾರ್ಮಿಕ ಕಾಯ್ದೆಗಳ ರದ್ದುಪಡಿಸಿ ರೂಪಿಸಿರುವ 4 ಕಾರ್ಮಿಕ ಸಂಹಿತೆಗಳಿಗೆ ನಿಯಮಾವಳಿ ರೂಪಿಸಿ ಜಾರಿಗೊಳಿಸುವ ಯತ್ನವನ್ನು ರಾಜ್ಯ ಬಿಜೆಪಿಯ ಸರ್ಕಾರ ನಡೆಸಿದೆ. ಆದರೆ ಕಾರ್ಮಿಕರ ಹೋರಾಟದ ಕಾರಣ ಅದರ ಜಾರಿ ಮುಂದೂಡುತ್ತಿದೆ.