ಸಾಂಕೇತಿಕ ಕ್ರಮಗಳು ಬಿಟ್ಟರೆ ಪ್ರಧಾನ ಮಂತ್ರಿಗಳ ಪ್ರಸಾರ ಭಾಷಣದಲ್ಲಿ ಏನಿದೆ?-ಯೆಚುರಿ

ಪ್ರಧಾನ ಮಂತ್ರಿಗಳ ಬಹುಪ್ರಚಾರಿತ ಪ್ರಸಾರ ಭಾಷಣದಲ್ಲಿ  ಕೊರೊನ ವೈರಸ್ ಮಹಾಮಾರಿಯನ್ನು ಎದುರಿಸಲು ಜನಗಳಿಗೆ ನೆರವಾಗಲು ಸರಕಾರದ ಸಿದ್ಧತೆಗಳು ಮತ್ತು ಅದು ಕೈಗೊಂಡಿರುವ ಕ್ರಮಗಳ ಬಗ್ಗೆ ಏನೂ ಇರಲಿಲ್ಲ ಎಂಬುದು ದುರದೃಷ್ಟಕರ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಟಿಪ್ಪಣಿ ಮಾಡಿದ್ದಾರೆ.
ಪ್ರಧಾನ ಮಂತ್ರಿಗಳು ಮುಂದಿಟ್ಟ ಸಾಂಕೇತಿಕ ಕ್ರಮಗಳನ್ನು ಬಿಟ್ಟರೆ, ವರ್ಕ್ ಫ್ರಮ್ ಹೋಮ್(ಮನೆಯಿಂದ ಕೆಲಸ) ಅವಕಾಶವಿರದ, ತಮ್ಮ ದಿನದ ಆದಾಯದಿಂದಲೇ ಬದುಕುಳಿಯಬೇಕಾಗಿರುವ ಭಾರತದ ಬಹುಪಾಲು ಜನಗಳು ಎದುರಿಸುತ್ತಿರುವ ಬಿಕ್ಕಟ್ಟನ್ನು ಶಮನ ಮಾಡಲು ಸರಕಾರ ಏನು ಮಾಡುತ್ತಿದೆ?
ಚಟುವಟಿಕೆಗಳು ಸ್ಥಗಿತಗೊಳ್ಳುವದರಿಂದ ಅತಿ ಹೆಚ್ಚು ಸಂಕಷ್ಟಕ್ಕೀಡಾಗುವವರು ಬಡವರು ಮತ್ತು ಅಂಚಿಗೆ ತಳ್ಳಲ್ಪಟ್ಟವರು ಎಂಬುದು ಸ್ಪಷ್ಟ. ಸರಕಾರ ತನ್ನ ದಾಸ್ತಾನುಗಳಲ್ಲಿರುವ ಹೆಚ್ಚುವರಿ ಆಹಾರಧಾನ್ಯಗಳನ್ನು ಇವರಿಗೆ ಲಭ್ಯಗೊಳಿಸಲು  ಏನು ಮಾಡುತ್ತಿದೆ?
ಕೇರಳದ ಎಡ ಸರಕಾರ ವೈದ್ಯಕೀಯ ಬಿಕ್ಕಟ್ಟನ್ನು ಎದುರಿಸುವುದು ಹೇಗೆ ಎಂದು ತೋರಿಸಿಕೊಟ್ಟಿದೆ ಮಾತ್ರವಲ್ಲ, ಈಗ ಬಡವರ ಸಂಕಷ್ಟಗಳನ್ನು ಶಮನ ಮಾಡಲು ಕೂಡ ಪರಿಹಾರ ಕ್ರಮಗಳನ್ನು ಪ್ರಕಟಿಸಿದೆ. ಅದು ಮಾರ್ಚ್ ೧೯ರಂದು ೨೦,೦೦೦ ಕೋಟಿ ರೂ.ಗಳ ಪುನರುಜ್ಜೀವನ ಪ್ಯಾಕೇಜನ್ನು ಪ್ರಕಟಿಸಿದೆ. ಪಿಂಚಣಿದಾರರು, ಆಟೋ ಮತ್ತು ಬಸ್ ಮಾಲಕರಿಗೂ ಹಲವಾರು ಪರಿಹಾರ ಕ್ರಮಗಳನ್ನು ಪ್ರಕಟಿಸಿದೆ.
ಪ್ರಧಾನ ಮಂತ್ರಿಗಳು ಈ ಮಾದರಿಯನ್ನು ಅನುಸರಿಸಿ ಇಡೀ ದೇಶಕ್ಕೆ ಇಂತಹ ಕ್ರಮಗಳನ್ನೇಕೆ ಪ್ರಕಟಿಸಲಿಲ್ಲ ಎಂದು ಯೆಚುರಿ ಪ್ರಶ್ನಿಸಿದ್ದಾರೆ

Leave a Reply

Your email address will not be published. Required fields are marked *