ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವಂತೆ ಸಿಪಿಐ(ಎಂ) ರಾಜ್ಯ ಸಮ್ಮೇಳನ ನಿರ್ಣಯ

ಸಂವಿಧಾನಬದ್ಧ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿಯುವ ಕೋಮುವಾದಿ ಹಿತಾಸಕ್ತಿಯ ‘ಮತಾಂತರ’ ನಿಷೇಧ ಕಾಯ್ದೆಯನ್ನು ಹಿಂಪಡೆಯಲು ಆಗ್ರಹ – ಪ್ರತಿಭಟನೆಗೆ ಸಿಪಿಐ(ಎಂ) 23ನೇ ರಾಜ್ಯ ಸಮ್ಮೇಳನ ಕರೆ

ಕರ್ನಾಟಕದಲ್ಲಿ ಬಿ.ಜೆ.ಪಿ ನೇತೃತ್ವದ ರಾಜ್ಯ ಸರಕಾರವು ಅಂಗೀಕರಿಸಿರುವ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ, 2021’ ಕಾಯ್ದೆಯು ಭಾರತೀಯರಿಗೆ ಸಂವಿಧಾನವು ಕೊಡ ಮಾಡುವ  ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಕಸಿಯುವ  ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದು  ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ)-ಸಿಪಿಐ(ಎಂ) 23ನೇ ರಾಜ್ಯ ಸಮ್ಮೇಳನವು ತೀವ್ರವಾಗಿ ಖಂಡಿಸಿದೆ.

ಕರ್ನಾಟಕ ವಿಧಾನ ಸಭೆಯಲ್ಲಿ ತರಾತುರಿಯಲ್ಲಿ ಅಂಗೀಕರಿಸಲ್ಪಟ್ಟ ಈ ಮಸೂದೆಯನ್ನು ವಿಧಾನಪರಿಷತ್ತಿನಲ್ಲಿ ತಿರಸ್ಕಾರಕ್ಕೆ ಒಳಗಾಗ ಬಹುದೆಂಬ ಆತಂಕದಿಂದ ಸುಗ್ರೀವಾಜ್ಞೆ ಹೊರಡಿಸಿ ಜಾರಿಗೆ ತರಲು ಶ್ರೀ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಸಚಿವ ಸಂಪುಟವು  ಕ್ರಮ ವಹಿಸುವುದನ್ನು ಸಮ್ಮೇಳನವು ತೀವ್ರವಾಗಿ ವಿರೋಧಿಸುತ್ತದೆ. ಕರ್ನಾಟಕದ ರಾಜ್ಯಪಾಲರು ಇದಕ್ಕೆ ಅನುಮತಿಯನ್ನು ಕೊಡುವುದಾಗಲಿ ಅಂಗೀಕರಿಸಬಾರದೆಂದು ಸಿಪಿಐ(ಎಂ) ಆಗ್ರಹಿಸಿದೆ.

ಸ್ವತಂತ್ರ ಭಾರತದ ಸಂವಿಧಾನದ 25 ನೇ ಅನುಚ್ಛೇಧವು ದೇಶದ ಪ್ರತಿಯೊಬ್ಬ ಪ್ರಜೆಗೂ ಧಾರ್ಮಿಕ ಸ್ವಾತಂತ್ರ್ಯವನ್ನು ಖಾತ್ರಿ ಪಡಿಸುತ್ತದೆ. ಧಾರ್ಮಿಕ ಸ್ವಾತಂತ್ರ್ಯ ಎಂದರೆ ದೇಶದ ಯಾವುದೇ ಪ್ರಜೆಯು ತನಗೆ ಇಷ್ಟ ಬಂದ ಮತಧರ್ಮವನ್ನು ಅನುಸರಿಸಬಹುದು, ಯಾವುದೇ ಧರ್ಮದ ವಿಚಾರಗಳನ್ನು ಪ್ರಚಾರ ಮಾಡಬಹುದು.  ಹಾಗೆಯೇ ಯಾವುದೇ ವ್ಯಕ್ತಿಗೆ ಯಾವುದೇ ಮತಧರ್ಮವನ್ನು ಅನುಸರಿಸುವ, ಇಲ್ಲವೆ  ಅನುಸರಿಸದೇ ಇರುವ ಸ್ವಾತಂತ್ರ್ಯ ಸಹ ಇರುತ್ತದೆ. ಇದು ಧಾರ್ಮಿಕ ಸ್ವಾತಂತ್ರ್ಯವಾಗಿದ್ದು ಈ ಧಾರ್ಮಿಕ ಹಕ್ಕು ದೇಶದ ಪ್ರತಿಪ್ರಜೆಯ ಮೂಲಭೂತ ಹಕ್ಕಾಗಿದೆ ಎನ್ನುವುದನ್ನು ಸಮ್ಮೇಳನವು ನೆನಪಿಸಬಯಸುತ್ತದೆ.

ಆದರೆ ಕರ್ನಾಟಕ ಸರಕಾರ ತಂದಿರುವ ಕಾಯ್ದೆಯು ಜನರ ಸಂವಿಧಾನಬದ್ಧ ಹಕ್ಕನ್ನು ಕಿತ್ತುಕೊಳ್ಳುವ ಒಂದು ದೌರ್ಜನ್ಯಕಾರಿ, ಸರ್ವಾಧಿಕಾರದ ಕ್ರಮವಾಗಿದೆ.  ಬಲವಂತ, ಅನುಚಿತ ಪ್ರಭಾವ, ಒತ್ತಾಯ, ಆಮಿಷಗಳ ಮೂಲಕ ಅಥವಾ ಯಾವುದೇ ವಂಚನೆಯ ವಿಧಾನಗಳ ಮೂಲಕ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರ ಆಗುವುದನ್ನು ತಡೆಯುವ ಉದ್ದೇಶದಿಂದ ಈ ಕಾಯ್ದೆಯನ್ನು ತರಲಾಗಿದೆ ಎಂದು ಸರಕಾರ ಹೇಳಿಕೊಂಡಿದೆ. ಆದರೆ ಈಗಾಗಲೇ ಸಂವಿಧಾನದಲ್ಲಿ ಬಲವಂತದ ಮತಾಂತರವನ್ನು ತಡೆಯುವ ಮತ್ತು ಶಿಕ್ಷಿಸುವ ಅವಕಾಶ ಇರುವಾಗ ಮತ್ತೊಂದು ಕಾಯ್ದೆಯನ್ನು ತರುವುದರ ಔಚಿತ್ಯವಾದರೂ ಏನಿದೆ ಎನ್ನುವುದನ್ನು ಸಮ್ಮೇಳನವು ಪ್ರಶ್ನಿಸುತ್ತದೆ.

ಸಮಾನತೆ-ಸಾಮಾಜಿಕ ನ್ಯಾಯಗಳೆಂಬ  ಉದಾತ್ತ ಮಾನವೀಯ ತತ್ವಗಳ ಆಧಾರದಲ್ಲಿ ಒಂದು ಪ್ರಜಾಸತ್ತಾತ್ಮಕ-ಧರ್ಮನಿರಪೇಕ್ಷ ರಾಷ್ಟ್ರವಾಗಿ ಘೋಷಿಸಿಕೊಂಡಿರುವ ಭಾರತವನ್ನು  ಜಾತಿ ತಾರತಮ್ಯ ಮತ್ತು ಅಸಮಾನತೆಯ ಆಧಾರದ ಮನುವಾದಿ ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸಲು ಕೆಲಸ ಮಾಡುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಯಂತ್ರಣದಲ್ಲಿರುವ ಬಿಜೆಪಿ ಪಕ್ಷವು ಇಂತಹ ಪ್ರಗತಿ ವಿರೋಧಿ ಕಾಯ್ದೆಯೊಂದನ್ನು ತಂದಿರುವುದನ್ನು ಒಪ್ಪಲು ಸಾಧ್ಯವಿಲ್ಲ.

ಬಲಾತ್ಕಾರ ಮತ್ತು ಆಮಿಷದ ಮತಾಂತರವನ್ನು ತಡೆಯುವ ಉದ್ದೇಶದ್ದು ಎಂದು ಹೇಳಲಾದ ಈ ಕಾಯ್ದೆಯು ಹಲವು ಕರಾಳ ಸ್ವರೂಪದ ಅಘಾತಕಾರಿ ಕಟ್ಟಳೆಗಳನ್ನು ನಿಯಮಗಳನ್ನು ಒಳಗೊಂಡಿದ್ದು ನಮ್ಮ ಸಮಾಜದ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿ ಮಾಡಿಕೊಂಡಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ.  ಯಾವುದೇ ಧಾರ್ಮಿಕ ಸಂಸ್ಥೆಯು ನಡೆಸುವ ಶಾಲೆ ಅಥವಾ ಕಾಲೇಜಿನಲ್ಲಿ ಉಚಿತ ಶಿಕ್ಷಣ, ಉದ್ಯೋಗ ನೀಡುವುದನ್ನು ಸಹ ಮತಾಂತರದ ಉದ್ದೇಶದ ಆಮಿಷಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.   ಶತಶತಮಾನಗಳ ಕಾಲ ಅಸ್ಪೃಶ್ಯರು ಮತ್ತು ಶೂದ್ರರಿಗೆ ಅಕ್ಷರ ಜ್ಞಾನವನ್ನು ವಂಚಿಸಿದ ಭಾರತದಲ್ಲಿ ಈ ಮಹಿಳೆಯರು ಸೇರಿದಂತೆ ಈ ಶೋಷಿತ ಸಮುದಾಯಗಳಿಗೆ  ಭಾರತದ ಬಹಳಷ್ಟು ಭಾಗಗಳಲ್ಲಿ  ಅಕ್ಷರದ ಬೆಳಕು ಸಿಕ್ಕಿದ್ದೇ ಧಾರ್ಮಿಕ  ಅಲ್ಪಸಂಖ್ಯಾತ ಸಂಸ್ಥೆಗಳ ಶಾಲಾ ಕಾಲೇಜುಗಳ ಮೂಲಕ.   ಈಗಲೂ ಧಾರ್ಮಿಕ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಸಾಮಾಜಿಕ ನ್ಯಾಯದ ತತ್ವದ ಆಧಾರದಲ್ಲಿ ಈ ಶಿಕ್ಷಣ ಸೇವೆಯನ್ನು ಮುಂದುವರಿಸಿವೆ ಎಂಬ ಅಂಶವನ್ನು ಈ ಕಾಯ್ದೆ ಸಂಪೂರ್ಣವಾಗಿ ಮರೆಮಾಚಿದೆ.

ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡದ ಸಮುದಾಯದವರನ್ನು ಮತಾಂತರ ಮಾಡುವವರಿಗೆ ಹತ್ತು ವರ್ಷಗಳವರೆಗೆ ವಿಸ್ತರಿಸಬಹುದಾದ ಕಠಿಣ ಶಿಕ್ಷೆಮತ್ತು ದಂಡಗಳಂತಹ ಕರಾಳ ಶಿಕ್ಷೆಯನ್ನು ಕಾಯ್ದೆಯಲ್ಲಿ ನಿಗದಿ ಮಾಡಲಾಗಿದೆ. ದೇಶವು ಸ್ವಾತಂತ್ರ್ಯ ಪಡೆದ ಮುಕ್ಕಾಲು ಶತಮಾನದ ನಂತರವೂ ಭಾರತದಲ್ಲಿ ದಲಿತರಿಗೆ ಅಸ್ಪೃಶ್ಯತೆ ಮತ್ತು ಅಪಮಾನಗಳಿಂದ ಇನ್ನೂ ಮುಕ್ತಿ ಸಿಕ್ಕಿಲ್ಲ. ಜಾತಿ ದೌರ್ಜನ್ಯಗಳಿಗೆ ತಡೆ ಬಿದ್ದಿಲ್ಲ.  ಮಹಿಳೆಯರು ಮತ್ತು ಶೋಷಿತ ಸಮುದಾಯಗಳಿಗೆ ಘನತೆಯ ಬದುಕಿನ ಅವಕಾಶ ದೊರೆತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಘನತೆಯ ಬದುಕನ್ನು ಬಯಸಿ ಮತ್ತೊಂದು ಮತ ಧರ್ಮವನ್ನು ಅಪ್ಪಿಕೊಳ್ಳಲು  ಬಯಸುವ ಜನರನ್ನು ಇರುವ ಧರ್ಮದಲ್ಲೇ ಕಟ್ಟಿ ಹಾಕಬೇಕೆನ್ನುವ ಕಾಯ್ದೆಯು ಮತಾಂಧ ಸರ್ವಾಧಿಕಾರಿ ಧೋರಣೆಯನ್ನು ಕಾನೂನು ಬದ್ಧಗೊಳಿಸುವಂತಿದೆ.  ಜೊತೆಗೆ ಮತಾಂತರ ನಡೆಸಲಾಗುತ್ತಿದೆ ಎಂಬ ಹೆಸರಿನಲ್ಲಿ ಸಮಾಜದಲ್ಲಿ ಗೂಂಡಾಗಿರಿ ನಡೆಸುತ್ತಿರುವ ಸಂಘ ಪರಿವಾರದ ಕಾರ್ಯಕರ್ತರ ಪುಂಡಾಟಿಕೆಗಳಿಗೆ ಇನ್ನಷ್ಟು ಕುಮ್ಮಕ್ಕು ಕೊಡುವಂತಿರುವುದನ್ನು ಸಮ್ಮೇಳನವು ಗಮನಿಸುತ್ತದೆ.

ಯಾವುದೇ ವ್ಯಕ್ತಿಯು ಮದುವೆಯ ನಂತರ ಮತ್ತು  ಮದುವೆಯ ಮುಂಚೆ ಸಹ ಮದುವೆಯ ಕಾರಣಕ್ಕಾಗಿ ಮತಾಂತರ ಆಗುವುದನ್ನು ಸಹ ಈ ಕಾಯ್ದೆಯು ನಿರ್ಬಂಧಿಸುತ್ತದೆ. ಮದುವೆ ಮತ್ತು ಮತಧರ್ಮ ಪಾಲನೆಯು ಯಾವುದೇ ವ್ಯಕ್ತಿಯ ವೈಯುಕ್ತಿಕ ಹಕ್ಕಾಗಿದ್ದು ಆಳುವ ಸರಕಾರಗಳಿಗೆ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಅವಕಾಶ ಕೊಡುವುದು ಎಂದರೆ ಸಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೂಲತತ್ವಗಳನ್ನು ಮಣ್ಣುಪಾಲು ಮಾಡುವುದು ಎಂದೇ ಆಗುತ್ತದೆ.  ವಯಸ್ಕ ಯುವಕ-ಯುವತಿಯರು ತಮ್ಮ ಆಯ್ಕೆಯಂತೆ ಮದುವೆ ಆಗುವುದನ್ನು ಮತ್ತು ಅಂತರ್ ಧರ್ಮೀಯ ಪ್ರೇಮ ವಿವಾಹಗಳಾಗುವುದನ್ನು ತಡೆಯುವ ದುರುದ್ದೇಶ ಈ ಕಾಯ್ದೆಯಲ್ಲಿ ಅಡಗಿದೆ.  ಇದಲ್ಲದೇ ಮತಾಂತರದ ನೆಪದಲ್ಲಿ ಈ ವಿಷಯಕ್ಕೆ ಸಂಬಂಧವಿಲ್ಲದ ವ್ಯಕ್ತಿಗಳು ಸಹ ಮತ್ತೊಬ್ಬರ ಖಾಸಗಿ ವಿಷಯಗಳಲ್ಲಿ ತಲೆಹಾಕಲು ಮತ್ತು ದೂರುಕೊಡಲು ಈ ಕಾಯ್ದೆಯು ಅವಕಾಶ ಮಾಡಿಕೊಡುತ್ತದೆ.   ಮತಾಂತರದ ಆರೋಪ ಹೊರಿಸಿ ಶಿಕ್ಷಣ ಸಂಸ್ಥೆಗಳು ಸೇರಿದಂತೆ, ಯಾವುದೇ ಅಲ್ಪಸಂಖ್ಯಾತ  ಸಂಘ-ಸಂಸ್ಥೆಗಳಿಗೆ ಕಿರುಕುಳ ನೀಡಲು ಮತ್ತು ಸರಕಾರದ ಅನುದಾನವನ್ನು ತಡೆಹಿಡಿಯಲು ಬೇಕಾದಂತೆ ಕಾಯ್ದೆಯಲ್ಲಿ ಅವಕಾಶವನ್ನು ಸೃಷ್ಟಿಸಿಕೊಳ್ಳಲಾಗಿದೆ.

ದುರುದ್ದೇಶಪೂರಿತ ಮತಾಂತರ ಮಾಡಲಾಗಿದೆ ಎಂದು ಯಾರ ಮೇಲಾದರೂ ಆರೋಪಿಸಿದರೆ ಅದನ್ನು ಸಾಬೀತು ಮಾಡುವುದು ಆರೋಪ ಮಾಡಿದವರ ಮತ್ತು ಸರಕಾರದ ಹೊಣೆಯಾಗಬೇಕು.  ಇದು ಸಹಜ ನ್ಯಾಯ. ಆದರೆ ಈ ಕಾಯ್ದೆಯು ಆರೋಪಕ್ಕೆ ಗುರಿಯಾದವರು ತಾವು ದುರುದ್ದೇಶದ ಮತಾಂತರ ಮಾಡಿಲ್ಲ ಎಂದು ಸಾಬೀತು ಪಡಿಸಬೇಕು ಎಂದು ಈ ಕಾಯ್ದೆ ಹೇಳುತ್ತಿದೆ.

ದೇಶದ ಜನತೆಯನ್ನು ಅತ್ಯಂತ ತೀವ್ರವಾದ ಬಿಕ್ಕಟ್ಟು ಮತ್ತು ಸಂಕಷ್ಟಕ್ಕೆ ತಳ್ಳಿರುವ ಸಂದರ್ಭದಲ್ಲಿ ಇಂತಹ ಕಾಯ್ದೆಯೊಂದನ್ನು ತರುತ್ತಿರುವ ಹುನ್ನಾರವನ್ನು ಜನತೆ ಅರಿಯಬೇಕಾಗಿದೆ. ತೀವ್ರವಾದ ಎರಡು ಕೊರೋನಾ ಸೋಂಕಿನ ಅಲೆಗಳಿಂದ ದೇಶದ ಮತ್ತು ಕರ್ನಾಟಕ ರಾಜ್ಯದ ಜನ ಸಾಮಾನ್ಯರ ಬದುಕು ಜರ್ಜರಿತಗೊಂಡಿದೆ. ಕೈಗಾರಿಕೆ ಉದ್ಯಮ ಕೃಷಿ ಬಿಕ್ಕಟ್ಟಿನಿಂದ ತಲ್ಲಣಿಸಿವೆ. ಪೆಟ್ರೋಲ್-ಡೀಸೆಲ್, ಆಹಾರಧಾನ್ಯಗಳು, ತರಕಾರಿ  ಮುಂತಾದ ಅಗತ್ಯ ವಸ್ತುಗಳ ಬೆಲೆ ಏರಿಕೆ ಜನರ ಬದುಕನ್ನು ಸುಡುತ್ತಿದೆ.  ನಿರುದ್ಯೋಗ, ಅರೆ ಉದ್ಯೋಗ, ವಲಸೆ ತಾಂಡವವಾಡುತ್ತಿದೆ. ಸಮಾಜದಲ್ಲಿ ಖಿನ್ನತೆಯ ಸಮಸ್ಯೆ-ಆತ್ಮಹತ್ಯೆ, ಸಾಮೂಹಿಕ ಆತ್ಮಹತ್ಯೆಯಂತಹ ಪ್ರವೃತ್ತಿಗಳು ಹೆಚ್ಚುತ್ತಿವೆ.   ರಾಜ್ಯದಲ್ಲಿ ಇತ್ತೀಚೆಗೆ ಅತಿಯಾಗಿ ಮಳೆ ಸುರಿದು ಬೆಳೆದುನಿಂತ ಬೆಳೆ ಹಾಳಾಗಿ ರೈತರ ಬದುಕು ಮೂರಾಬಟ್ಟೆಯಾಗಿದ್ದರೂ ಪರಿಹಾರವೇ ಇಲ್ಲವಾಗಿದೆ. ರಾಜ್ಯದಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಜನರು ಜೀವ ಅಂಗೈಯಲ್ಲಿ ಹಿಡಿದು ನಡೆಯಬೇಕಿದೆ. ಕಾರ್ಮಿಕರನ್ನು ಬೀದಿಗೆ ನೂಕುವ ಕರಾಳ ಕಾಯ್ದೆಗಳನ್ನು ತರಲಾಗಿದೆ.   ಭೂಕಬಳಿಕೆ ಹಗರಣಗಳು  ಸೇರಿದಂತೆ ಆಳುವ ಪಕ್ಷದ ಮುಖಂಡರ ಭ್ರಷಾಚಾರಗಳು ಬಯಲಾಗಿ ಜನರು ಆಕ್ರೋಶಗೊಂಡಿದ್ದಾರೆ.    ಕೊರೋನಾ ಆಳಗೊಳಿಸಿದ ಬಿಕ್ಕಟ್ಟು ನಿರ್ವಹಣೆಯಲ್ಲಿ ಹಾಗೂ  ಜನರ ಜೀವ ಮತ್ತು ಬದುಕಿನ ರಕ್ಷಣೆಯಲ್ಲಿ ದಯನೀಯವಾಗಿ ವಿಫಲವಾದ ರಾಜ್ಯ ಮತ್ತು ಕೇಂದ್ರ ಸರಕಾರಗಳು ಜನರ ಗಮನವನ್ನು  ಆಳುವ ಸರಕಾರಗಳ ವೈಫಲ್ಯಗಳ ಕಡೆಯಿಂದ  ಬೇರೆಡೆಗೆ ಸೆಳೆದು ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿವೆ. ಇಂತಹ ಪಿತೂರಿಗಳ ಭಾಗವಾಗಿ ‘ಮತಾಂತರ, ‘ಲವ್ ಜಿಹಾದ್’ ಮುಂತಾದ ಹೆಸರಿನಲ್ಲಿ  ಜನರ ಒಗ್ಗಟ್ಟನ್ನು ಮುರಿಯುವಂತಹ ಉದ್ದೇಶದಿಂದಲೇ ಬಲವಂತದ ಮತಾಂತರ ನಿಷೇಧದ ಹೆಸರಿನ ಈ ಕಾಯ್ದೆಯನ್ನು  ತರಲಾಗಿದೆ ಎಂಬುದು ನಿಚ್ಚಳ ವೆಂದು ರಾಜ್ಯ ಸಮ್ಮೇಳನವು ಅಭಿಪ್ರಾಯಪಡುತ್ತದೆ.

ಸುಮಾರು ಎರಡು ಸಾವಿರ ವರ್ಷಗಳ ಹಿಂದೆಯೇ ಗೌತಮ ಬುದ್ಧ ಮತ್ತು ಮಹಾವೀರರು ತಾವಿದ್ದ ಮತಧರ್ಮವನ್ನು ತಿರಸ್ಕರಿಸಿ ಹೊಸ ಮೌಲ್ಯಗಳ ಆಧಾರದ ಹೊಸ ಮತಧರ್ಮಗಳನ್ನು ಬೋಧಿಸಿದರು.  ಗುರುನಾನಕರು ಸ್ಥಾಪಿಸಿದ ಸಿಖ್ ಧರ್ಮ ಸಹ ಜನರು ತಾವು ಇದ್ದ ಧರ್ಮವನ್ನು ತೊರೆದು ಹೊಸ ಧರ್ಮವನ್ನು ಸೇರಿದ್ದರಿಂದಲೇ ವ್ಯಾಪಕವಾಗಿ ಬೆಳೆದದ್ದು. ಹನ್ನೆರಡನೇ ಶತಮಾನದ ಶರಣರು ನೇರವಾಗಿ ಮತ್ತು ಸ್ಪಷ್ಟವಾಗಿ ಸಂಘಟಿತವಾಗಿ ಮತ್ತು ಸಾಮೂಹಿಕವಾಗಿ ಅಸಮಾನತೆಯ ವೈದಿಕ ಮತಧರ್ಮವನ್ನು ಖಂಡಿಸಿ ಹೊಸ ಧರ್ಮದ ಪ್ರತಿಪಾದಕರಾದರು.

Yadava shettyಅಸಮಾನತೆ, ತಾರತಮ್ಯದ ಚಾತುರ್ವರ್ಣ್ಯ ವೈಧಿಕ ಮತಧರ್ಮವನ್ನು ತ್ಯಜಿಸಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ರವರು ಲಕ್ಷಾಂತರ ಅನುಯಾಯಿಗಳೊಂದಿಗೆ ಬೌಧ್ಧ ಮತಧರ್ಮವನ್ನು ಸ್ವೀಕರಿಸಿದರು. ಇವರೆಲ್ಲರನ್ನು ಮತಾಂತರಿಗಳು, ಅಪರಾಧಿಗಳು ಎಂದು ಕರೆದರೆ ಅದು ದೊಡ್ಡ ಪ್ರಮಾದವಾಗುತ್ತದೆ.

ಹುಟ್ಟಿನಿಂದ ಬರುವ ಮತಧರ್ಮವು ಯಾವುದೇ ವ್ಯಕ್ತಿಯ ಸ್ವಂತ ಆಯ್ಕೆಯಲ್ಲ. ವ್ಯಕ್ತಿಗಳು ಬೆಳೆದು ವಯಸ್ಕರರಾದಾಗ  ತಮಗೆ ಸರಿಕಂಡ  ಮತಧರ್ಮವನ್ನು ಆರಿಸಿಕೊಳ್ಳುವ ಹಕ್ಕು ಅಥವಾ ಯಾವುದೇ ಮತಧರ್ಮವನ್ನು ಅನುಸರಿಸದಿರುವ ಹಕ್ಕು ಯಾವುದೇ ವ್ಯಕ್ತಿಗೆ ಇದ್ದೇ ಇದೆ. ಎಲ್ಲ ಆಧುನಿಕ ಪ್ರಜಾಪ್ರಭುತ್ವ ರಾಷ್ಟ್ರಗಳೂ ಮೂಲಭೂತ ಈ ಮಾನವ ಹಕ್ಕನ್ನು ಮಾನ್ಯ ಮಾಡಿವೆ ಮತ್ತು ಮಾನ್ಯ ಮಾಡಬೇಕಾಗುತ್ತದೆ.   ಅಲ್ಲದೇ ಯಾವುದೇ ಒಂದು ಧರ್ಮದಿಂದ ಜನರು ಮತ್ತೊಂದು ಧರ್ಮಕ್ಕೆ ಬದಲಾಗುತ್ತಾರೆ ಎಂದಾದರೆ ಆ ಧರ್ಮದ ಧಾರ್ಮಿಕ ಮುಖಂಡರು ಮತ್ತು ಧಾರ್ಮಿಕ ಪ್ರತಿಪಾದಕರು ತಮ್ಮ ಮತ ಧರ್ಮದಲ್ಲಿರುವ ದೋಷ, ಸಮಸ್ಯೆಗಳ ಕಡೆಗೆ ಗಮನ ನೀಡಿ ಅವುಗಳನ್ನು ನಿವಾರಿಸಬೇಕು. ಧಾರ್ಮಿಕ ಸುಧಾರಣೆಗಳನ್ನು ತಂದು ಜನರ ವಿಶ್ವಾಸವನ್ನು ಗಳಿಸಿಕೊಳ್ಳಬೇಕೆ ಹೊರತು ಸರ್ವಾಧಿಕಾರಿ ಕಾನೂನುಗಳ ಮೂಲಕ ಅದನ್ನು ತರುವುದು ನ್ಯಾಯವಲ್ಲ . ಈ ಒಟ್ಟು ಹಿನ್ನೆಲೆಯಲ್ಲಿ  ಈ ಬಲವಂತದ ಮತಾಂತರ ನಿಷೇಧದ ಹೆಸರಿನ ಈ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ, 2021’ ಕಾಯ್ದೆಯನ್ನು ವಾಪಸ್ ಪಡೆಯಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ( ಮಾರ್ಕ್ಸ್‌ವಾದಿ) ಯ 23 ನೆಯ ರಾಜ್ಯ ಸಮೇಳನವು ಆಗ್ರಹಿಸುತ್ತದೆ.  ರಾಜ್ಯಪಾಲರು ಇದಕ್ಕೆ ಅವಕಾಶವನ್ನು ನೀಡಕೂಡದು ಎಂದು ಮತ್ತೊಮ್ಮೆ ಸಮ್ಮೇಳನವು ಆಗ್ರಹಿಸುತ್ತದೆ.

ಬಿಜೆಪಿಸಂಘಪರಿವಾರದ ಹುನ್ಮಾರಗಳನ್ನು ವಿರೋಧಿಸಿ  ಇದೇ 2022 ಜನವರಿ 17ರಂದು ರಾಜ್ಯದಾದ್ಯಂತ ಜಿಲ್ಲಾ ಹಾಗು ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಕರೆ ನೀಡುತ್ತದೆ.

ಮಂಡನೆ: ಎಸ್.ವೈ.ಗುರುಶಾಂತ್

ಅನುಮೋದನೆ: ಯಾದವಶೆಟ್ಟಿ

Leave a Reply

Your email address will not be published. Required fields are marked *